ಅಲ್ಪಸಂಖ್ಯಾತರಿಗೆ ಮನೆ ಮೀಸಲು ಧರ್ಮಾಧಾರಿತವಲ್ಲ: ಡಾ. ಜಿ. ಪರಮೇಶ್ವರ್‌

ಯಾರಿಗೆ ಮನೆ ಇಲ್ಲವೋ ಅವರಿಗೆ ಕೊಡಬೇಕಾಗುತ್ತದೆ. ಇಲ್ಲಿ ಶೇ.15, ಶೇ.20 ಎಂಬ ಪ್ರಶ್ನೆ ಅಲ್ಲ. ಅಲ್ಪಸಂಖ್ಯಾತ ಸಮುದಾಯದವರಿಗೆ ಈ ವರ್ಷ ಕೊಟ್ಟರೆ ಮುಂದೆ ಅವರ ಪ್ರಮಾಣವೂ ಕಡಿಮೆಯಾಗುತ್ತದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ತಿಳಿಸಿದರು.;

Update: 2025-06-20 11:18 GMT

ಗೃಹ ಸಚಿವ ಡಾ. ಜಿ.ಪರಮೇಶ್ವರ್‌

ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇಕಡಾ 15ರಷ್ಟು ಮೀಸಲಾತಿ ನೀಡಿರುವುದಕ್ಕೆ ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಇದು ಧರ್ಮಾಧಾರಿತ ವಿಷಯವಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಯಾರಿಗೆ ಮನೆ ಇಲ್ಲವೋ ಅವರಿಗೆ ಸರ್ಕಾರದಿಂದ ಮನೆ ನೀಡಬೇಕಾಗುತ್ತದೆ ಎಂದು ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಹೇಳಿದರು.

"ಯಾರಿಗೆ ಮನೆ ಇಲ್ಲವೋ ಅವರಿಗೆ ಕೊಡಬೇಕಾಗುತ್ತದೆ. ಇಲ್ಲಿ ಶೇಕಡಾ 15, ಶೇಕಡಾ 20 ಎಂಬ ಪ್ರಶ್ನೆ ಅಲ್ಲ. ಅಲ್ಪಸಂಖ್ಯಾತ ಸಮುದಾಯದವರಿಗೆ ಈ ವರ್ಷ ಕೊಟ್ಟರೆ ಮುಂದೆ ಅವರ ಪ್ರಮಾಣವೂ ಕಡಿಮೆಯಾಗುತ್ತದೆ. ಇದುವರೆಗೂ ಪರಿಶಿಷ್ಟರಿಗೆ ಮನೆಗಳು ಕಡಿಮೆ ಇದ್ದವು. ಅವರಿಗೆ ಸರ್ಕಾರ ಮನೆ ಕೊಟ್ಟಿದ್ದರಿಂದ ಈಗ ಅವರ ಸಂಖ್ಯೆ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರಲ್ಲೂ ಮನೆ ರಹಿತರ ಸಂಖ್ಯೆ ಕಡಿಮೆ ಆಗಲಿದೆ" ಎಂದು ಸಚಿವರು ವಿವರಿಸಿದರು. ಅಲ್ಪಸಂಖ್ಯಾತರಲ್ಲೂ ಮನೆ ಇಲ್ಲದವರ ಸಂಖ್ಯೆ ಕಡಿಮೆಯಾದಾಗ ಬೇರೆ ಸಮುದಾಯಗಳಿಗೆ ಹೆಚ್ಚಿನ ಮನೆ ನೀಡಲಾಗುವುದು ಎಂದು ಅವರು ಹೇಳಿದರು.

ಮೈಕ್ರೋ ಫೈನಾನ್ಸ್ ಕಿರುಕುಳ: ಕಠಿಣ ಕ್ರಮದ ಎಚ್ಚರಿಕೆ

ಮೈಕ್ರೋ ಫೈನಾನ್ಸ್ ಕಿರುಕುಳದ ವಿರುದ್ಧ ಸರ್ಕಾರ ಈಗಾಗಲೇ ಕಠಿಣ ಕಾನೂನು ತಂದಿದೆ ಎಂದು ಪರಮೇಶ್ವರ್ ತಿಳಿಸಿದರು. ಮೈಸೂರಿನಲ್ಲಿ ಮಗು ಅಪಹರಣ ಮಾಡಿ ಮೈಕ್ರೋ ಫೈನಾನ್ಸ್‌ನವರು ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಬಗ್ಗೆ ಮಾತನಾಡಿದ ಅವರು, "ಕಠಿಣ ಹೃದಯಿಗಳು, ಮಾನವೀಯತೆ ಇಲ್ಲದವರು ಮಗುವನ್ನು ಅಪಹರಣ ಮಾಡಿದ್ದಾರೆ. ಈ ಕುರಿತು ಮೈಸೂರು ಪೊಲೀಸ್ ಕಮಿಷನರ್ ಹಾಗೂ ಐಜಿ ಬಳಿ ಮಾತನಾಡಿ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ" ಎಂದರು.

ಬಿ.ಆರ್. ಪಾಟೀಲ್ ಆರೋಪಕ್ಕೆ ಪ್ರತಿಕ್ರಿಯೆ

ಆಳಂದ ಕ್ಷೇತ್ರದಲ್ಲಿ 950 ಸರ್ಕಾರಿ ಮನೆಗಳನ್ನು ಲಂಚ ಪಡೆದು ಹಂಚಿಕೆ ಮಾಡಲಾಗಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಹಾಗೂ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, "ಅವರು ಯಾವ ಅರ್ಥದಲ್ಲಿ ಆರೋಪ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಅವರು ನೇರವಾಗಿ ಹೇಳಿಲ್ಲ. ಯಾರು ಲಂಚ ಕೇಳುತ್ತಿದ್ದಾರೆ ಎಂದು ಶಾಸಕರು ದೂರು ನೀಡಲಿ" ಎಂದು ಸಚಿವರು ತಿಳಿಸಿದರು.

Tags:    

Similar News