ದೇಹ ತೂಕದ ಬಗ್ಗೆ ಅಸಭ್ಯ ಪ್ರಶ್ನೆ: ಯೂಟ್ಯೂಬರ್ ವಿರುದ್ಧ ನಟಿ ಗೌರಿ ಕಿಶನ್ ಆಕ್ರೋಶ
ಸುಮಾರು 10-12 ನಿಮಿಷಗಳ ಕಾಲ ಈ ಚರ್ಚೆ ನಡೆದರೂ, ಚಿತ್ರದ ನಾಯಕ ಆದಿತ್ಯ ಮಾಧವನ್ ಅಥವಾ ನಿರ್ದೇಶಕರು ಮಧ್ಯಪ್ರವೇಶಿಸದಿರುವ ಬಗ್ಗೆ ಗೌರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗೌರಿ ಕಿಶನ್
ತಮಿಳು ಚಲನಚಿತ್ರ 'ಅನ್ಯರು' ಪತ್ರಿಕಾಗೋಷ್ಠಿಯಲ್ಲಿ ನಟಿ ಗೌರಿ ಕಿಶನ್ ಅವರ ದೇಹದ ತೂಕದ ಬಗ್ಗೆ ಯೂಟ್ಯೂಬರ್ ಆರ್.ಎಸ್. ಕಾರ್ತಿಕ್ ಕೇಳಿದ ಅಸಭ್ಯ ಪ್ರಶ್ನೆಗೆ ನಟಿ ಖಡಕ್ ಉತ್ತರ ನೀಡಿದ್ದು, ಈ ಘಟನೆಗೆ ಚಿತ್ರರಂಗದಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಇದು ಮಹಿಳೆಯರನ್ನು ಕೀಳಾಗಿ ಕಾಣುವ ಮತ್ತು ಅವೃತ್ತಿಪರತೆಯ ನಡೆ ಎಂದು ಗೌರಿ ಕಿಶನ್ ಕಿಡಿಕಾರಿದ್ದಾರೆ.
'ಅನ್ಯರು' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಯೂಟ್ಯೂಬರ್ ಕಾರ್ತಿಕ್, ನಟಿ ಗೌರಿ ಕಿಶನ್ ಅವರ ತೂಕದ ಬಗ್ಗೆ ಅಸಭ್ಯವಾಗಿ ಪ್ರಶ್ನಿಸಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಗೌರಿ, ಇಂತಹ ಪ್ರಶ್ನೆಗಳು ಮಹಿಳೆಯರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತವೆ ಮತ್ತು ಇದು ಸಂಪೂರ್ಣವಾಗಿ ಖಾಸಗಿ ವಿಷಯ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಸುಮಾರು 10-12 ನಿಮಿಷಗಳ ಕಾಲ ಈ ಚರ್ಚೆ ನಡೆದರೂ, ಚಿತ್ರದ ನಾಯಕ ಆದಿತ್ಯ ಮಾಧವನ್ ಅಥವಾ ನಿರ್ದೇಶಕರು ಮಧ್ಯಪ್ರವೇಶಿಸದಿರುವ ಬಗ್ಗೆ ಗೌರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಬಹುಶಃ ಅವರ ಅನುಭವದ ಕೊರತೆಯಿಂದಾಗಿ ಅವರು ಮೌನವಾಗಿದ್ದಿರಬಹುದು, ಆದರೆ ಇಂತಹ ಸಂದರ್ಭಗಳಲ್ಲಿ ಸ್ವಯಂ ರಕ್ಷಣೆ ಮುಖ್ಯವಾಗುತ್ತದೆ," ಎಂದು ಅವರು ಹೇಳಿದ್ದಾರೆ.
ಅವರನ್ನು ಪತ್ರಕರ್ತರೆಂದು ಪರಿಗಣಿಸಬೇಡಿ
ಇಂತಹ ಪುನರಾವರ್ತಿತ ಘಟನೆಗಳ ಬಗ್ಗೆ ಮಾತನಾಡುತ್ತಾ, ಐಶ್ವರ್ಯ, ನಾನು ಅಂತಹ ಜನರನ್ನು ಪತ್ರಕರ್ತರೆಂದು ಪರಿಗಣಿಸುವುದಿಲ್ಲ. ಅವರಿಗೆ ಪತ್ರಿಕೋದ್ಯಮ ಎಂದರೆ ಏನು ಎಂದು ತಿಳಿದಿಲ್ಲ. ಅವರು ಅದನ್ನು ಮನರಂಜನೆಗಾಗಿ ಮಾತ್ರ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ಚಿತ್ರರಂಗದಿಂದ ವ್ಯಕ್ತವಾದ ಬೆಂಬಲ
ಈ ಘಟನೆಯು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ 'ಬಾಡಿ ಶೇಮಿಂಗ್' (ದೇಹದ ಬಗ್ಗೆ ಅವಹೇಳನ) ವಿರುದ್ಧದ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ನಾದಿಗರ್ ಸಂಗಮ್, ಅಮ್ಮ (AMMA) ಮತ್ತು ಚೆನ್ನೈ ಪ್ರೆಸ್ ಕ್ಲಬ್ನಂತಹ ಸಂಘಟನೆಗಳು ಯೂಟ್ಯೂಬರ್ ನಡೆಯನ್ನು ತೀವ್ರವಾಗಿ ಖಂಡಿಸಿವೆ. ನಟಿಯರಾದ ಖುಷ್ಬೂ, ರೋಹಿಣಿ ಸೇರಿದಂತೆ ಹಲವು ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಗೌರಿ ಕಿಶನ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ಗೌರಿಗೆ ಬೆಂಬಲ ನೀಡಿದ ಖುಷ್ಬೂ
ಹಿರಿಯ ನಟಿ ಖುಷ್ಬು ಸುಂದರ್ ಅವರು ಗೌರಿಗೆ ಬೆಂಬಲ ಸೂಚಿಸಿದ್ದು,ಒಬ್ಬ ಮಹಿಳೆ ಎಷ್ಟು ತೂಕವಿದ್ದಾಳೆ ಎಂಬುದು ಅವರ ಕೆಲಸವಲ್ಲ. ಮತ್ತು ಅದರ ಬಗ್ಗೆ ನಾಯಕನನ್ನು ಕೇಳುವುದು? ಎಂತಹ ನಾಚಿಕೆಗೇಡಿನ ಸಂಗತಿ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
AMMA ಸಂಸ್ಥೆಯು ಗೌರಿಯವರ ನೋವಿಗೆ ಸಹಮತ ವ್ಯಕ್ತಪಡಿಸಿದ್ದು, ಯಾವುದೇ ಸಂದರ್ಭದಲ್ಲಿ ದೇಹದ ಬಗ್ಗೆ ಅಪಹಾಸ್ಯ ಮಾಡುವುದು (ಬಾಡಿ ಶೇಮಿಂಗ್) ಸಂಪೂರ್ಣವಾಗಿ ತಪ್ಪು ಎಂದು ಒಗ್ಗಟ್ಟಿನ ಹೇಳಿಕೆಯನ್ನು ನೀಡಿದೆ.
ಈ ಘಟನೆಯು ಉದ್ಯಮದ ಗೆಳೆಯರಾದ ಗಾಯಕಿ ಚಿನ್ಮಯಿ ಶ್ರೀಪಾದ, ಪತ್ರಕರ್ತೆ ಧನ್ಯಾ ರಾಜೇಂದ್ರನ್ ಮತ್ತು ನಟರಾದ ರೇಬಾ ಜಾನ್, ಅನುಮೋಲ್, ನೈಲಾ ಉಷಾ, ಸಾನಿಯಾ ಲಿಯಪ್ಪನ್ ಮತ್ತು ಅಹಾನಾ ಕೃಷ್ಣ ಅವರು ನಟಿಗೆ ಬೆಂಬಲ ನೀಡಿದ್ದಾರೆ.
ಈ ಘಟನೆಯು ಚಿತ್ರರಂಗದಲ್ಲಿ ಬದಲಾಗುತ್ತಿರುವ ಕಾಲಘಟ್ಟವನ್ನು ಸೂಚಿಸುತ್ತಿದ್ದು, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅವಹೇಳನದ ವಿರುದ್ಧ ಧ್ವನಿ ಎತ್ತಲು ಕಲಾವಿದರು ಹಿಂಜರಿಯುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದೆ.