ಆರ್ಸಿಬಿ ಐಪಿಎಲ್ ಗೆಲುವಿನ ಸಂಭ್ರಮಕ್ಕೆ ಇಬ್ಬರು ಬಲಿ, ಗಲಭೆ ಪ್ರಕರಣಗಳು ದಾಖಲು!
ಉಷಾ ನರ್ಸಿಂಗ್ ಹೋಂ ಸರ್ಕಲ್ ಬಳಿಯ ರವೀಂದ್ರ ನಗರದ ಗಣಪತಿ ದೇವಾಲಯದ ಬಳಿ ಅಪಘಾತ ನಡೆದಿದ್ದು ಮೃತ ಯುವಕನನ್ನು ವೆಂಕಟೇಶ ನಗರದ ನಿವಾಸಿ ಅಭಿನಂದನ್(21) ಎಂದು ಗುರುತಿಸಲಾಗಿದೆ.;
ಮೃತ ಯುವಕ ಅಭಿನಂದನ್
ಅಹಮದಾಬಾದ್ನಲ್ಲಿ ನಡೆದ ಐಪಿಎಲ್ ಫೈನಲ್ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಐತಿಹಾಸಿಕ ಗೆಲುವು ಸಾಧಿಸಿದ ಬೆನ್ನಲ್ಲೇ, ಅಭಿಮಾನಿಗಳ ಸಂಭ್ರಮಾಚರಣೆ ದುರಂತಕ್ಕೆ ತಿರುಗಿದ ಪ್ರಸಂಗ ನಡೆದಿದೆ.. ರಾಜ್ಯದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದು, ಬೆಂಗಳೂರಿನಲ್ಲಿ ಗಲಭೆ, ಚಾಕು ಇರಿತದ ಪ್ರಕರಣಗಳು ದಾಖಲಾಗಿವೆ.
ಶಿವಮೊಗ್ಗದಲ್ಲಿ ಬೈಕ್ ಅಪಘಾತ
ಶಿವಮೊಗ್ಗ ನಗರದಲ್ಲಿ ಆರ್ಸಿಬಿ ಗೆಲುವಿನ ಸಂಭ್ರಮಾಚರಣೆಗಾಗಿ ಬೈಕ್ನಲ್ಲಿ ತೆರಳುತ್ತಿದ್ದ ಯುವಕರ ಗುಂಪಿನಲ್ಲಿ ದುರಂತ ಸಂಭವಿಸಿದೆ. ಉಷಾ ನರ್ಸಿಂಗ್ ಹೋಂ ಸರ್ಕಲ್ ಬಳಿ, ರವೀಂದ್ರ ನಗರದ ಗಣಪತಿ ದೇವಾಲಯದ ಬಳಿ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ವೆಂಕಟೇಶ ನಗರದ ನಿವಾಸಿ ಅಭಿನಂದನ್ (21) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜಯನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ, ದುರ್ಗಿ ಗುಡಿಯ ಬಳಿ ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೈಕ್ ಡಿಕ್ಕಿ ಹೊಡೆದು ಹಾನಿಯಾಗಿದ್ದು, ಬೈಕ್ ಸವಾರರು ಪರಾರಿಯಾಗಿದ್ದಾರೆ.
ಬೆಳಗಾವಿಯಲ್ಲಿ ಹೃದಯಾಘಾತ
ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ಆರ್ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಅಭಿಮಾನಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಆರ್ಸಿಬಿ ಹಾಗೂ ವಿರಾಟ್ ಕೊಹ್ಲಿಯ ಕಟ್ಟಾ ಅಭಿಮಾನಿಯಾಗಿದ್ದ ಮಂಜುನಾಥ ಕುಂಬಾರ (25), ತಂಡದ ಗೆಲುವಿನ ಸಂತಸದಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾಗಲೇ ಹೃದಯಾಘಾತಕ್ಕೊಳಗಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಗಲಭೆ ಮತ್ತು ಚಾಕು ಇರಿತ
ಬೆಂಗಳೂರಿನ ಗೋಪಿ ವೃತ್ತದಲ್ಲಿ ಬುಧವಾರ ಮುಂಜಾನೆಯವರೆಗೂ ಆರ್ಸಿಬಿ ಗೆಲುವಿನ ಸಂಭ್ರಮಾಚರಣೆ ಮುಗಿಯದ ಕಾರಣ, ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಯುವಕರನ್ನು ಚದುರಿಸಿದ್ದಾರೆ.
ಚೊಚ್ಚಲ ಟ್ರೋಫಿ ಗೆದ್ದ ಬೆನ್ನಲ್ಲೇ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ನಗರದ ರಸ್ತೆಗಳು ಮತ್ತು ಪ್ರಮುಖ ವೃತ್ತಗಳಲ್ಲಿ ಯುವಕರು ಘೋಷಣೆಗಳನ್ನು ಕೂಗುತ್ತಾ ಸಂಭ್ರಮಿಸುತ್ತಿದ್ದರು. ಈ ನಡುವೆ, ಪೀಣ್ಯದ ಜಾಲಹಳ್ಳಿ ಕ್ರಾಸ್ ಬಳಿ, ಸಂಭ್ರಮಾಚರಣೆ ಮಾಡುತ್ತಿದ್ದ ದುಷ್ಕರ್ಮಿಗಳ ತಂಡವೊಂದು ಬಾರ್ಗೆ ನುಗ್ಗಿ ಯುವಕನೊಬ್ಬನಿಗೆ ಚಾಕು ಇರಿದಿದೆ. ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.