ಮಹಿಳೆಯರು ರಾಜ್ಯ ಸುತ್ತುತ್ತಿದ್ದಾರೆ; ಶಕ್ತಿ ಯೋಜನೆ ಬಗ್ಗೆ ಸಿಎಂ ಆಪ್ತ ದೇಶಪಾಂಡೆ ಹೇಳಿಕೆ; ಸರ್ಕಾರಕ್ಕೆ ಮುಜುಗರ

ಬಿ. ಆರ್​ ಪಾಟೀಲ್​ ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಇದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಆರ್​ ವಿ ದೇಶಪಾಂಡೆ ಗ್ಯಾರಂಟಿ ಯೋಜನೆ ಸರಿಯಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್​ ಸರ್ಕಾರಕ್ಕೆ ಮುಜುಗರ ತಂದಿದ್ದಾರೆ.;

Update: 2025-06-23 15:18 GMT

ಬಸ್‌ ಹತ್ತಲು ನಿಂತಿರುವ ಮಹಿಳೆಯರು.

ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳು ನಿರಂತರವಾಗಿ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗುತ್ತಿರುವ ಬೆನ್ನಲ್ಲೇ, ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗಿನ ನಾಯಕರ ಹೇಳಿಕೆಗಳು ಸರ್ಕಾರಕ್ಕೆ ಮುಜುಗರ ತರುತ್ತಿವೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರ ಆಪ್ತರೇ ಸರ್ಕಾರದ ವಿರುದ್ಧ ವಿಭಿನ್ನ ಹೇಳಿಕೆಗಳನ್ನು ನೀಡತ್ತಿದ್ದಾರೆ. ಇದೀಗ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಶಾಸಕ ಆರ್.ವಿ. ದೇಶಪಾಂಡೆ ಅವರು 'ಶಕ್ತಿ ಯೋಜನೆ' ಕುರಿತು ನೀಡಿರುವ ಹೇಳಿಕೆ ಈಗ ಹೊಸ ಚರ್ಚೆಗೆ ನಾಂದಿ ಹಾಡಿದೆ.

ದೇಶಪಾಂಡೆ ಅವರ ಪ್ರಕಾರ, 'ಶಕ್ತಿ ಯೋಜನೆ'ಯಿಂದಾಗಿ ಮಹಿಳೆಯರು ರಾಜ್ಯಾದ್ಯಂತ ಇತಿಮಿತಿಯಲ್ಲದೇ ಪ್ರಯಾಣಿಸುತ್ತಿದ್ದು, ಇದರಿಂದ ಪುರುಷರಿಗೆ ಬಸ್‌ನಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಅವರ ಪ್ರಕಾರ ರಾಜ್ಯ ಆಡಳಿತದಲ್ಲಿ ಸಾಕಷ್ಟು ಸುಧಾರಣೆಗಳು ಆಗಬೇಕಿವೆ. ಎಷ್ಟು ಬೇಗ ಸರ್ಕಾರ ನಿರ್ಧಾರ ಮಾಡುತ್ತದೆಯೋ ಅಷ್ಟು ಬೇಗ ಸಮಸ್ಯೆಗಳು ಪರಿಹಾರವಾಗುತ್ತವೆ" ಎಂದು ಅವರು ಹೇಳಿಕೆ ನೀಡಿದ್ದಾರೆ.

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳು ಮತ್ತು ಆಡಳಿತದಲ್ಲಿನ ಸುಧಾರಣೆಗಳ ಕುರಿತು ಆಡಳಿತ ಪಕ್ಷದೊಳಗಿನ ನಾಯಕರೇ ನೀಡಿರುವ ಭಿನ್ನ ಹೇಳಿಕೆಗಳು ಮತ್ತು ಭ್ರಷ್ಟಾಚಾರದ ಆರೋಪಗಳು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ. ಸರ್ಕಾರವು ಈ ಆರೋಪಗಳನ್ನು ಹೇಗೆ ನಿಭಾಯಿಸಲಿದೆ ಮತ್ತು ಗ್ಯಾರಂಟಿ ಯೋಜನೆಗಳಿಗೆ ಮಾನದಂಡಗಳನ್ನು ಹೇಗೆ ರೂಪಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ವಸತಿ ಇಲಾಖೆಯಲ್ಲಿ ಲಂಚದ ಆರೋಪ 

ಎರಡು ದಿನಗಳ ಹಿಂದೆ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರು ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ವಸತಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲು ಲಂಚ ಕೇಳಲಾಗುತ್ತಿದೆ ಎಂದು ಪಾಟೀಲ್ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಅವರು ಕೂಡ ಸಿದ್ದರಾಮಯ್ಯ ಅವವರಿಗೆ ಆಪ್ತರೇ ಆಗಿದ್ದಾರೆ. ಹೀಗಾಗಿ ಆಪ್ತರ ಹೇಳಿಕೆಗಳು ಸರ್ಕಾರಕ್ಕೆ ಮುಜುಗರ ತರುತ್ತಿವೆ.

'ಶಕ್ತಿ' ಯೋಜನೆ ಪರಿಷ್ಕರಣೆಯ ಸುಳಿವು ನೀಡಿದ್ದ ಡಿಸಿಎಂ 

ಈ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ 'ಶಕ್ತಿ ಯೋಜನೆ'ಯ ಬಗ್ಗೆ ಭಿನ್ನ ಹೇಳಿಕೆ ನೀಡಿದ್ದರು. ಯೋಜನೆಯು ಎಲ್ಲರಿಗೂ ಅನುಕೂಲವಾಗುತ್ತಿದ್ದರೂ, ಕೆಲವು ಮಹಿಳೆಯರು ನಮಗೆ ಈ ಯೋಜನೆ ಬೇಡ ಎಂದು ತಿಳಿಸಿರುವ ಕಾರಣ, ಯೋಜನೆಯ ಪರಿಷ್ಕರಣೆ ಬಗ್ಗೆ ಯೋಚಿಸಲಾಗುವುದು ಎಂದು ಶಿವಕುಮಾರ್ ಹೇಳಿದ್ದರು. ಇದು ಆಡಳಿತ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿತ್ತು.

ಇದೇ ವಿಚಾರವಾಗಿ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿ, ಸರ್ಕಾರದ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂದು ಒಪ್ಪಿಕೊಂಡಿದ್ದರು. "ಆದಾಯ ತೆರಿಗೆ ಕಟ್ಟುವವರು ಸಹ 'ಶಕ್ತಿ ಯೋಜನೆ', 'ಗೃಹಲಕ್ಷ್ಮೀ' ಹಣವನ್ನು ಪಡೆಯುತ್ತಿದ್ದಾರೆ. ಆದ್ದರಿಂದ ಶೀಘ್ರವೇ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ನಿರ್ದಿಷ್ಟ ಮಾನದಂಡ ನಿಗದಿಪಡಿಸಲಾಗುವುದು" ಎಂದು ಅವರು ತಿಳಿಸಿದ್ದರು. 

Tags:    

Similar News