ಶಾಸಕನಿಗೆ ಕಪಾಳಮೋಕ್ಷ ಪ್ರಕರಣ: ಪೊಲೀಸ್‌ ರಕ್ಷಣೆ ಕೋರಿದ ಮತದಾರ

ಶಾಸಕ ಎ.ಶಿವಕುಮಾರ್‌ ಮತ್ತು ಏಳು ಮಂದಿ ಸಹಾಯಕರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ತೆಲುಗು ದೇಶಂ ಪಕ್ಷ (ಟಿಡಿಪಿ) ಕೂಡ ಚುನಾವಣೆ ಆಯೋಗಕ್ಕೆ ದೂರು ನೀಡಿದೆ.

Update: 2024-05-14 12:17 GMT

ಶಾಸಕರ ಕುಟುಂಬ ಮತದಾನ ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ನಿಲ್ಲದೆ ಇರುವುದನ್ನುಆಕ್ಷೇಪಿಸಿ, ವೈಎಸ್ಆರ್ ಕಾಂಗ್ರೆಸ್ ಪಕ್ಷದ ಶಾಸಕ ಮತ್ತು ಅವರ ಬೆಂಬಲಿಗರಿಂದ ಹಲ್ಲೆಗೊಳಗಾದ ನಂತರ ವ್ಯಕ್ತಿ, ತಮಗೆ ಮತ್ತು ತಮ್ಮ ಕುಟುಂಬಕ್ಕೆ ಪೊಲೀಸ್ ರಕ್ಷಣೆ ಕೋರಿದ್ದಾರೆ.

ಸೋಮವಾರ (ಮೇ 14) ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ ಆಂಧ್ರ ಪ್ರದೇಶ ವಿಧಾನಸಭೆ ಮತ್ತು ಲೋಕಸಭೆಯ ನಾಲ್ಕನೇ ಹಂತದ ಚುನಾವಣೆಗೆ ಮತದಾನದ ವೇಳೆ ಗೊಟ್ಟುಮುಕ್ಕಲ ಸುಧಾಕರ್ ಅವರ ಮೇಲೆ ಶಾಸಕ ಎ. ಶಿವಕುಮಾರ್ ಹಾಗೂ ಅವರ ಅನುಯಾಯಿಗಳು ಹ ಲ್ಲೆ ನಡೆಸಿದ್ದರು.

ಶಾಸಕ ಎ. ಶಿವಕುಮಾರ್ ಮತ್ತು ಅವರ ಕುಟುಂಬದವರು ಮತಗಟ್ಟೆಯಲ್ಲಿ ಸರದಿ ಸಾಲಿನಲ್ಲಿ ನಿಲ್ಲದೆ ಮುಂದೆ ಹೋಗಿದ್ದಕ್ಕೆ ಸುಧಾಕರ್ ಆಕ್ಷೇಪ ವ್ಯಕ್ತಪಡಿಸಿದರು. ಸಿಟ್ಟಿಗೆದ್ದ ಶಾಸಕ, ಸುಧಾಕರ್‌ ಅವರಿಗೆ ಕಪಾಳಮೋಕ್ಷ ಮಾಡಿದರು. ಆನಂತರ ಸುಧಾಕರ್‌ ಶಾಸಕರನ್ನು ಥಳಿಸಿದರು; ಶಾಸಕರ ಆಪ್ತರು ಸುಧಾಕರ್‌ ಅವರ ಮೇಲೆ ಹಲ್ಲೆ ನಡೆಸಿದರು.

ವ್ಯಾಪಕ ಖಂಡನೆ: ಪೊಲೀಸರು ಮಧ್ಯಪ್ರವೇಶಿಸಿದ್ದು, ಸುಧಾಕರ್‌ ಠಾಣೆಗೆ ತೆರಳಿ ಶಾಸಕರ ವಿರುದ್ಧ ದೂರು ನೀಡಿದರು. ಹಲ್ಲೆಯ ವಿಡಿಯೋ ಲಕ್ಷಾಂತರ ಜನ ವೀಕ್ಷಿಸಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ʻಶಾಸಕರ ಕುಟುಂಬವನ್ನು ಸರತಿ ಸಾಲಿನಲ್ಲಿ ಸೇರಲು ಕೇಳಿದಾಗ ತೊಂದರೆ ಪ್ರಾರಂಭವಾಯಿತು. ಅವರು ನನ್ನ ಬಳಿಗೆ ಬಂದು ʻನೀನು ಯಾರು ಪ್ರಶ್ನಿಸಲು? ಎಷ್ಟು ಧೈರ್ಯ ನಿನಗೆ?' ಎಂದು ಹೇಳಿ, ಕಪಾಳಕ್ಕೆ ಹೊಡೆದರು,ʼ ಎಂದು ಸುಧಾಕರ್ ಹೇಳಿದರು. ಅವರ ಎಡಗಣ್ಣು ಊದಿಕೊಂಡಿದೆ.

ʻಶಾಸಕರು ಮತ್ತು ಅವರ ಸಹಾಯಕರು ಥಳಿಸಿದರು. ರಕ್ತಸ್ರಾವವಾಯಿತು. ನಾನು ನಿಯಮಗಳನ್ನು ಅನುಸರಿಸಲು ಹೇಳಿದೆನಷ್ಟೇ. ನನ್ನ ತಾಯಿ, ನನಗೆ ಮತ್ತು ನನ್ನ ಕುಟುಂಬಕ್ಕೆ ರಕ್ಷಣೆ ಕೋರುತ್ತೇನೆ,ʼ ಎಂದು ಹೇಳಿದರು.

ಶಾಸಕ ಮತ್ತು ಏಳು ಮಂದಿ ಸಹಾಯಕರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ತೆಲುಗು ದೇಶಂ ಪಕ್ಷ (ಟಿಡಿಪಿ) ಕೂಡ ಚುನಾವಣೆ ಆಯೋಗಕ್ಕೆ ದೂರು ನೀಡಿದೆ.

Tags:    

Similar News