High Court News |ಕೆಪಿಸಿಎಲ್‌ AE, JE ಆಯ್ಕೆ ಪಟ್ಟಿ ರದ್ದು; ಮರುಪರೀಕ್ಷೆಗೆ ಹೈಕೋರ್ಟ್‌ ಸೂಚನೆ

ಬೆಂಗಳೂರಿನ ಎನ್‌. ನವೀನ್‌ ಕುಮಾರ್‌ ಹಾಗೂ ಇತರರು ಸಲ್ಲಿಸಿದ್ದ ರಿಟ್‌ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ ಅವರಿದ್ದ ವಿಭಾಗೀಯ ಪೀಠ ಈ ಆದೇಶವನ್ನು ಪ್ರಕಟಿಸಿದೆ.;

Update: 2025-05-29 08:09 GMT

ರಾಜ್ಯ ಹೈಕೋರ್ಟ್‌ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ.

ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತದ (ಕೆಪಿಸಿಎಲ್‌) 404 ಸಹಾಯಕ ಎಂಜಿನಿಯರ್‌ ಹಾಗೂ ಕಿರಿಯ ಎಂಜಿನಿಯರ್‌ ನೇಮಕಾತಿಯ ಆಯ್ಕೆಪಟ್ಟಿಯನ್ನು ರದ್ದುಪಡಿಸಿ ಶೀಘ್ರವೇ ಮರುಪರೀಕ್ಷೆ ನಡೆಸುವಂತೆ ಕೆಪಿಸಿಎಲ್‌ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ(ಕೆಇಎ) ಹೈಕೋರ್ಟ್‌ ನಿರ್ದೇಶನ ನೀಡಿದೆ.

ಉತ್ತರ ಪತ್ರಿಕೆಗಳಲ್ಲಿನ ಋಣಾತ್ಮಕ ಮೌಲ್ಯಮಾಪನ ಅಂಕ ಕುರಿತಂತೆ ಹೊರಡಿಸಲಾದ ಆದೇಶವನ್ನು ಪ್ರಶ್ನಿಸಿ ಅಭ್ಯರ್ಥಿಗಳು ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್‌ ಏಕಸದಸ್ಯ ಪೀಠವು ಅಭ್ಯರ್ಥಿಗಳ ಮನವಿಯನ್ನು ತಿರಸ್ಕರಿಸಿತ್ತು.

ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಬೆಂಗಳೂರಿನ ಎನ್‌. ನವೀನ್‌ ಕುಮಾರ್‌ ಹಾಗೂ ಇತರರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ ನೇತೃತ್ವದ ವಿಭಾಗೀಯ ಪೀಠ, ಆಯ್ಕೆಪಟ್ಟಿಯನ್ನೇ ರದ್ದುಪಡಿಸಿದ್ದು, ಮರು ಪರೀಕ್ಷೆಗೆ ಆದೇಶಿಸಿದೆ. 

2024ರ ಫೆ.18 ಹಾಗೂ 19 ರಂದು ನಡೆದಿದ್ದ ಪರೀಕ್ಷೆಗೆ ಹಾಜರಾಗಿದ್ದ ಎಲ್ಲ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನಡೆಸಬೇಕು. ಒಂದು ವೇಳೆ ಋಣಾತ್ಮಕ ಅಂಕವಿದ್ದರೆ ಆ ಬಗ್ಗೆ ಮೊದಲೇ ಅಭ್ಯರ್ಥಿಗಳಿಗೆ ಮಾಹಿತಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದೆ.

ಏನಿದು ಪ್ರಕರಣ ?

ಕರ್ನಾಟಕ ವಿದ್ಯುತ್‌ ನಿಗಮವು ಸಿವಿಲ್‌, ಮೆಕಾನಿಕಲ್‌ ಹಾಗೂ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ವಿಭಾಗಗಳಲ್ಲಿನ ಸಹಾಯಕ ಎಂಜಿನಿಯರ್‌ ಹಾಗೂ ಕಿರಿಯ ಎಂಜಿನಿಯರ್‌ನ 404 ಹುದ್ದೆಗಳಿಗೆ 2017 ಆಗಸ್ಟ್‌ 3 ರಂದು ಅಧಿಸೂಚನೆ ಹೊರಡಿಸಿತ್ತು. 2018 ಜನವರಿಯಲ್ಲಿ ತಾಂತ್ರಿಕ ಹಾಗೂ ಕನ್ನಡ ಭಾಷಾ ಪರೀಕ್ಷೆ ನಡೆಸಿತ್ತು.

ಪರೀಕ್ಷಾ ಅಕ್ರಮಗಳ ಕುರಿತು ನ್ಯಾಯಾಲಯದ ಮೆಟ್ಟಿಲೇರಿದಾಗ ಕೆಪಿಸಿಎಲ್‌ ನಡೆಸಿದ ಪರೀಕ್ಷೆಯನ್ನು ಹೈಕೋರ್ಟ್‌ ರದ್ದುಗೊಳಿಸಿ ಹೊಸದಾಗಿ ನೇಮಕಾತಿ ನಡೆಸುವ ಹೊಣೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹೆಗಲಿಗೆ ಹಾಕಿತ್ತು. ಅದರಂತೆ 2024 ರ ಫೆಬ್ರವರಿಯಲ್ಲಿ ಕೆಇಎ ಕೆಪಿಸಿಎಲ್‌ನ ಜೆಇ ಹಾಗೂ ಎಇ ಹುದ್ದೆಗಳಿಗೆ ಹೊಸದಾಗಿ ನೇಮಕಾತಿ ಪರೀಕ್ಷೆ ನಡೆಸಿತ್ತು. 

ಕೆಇಎ ಕನ್ನಡ ಪರೀಕ್ಷೆಗೆ 150 ಅಂಕಗಳನ್ನು ನಿಗದಿಪಡಿಸಿತ್ತು. ಇದನ್ನು ಪ್ರಶ್ನಿಸಿ ಕೆಲವರು ಕೋರ್ಟ್‌ ಮೆಟ್ಟಿಲೇರಿದ ನಂತರ ಮತ್ತೊಮ್ಮೆ ಪರೀಕ್ಷೆ ನಡೆಸಿ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಿತ್ತು.  

ನೇಮಕಾತಿ ಪ್ರಕ್ರಿಯೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕಾರಣಕ್ಕೆ ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ, 2023ರಲ್ಲಿ ತಾತ್ಕಾಲಿಕ ನೇಮಕಾತಿ ಆದೇಶ ನೀಡುವಂತೆ ಮಧ್ಯಂತರ ಆದೇಶ ಹೊರಡಿಸಿತ್ತು. 

ಅಭ್ಯರ್ಥಿಗಳಿಂದ ಮತ್ತೆ ಕೋರ್ಟ್‌ ಮೊರೆ

ಕೆಪಿಸಿಎಲ್‌ ನೇಮಕಾತಿ ಅಧಿಸೂಚನೆ ಉಲ್ಲೇಖಿಸದಿದ್ದರೂ ಮರು ಪರೀಕ್ಷೆಯಲ್ಲಿ ಋಣಾತ್ಮಕ ಅಂಕ ಅನುಸರಿಸಿದ್ದನ್ನು ಪ್ರಶ್ನಿಸಿ ಕೆಲವರು ಮತ್ತೆ ಕೋರ್ಟ್ ಮೊರೆ ಹೋಗಿದ್ದರು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ, ಈಗ 404 ಸಹಾಯಕ ಎಂಜಿನಿಯರ್ (ಎ.ಇ) ಮತ್ತು ಕಿರಿಯ ಎಂಜಿನಿಯರ್ (ಜೆ.ಇ) ನೇಮಕಾತಿಗೆ ಹೊರಡಿಸಿದ್ದ ತಾತ್ಕಾಲಿಕ ಪಟ್ಟಿಯನ್ನು ರದ್ದು ಮಾಡಿ, ಹೊಸದಾಗಿ ಮರು ಪರೀಕ್ಷೆ ನಡೆಸುವಂತೆ ಆದೇಶಿಸಿದೆ. 

Tags:    

Similar News