Coastal Tension | ಸರಣಿ ಹತ್ಯೆಗಳಿಗೆ ಧರ್ಮ ರಾಜಕಾರಣ, ಪೊಲೀಸ್‌ ನಿಷ್ಕ್ರಿಯತೆ ಕಾರಣ; ಸತ್ಯ ಶೋಧನಾ ವರದಿಯಲ್ಲಿ ಬಹಿರಂಗ

ಕರಾವಳಿ ಭಾಗದ ಕೋಮು ಹತ್ಯೆಗಳ ಕುರಿತು ತನಿಖೆ ನಡೆಸಿರುವ ಸತ್ಯ ಶೋಧನಾ ಸಮಿತಿ ತನ್ನ ಮಧ್ಯಂತರ ವರದಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಸಲ್ಲಿಸಿತು. ಉಡುಪಿ ಹಾಗೂ ಮಂಗಳೂರಿಗೆ ಭೇಟಿ ನೀಡಿದ್ದ ಸಮಿತಿಯು ಸರಣಿ ಕೊಲೆಗಳಿಗೆ ಕಾರಣಗಳನ್ನು ಉಲ್ಲೇಖಿಸಿದೆ.;

Update: 2025-06-19 14:46 GMT

ಕರಾವಳಿ ಭಾಗದ ಕೋಮು ಹತ್ಯೆಗಳ ಕುರಿತ ಮಧ್ಯಂತರ ವರದಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಸಲ್ಲಿಸಲಾಯಿತು. 

ಕರಾವಳಿಯಲ್ಲಿ ನಡೆದ ಕೋಮು ಹತ್ಯೆಗಳಿಗೆ ರಾಜಕೀಯ, ಧರ್ಮ ಮಾಫಿಯಾ, ಮಾದಕ ವಸ್ತು, ಬಾಹ್ಯ ಬೆಂಬಲ,‌ ಪೊಲೀಸ್ ನಿಷ್ಕ್ರಿಯತೆ ಹಾಗೂ ಶರವೇಗದಲ್ಲಿ ಸುದ್ದಿ ಹಬ್ಬಿಸಿದ ಸಾಮಾಜಿಕ ಜಾಲತಾಣಗಳೇ ಕಾರಣ ಎಂದು ರಾಜ್ಯಸಭಾ ಸದಸ್ಯ ನಾಸಿರ್‌ ಹುಸೇನ್‌ ನೇತೃತ್ವದ ಸತ್ಯ ಶೋಧನಾ ಸಮಿತಿ ತನ್ನ ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಿದೆ‌.

ಉಡುಪಿ ಹಾಗೂ ಮಂಗಳೂರಿಗೆ ಭೇಟಿ ನೀಡಿದ್ದ ಸತ್ಯ ಶೋಧನಾ ಸಮಿತಿಯು ಸರಣಿ ಕೊಲೆಗಳಿಗೆ ರಾಜಕೀಯ ಹಾಗೂ ಧರ್ಮಾಧರಿತ ಕಾರಣಗಳನ್ನು ಪಟ್ಟಿ ಮಾಡಿದ್ದು, ಗುರುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಸಲ್ಲಿಸಿದೆ. 

ರಾಜಕೀಯ ಕಾರಣವೇನು?

ರಾಜಕೀಯ ನಾಯಕರು ಧರ್ಮಾಧರಿತ ರಾಜಕಾರಣ ಮಾಡುತ್ತಿರುವುದು ಕೋಮು ಗಲಭೆಗಳಿಗೆ ಪ್ರಮುಖ ಕಾರಣವಾಗಿದೆ.  ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರು ಧರ್ಮಾಧರಿತ ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಇತರೆ ಜಾತ್ಯಾತೀತ ರಾಜಕೀಯ ನಾಯಕರು ಈ ವಿಚಾರದಲ್ಲಿ ಸ್ಪಷ್ಟತೆ ಹೊಂದಿಲ್ಲ. ಇವರಲ್ಲಿನ ಗೊಂದಲವೂ ಘಟನೆಗೆ ಪರೋಕ್ಷ ಕಾರಣವಾಗಿದೆ ಎಂದು ವರದಿ ಹೇಳಿದೆ.  

ಧಾರ್ಮಿಕ ಕಾರಣವೇನು?

ಕರಾವಳಿ ಭಾಗದಲ್ಲಿ ಧಾರ್ಮಿಕ ಪ್ರತ್ಯೇಕತೆಯ ಪ್ರಭಾವ ಹೆಚ್ಚಿದೆ. ಹಿಂದೂ ಹಾಗೂ ಮುಸ್ಲಿಂ ಎರಡೂ ಸಮುದಾಯದ ಬಹುತೇಕ ಯುವಕರು ಹಾಗೂ ಧಾರ್ಮಿಕ ಗುರುಗಳು ಪ್ರತ್ಯೇಕತೆಗೆ ಬೆಂಬಲ ನೀಡುತ್ತಿದ್ದಾರೆ. ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಎದುರಾಳಿ‌ ಧರ್ಮದವನ್ನು ಮೀರಿಸುವಂತೆ ಹಬ್ಬಗಳ ಆಚರಣೆ ಮಾಡುವುದು. ಧರ್ಮಾಂಧತೆಯ ಕಾರಣಕ್ಕೆ ನೈತಿಕ ಪೊಲೀಸ್ ಗಿರಿ ನಡೆಸುತ್ತಿರುವುದರಿಂದ ಧಾರ್ಮಿಕ ಸಂಘರ್ಷ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟಿದೆ. 

ಮಾಫಿಯಾ ಕಾರಣವೇನು?

ಕೆಲವೊಂದು ಮಾಫಿಯಾಗಳು( ಮಾದಕ ವಸ್ತು, ಮರಳು, ಗೂಂಡಾಗಿರಿ) ಕರಾವಳಿಯನ್ನು ನಿಯಂತ್ರಿಸುತ್ತಿದ್ದು, ಅದರಿಂದ ಕೋಮು ದಳ್ಳುರಿ ಹೆಚ್ಚುತ್ತಿದೆ. ಡ್ರಗ್ಸ್, ಗಾಂಜಾ, ಮರಳು, ರೌಡಿಸಂ, ದನದ ಮಾಂಸದ ಮಾಫಿಯಾ ಇದಕ್ಕೆ ಪ್ರಮುಖ ಕಾರಣ. ಎರಡೂ ಧರ್ಮದ ಸಂಘಟನೆಗಳಿಗೆ ಸ್ಥಳೀಯರ ಬೆಂಬಲದ ಜತೆ ಬಾಹ್ಯ ಬೆಂಬಲ ಸಿಗುತ್ತಿರುವುದರಿಂದ ಸಾಮರಸ್ಯ ಹಾಳಾಗುತ್ತಿದೆ.

ಇನ್ನು ಕೋಮು ಸಂಘರ್ಷದ ಘಟನೆಗಳಿಗೆ ಪೊಲೀಸ್ ನಿಷ್ಕ್ರೀಯತೆಯೂ ಪ್ರಮುಖ ಕಾರಣವಾಗಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಶರವೇಗದಲ್ಲಿ ಹಬ್ಬುತ್ತಿರುವ ಸುಳ್ಳು ಹಾಗೂ ವದಂತಿಗಳಿಂದಲೂ ಕರಾವಳಿಯ ಶಾಂತಿ ಕದಡುತ್ತಿದೆ ಎಂದು ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

Tags:    

Similar News