ಐಪಿಎಸ್‌ ಅಧಿಕಾರಿ ಜೋಶಿ ಮನೆಯಲ್ಲಿ ಲೋಕಾಯುಕ್ತ ಶೋಧ, ವಿಚಾರಣೆಗೆ ಹಾಜರಾಗಲು ನೋಟಿಸ್‌

ಐಪಿಎಸ್‌ ಅಧಿಕಾರಿ ಶ್ರೀನಾಥ್‌ ಎಂ.ಜೋಶಿ ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ ಎಂದು ಮೂಲಗಳು ತಿಳಿಸಿವೆ.;

Update: 2025-06-18 07:07 GMT

ಐಪಿಎಸ್‌ ಅಧಿಕಾರಿ ಶ್ರೀನಾಥ್ ಎಂ ಜೋಶಿ

ಸರ್ಕಾರಿ ನೌಕರರಿಗೆ ಬೆದರಿಸಿ ಹಣ ವಸೂಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ಐಪಿಎಸ್‌ ಅಧಿಕಾರಿ ಶ್ರೀನಾಥ್‌ ಎಂ. ಜೋಶಿ ನಿವಾಸದ ಲೋಕಾಯುಕ್ತ ಪೊಲೀಸರೇ ದಾಳಿ ನಡೆಸಿ, ಶೋಧ ಕೈಗೊಂಡಿದ್ದಾರೆ. ದಾಳಿ ವೇಳೆ ಶ್ರೀನಾಥ್‌ ಅವರು ಮನೆಯಲ್ಲಿ ಇರದ ಕಾರಣ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿದೆ. 

ಶ್ರೀನಾಥ್‌ ಜೋಶಿ ಅವರು ಲೋಕಾಯುಕ್ತ ಪೊಲೀಸ್‌ ವಿಭಾಗದ ಬೆಂಗಳೂರು ನಗರ- 1 ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದರು. ಮಾಜಿ ಹೆಡ್‌ ಕಾನ್‌ಸ್ಟೆಬಲ್‌ ನಿಂಗಪ್ಪ ವಿರುದ್ದ ಪ್ರಕರಣ ದಾಖಲಾದ ಬೆನ್ನಲ್ಲೇ ಅವರನ್ನು ಲೋಕಾಯುಕ್ತ ಪೊಲೀಸ್‌ ಸೇವೆಯಿಂದ ಬಿಡುಗಡೆ ಮಾಡಿ ಮಾತೃ ಇಲಾಖೆಗೆ ಕಳುಹಿಸಲಾಗಿತ್ತು. ಈ ಪ್ರಕರಣದಲ್ಲಿ ಶ್ರೀನಾಥ್‌ ಜೋಶಿ ಅವರ ಹೆಸರು ಥಳುಕು ಹಾಕಿಕೊಂಡಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಶೋಧ ನಡೆಸಿದ್ದಾರೆ. 

ನಿರೀಕ್ಷಣಾ ಜಾಮೀನು ಕೋರಿ ಅರ್ಜಿ

ಸದ್ಯ ನಾಪತ್ತೆಯಾಗಿರುವ ಶ್ರೀನಾಥ್‌ ಜೋಶಿ ಅವರು ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ.  

ಶ್ರೀನಾಥ್‌ ಜೋಶಿ ಅವರ ಕೋರಮಂಗಲದ ಪೊಲೀಸ್‌ ವಸತಿ ಗೃಹದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಚಿನ್ನಾಭರಣ, ಆಸ್ತಿಪತ್ರಗಳು ಪತ್ತೆಯಾಗಿದ್ದವು. ಗುರುವಾರ(ಜೂ.19) ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಮನೆಯ ಗೋಡೆ ಮೇಲೆ ನೋಟಿಸ್‌ ಅಂಟಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸ್‌ ಮೂಲಗಳು ತಿಳಿಸಿವೆ.

ಹಿರಿಯ ಅಧಿಕಾರಿಗಳ ಪೋಟೋ ಪತ್ತೆ

ಮಾಜಿ ಹೆಡ್‌ ಕಾನ್ಸ್‌ಸ್ಟೆಬಲ್‌ ನಿಂಗಪ್ಪನ ಮೊಬೈಲ್‌ನಲ್ಲಿ ಲೋಕಾಯುಕ್ತ ಪೊಲೀಸ್‌ ಹಿರಿಯ ಅಧಿಕಾರಿಗಳ ಪೋಟೋಗಳು ಪತ್ತೆಯಾಗಿವೆ. ಒಬ್ಬ ಅಧಿಕಾರಿಯನ್ನು ಮನೆಗೆ ಕರೆಸಿ ಶಾಲು ಹೊದಿಸಿ ಸನ್ಮಾನ ಮಾಡಿರುವ ಚಿತ್ರವೂ ಇದೆ. ಈ ಪ್ರಕರಣದಲ್ಲಿ ರಾಜ್ಯದ ಕೆಲ ಹಿರಿಯ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಹೆಚ್ಚಿನ ಸಾಕ್ಷ್ಯಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Tags:    

Similar News