ಕಮಲ್ ಹಾಸನ್ ವಿವಾದ: "ತಾಳ್ಮೆ ಕಳೆದುಕೊಳ್ಳಬೇಡಿ" ; ಕನ್ನಡಪರ ಸಂಘಟನೆಗಳಿಗೆ ಡಿಸಿಎಂ ಮನವಿ!
ಕ್ಷಮೆ ಯಾಚನೆ ಮಾಡುವಂತೆ ಹೈಕೋರ್ಟ್ ಹೇಳಿದೆ. ನಟ ಕಮಲ್ ಹಾಸನ್ ಕ್ಷಮೆ ಕೇಳುತ್ತಾರೆ ಎನ್ನುವ ವಿಶ್ವಾಸವಿದೆ. ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳು ತಾಳ್ಮೆ ಕಳೆದುಕೊಳ್ಳಬಾರದು ಎಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.;
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್.
ನಟ ಕಮಲ್ ಹಾಸನ್ ಅವರು ಕನ್ನಡ ಭಾಷೆಯ ಬಗ್ಗೆ ನೀಡಿದ ಹೇಳಿಕೆಗೆ ಕನ್ನಡಿಗರು ರೊಚ್ಚಿಗೆದ್ದಿದ್ದರೆ, ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರತಿಭಟನೆಗಳು ವಿಕೋಪಕ್ಕೆ ಹೋಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ!
ಕನ್ನಡಪರ ಸಂಘಟನೆಗಳಿಗೆ ಮನವಿ ಮಾಡಿದ ಡಿಸಿಎಂ ''ಹೊಸೂರಿಗೆ ಬೆಂಗಳೂರಿನಿಂದ ನಿತ್ಯ 50 ಸಾವಿರ ಜನ ಪ್ರಯಾಣಿಸುತ್ತಾರೆ ಮತ್ತು ಅಲ್ಲಿಂದಲೂ ಅಷ್ಟೇ ಜನ ನಗರಕ್ಕೆ ಬರುತ್ತಾರೆ. ಏನಾದರೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದರೆ ಯಾರು ಹೊಣೆ,'' ಎಂದು ಅವರು ಪ್ರಶ್ನಿಸಿದರು.
ಕಮಲ್ ಹಾಸನ್ ಪರ ಯಾವುದೇ ಮೃದು ಧೋರಣೆ ಇಲ್ಲ ಎಂದು ಸ್ಪಷ್ಟಪಡಿಸಿದ ಡಿಸಿಎಂ, "ಅವರು ಈಗಾಗಲೇ ಹೈಕೋರ್ಟ್ಗೆ ಹೋಗಿದ್ದಾರೆ. ಕ್ಷಮೆಯಾಚನೆ ಮಾಡುವಂತೆ ಕೋರ್ಟ್ ಅಭಿಪ್ರಾಯಪಟ್ಟಿದೆ. ನಟ ಕಮಲ್ ಹಾಸನ್ ಕ್ಷಮೆ ಕೇಳುತ್ತಾರೆ ಎನ್ನುವ ವಿಶ್ವಾಸವಿದೆ. ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳಿಗೆ ನಾನು ಮನವಿ ಮಾಡುತ್ತೇನೆ, ಯಾರೂ ಸಹ ತಾಳ್ಮೆ ಕಳೆದುಕೊಳ್ಳಬಾರದು. ನಾವು ಸೂಜಿ, ಬಿಜೆಪಿ ಅವರು ಕತ್ತರಿ. ನಾವು ಹೊಲಿಯುವ ಕೆಲಸ ಮಾಡುತ್ತೇವೆ," ಎಂದರು.
ಹೈಕೋರ್ಟ್ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಅಭಿಪ್ರಾಯಪಟ್ಟಿದೆ. "ನಾವೆಲ್ಲ ದ್ರಾವಿಡ ಭಾಗಕ್ಕೆ ಸೇರಿದಂತವರು. ನಾವು ಮಾತಾಡಬೇಕಾದರೆ ಕೆಲವು ತೆಲಗು, ತಮಿಳು ಅಕ್ಷರಗಳು ಬರುತ್ತವೆ. ಭಾಷೆಗೆ, ಜಾತಿಗೆ, ರಾಜ್ಯಗಳಿಗೆ ಜಗಳ ಮಾಡಿಸಲು ಆಗುತ್ತದೆಯೇ? ಸಣ್ಣ ವಿಚಾರಕ್ಕೆ ಆರಂಭವಾದ ಪ್ರತಿಭಟನೆ ಯಾವುದೋ ರೂಪಕ್ಕೆ ತಿರುಗಿದರೆ ಯಾರು ಹೊಣೆ? ಅವರು ತಪ್ಪು ಮಾಡಿದ್ದಾರೆ ಕ್ಷಮೆ ಕೇಳುತ್ತಾರೆ. ಕಮಲ್ ಹಾಸನ್ ವೈಯಕ್ತಿಕವಾಗಿ ಬಹಳ ಹಠದಲ್ಲಿ ಇದ್ದಾರೆ. ನಮ್ಮ ರಾಜ್ಯದ ಹಿತಕ್ಕಾಗಿ ನಮ್ಮವರೂ ಸಂಯಮದಿಂದ ಇರಬೇಕು," ಎಂದು ಶಿವಕುಮಾರ್ ಸಲಹೆ ನೀಡಿದರು.
ನ್ಯಾಯಾಲಯದ ಅಭಿಪ್ರಾಯವೇನು?
ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಗೆ ಪೊಲೀಸ್ ಭದ್ರತೆ ಒದಗಿಸುವಂತೆ ಸೋಮವಾರ (ಜೂನ್ 2) ನಟ ಕಮಲ್ ಹಾಸನ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಮಂಗಳವಾರ (ಜೂನ್ 3) ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ಕ್ಷಮೆ ಕೇಳುವುದರಿಂದ ಸಮಸ್ಯೆ ಬಗೆಹರಿಯುತ್ತದೆ, ನೀವು ಮೊದಲು ಕ್ಷಮೆ ಕೇಳಿದರೆ ಉತ್ತಮ ಎಂದು ಹೇಳಿದರು. ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿ ನ್ಯಾಯಾಲಯ ಆದೇಶ ನೀಡಿದೆ.