ನಿಮ್ಮ ವಿರುದ್ಧ ಮಾತನಾಡಿದವರೆಲ್ಲಾ ಟ್ರ್ಯಾಪ್‌ ; ಡಿಕೆಶಿಗೆ ನಿಖಿಲ್‌ ಕುಮಾರಸ್ವಾಮಿ ತಿರುಗೇಟು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಡಾ ಟ್ರ್ಯಾಪ್, ದಲಿತ ಸಚಿವ ಡಾ.ಜಿ. ಪರಮೇಶ್ವರ್ ಅವರಿಗೆ ಚಿನ್ನದ ಟ್ರ್ಯಾಪ್, ಹಿರಿಯ ಸಚಿವ ಕೆ.ಎನ್‌. ರಾಜಣ್ಣಗೆ ಹನಿಟ್ರ್ಯಾಪ್ ಆಗುತ್ತಿರುವುದು ಇದೆಂತಹ ವಿಶ್ವಾಸಾರ್ಹತೆ ಎಂಬುದು ನಿಖಿಲ್‌ ಕುಮಾರಸ್ವಾಮಿ ಪ್ರಶ್ನೆ.;

Update: 2025-05-31 06:01 GMT

ಜೆಡಿಎಸ್‌ ಯುವ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌

ನಿಮ್ಮ ವಿರುದ್ಧ ಮಾತನಾಡಿದರೆಲ್ಲರೂ ಟ್ರ್ಯಾಪ್‌ ಆಗುತ್ತಿದ್ದಾರೆ. ನಿಮ್ಮ ಪಟ್ಟಿಯಲ್ಲಿರುವ ಕಾಂಗ್ರೆಸ್ ನಾಯಕರನ್ನು ಆ ದೇವರೇ ರಕ್ಷಣೆ ಮಾಡಬೇಕು. ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಬಗ್ಗೆ ಮಾತನಾಡುವ ಮುನ್ನ ನಿಮ್ಮ ನಾಲಿಗೆಯ ಸ್ವಾಸ್ಥ್ಯ ಪರೀಕ್ಷೆ ಮಾಡಿಸಿಕೊಳ್ಳಿ. ಮಾತಿನಲ್ಲಿ ಎಚ್ಚರ ಇರದಿದ್ದರೆ ಅದು ನಿಮಗೇ ಮುಳುವಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರುದ್ದ ಜೆಡಿಎಸ್‌ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಇತ್ತೀಚೆಗೆ ಹಾಸನದ ಕಾರ್ಯಕ್ರಮದಲ್ಲಿ ಜೆಡಿಎಸ್ ಬಗ್ಗೆ ಮಾತನಾಡಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ನಿಖಿಲ್‌ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಭವಿಷ್ಯ, ಅವಕಾಶ ಮತ್ತು ನಂಬಿಕೆ ಬಗ್ಗೆ ಮಾತನಾಡುವವರು ಒಮ್ಮೆ 2023ರ ವಿಧಾನಸಭೆ ಚುನಾವಣೆಯ ಇತಿಹಾಸದ ಪುಟಗಳನ್ನೊಮ್ಮೆ ತಿರುಗಿಸಿ ನೋಡಬೇಕು. ನಂಬಿಕೆ ಮತ್ತು ವಿಶ್ವಾಸಾರ್ಹತೆ ಬಗ್ಗೆ ನೀವು ಮಾತನಾಡಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮನ್ನು ನಂಬಿ ಬಂದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹಾಗೂ ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದ ಏಕೈಕ ಶಾಸಕ ಶಿವಲಿಂಗೇಗೌಡರನ್ನು ಮಂತ್ರಿ ಮಾಡಲಿಲ್ಲ, ಗುಬ್ಬಿ ಶಾಸಕರನ್ನು ಮಂತ್ರಿ ಮಾಡುವುದು ಇರಲಿ ಅವರ ಶ್ರೀಮತಿ ಭಾರತಿ ಶ್ರೀನಿವಾಸ್‌ ಅವರನ್ನು ತುಮಕೂರು ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷರಾಗಿ ಮಾಡಲಿಲ್ಲ. ರಾಮನಗರ ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರಂತೂ ಮಂತ್ರಿ ಆಗಲು ರೆಡಿ ಮಾಡಿಸಿದ್ದ ಸೂಟುಕೋಟುಗಳು ಮೂಲೆಗೆ ಬಿದ್ದು ಧೂಳು ತಿನ್ನುತ್ತಿವೆ ಎಂದಿದ್ದಾರೆ. 

ಮಾತನಾಡಿದವರೇ ಟ್ರ್ಯಾಪ್

ನಿಮ್ಮ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಡಾ ಟ್ರ್ಯಾಪ್, ದಲಿತ ಸಚಿವ ಡಾ.ಜಿ. ಪರಮೇಶ್ವರ್ ಅವರಿಗೆ ಚಿನ್ನದ ಟ್ರ್ಯಾಪ್, ಹಿರಿಯ ಸಚಿವರಾದ ರಾಜಣ್ಣ ಅವರಿಗೆ ಹನಿಟ್ರ್ಯಾಪ್ ಆಗಿದೆ. ಇದನ್ನು ಎಂತಹ ವಿಶ್ವಾಸಾರ್ಹತೆ ಎನ್ನುತ್ತೀರಿ, ನಿಮ್ಮ ಹಿಟ್ ಲಿಸ್ಟ್ ನಲ್ಲಿರುವ ಉಳಿದ ಕಾಂಗ್ರೆಸ್ ನಾಯಕರನ್ನು ಆ ದೇವರೇ ರಕ್ಷಣೆ ಮಾಡಬೇಕು ಎಂದು ತಿಳಿಸಿದ್ದಾರೆ.

Tags:    

Similar News