ಅಹಮದಾಬಾದ್ ದುರಂತದ ಬಳಿಕ ಸೇವೆಯ ಸುಧಾರಣೆಗಾಗಿ ಏರ್ ಇಂಡಿಯಾ ಮಾಡಬೇಕಿರುವುದೇನು?
ಮುಂದಿನ ಕೆಲವು ತಿಂಗಳುಗಳು ಏರ್ ಇಂಡಿಯಾದ ಪಾಲಿಗೆ ನಿರ್ಣಾಯಕ. ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲು, ಏರ್ ಇಂಡಿಯಾ ನಾಯಕತ್ವವು ಸುರಕ್ಷತೆಗೆ ನಿಜವಾಗಿಯೂ ಆದ್ಯತೆ ನೀಡಬೇಕೇ ಅಥವಾ ಕೇವಲ ಮಾರುಕಟ್ಟೆ ಪಾಲನ್ನು ಮುಂದುವರಿಯಬೇಕೇ ಎಂಬುದನ್ನು ಈಗಲೇ ನಿರ್ಧರಿಸಬೇಕು.;
ಅಹಮದಾಬಾದ್ನಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ 241 ಪ್ರಯಾಣಿಕರು ಸೇರಿದಂತೆ 270ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದೆ. ಇದು ಏರ್ಲೈನ್ನ ಕಾರ್ಯಾಚರಣಾ ಸುರಕ್ಷತೆಯಲ್ಲಿನ ಭಯಾನಕ ಲೋಪಗಳನ್ನು ಎತ್ತಿ ತೋರಿಸಿದೆ. ಈ ಘಟನೆ, ಟಾಟಾ ಗ್ರೂಪ್ಗೆ ಏರ್ ಇಂಡಿಯಾವನ್ನು ವಿಶ್ವದರ್ಜೆಯ ವಿಮಾನ ಸಂಸ್ಥೆಯನ್ನಾಗಿ ಪರಿವರ್ತಿಸುವ ತನ್ನ ದೊಡ್ಡ ಕನಸಿಗೆ ತೀವ್ರ ಹೊಡೆತ ನೀಡಿದೆ.
ಒಂದು ಕಾಲದಲ್ಲಿ ಭಾರತದ ಹೆಮ್ಮೆಯ ಏರ್ಲೈನ್ ಎಂದು ಹೇಳಲಾಗಿದ್ದ ಏರ್ ಇಂಡಿಯಾ, ಈಗ ತಪ್ಪು ಆದ್ಯತೆಗಳು, ಕಳಪೆ ನಿರ್ವಹಣಾ ಸಂಸ್ಕೃತಿ ಮತ್ತು ಸಾಧಾರಣ ಸೇವೆಗಳಿಗೆ ಕುಖ್ಯಾತಿ ಪಡೆಯುವಂತಾಗಿದೆ.
ಮೂಲಭೂತ ಸಮಸ್ಯೆಗಳು
ಜೂನ್ 12ರಂದು ನಡೆದ AI171 ವಿಮಾನ ಅಪಘಾತವು, ಬ್ರ್ಯಾಂಡಿಂಗ್ ಮತ್ತು ಹೊಸ ವಿಮಾನಗಳ ಖರೀದಿಯಂತಹ ಬಾಹ್ಯ ಮೆರುಗಿಗಿಂತಲೂ ಆಳವಾದ ಸಮಸ್ಯೆಗಳನ್ನು ಹೊಂದಿದೆ ಎಂದು ಸ್ಪಷ್ಟಪಡಿಸಿದೆ. ಆಂತರಿಕ ಮಾಹಿತಿ ನೀಡಿದವರು ಮತ್ತು ಅಸಮಾಧಾನಗೊಂಡ ಪ್ರಯಾಣಿಕರು ಮೊದಲಿನಿಂದಲೂ ಹೇಳುತ್ತಿದ್ದುದು ಈಗ ನಿಜವಾಗಿದೆ ಹಾಗೂ ನಿಜವಾಗಿಯೂ ಆಳವಾಗಿದೆ.
ಏರ್ ಇಂಡಿಯಾದ ನಿರ್ವಹಣಾ ನಿಯಮಗಳು ಸಾಕಷ್ಟು ಕಠಿಣವಾಗಿಲ್ಲ ಅಥವಾ ಅವುಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂಬ ಕಳವಳ ಹೆಚ್ಚಾಗಿದೆ. ಮಾಜಿ ಪೈಲಟ್ಗಳ ಪ್ರಕಾರ, ವೆಚ್ಚ ಕಡಿತದ ಒತ್ತಡ ಮತ್ತು ಮಾರುಕಟ್ಟೆಗೆ ಶೀಘ್ರ ಪ್ರವೇಶದ ಆತುರವು ಸುರಕ್ಷತೆಗೆ ಮಾಡಬೇಕಿದ್ದ ಹೂಡಿಕೆಗಳನ್ನು ಮೀರಿಸಿದೆ.
ಹೆಸರು ಹೇಳಲು ಇಚ್ಛಿಸದ ನಿವೃತ್ತ ಏರ್ ಇಂಡಿಯಾ ಕಮಾಂಡರ್ ಒಬ್ಬರು, “ನಾವು ಈ ವಿಷಯಗಳನ್ನು ಮೊದಲೇ ಪ್ರಸ್ತಾಪಿಸಿದ್ದೇವೆ. ಇದು ಖಂಡಿತಾ ಆಗಲೇಬೇಕಿದ್ದ ದುರಂತ” ಎಂದು ಹೇಳಿದ್ದಾರೆ.
ಟಾಟಾ ಪಡೆದ ಸ್ವತ್ತುಗಳು ಮತ್ತು ಸೌಲಭ್ಯಗಳು
2022ರಲ್ಲಿ ಟಾಟಾ ಸನ್ಸ್ ಏರ್ ಇಂಡಿಯಾವನ್ನು ಸ್ವಾಧೀನಪಡಿಸಿಕೊಂಡಾಗ, ದಶಕಗಳ ಕಾಲದ ಆಡಳಿತಾತ್ಮಕ ಅಸಮರ್ಥತೆಯನ್ನು ತೊಡೆದುಹಾಕಿ, "ಭಾರತೀಯ ಆಕಾಶದ ರತ್ನ" ಎಂದು ಕರೆಯಲಾಗಿದ್ದ ಬ್ರ್ಯಾಂಡ್ಗೆ ಗೌರವವನ್ನು ಮರಳಿ ತರುವ ಭರವಸೆ ನೀಡಿತ್ತು.
ಸರ್ಕಾರವು ಏರ್ ಇಂಡಿಯಾದ 61,000 ಕೋಟಿ ರೂ.ಗೂ ಹೆಚ್ಚು ಸಾಲವನ್ನು ಮನ್ನಾ ಮಾಡಿತ್ತು. ಇದರ ಜೊತೆಗೆ, ಹಾಲಿ ನೌಕರರನ್ನು ಉಳಿಸಿಕೊಳ್ಳುವ ಬಗ್ಗೆ ಹಲವು ಷರತ್ತುಗಳನ್ನು ಸಡಿಲಗೊಳಿಸಿ, ಸಂಸ್ಥೆಯನ್ನು ಟಾಟಾ ಸನ್ಸ್ಗೆ ಹಸ್ತಾಂತರಿಸಲಾಯಿತು. ಏರ್ ಇಂಡಿಯಾದ ಒಟ್ಟು ಸಾಲ 61,562 ಕೋಟಿ ರೂ. ಆಗಿದ್ದರೆ, ಟಾಟಾ ಗ್ರೂಪ್ ಕೇವಲ 15,300 ಕೋಟಿ ರೂ. ಸಾಲವನ್ನು ಮಾತ್ರ ವಹಿಸಿಕೊಂಡಿತು. ಉಳಿದ 46,000 ಕೋಟಿ ರೂ. ಸಾಲವನ್ನು ಸರ್ಕಾರದ ವಿಶೇಷ ಉದ್ದೇಶಿತ ವಾಹನಕ್ಕೆ ವರ್ಗಾಯಿಸಲಾಯಿತು. ಇದರರ್ಥ ಟಾಟಾ ಸಂಸ್ಥೆಯು ಗಣನೀಯವಾಗಿ ಕಡಿಮೆ ಹೊಣೆಗಾರಿಕೆಯೊಂದಿಗೆ ಏರ್ ಇಂಡಿಯಾವನ್ನು ಸ್ವಾಧೀನಪಡಿಸಿಕೊಂಡಿತು.
ಏರ್ ಇಂಡಿಯಾ ತನ್ನೊಂದಿಗೆ 140ಕ್ಕೂ ಹೆಚ್ಚು ವಿಮಾನಗಳು, ಲಂಡನ್ ಹೀಥ್ರೋ ಸೇರಿದಂತೆ ಸುಮಾರು 900 ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಲಾಟ್ಗಳು, 4,400 ದೇಶೀಯ ಲ್ಯಾಂಡಿಂಗ್ ಮತ್ತು ಪಾರ್ಕಿಂಗ್ ಸ್ಲಾಟ್ಗಳು, ವಿಮಾನ ಹ್ಯಾಂಗರ್ಗಳು, ಏರ್ ಇಂಡಿಯಾ ಎಕ್ಸ್ಪ್ರೆಸ್ನಲ್ಲಿ 100% ಮತ್ತು ಏರ್ ಇಂಡಿಯಾ ಸ್ಯಾಟ್ಸ್ ಏರ್ಪೋರ್ಟ್ ಸರ್ವೀಸಸ್ ಲಿಮಿಟೆಡ್ನಲ್ಲಿ 50% ಪಾಲು ಸೇರಿದಂತೆ ಹಲವಾರು ಮೌಲ್ಯಯುತ ಆಸ್ತಿಗಳನ್ನು ಪಡೆದುಕೊಂಡಿತ್ತು. ಸಿಂಗಾಪುರ ಏರ್ಲೈನ್ಸ್ನೊಂದಿಗೆ ಟಾಟಾ ಸನ್ಸ್ ನಡೆಸುತ್ತಿದ್ದ ವಿಸ್ತಾರಾ ಪ್ರೀಮಿಯಂ ಏರ್ಲೈನ್ ಅನ್ನು ಕೂಡ ಏರ್ ಇಂಡಿಯಾದಲ್ಲಿ ವಿಲೀನಗೊಳಿಸಲಾಯಿತು.
ತಪ್ಪಿಸಬಹುದಾದ ದೋಷಗಳ ಸರಣಿ
ಏರ್ ಇಂಡಿಯಾದ ಮಾಲೀಕರು ಹಂತ ಹಂತವಾಗಿ ದಕ್ಷತೆಯ ಮೇಲೆ ಗಮನ ಹರಿಸಬೇಕಿತ್ತು, ಆದರೆ ಅದು ಸಾಧ್ಯವಾಗಿಲ್ಲ. ಟಾಟಾ ಆಡಳಿತದಲ್ಲಿ ಹಲವಾರು ತಪ್ಪಿಸಬಹುದಾದ ತಪ್ಪುಗಳು ಮತ್ತು ಪ್ರಯಾಣಿಕರ ದೂರುಗಳು ಕಂಡುಬಂದಿವೆ. ತುರ್ತು ಲ್ಯಾಂಡಿಂಗ್ಗಳು, ವಿಮಾನದಲ್ಲಿನ ವ್ಯವಸ್ಥೆಯ ವೈಫಲ್ಯಗಳು, ಮತ್ತು ಕಳಪೆ ಗ್ರಾಹಕ ಸೇವೆಗಳಿಂದ ಏರ್ ಇಂಡಿಯಾದ ಖ್ಯಾತಿ ಕುಸಿಯುತ್ತಿದೆ.
2024ರಲ್ಲಿ , ದೆಹಲಿ-ಸ್ಯಾನ್ ಫ್ರಾನ್ಸಿಸ್ಕೋ ವಿಮಾನವು ಎಂಜಿನ್ ವೈಫಲ್ಯದಿಂದ ರಷ್ಯಾದಲ್ಲಿ ಹಲವು ದಿನಗಳ ಕಾಲ ಸಿಲುಕಿಕೊಂಡಿತ್ತು. ಚಿಕಾಗೋ-ದೆಹಲಿ ವಿಮಾನದಲ್ಲಿ ಶೌಚಾಲಯಗಳು ಕೆಲಸ ಮಾಡದ ಕಾರಣ ಮಧ್ಯದಲ್ಲೇ ಹಿಂತಿರುಗಬೇಕಾಯಿತು.
ಪ್ರಯಾಣಿಕರು ನಿರಂತರವಾಗಿ ಕಳಪೆ ನೈರ್ಮಲ್ಯ, ಮುರಿದ ಸೀಟುಗಳು, ಕಾರ್ಯನಿರ್ವಹಿಸದ ಮನರಂಜನಾ ವ್ಯವಸ್ಥೆಗಳು ಮತ್ತು ನಿರ್ಲಕ್ಷ್ಯ ವಹಿಸುವ ಸಿಬ್ಬಂದಿ ಬಗ್ಗೆ ದೂರುತ್ತಿದ್ದಾರೆ. ಹೊಸ ಸಮವಸ್ತ್ರ, ಅಪ್ಲಿಕೇಶನ್ ವಿನ್ಯಾಸ ಏನೇ ಬಂದರೂ, ಮೂಲ ಸೇವೆಗಳು ಅಸಮರ್ಪಕವಾಗಿವೆ.
ಮಾರ್ಚ್ 2025ರಲ್ಲಿ, ಟೊರೊಂಟೋದಲ್ಲಿ 85 ವರ್ಷದ ಪ್ರಯಾಣಿಕರನ್ನು ಏರ್ ಇಂಡಿಯಾ ಸಿಬ್ಬಂದಿ ವೀಲ್ಚೇರ್ನಲ್ಲಿ ಬಿಟ್ಟುಹೋದ ಘಟನೆ ಮತ್ತು ಅಪಘಾತಕ್ಕೆ ಕೆಲವೇ ವಾರಗಳ ಮೊದಲು ಒಬ್ಬ ಹಿರಿಯ ಭಾರತೀಯ ರಾಜಕಾರಣಿಗೆ ಮುರಿದ ಸೀಟ್ ನೀಡಿದ ಘಟನೆ – ಇವೆಲ್ಲವೂ ಗ್ರಾಹಕರ ಕುರಿತು ಸಂಸ್ಥೆಯ ವ್ಯವಸ್ಥಿತ ನಿರ್ಲಕ್ಷ್ಯದ ಭಾಗವಾಗಿವೆ.
ಆಂತರಿಕ ಒತ್ತಡಗಳು ಮತ್ತು ಸಮಸ್ಯೆಗಳು
ಇಂಡಿಯನ್ ಪೈಲಟ್ಸ್ ಗಿಲ್ಡ್, ಮ್ಯಾನೇಜ್ಮೆಂಟ್ಗೆ ಬರೆದ ಅನೇಕ ಪತ್ರಗಳಲ್ಲಿ, ಆಯಾಸದ ಸಮಸ್ಯೆಗಳನ್ನು ಮತ್ತು ಅನಾರೋಗ್ಯದ ಕಾರಣ ರಜೆ ಕೇಳಿದ ಪೈಲಟ್ಗಳ ವಿರುದ್ಧ ಬಳಸಿದ ಬೆದರಿಕೆ ತಂತ್ರಗಳನ್ನು ಎತ್ತಿ ತೋರಿಸಿದೆ. "ಈ ಒತ್ತಡದ ಸಂಸ್ಕೃತಿಯು ಸುರಕ್ಷತೆಗೆ ಧಕ್ಕೆ ತರುತ್ತದೆ" ಎಂದು ಒಂದು ಪತ್ರದಲ್ಲಿ ಹೇಳಲಾಗಿದೆ.
ನಿರ್ವಹಣಾ ಸಿಬ್ಬಂದಿ ಕೂಡ ಇದೇ ರೀತಿಯ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ. ಬಿಡಿಭಾಗಗಳ ನಿರಂತರ ಕೊರತೆ, ಅತಿಯಾಗಿ ಕೆಲಸ ಮಾಡುವ ತಂತ್ರಜ್ಞರು, ಮತ್ತು ಕಾರ್ಯಾಚರಣೆ ಹಾಗೂ ಎಂಜಿನಿಯರಿಂಗ್ ವಿಭಾಗಗಳ ನಡುವಿನ ಸಮನ್ವಯ ಕೊರತೆಯಿಂದ ವಿಮಾನಗಳ ನಿರ್ವಹಣೆ ಒಂದು ರೀತಿಯ "ರಷ್ಯನ್ ರೂಲೆಟ್" ಆಗಿದೆ ಎಂದು ಆಂತರಿಕ ಮೂಲಗಳು ತಿಳಿಸಿವೆ.
ಪುನರ್ ಪರಿಶೀಲನೆಯ ಅಗತ್ಯ
ಈ ಅಪಘಾತವು ಟಾಟಾ ಗ್ರೂಪ್ನ ಆಕ್ರಮಣಕಾರಿ ವಿಸ್ತರಣಾ ತಂತ್ರದ ಮೇಲೆ ನವೀಕೃತ ಪರಿಶೀಲನೆಗೆ ಕಾರಣವಾಗಿದೆ. "ವಿಹಾನ್.AI" ಯೋಜನೆಯು ಏರ್ ಇಂಡಿಯಾದ ಪುನರ್ಜನ್ಮದ ನೀಲನಕ್ಷೆಯಾಗಿತ್ತು. ಆದರೆ ಮೂಲಭೂತ ಸುಧಾರಣೆ ಇಲ್ಲದೆ, ಮಹತ್ವಾಕಾಂಕ್ಷೆಯು ಬಿಕ್ಕಟ್ಟಿಗೆ ಆಹ್ವಾನ ಎನ್ನುವುದು ತಜ್ಞರ ಅಭಿಪ್ರಾಯ.
“ಹೊಸ ವಿಮಾನಗಳು ಹಳೆಯ ಸಂಸ್ಕೃತಿಯನ್ನು ಸರಿಪಡಿಸಲಾರವು,” ಎಂದು DGCAಯ ಮಾಜಿ ಕಾರ್ಯನಿರ್ವಾಹಕರೊಬ್ಬರು ಹೇಳಿದ್ದಾರೆ. "ನಿಮಗೆ ಆಳವಾದ ಸಾಂಸ್ಥಿಕ ಬದಲಾವಣೆ ಬೇಕು, ಕೇವಲ ಹೊಸ ಜೆಟ್ಗಳು ಮತ್ತು ಸಮವಸ್ತ್ರಗಳಲ್ಲ." ಎಂದಿದ್ದಾರೆ.
ಅಪಘಾತದ ನಂತರದ ಸವಾಲುಗಳು
ಅಹಮದಾಬಾದ್ನಲ್ಲಿ ನಡೆದ ಅಪಘಾತದ ನಂತರ, ಭಾರತದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಏರ್ ಇಂಡಿಯಾದ ಬೋಯಿಂಗ್ 787 ವಿಮಾನ ಸಮೂಹಕ್ಕೆ, ವಿಶೇಷವಾಗಿ GEಯ GEnx ಎಂಜಿನ್ಗಳಿಂದ ಚಾಲಿತ ವಿಮಾನಗಳಿಗೆ ತುರ್ತು ತಪಾಸಣೆಗಳನ್ನು ಆದೇಶಿಸಿದೆ. "ಹೆಚ್ಚುವರಿ ನಿರ್ವಹಣಾ ಕ್ರಮಗಳನ್ನು" ಕಡ್ಡಾಯಗೊಳಿಸಲಾಗಿದ್ದು, ವಿಮಾನ ನಿಯಂತ್ರಣ ತಪಾಸಣೆಗಳು ಮತ್ತು ಪವರ್ ಅಶ್ಯುರೆನ್ಸ್ ಪರೀಕ್ಷೆಗಳು ಇದರಲ್ಲಿ ಸೇರಿವೆ. ಇಂತಹ ಪ್ರೋಟೋಕಾಲ್ಗಳು ಮೊದಲು ವಾಡಿಕೆಯಾಗಿರಲಿಲ್ಲ ಎಂಬುದು ಮೇಲ್ವಿಚಾರಣೆಯಲ್ಲಿನ ಗಂಭೀರ ಅಂತರಗಳನ್ನು ತೋರಿಸುತ್ತದೆ.
ಈ ಅಪಘಾತವು 1,000 ಕೋಟಿಗೂ ರೂ. ಹೆಚ್ಚು ಮೊತ್ತದ ಭಾರತದ ಅತಿದೊಡ್ಡ ವಿಮಾನಯಾನ ವಿಮಾ ಕ್ಲೇಮ್ಗೆ ಕಾರಣವಾಗಿದೆ. ವಿಲೀನಗೊಂಡ ಏರ್ ಇಂಡಿಯಾ-ವಿಸ್ತಾರಾದಲ್ಲಿ ಪಾಲನ್ನು ಹೊಂದಿರುವ ಸಿಂಗಾಪುರ ಏರ್ಲೈನ್ಸ್ ಮೌನ ವಹಿಸಿದ್ದರೂ, ಬ್ರ್ಯಾಂಡ್ ಮೇಲೆ ಆಗಿರುವ ಪರಿಣಾಮದ ಬಗ್ಗೆ ಆಂತರಿಕ ಕಳವಳಗಳು ಹೆಚ್ಚಿವೆ.
ಮುಂದಿನ ದಾರಿ: ಸುರಕ್ಷತೆಗೆ ಆದ್ಯತೆ
ಮುಂದಿನ ಕೆಲವು ತಿಂಗಳುಗಳು ಏರ್ ಇಂಡಿಯಾಕ್ಕೆ ನಿರ್ಣಾಯಕ. ನಿಯಂತ್ರಕರು ತಪಾಸಣೆಗಳನ್ನು ತೀವ್ರಗೊಳಿಸುವ ಸಾಧ್ಯತೆ ಇದೆ. ಯೂನಿಯನ್ಗಳು ನಿರ್ವಹಣೆಯ ಮೇಲೆ ಹೆಚ್ಚಿನ ಬದಲಾವಣೆಗಳು ಮತ್ತು ಹೊಣೆಗಾರಿಕೆಯನ್ನು ಜಾರಿಗೊಳಿಸಲು ಒತ್ತಡ ಹೇರುತ್ತವೆ. ಏರ್ ಇಂಡಿಯಾದ ನಾಯಕತ್ವವು ಸುರಕ್ಷತೆಗೆ ನಿಜವಾಗಿಯೂ ಆದ್ಯತೆ ನೀಡಬೇಕೇ ಅಥವಾ ಯಾವುದೇ ಬೆಲೆಗೆ ಮಾರುಕಟ್ಟೆ ಪಾಲನ್ನು ಮುಂದುವರಿಸಬೇಕೇ ಎಂದು ನಿರ್ಧರಿಸಬೇಕಿದೆ.
ಅಹಮದಾಬಾದ್ನಲ್ಲಿ ನಡೆದದ್ದು ಕೇವಲ ಒಂದು ದುರಂತವಲ್ಲ; ಇದು ಒಂದು ಲೆಕ್ಕಾಚಾರದ ಸಮಯ. ಟಾಟಾ ಸನ್ಸ್ ನಿಜವಾಗಿಯೂ ವಿಶ್ವ ದರ್ಜೆಯ ವಿಮಾನ ಸಂಸ್ಥೆಯನ್ನು ನಿರ್ಮಿಸುವಲ್ಲಿ ಗಂಭೀರವಾಗಿದ್ದರೆ, ಅದು ಮೇಲ್ಮಟ್ಟದಿಂದಲೇ ಬದಲಾವಣೆಗಳನ್ನು ಪ್ರಾರಂಭಿಸಬೇಕು, ಇನ್ನು ಮುಂದೆ ಕಾರ್ಯನಿರ್ವಹಿಸದ ಎಲ್ಲವನ್ನೂ ತೊಡೆದುಹಾಕಬೇಕು ಮತ್ತು ವಿಮಾನಯಾನದ ಅತ್ಯಂತ ಅಗತ್ಯ ಅಂಶವಾದ ವಿಶ್ವಾಸವನ್ನು ಮರಳಿ ಸ್ಥಾಪಿಸಬೇಕು.