15ನೇ ಹಣಕಾಸು ಆಯೋಗದಿಂದ ಕರ್ನಾಟಕಕ್ಕೆ 80,000 ಕೋಟಿ ರೂ. ನಷ್ಟ: ಹಣಕಾಸು ಆಯೋಗದ ಸಭೆಯಲ್ಲಿ ಸಿಎಂ ಮನವರಿಕೆ
ರಾಜ್ಯವು ದೇಶದ ಒಟ್ಟು ಜಿಡಿಪಿಗೆ ಸುಮಾರು ಶೇ.8.7ರಷ್ಟು ಕೊಡುಗೆ ನೀಡುತ್ತಿದ್ದು, ಜಿಎಸ್ಟಿ ಸಂಗ್ರಹಣೆಯಲ್ಲಿ 2ನೇ ಸ್ಥಾನದಲ್ಲಿದೆ. ಇಷ್ಟೆಲ್ಲಾ ಮಹತ್ವದ ಕೊಡುಗೆ ನೀಡಿದರೂ, ಸಂಪನ್ಮೂಲ ಹಂಚಿಕೆಯಲ್ಲಿ ತೀವ್ರ ಅಸಮತೋಲನ ಉಂಟಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.;
15ನೇ ಹಣಕಾಸು ಆಯೋಗದ ಶಿಫಾರಸುಗಳಿಂದಾಗಿ ಕರ್ನಾಟಕಕ್ಕೆ ಬರೋಬ್ಬರಿ 80,000 ಕೋಟಿ ರೂಪಾಯಿಗಳ ಆದಾಯ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಹಣಕಾಸು ಆಯೋಗದ ಗಮನಕ್ಕೆ ತಂದಿದ್ದಾರೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸಂಪನ್ಮೂಲ ಹಂಚಿಕೆಯಲ್ಲಿ "ತೀವ್ರ ಅಸಮತೋಲನ" ಉಂಟಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ 16ನೇ ಹಣಕಾಸು ಆಯೋಗದ ಅಧ್ಯಕ್ಷರಾದ ಡಾ. ಅರವಿಂದ್ ಪನಗಾರಿಯ ಮತ್ತು ಆಯೋಗದ ಸದಸ್ಯರೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿಯವರು, ಈ ಕುರಿತು ಹಲವು ವಿಷಯಗಳನ್ನು ಒಳಗೊಂಡ ಜ್ಞಾಪಕ ಪತ್ರವನ್ನು ಪ್ರಸ್ತಾಪಿಸಿದರು.
ಪತ್ರದ ಪ್ರಕಾರ, 15ನೇ ಹಣಕಾಸು ಆಯೋಗವು ಕರ್ನಾಟಕದ ತೆರಿಗೆ ಪಾಲನ್ನು ಹಿಂದಿನ 4.713% ರಿಂದ ಕೇವಲ 3.647% ಕ್ಕೆ ಇಳಿಕೆ ಮಾಡಿದೆ. ಈ ಕಡಿತವು ರಾಜ್ಯದ ಆರ್ಥಿಕತೆಗೆ ದೊಡ್ಡ ಹೊಡೆತ ನೀಡಿದ್ದು, ಆಯೋಗದ ಅವಧಿಯಲ್ಲಿ ರಾಜ್ಯವು 80,000 ಕೋಟಿ ರೂಪಾಯಿ ಆದಾಯವನ್ನು ಕಳೆದುಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
"ರಾಜ್ಯವು ದೇಶದ ಒಟ್ಟು ಜಿಡಿಪಿಗೆ ಸುಮಾರು ಶೇ.8.7ರಷ್ಟು ಕೊಡುಗೆ ನೀಡುತ್ತಿದ್ದು, ಜಿಎಸ್ಟಿ ಸಂಗ್ರಹಣೆಯಲ್ಲಿ 2ನೇ ಸ್ಥಾನದಲ್ಲಿದೆ. ಇಷ್ಟೆಲ್ಲಾ ಮಹತ್ವದ ಕೊಡುಗೆ ನೀಡಿದರೂ, ಸಂಪನ್ಮೂಲ ಹಂಚಿಕೆಯಲ್ಲಿ ತೀವ್ರ ಅಸಮತೋಲನ ಉಂಟಾಗಿದೆ. ರಾಜ್ಯದಿಂದ ಕೇಂದ್ರಕ್ಕೆ ಸ್ವೀಕೃತವಾಗುವ ತೆರಿಗೆಯ ಪ್ರತಿ ರೂಪಾಯಿಗೆ ಪ್ರತಿಯಾಗಿ ರಾಜ್ಯಕ್ಕೆ ಕೇವಲ 15 ಪೈಸೆ ಮಾತ್ರ ಮರಳಿ ಸಿಗುತ್ತಿದೆ," ಎಂದು ಮುಖ್ಯಮಂತ್ರಿಯವರು ತಮ್ಮ ಮನವಿಯಲ್ಲಿ ಹೇಳಿಕೊಂಡಿದ್ದಾರೆ.
ಮನವಿಯ ಪ್ರಮುಖ ವಿವರಗಳು
- ಕೇಂದ್ರ ಹಾಗೂ ರಾಜ್ಯಗಳ ನಡುವಿನ ತೆರಿಗೆ ಹಂಚಿಕೆಯನ್ನು ಕನಿಷ್ಠ 50% ಕ್ಕೆ ಹೆಚ್ಚಿಸಲು ಮತ್ತು ಸೆಸ್ಗಳು ಹಾಗೂ ಸರ್ಚಾರ್ಜ್ಗಳನ್ನು 5% ಕ್ಕೆ ಮಿತಿಗೊಳಿಸಲು ಪ್ರಸ್ತಾಪಿಸಲಾಗಿದೆ. ಕೇಂದ್ರದ ತೆರಿಗೆಯೇತರ ಆದಾಯವನ್ನು ರಾಜ್ಯಗಳಿಗೆ ಹಂಚಿಕೆಯಾಗುವ ಪಾಲಿನಲ್ಲಿ (divisible pool) ಸೇರಿಸಲು ಸಹ ಶಿಫಾರಸು ಮಾಡಲಾಗಿದೆ.
- ರಾಜ್ಯಗಳ ನಡುವಿನ ಹಂಚಿಕೆಗೆ ಸಂಬಂಧಿಸಿದಂತೆ, ಪ್ರತಿ ರಾಜ್ಯವು ತಾನು ನೀಡುವ ಕೊಡುಗೆಯಲ್ಲಿ ಸುಮಾರು 60% ಅನ್ನು ಉಳಿಸಿಕೊಳ್ಳಲು ಮತ್ತು 40% ಅನ್ನು ಉಳಿದ ರಾಜ್ಯಗಳಿಗೆ ಹಂಚಿಕೆಯಾಗಬೇಕೆಂದು ಸೂಚಿಸಲಾಗಿದೆ.
- ಆದಾಯ-ದೂರ (income-distance) ಮಾನದಂಡದ ಪಾಲನ್ನು ಕಡಿಮೆ ಮಾಡಲು ಮತ್ತು ರಾಜ್ಯದ ಆರ್ಥಿಕ ಕೊಡುಗೆಗೆ ಹೆಚ್ಚಿನ ಪಾಲನ್ನು ನೀಡಲು ಪ್ರಸ್ತಾಪಿಸಲಾಗಿದೆ.
- ತಲಾವಾರು ತೆರಿಗೆ ಹಂಚಿಕೆಯಲ್ಲಿ ಹೆಚ್ಚುತ್ತಿರುವ ಅಸಮಾನತೆಗಳು, ಆದಾಯ ಕೊರತೆ ಅನುದಾನಗಳ ಅವೈಜ್ಞಾನಿಕ ವಿನ್ಯಾಸ ಮತ್ತು ರಾಜ್ಯ-ನಿರ್ದಿಷ್ಟ ಅನುದಾನಗಳ ಅನಿರೀಕ್ಷಿತತೆಯ ಕುರಿತು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ದೇಶದ ಜಿಡಿಪಿಗೆ ರಾಜ್ಯದ ಕೊಡುಗೆಯು ಹೆಚ್ಚಾಗಿರುವ ಹೊರತಾಗಿಯೂ, ತಲಾವಾರು ತೆರಿಗೆ ಹಂಚಿಕೆಯು 14ನೇ ಮತ್ತು 15ನೇ ಹಣಕಾಸು ಆಯೋಗಗಳ ನಡುವಿನ ರಾಷ್ಟ್ರೀಯ ಸರಾಸರಿಯ 95% ರಿಂದ 73% ಕ್ಕೆ ಕುಸಿದಿರುವುದು ಗಮನಾರ್ಹವಾಗಿದೆ.
- ಸಂಪನ್ಮೂಲ ಹಂಚಿಕೆಯಲ್ಲಿ ಸಮಾನತೆ ಮುಖ್ಯವಾಗಿದ್ದರೂ, ಇದು ಸ್ಥಿರವಾದ ಆರ್ಥಿಕ ಕಾರ್ಯಕ್ಷಮತೆ ಮತ್ತು ಆರ್ಥಿಕ ಶಿಸ್ತನ್ನು ಪಾಲಿಸುವ ರಾಜ್ಯಗಳಿಗೆ ದಂಡ ವಿಧಿಸುವಂತಾಗಬಾರದು ಎಂದು ಪತ್ರದಲ್ಲಿ ತಿಳಿಸಲಾಗಿದೆ. ಆದಾಯ-ದೂರ ಮಾನದಂಡದ ಪಾಲನ್ನು 20% ರಷ್ಟು ಕಡಿಮೆ ಮಾಡಿ ದೇಶದ ಜಿಡಿಪಿಯಲ್ಲಿ ರಾಜ್ಯಗಳ ಕೊಡುಗೆಯನ್ನು ಅಳತೆಗೊಲಾಗಿ ಪರಿಗಣಿಸಿ ಇದಕ್ಕೆ 20% ಅಂಕವನ್ನು ನೀಡಬೇಕೆಂದು ಪ್ರಸ್ತಾಪಿಸಲಾಗಿದೆ.
- ಪ್ರಸ್ತುತ ರೂಪದಲ್ಲಿ ರಾಜಸ್ವ ಕೊರತೆ ಅನುದಾನವನ್ನು ಪಡೆಯುತ್ತಿರುವ ಫಲಾನುಭವಿ ರಾಜ್ಯಗಳು, ಈ ಅನುದಾನದ ಹೊರತಾಗಿಯೂ ರಾಜಸ್ವ ಕೊರತೆಯನ್ನು ಶೂನ್ಯವಾಗಿಸುವಲ್ಲಿ ವಿಫಲವಾಗಿರುವುದನ್ನು ಉಲ್ಲೇಖಿಸಿ, ರಾಜಸ್ವ ಕೊರತೆ ಅನುದಾನವನ್ನು ತೆರಿಗೆ ಹಂಚಿಕೆಯ ಸೂತ್ರದಲ್ಲೇ ರಾಜ್ಯಗಳಿಗೆ ನೀಡಬೇಕೆಂದು ಪ್ರಸ್ತಾಪಿಸಲಾಗಿದೆ.
- ಕರ್ನಾಟಕದ ಆರ್ಥಿಕತೆಯಲ್ಲಿ ಬೆಂಗಳೂರಿನ ಪ್ರಮುಖ ಪಾತ್ರವನ್ನು ಪರಿಗಣಿಸಿ, ಬೆಂಗಳೂರಿನ ಮೂಲಸೌಕರ್ಯವನ್ನು ಬಲಪಡಿಸಲು ₹1.15 ಲಕ್ಷ ಕೋಟಿ ರೂಪಾಯಿ ಹೂಡಿಕೆಗೆ ಬೆಂಬಲವನ್ನು ಮುಖ್ಯಮಂತ್ರಿ ಕೋರಿದ್ದಾರೆ.
ಈ ಸಭೆಯಲ್ಲಿ ಶ್ರೀ ಬಸವರಾಜ ರಾಯರೆಡ್ಡಿ, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರು, ಮುಖ್ಯ ಕಾರ್ಯದರ್ಶಿರವರು, ಮುಖ್ಯಮಂತ್ರಿ ಕಚೇರಿ ಮತ್ತು ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.