CM Meeting | ಪ್ರಗತಿ ಪರಿಶೀಲನಾ ಸಭೆಗೆ ತಡವಾಗಿ ಬಂದ ಡಿಕೆಶಿ; ಸಿಎಂ ಸಿದ್ದರಾಮಯ್ಯ ಅಸಮಾಧಾನ

ಪ್ರಗತಿ ಪರಿಶೀಲನಾ ಸಭೆ ಪ್ರಾರಂಭವಾದರೂ ತಡವಾಗಿ ಬಂದ ಸಚಿವರನ್ನು ಅಧಿಕಾರಿಗಳು ಸ್ವಾಗತ ಮಾಡುತ್ತಿದ್ದರು. ಈ ವೇಳೆ ಅಸಮಾಧಾನಗೊಂಡ ಸಿಎಂ ಅವರು ಯಾವ ಸಚಿವರು ಬಂದಿಲ್ಲವೋ, ಯಾರು ತಡವಾಗಿ ಬಂದಿದ್ದಾರೋ ಅವರ ಹೆಸರು ಗುರುತು ಹಾಕಿಕೊಳ್ಳುತ್ತೇನೆ ಎಂದು ಸಿಎಂ ಹೇಳಿದ್ದಾರೆ.;

Update: 2025-05-31 08:25 GMT

ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ರಾಜ್ಯ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಎರಡನೇ ದಿನವಾದ ಶನಿವಾರ ಸಭೆಗೆ ತಡವಾಗಿ ಆಗಮಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಸಚಿವರ ನಡೆಗೆ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಶನಿವಾರ (ಮೇ31) ಬೆಳಿಗ್ಗೆ 10.30 ಕ್ಕೆ ಸಭೆ ಆರಂಭವಾಯಿತು. ಆದರೆ, ಡಿಸಿಎಂ ಡಿ.ಕೆ. ಶಿವಕುಮಾರ್‌ ಸೇರಿ ಹಲವು ಸಚಿವರು ನಿಗದಿತ ಸಮಯಕ್ಕೆ ಬಂದಿರಲಿಲ್ಲ. ಸಭೆ ಆರಂಭವಾದರೂ ಸಚಿವರು ಒಬ್ಬೊಬ್ಬರಾಗಿಯೇ ಬರುತ್ತಿದ್ದರು. ಪದೇ ಪದೇ ಅಧಿಕಾರಿಗಳು ಸ್ವಾಗತ ಕೋರುತ್ತಾ ಸಭೆ ಅಡ್ಡಿಪಡಿಸುತ್ತಿದ್ದರು. ಇದರಿಂದ ಆಕ್ರೋಶಗೊಂಡ ಸಿಎಂ ಸಿದ್ದರಾಮಯ್ಯ ಅವರು, ಯಾವ ಸಚಿವರು ಬಂದಿಲ್ಲವೋ, ಯಾರು ತಡವಾಗಿ ಬಂದಿದ್ದಾರೋ ಅವರ ಹೆಸರು ಗುರುತು ಹಾಕಿಕೊಳ್ಳುತ್ತೇನೆ ಎಂದು ಹೇಳಿದ್ದಲ್ಲದೇ ಡಿ.ಕೆ. ಶಿವಕುಮಾರ್ ತಡವಾಗಿ ಬಂದಿದ್ದಕ್ಕೂ ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಸಭೆಯಲ್ಲಿ ಎದ್ದು ನಿಂತು ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ತಡವಾಗಿ ಬಂದಿದ್ದಕ್ಕೆ ನೀವೇನು ದಂಡ ಹಾಕೊಲ್ಲವಲ್ಲ ಬಿಡಿ ಸರ್ ಎಂದು ಹಾಸ್ಯ ಚಟಾಕಿ ಹಾರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ  ಸಿಎಂ, ಇದು ಮುಖ್ಯವಾದ ಸಭೆ ಅಲ್ಲವಾ?,  ಎಲ್ಲರು ಸರಿಯಾದ ಸಮಯಕ್ಕೆ ಬರಬೇಕು ಅಲ್ಲವಾ?, ನಮ್ಮ ಡಿಸಿಎಂ ಅವರೇ ಇನ್ನು ಬಂದಿಲ್ಲ ಎಂದು ಬೇಸರ ಹೊರಹಾಕಿದರು. 

ಶುಕ್ರವಾರ (ಮೇ30) ನಡೆದ ಮೊದಲ ದಿನದ ಸಭೆಯಲ್ಲೂ ಮಧ್ಯಾಹ್ನ 30 ನಿಮಿಷ ಊಟದ ಬಿಡುವು ನೀಡಲಾಗಿತ್ತು. ಅಧಿಕಾರಿಗಳು ಹಾಗೂ ಸಚಿವರಿಗೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಊಟಕ್ಕೆ ಮನೆಗೆ ತೆರಳಿದ್ದರು. ಸಿಎಂ ಮನೆಗೆ ಹೋಗಿದ್ದರಿಂದ ಅವರು ಊಟ ಮುಗಿಸಿ ಬರುವುದು ತಡ ಆಗಬಹುದು ಎಂದುಕೊಂಡು ಅಧಿಕಾರಿಗಳು, ಸಚಿವರು ನಿಧಾನವಾಗಿ ಊಟ ಮಾಡುತ್ತಿದ್ದರು.

ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಊಟ ಮುಗಿಸಿ 30 ನಿಮಿಷಕ್ಕೆ ವಾಪಸಾದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಮುಖ್ಯಮಂತ್ರಿಯನ್ನು ಬರಮಾಡಿಕೊಂಡು, ಅಧಿಕಾರಿಗಳು ಹಾಗೂ ಸಚಿವರು  ಊಟ ಮಾಡುತ್ತಿದ್ದಾರೆ. ಕೆಲ ನಿಮಿಷಗಳಲ್ಲೇ ಬರುತ್ತಾರೆ ಎಂದು ಸಮಜಾಯಿಷಿ ನೀಡಿದರು. ಸಿಎಂ ಸಭೆಗೆ ವಾಪಸಾಗಿರುವ ವಿಷಯ ತಿಳಿದು ಅಧಿಕಾರಿಗಳು ಹಾಗೂ ಸಚಿವರು ಎದ್ದು ಬಿದ್ದು ದೌಡಾಯಿಸಿದರು.‌  

ಸಿಎಂ-ಡಿಸಿಎಂ ಮಧ್ಯೆ ತಿಕ್ಕಾಟ

ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಅಸಮಾಧಾನ ಸ್ಫೋಟಗೊಂಡಿತ್ತು.

ಲೋಕೋಪಯೋಗಿ ಇಲಾಖೆಯಿಂದ (ಪಿಎಬ್ಲ್ಯುಡಿ) ಜಲಸಂಪನ್ಮೂಲ ಇಲಾಖೆಗೆ ಮುಖ್ಯ ಎಂಜಿನಿಯರ್‌ಗಳ ಏಕಾಏಕಿ ವರ್ಗಾವಣೆ ಮಾಡಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಕ್ರಮಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಚಾರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಸಿಎಂ ಗಮನಕ್ಕೆ ತಂದಿದ್ದರು. 

ತಮ್ಮ ಪೂರ್ವಾನುಮತಿ ಇಲ್ಲದೇ ಎಂಜಿನಿಯರ್‌ಗಳ ವರ್ಗಾವಣೆ, ಸ್ಥಳ ನಿಗದಿ ಮಾಡಿರುವ ಡಿಪಿಎಆರ್‌ ಆದೇಶವನ್ನು ಕೂಡಲೇ ಹಿಂಪಡೆಯುವಂತೆ ಶಿವಕುಮಾರ್‌ ಒತ್ತಾಯಿಸಿದ್ದರು. ಸಿಎಂ ಸೂಚನೆ ಮೇರೆಗೆ ವರ್ಗಾವಣೆ ಮಾಡಿರುವುದಾಗಿ ಶಾಲಿನಿ ರಜನೀಶ್‌ ಹೇಳಿದ್ದರು. ಈ ವಿಚಾರ ಸಿಎಂ ಹಾಗೂ ಡಿಸಿಎಂ ನಡುವೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿತ್ತು. 

Tags:    

Similar News