Bangalore Stampede | ರಕ್ತದ ಕಲೆ ಸಿಎಂ, ಡಿಸಿಎಂ ಕೈಗಂಟಿದೆ; ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕೇವಲ 25 ರಿಂದ 30 ವ್ಯಕ್ತಿಗಳು ಆಸೀನರಾಗಲು ವ್ಯವಸ್ಥೆ ಮಾಡಬೇಕು ಎಂದು ಸ್ಪಷ್ಟವಾಗಿ ಹೇಳಿದ್ದರೂ ಸಚಿವರ ಕುಟುಂಬ ಸದಸ್ಯರೇ ಹೆಚ್ಚಾಗಿದ್ದರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.;

Update: 2025-06-07 10:58 GMT

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಕೈಗೆ ರಕ್ತ ಅಂಟಿಕೊಂಡಿದೆ. ಘಟನೆಯ ನೈತಿಕ ಹೊಣೆ ಹೊತ್ತು ಕೂಡಲೇ ಈ ಇಬ್ಬರೂ ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶನಿವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎಲ್ಲ ವಿಚಾರಗಳಿಗೂ ಮಧ್ಯಪ್ರವೇಶಿಸುವ ಕಾಂಗ್ರೆಸ್‌ ನಾಯಕರಾದ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಎಲ್ಲಿ ಅಡಗಿ ಕುಳಿತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. 

ಕೋಟ್ಯಂತರ ಭಕ್ತರು ಭಾಗವಹಿಸಿದ್ದ ಕುಂಭಮೇಳವನ್ನು ಉತ್ತರ ಪ್ರದೇಶ ಸರ್ಕಾರ ಸಮರ್ಥವಾಗಿ ನಿಭಾಯಿಸಿತ್ತು. ಆದರೆ, ನೀವು ಕೇವಲ ಎರಡು ಲಕ್ಷ ಜನರನ್ನು ನಿಯಂತ್ರಣ ಮಾಡಲು ಆಗಲಿಲ್ಲ. ಪ್ರಚಾರದ ಗೀಳಿಗಾಗಿ 11 ಮಂದಿ ಬಲಿ ಪಡೆದಿದ್ದು, ಆರ್‌ಸಿಬಿ ಆಡಳಿತ ಮಂಡಳಿಯವರನ್ನು ಬಂಧಿಸಿದಂತೆ ನಿಮ್ಮನ್ನು ಏಕೆ ಬಂಧಿಸಿಬಾರದು ಎಂದು ಪ್ರಶ್ನಿಸಿದ್ದಾರೆ.

ವೇದಿಕೆ ಮೇಲೆ ಸಚಿವರ ಪರಿವಾರ

ಒಲಂಪಿಕ್ಸ್‌ನಲ್ಲಿ ಪದಕ ಗೆದ್ದಾಗ ಸಂಭ್ರಮಾಚರಣೆ ಮಾಡಲಿಲ್ಲ. ಆದರೆ, ಒಂದು ಫ್ರಾಂಚೈಸಿ ತಂಡ ಗೆದ್ದಾಗ ಸಂಭ್ರಮಾಚರಣೆ ಮಾಡಿದ್ದೀರಿ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕೇವಲ 25 ರಿಂದ 30 ಮಂದಿ ಆಸೀನರಾಗಲು ವ್ಯವಸ್ಥೆ ಮಾಡಬೇಕು ಎಂದು ಸ್ಪಷ್ಟವಾಗಿ ಹೇಳಿದ್ದರೂ ಸಚಿವ ಜಮೀರ್‌ ಅಹ್ಮದ್‌ ಖಾನ್‌ , ರಾಮಲಿಂಗಾರೆಡ್ಡಿ ಸೇರಿ‌ದಂತೆ ಹಲವು ಸಚಿವರ ಪರಿವಾರದವರು ವೇದಿಕೆ ಮೇಲಿದ್ದರು ಎಂದು ಆರೋಪಿಸಿದ್ದಾರೆ. 

ಗುಪ್ತಚರ ವೈಫಲ್ಯವೂ ಕಾರಣ

ಆಟಗಾರರನ್ನು ನೋಡಲು ಅಭಿಮಾನಿಗಳು ಮರಗಳ ಮೇಲೆ ಹತ್ತಿ ಕುಳಿತಿದ್ದರು. ಕ್ರೀಡಾಂಗಣದ ಬಳಿ ಲಕ್ಷಾಂತರ ಜನ ಸೇರಿದ್ದರು. ಸಂಭಾವ್ಯ ಅನಾಹುತಗಳ ಬಗ್ಗೆ ಗುಪ್ತಚರ ವರದಿ ಕೊಟ್ಟಿರಲಿಲ್ಲವೇ. ಮೆಟ್ರೋದಲ್ಲಿ 9 ಲಕ್ಷ ಪ್ರಯಾಣಿಕರು ಓಡಾಡಿದ್ದಾರೆ. ಈ ಬಗ್ಗೆ ಏಕೆ ಮಾಹಿತಿ ಪಡೆಯಲಿಲ್ಲ. ಇದು ಗುಪ್ತಚರ ವೈಫಲ್ಯವಲ್ಲದೇ ಮತ್ತೇನು ಎಂದು ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ. 

ಅಧಿಕಾರಿಗಳ ಅಮಾನತು ಸರಿಯಲ್ಲ

ಆರ್‌ಸಿಬಿ ಫೈನಲ್‌ನಲ್ಲಿ ಗೆದ್ದ ಬಳಿಕ ನಗರದಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಪೊಲೀಸರು ಮಂಗಳವಾರ (ಜೂ.3) ರಾತ್ರಿ ಉತ್ತಮವಾಗಿ ಕೆಲಸ ನಿರ್ವಹಿಸಿ, ಯಾವುದೇ ಸಮಸ್ಯೆಯಾಗದಂತೆ ನೋಡಿಕೊಂಡಿದ್ದರು. ಆದರೆ, ಬುಧವಾರ ಸರ್ಕಾರದ ತಪ್ಪಿಗೆ ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಿರುವುದು ಸರಿಯಲ್ಲ. ಕೆಎಸ್‌ಸಿಎ ಬುಧವಾರ ಮಧ್ಯಾಹ್ನ 2.30ಕ್ಕೆ ಪಾಸ್ ಕೊಡುವುದಾಗಿ ಹೇಳಿತು. ಆ ನಂತರ ಉಚಿತ ಪ್ರವೇಶ ಎಂದು ಹೇಳಿ ಗೊಂದಲ ಉಂಟು ಮಾಡಿತು ಎಂದು ದೂರಿದ್ದಾರೆ.

ಗಾಯಾಳುಗಳಿಂದಲೇ ಚಿಕಿತ್ಸೆ ವೆಚ್ಚ ಪಾವತಿ

ವೈದೇಹಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳೇ ಚಿಕಿತ್ಸಾ ವೆಚ್ಚ ಭರಿಸಿದ್ದಾರೆ. ಸರ್ಕಾರ ಎಲ್ಲವನ್ನೂ ಮುಚ್ಚಿಡುತ್ತಿದೆ. ಎಲ್ಲದಕ್ಕೂ ರಾಜ್ಯಕ್ಕೆ ಬರುತ್ತಿದ್ದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಉಸ್ತುವಾರಿ ಸುರ್ಜೆವಾಲಾ ಬಂದು ಪರಿಸ್ಥಿತಿ ಅವಲೋಕಿಸಬೇಕು ಎಂದು ಒತ್ತಾಯಿಸಿದರು.  

ಹೈಕೋರ್ಟ್‌ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಲಿ

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಜಾನ್‌ ಮೈಕಲ್‌ ಡಿ.ಕುನ್ಹಾ ಅವರು ಈಗಾಗಲೇ ಕೋವಿಡ್‌ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಕಾಲ್ತುಳಿತದ ದುರಂತದ ತನಿಖೆ ನಡೆಸಲು ಅವರನ್ನು ನೇಮಕ ಮಾಡಿರುವುದು ಪ್ರಕರಣ ಮುಚ್ಚಿ ಹಾಕುವ ಷಡ್ಯಂತ್ರ. ಹೈಕೋರ್ಟ್‌ನಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದ್ದು ವಿಚಾರಣೆಯೂ ನಡೆಯುತ್ತಿದೆ.  ಹಾಗಾಗಿ ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿಗಳಿಂದ  ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರಕರಣ ಮುಚ್ಚಿಹಾಕಲು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರ ಮೂಲಕ ಮ್ಯಾಜಿಸ್ಟ್ರೇಟ್‌ ತನಿಖೆ ನಡೆಸಲು ಸರ್ಕಾರ ಹೊರಟಿದೆ.  ದುರಂತದ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸರ್ಕಾರ ಪ್ರಮಾಣಿಕ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದೆ. ಇದು ಸರ್ಕಾರಕ್ಕೆ ಕಪ್ಪು ಚುಕ್ಕೆಯಂತಾಗಿದೆ ಎಂದಿದ್ದಾರೆ.

Tags:    

Similar News