Prajwal Pendrive Case | ಪ್ರಜ್ವಲ್​ ಅತ್ಯಾಚಾರ ಎಸಗಿರುವುದು ನಿಜ, ವಿಡಿಯೋಗಳೆಲ್ಲವೂ ಅಸಲಿ: ಎಸ್​ಐಟಿ ಚಾರ್ಜ್‌ಶೀಟ್‌

ಲೈಂಗಿಕ ದೌರ್ಜನ್ಯ ಎಸಗಿ, ಸಂತ್ರಸ್ತೆಯ ಅರಿವಿಗೆ ಬಾರದಂತೆ ತನ್ನ ಮೊಬೈಲ್‌ನಲ್ಲಿ ಫೋಟೊ ತೆಗೆದುಕೊಳ್ಳುತ್ತಿದ್ದ ಪ್ರಜ್ವಲ್. ವಿಡಿಯೋಗಳು ಜಾಲತಾಣದಲ್ಲಿ ಹರಡಲು ಸ್ವತಃ ಪ್ರಜ್ವಲ್‌ ಕಾರಣ ಎಂದ ದೋಷಾರೋಪ ಪಟ್ಟಿ.

Update: 2024-08-24 06:01 GMT
ಪ್ರಜ್ವಲ್‌ ರೇವಣ್ಣ

ಮನೆ ಕೆಲಸದ ಮಹಿಳೆಗೆ ಮಾಜಿ ಸಚಿವ ಎಚ್‌ ಡಿ ರೇವಣ್ಣ ಲೈಂಗಿಕ ಕಿರುಕುಳ ನೀಡಿರುವುದು ಮತ್ತು ಅವರ ಪುತ್ರ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರವೆಸಗಿರುವುದು ದೃಢಪಟ್ಟಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ(SIT) ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಹೇಳಿದೆ.

ಹೊಳೆನರಸೀಪುರ ಠಾಣೆಯಲ್ಲಿ ಎಚ್‌ ಡಿ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಈ ಎರಡೂ ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ದಳ (SIT) ಶುಕ್ರವಾರ 2144 ಪುಟಗಳ ದೋಷಾರೋಪ ಪಟ್ಟಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಪ್ರಜ್ವಲ್ ರೇವಣ್ಣ ಹೊಳೆನರಸೀಪುರದ ಮನೆಯಲ್ಲಿ ಮನೆಗೆಲಸದ ಮಹಿಳೆಯನ್ನು ಲೈಂಗಿಕವಾಗಿ ಶೋಷಿಸಿದ್ದಾರೆ. ಆಗಾಗ ಸಂತ್ರಸ್ತೆಗೆ ಪೋನ್ ಕರೆ ಮಾಡಿ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಅಲ್ಲದೆ, ಬೆಂಗಳೂರಿನ ಬಸವನಗುಡಿ ಮನೆಯಲ್ಲಿ ಪ್ರಜ್ವಲ್ ರೇವಣ್ಣ, ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದರು. ಅತ್ಯಾಚಾರ ಮಾಡುತ್ತಲೇ ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ಈ ವಿಚಾರವನ್ನು ಯಾರಿಗಾದರು ಹೇಳಿದರೆ ಆಕೆಯ (ಸಂತ್ರಸ್ಥೆ) ಪತಿಯನ್ನು ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರು. ಮತ್ತೆ ನಿನ್ನ ಮಗಳಿಗೂ ಇದೇ ಗತಿ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಈ ಎಲ್ಲ ಮಾಹಿತಿ ಬಹಿರಂಗಗೊಳ್ಳುತ್ತಿದ್ದಂತೆ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಮತ್ತು ಸಾಕ್ಷ್ಯಗಳನ್ನು ನಾಶ ಮಾಡುವ ಸಲುವಾಗಿಯೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಪ್ರಜ್ವಲ್ ಕಾರಣ ಎಂದು ದೋಷಾರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

'ಎಚ್.ಡಿ.ರೇವಣ್ಣ ಅವರು ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಕೈಹಿಡಿದು ಎಳೆದು, ಅವರ ಮೈ-ಕೈ ಮುಟ್ಟಿ ಹತ್ತಿರಕ್ಕೆ ಎಳೆದುಕೊಂಡು ಲೈಂಗಿಕ ಕಿರುಕುಳ ನೀಡಿರುವುದು ಸಾಬೀತಾಗಿದೆ' ಎಂದು ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ. 'ಹೊಳೆನರಸೀಪುರದಲ್ಲಿ ರೇವಣ್ಣ ಅವರಿಗೆ ಸೇರಿದ ಮನೆಯಿದ್ದು, ಹಾಸ್ಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ತಮ್ಮ ಪತ್ನಿ ಭವಾನಿ ರೇವಣ್ಣ ಅವರ ಅನುಮತಿ ಮೇರೆಗೆ ಮನೆಕೆಲಸಕ್ಕೆ ನೇಮಿಸಿಕೊಂಡಿದ್ದರು (2019ರಿಂದ 2020ರ ವರೆಗೆ). ಭವಾನಿ ಅವರು ಮನೆಯಲ್ಲಿ ಇಲ್ಲದಿರುವಾಗ ಸಂತ್ರಸ್ತೆಯನ್ನು ಕೊಠಡಿಗೆ ಬಾ... ಏಕೆ ಕೆಳಗೆ ಹೋಗುತ್ತೀಯಾ... ನಾನೇನು ಮಾಡಲ್ಲ' ಎಂದು ಆಗಾಗ್ಗೆ ಕರೆಯುತ್ತಿದ್ದರು. ಅಲ್ಲದೇ ಅವರ ಮನೆಯ ಮೊದಲ ಮಹಡಿಯಲ್ಲಿದ್ದ ವಸ್ತುಗಳನ್ನು ಇಡುವ ಕೊಠಡಿಗೆ ಎಲ್ಲ ಕಾರ್ಮಿಕರನ್ನು ಕರೆಸಿಕೊಂಡು ಎಲ್ಲರಿಗೂ ಹಣ್ಣು ವಿತರಣೆ ಮಾಡುತ್ತಿದ್ದರು. ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಕೊನೆಯಲ್ಲಿ ಹಣ್ಣು ಕೊಡಲು ಕೊಠಡಿಯಲ್ಲೇ ಇರಿಸಿಕೊಳ್ಳುತ್ತಿದ್ದರು. ಇತರೆ ಕೆಲಸಗಾರರು ಹಣ್ಣು ಪಡೆದು ತೆರಳಿದ ನಂತರ ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡಿದ್ದರು' ಎಂದು ಉಲ್ಲೇಖಿಸಲಾಗಿದೆ.

'ಬೆಂಗಳೂರಿನ ಬಸವನಗುಡಿಯ ಮನೆಯ ಸ್ವಚ್ಛತೆ ಕೆಲಸಕ್ಕೆಂದು ಭವಾನಿ ರೇವಣ್ಣ ಅವರು ಅದೇ ಸಂತ್ರಸ್ತೆಯನ್ನು ಒಮ್ಮೆ ಕರೆ ತಂದಿದ್ದರು. ಭವಾನಿ ಅವರು ಖರೀದಿಗೆಂದು ಹೊರಕ್ಕೆ ತೆರಳಿದ್ದ ವೇಳೆ, ಪ್ರಜ್ವಲ್ ಏಕಾಏಕಿ ಮೊಬೈಲ್ ಹಿಡಿದು ಕೊಠಡಿಯ ಒಳಕ್ಕೆ ಪ್ರವೇಶಿಸಿದ್ದರು. ಆಗ ಸಂತ್ರಸ್ತೆ ಹೊರಕ್ಕೆ ಬರಲು ಪ್ರಯತ್ನಿಸಿದ್ದರು. 'ಇಷ್ಟು ದಿನ ನನ್ನಿಂದ ತಪ್ಪಿಸಿಕೊಂಡು ಓಡಾಟ ನಡೆಸಿದ್ದೀಯಾ. ಎಣ್ಣೆ ಹಚ್ಚಲು ಬಾ ಎಂದರೆ ಸಬೂಬು ಹೇಳುತ್ತೀಯಾ. ಈಗ ಒಂಟಿಯಾಗಿ ಸಿಕ್ಕಿದ್ದೀಯಾ ಎಂದು ಹೇಳಿ ಬಟ್ಟೆ ಬಿಚ್ಚಲು ಪ್ರಯತ್ನಿಸಿದ್ದರು. ಸಂತ್ರಸ್ತೆ ಬೇಡ ಅಣ್ಣ, ತಪ್ಪಾಯ್ತು ಬಿಟ್ಟುಬಿಡಿ, ಏನೂ ಮಾಡಬೇಡಿ ಎಂದು ಅಂಗಲಾಚಿದ್ದರು. ಆಗ ಆಕೆಯ ಸೀರೆ ಹರಿದು ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಅದನ್ನು ತನ್ನ ಮೊಬೈಲ್‌ನಲ್ಲಿ ವಿಡಿಯೊ ರೆಕಾರ್ಡ್ ಮಾಡಿಕೊಂಡಿದ್ದರು. ವಿಷಯ ಬಹಿರಂಗ ಪಡಿಸಿದರೆ ನಿನ್ನ ಪತಿಯನ್ನು ಜೈಲು ಪಾಲು ಮಾಡುತ್ತೇನೆ. ನಿನ್ನ ಪುತ್ರಿಗೂ ಇದೇ ಗತಿ ಮಾಡುತ್ತೇನೆ. ಏನೇ ಕೆಲಸ ಮಾಡಿದರೂ ಪ್ರಕರಣ ಮುಚ್ಚಿ ಹಾಕಲು ನನಗೆ ಗೊತ್ತಿದೆ. ನಾನು ಸಂಸದನಾಗಿದ್ದು, ಯಾರೂ ಏನೂ ಮಾಡಲು ಆಗುವುದಿಲ್ಲ. ಬಾಯಿ ಬಿಟ್ಟರೆ ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎಂಬುದು ಸಾಬೀತಾಗಿದೆ' ಎಂದು ಚಾರ್ಜ್‌ಶೀಟ್‌ನಲ್ಲಿ ವಿವರಿಸಲಾಗಿದೆ.

Tags:    

Similar News