ಹೊಸ ಜಾತಿ ಗಣತಿಗೆ ವಿರೋಧ ವ್ಯಕ್ತಪಡಿಸಬೇಡಿ: ಶಾಸಕ ಅಬ್ಬಯ್ಯ ಪ್ರಸಾದ್ ಮನವಿ
ಪ್ರಮುಖ ಸಮುದಾಯಗಳ ಸಚಿವರು ಹಾಗೂ ಶಾಸಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜಾತಿ ಗಣತಿ ಮರುಸಮೀಕ್ಷೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಶಾಸಕ ಅಬ್ಬಯ್ಯ ಪ್ರಸಾದ್ ತಿಳಿಸಿದರು.;
ಶಾಸಕ ಅಬ್ಬಯ್ಯ ಪ್ರಸಾದ್
ರಾಜ್ಯ ಸರ್ಕಾರವು ಹೊಸ ಜಾತಿ ಸಮೀಕ್ಷೆ ನಡೆಸಲು ನಿರ್ಧರಿಸಿರುವ ಕ್ರಮವನ್ನು ಯಾರೂ ವಿರೋಧಿಸದೆ ಒಪ್ಪಿಕೊಳ್ಳಬೇಕು ಎಂದು ಕಾಂಗ್ರೆಸ್ ಶಾಸಕ ಅಬ್ಬಯ್ಯ ಪ್ರಸಾದ್ ಮನವಿ ಮಾಡಿದ್ದಾರೆ. ಕಾಂತರಾಜು ಹಾಗೂ ಜಯಪ್ರಕಾಶ್ ಹೆಗಡೆ ಆಯೋಗದ ಜಾತಿ ಗಣತಿ ಬಗ್ಗೆ ಪ್ರತಿಪಕ್ಷಗಳು ಹಾಗೂ ಪ್ರಮುಖ ಸಮುದಾಯಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಸರ್ಕಾರ ಹೊಸ ಸಮೀಕ್ಷೆಗೆ ಮುಂದಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹೊಸ ಸಮೀಕ್ಷೆಗೆ ವಿರೋಧ ವ್ಯಕ್ತವಾಗುತ್ತಿರುವುದರ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅಬ್ಬಯ್ಯ ಪ್ರಸಾದ್, ಕೆಲವು ಸಮುದಾಯದ ಸಚಿವರು ಹಾಗೂ ಶಾಸಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಶಿಕ್ಷಕರು ಹಾಗೂ ಸಿಬ್ಬಂದಿಗಳ ಕೊರತೆ ಮತ್ತು ಕೆಲವು ತಾಂತ್ರಿಕ ಕಾರಣಗಳಿಂದಾಗಿ ಒಳ ಮೀಸಲಾತಿ ಸಮೀಕ್ಷೆ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಅಬ್ಬಯ್ಯ ಪ್ರಸಾದ್ ತಿಳಿಸಿದ್ದಾರೆ. ಸಮೀಕ್ಷೆ ಮಾಡುವವರಿಗೆ ಸೂಕ್ತ ತರಬೇತಿ ನೀಡಬೇಕಿತ್ತು, ಮತ್ತು ಸರ್ಕಾರ ಈ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಲಿದೆ ಎಂದು ಭರವಸೆ ನೀಡಿದರು. ಸಮೀಕ್ಷೆಯ ವಿಳಂಬದಿಂದ ಕೆಲವರಿಗೆ ತೊಂದರೆಯಾಗಿದೆ, ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವ ಕೆಲವು ಅಭ್ಯರ್ಥಿಗಳಿಗೆ ವಯೋಮಿತಿ ಮೀರುತ್ತಿದ್ದು, ಕಾಲಮಿತಿಯೊಳಗೆ ಸಮೀಕ್ಷೆ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ಬೇಡ ಜಂಗಮರಿಂದ ನಿಜವಾದ ಎಸ್ಸಿಗಳಿಗೆ ಅನ್ಯಾಯ:
ಪರಿಶಿಷ್ಟ ಜಾತಿ (SC) ಪಟ್ಟಿಯಲ್ಲಿರುವ 'ಬೇಡ ಜಂಗಮ' ಸಮುದಾಯ ಸೇರ್ಪಡೆಯಾಗುತ್ತಿರುವ ಬಗ್ಗೆ ಪ್ರಸಾದ್ ಕಳವಳ ವ್ಯಕ್ತಪಡಿಸಿದರು. "ಬೇಡ ಜಂಗಮದವರು 10 ಸಾವಿರ ಜನಸಂಖ್ಯೆ ಇರಬಹುದು. ಆದರೆ ನಾವು ನಾಲ್ಕು ಲಕ್ಷ ಇದ್ದೇವೆ ಎಂದು ಕೆಲವರು ಹೇಳುತ್ತಿದ್ದಾರೆ. ಅಂತವರನ್ನು ಎಸ್ಸಿ ಪಟ್ಟಿಯಿಂದ ಬಿಡಬೇಕು. ಪರಿಶಿಷ್ಟ ಜಾತಿಗೆ ನೀಡಿರುವ ಮೀಸಲಾತಿಯನ್ನು ಬೇಡ ಜಂಗಮದವರೇ ಹೆಚ್ಚು ಬಳಸುತ್ತಿದ್ದಾರೆ. ಇದರಿಂದ ನಿಜವಾದ ಎಸ್ಸಿಗಳಿಗೆ ಅನ್ಯಾಯವಾಗುತ್ತಿದ್ದು ಇದಕ್ಕೆ ನಮ್ಮ ವಿರೋಧವಿದೆ" ಎಂದು ಅವರು ಸ್ಪಷ್ಟಪಡಿಸಿದರು.