Railway Accident | ರೈಲು ಡಿಕ್ಕಿಯಾಗಿ ಯುಪಿ ಮೂಲದ ಮೂವರು ಕಾರ್ಮಿಕರ ಸಾವು
ಮೃತರನ್ನು ಉತ್ತರಪ್ರದೇಶ ಮೂಲದ 18 ವರ್ಷದ ರಾಹುಲ್, 20 ವರ್ಷದ ಬಿಕೇಶ್ ಮತ್ತು 24 ವರ್ಷದ ಲಲನ್ ಎಂದು ಗುರುತಿಸಲಾಗಿದೆ.;
ರೈಲ್ವೆ ಹಳಿ ಬಳಿ ರೀಲ್ಸ್ ಮಾಡುವ ವೇಳೆ ರೈಲು ಡಿಕ್ಕಿಯಾಗಿ ಉತ್ತರಪ್ರದೇಶ ಮೂಲದ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಹೊರವಲಯದ ಸಿದ್ದೇನಾಯಕನಹಳ್ಳಿ ಬಳಿ ನಡೆದಿದೆ.
ಮೃತರನ್ನು ಉತ್ತರಪ್ರದೇಶ ಮೂಲದ 18 ವರ್ಷದ ರಾಹುಲ್, 20 ವರ್ಷದ ಬಿಕೇಶ್ ಮತ್ತು 24 ವರ್ಷದ ಲಲನ್ ಎಂದು ಗುರುತಿಸಲಾಗಿದೆ. ಮೂವರು ಯುವಕರು ಕಾರ್ಪೆಂಟರ್ ಕೆಲಸ ಮಾಡುತ್ತಿದ್ದರು. ಸಂಜೆ ಕೆಲಸ ಮುಗಿಸಿಕೊಂಡು ರೈಲ್ವೆ ಹಳಿ ಬಳಿ ಬಂದಿದ್ದರು. ರೀಲ್ಸ್ ಮಾಡುತ್ತಿದ್ದಾಗ ರೈಲು ಡಿಕ್ಕಿಯಾಗಿ ಯುವಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ರೈಲು ಡಿಕ್ಕಿ ಹೊಡೆದ ರಭಸಕ್ಕೆ ಹಳಿಗಳ ಮೇಲೆ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸತ್ಯ ಸಾಯಿ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದಿರುವ ಶಂಕೆ ವ್ಯಕ್ತವಾಗಿದೆ. ಹಳಿ ಮೇಲಿದ್ದ ಮೃತದೇಹಗಳನ್ನು ಕಂಡ ಸ್ಥಳೀಯರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಯಶವಂತಪುರ ರೈಲ್ವೆ ಪೊಲೀಸರಿಂದ ಮೃತದೇಹಗಳನ್ನು ಶವಾಗಾರಕ್ಕೆ ರವಾನಿಸಿ ತನಿಖೆ ಕೈಗೊಳ್ಳಲಾಗಿದೆ.
ಪ್ರಸ್ತುತ ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲವಾಗಿದ್ದು, ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
ಮತ್ತೊಂದೆಡೆ ಘಟನೆ ನಡೆದು ಹಲವು ಗಂಟೆಗಳು ಕಳೆದರು ಶವಗಳನ್ನು ಪಡೆಯಲು ಯಾರು ಮುಂದೇ ಬರುತ್ತಿಲ್ಲ ಎಂಬ ಪರದಾಟ ರೈಲ್ವೆ ಪೊಲೀಸರದ್ದಾಗಿದೆ.
ಮೃತರ ಗೆಳೆಯರು ಬಂದು ಗುರುತು ಪತ್ತೆ ಮಾಡಿದ್ದರೂ ಸ್ವಗ್ರಾಮಕ್ಕೆ ಕೊಂಡಯ್ಯಲು ಯಾರು ಮುಂದೆ ಬರುತ್ತಿಲ್ಲ. ಬೆಂಗಳೂರಿನಲ್ಲಿರುವ ಸಂಬಂಧಿಕನೋರ್ವನ ಮೊಬೈಲ್ ಸಂಖ್ಯೆ ಪಡೆದು ಮಾಹಿತಿ ನೀಡಿರುವ ಪೊಲೀಸರು, ಇಂದು ಬೆಳಿಗ್ಗೆ ಕರೆ ಮಾಡಿದರೆ, ಆತನ ಮೊಬೈಲ್ ಸ್ವಿಚ್ ಆಫ್ ಬರುತ್ತಿದೆ ಎಂದು ತಿಳಿದು ಬಂದಿದೆ.
ಇದು ರೈಲ್ವೆ ಪೊಲೀಸರಿಗೆ ತಲೆ ನೋವಿಗೆ ಕಾರಣವಾಗಿದ್ದು, ಮೃತ ದೇಹಗಳನ್ನು ಕುಟುಂಬಸ್ಥರಿಗೆ ತಲುಪಿಸಲು ತೀವು ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.