Bangalore Stampade | ಯಾರ ಕಾಲದಲ್ಲಿ ಏನಾಗಿದೆ ಎಲ್ಲವೂ ಗೊತ್ತು; ಎಚ್ಡಿಕೆಗೆ ಡಿ.ಕೆ.ಶಿವಕುಮಾರ್ ತಿರುಗೇಟು
ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳ ದುಃಖ ಹೇಳತೀರದು. ಆದರೆ, ಕೆಲ ರಾಜಕೀಯ ವಿರೋಧಿಗಳು ಘಟನೆಗೆ ಸಂಬಂಧಿಸಿ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದ್ದು, ಯಾರ ಕಾಲದಲ್ಲಿ ಏನೆಲ್ಲಾ ಆಗಿದೆ ಎಂಬುದು ಜನರಿಗೆ ಗೊತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.;
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿದರು.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದ ಬಗ್ಗೆ ಯಾರು ಏನೇ ಟೀಕೆ ಮಾಡಿದರೂ ಸದನದಲ್ಲಿ ಎಲ್ಲವೂ ಹೊರಗಡೆ ಬರಲಿದೆ. ಅವರವರ ಕಾಲದಲ್ಲಿ ಏನಾಯ್ತು ಎಂಬುದು ಗೊತ್ತಿದೆ. ವರನಟ ಡಾ. ರಾಜ್ ಕುಮಾರ್ ಮೃತಪಟ್ಟಾಗ ಏನಾಯಿತು ?, ಆಗ ನಾನು ದೆಹಲಿಯಲ್ಲಿದ್ದೆ. ಎಚ್.ಡಿ. ಕುಮಾರಸ್ವಾಮಿ ಟೀಕೆ ಮಾಡುತ್ತಲೇ ಇರಲಿ. ಕೊಳಕು ರಾಜಕೀಯದ ಬಗ್ಗೆ ನಾನು ಮಾತನಾಡುವುದಿಲ್ಲ. ಘಟನೆಯ ಕುರಿತು ಸರ್ಕಾರ ಜವಾಬ್ದಾರಿ ತೆಗೆದುಕೊಳ್ಳುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಆರ್ಸಿಬಿ ವಿಜಯೋತ್ಸವ ಕಣ್ತುಂಬಿಕೊಳ್ಳಲು ಲಕ್ಷಾಂತರ ಅಭಿಮಾನಿಗಳು ಸೇರಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದ್ದು ಯಾವ ಕುಟುಂಬದವರು ದುಃಖ ತಡೆಯಲು ಸಾಧ್ಯವಿಲ್ಲ. ಜನಸಂದಣಿ ತಡೆಯುವಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳುತ್ತಿದ್ದರು. ಕಾರ್ಯಕ್ರಮದ ಸ್ಥಳಕ್ಕೆ ತೆರಳಲು ಆರ್ಸಿಬಿ ಆಟಗಾರರಿಗೆ ಜಾಗವಿರಲಿಲ್ಲ. ಈ ವೇಳೆ ಆಟಗಾರರನ್ನು ನನ್ನ ಕಾರಿನಲ್ಲೇ ಕಳುಹಿಸಿದೆ. ಮಾಧ್ಯಮದವರು ಹೇಳಿದ ಬಳಿಕ ಈ ದುರ್ಘಟನೆ ನಮಗೆ ಗೊತ್ತಾಯಿತು ಎಂದರು.
ಕರ್ನಾಟಕ ಒಂದು ಕುಟುಂಬವಿದ್ದಂತೆ. ಇದು ನಮ್ಮ ಮನೆಯ ನೋವು. ಮರಣೋತ್ತರ ಪರೀಕ್ಷೆ ಮಾಡಬೇಡಿ ಎಂದು ಒಬ್ಬ ತಾಯಿ ಹೇಳುತ್ತಾರೆ. ಆ ತಾಯಿಗೆ ಎಷ್ಟು ಹೊಟ್ಟೆ ಹುರಿಯಬೇಕು ? ಪ್ರತಿಪಕ್ಷಗಳು ಸಾವಿನ ಮೇಲೆ ರಾಜಕೀಯ ಮಾಡುವುದು ಬೇಡ, ಅವರ ರಾಜಕೀಯ ಉದ್ದೇಶವೇ ಅದು. 18 ವರ್ಷಗಳ ಬಳಿಕ ಕಪ್ ಬಂದಿದೆ ಅಂದಾಗ ಸಹಜವಾಗಿ ಅಭಿಮಾನ ಇರುತ್ತದೆ. ಘಟನೆ ಕುರಿತು ಮುಖ್ಯಮಂತ್ರಿಗಳು, ಗೃಹ ಸಚಿವರು ಸೇರಿದಂತೆ ಇಡೀ ಸರ್ಕಾರ ದಿಗ್ಬ್ರಮೆಯಲ್ಲಿದೆ ಎಂದು ತಿಳಿಸಿದರು.
ಇಷ್ಟು ದೊಡ್ಡ ಘಟನೆ ಸಂಭವಿಸುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ನಾನು ವಿಪಕ್ಷಗಳ ರಾಜಕೀಯ ಹಾಗೂ ಟೀಕೆ ಬಗ್ಗೆ ಮಾತನಾಡುವುದಿಲ್ಲ. ರಾಜ್ಯದ ಜನರಿಗೆ ಮಾತ್ರ ಉತ್ತರ ನೀಡುತ್ತೇನೆ ಎಂದರು.