ನಗರಸಭೆ ಸದಸ್ಯ ಬಶೀರ್‌ ಮನೆ ಮೇಲೆ ಇ.ಡಿ ದಾಳಿ, ದಾಖಲೆ ಪರಿಶೀಲನೆ

ಶನಿವಾರ(ಜೂ.21) ಒಂಬತ್ತು ಅಧಿಕಾರಿಗಳ ತಂಡ ದಾಳಿ ನಡೆಸಿದ್ದು ಆಸ್ತಿ, ಬ್ಯಾಂಕ್ ಖಾತೆ ಹಾಗೂ ದಾಖಲೆ ವಿವರಗಳನ್ನು ಪರಿಶೀಲಿಸಿದ್ದಾರೆ ಎಂದು ನಗರಸಭೆ ಸದಸ್ಯ ಬಶೀರ್‌ ತಿಳಿಸಿದ್ದಾರೆ.;

Update: 2025-06-21 06:11 GMT

ಜಾರಿ ನಿರ್ದೇಶನಾಲಯ

ಸಾಗರ ನಗರಸಭೆ ಕಾಂಗ್ರೆಸ್ ಪಕ್ಷದ ಸದಸ್ಯ ಟಿಪ್‌ಟಾಪ್ ಬಶೀರ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ಇಡಿ) ದಾಳಿ ನಡೆಸಿದ್ದಾರೆ.

ಶನಿವಾರ(ಜೂ.21) ಒಂಬತ್ತು ಅಧಿಕಾರಿಗಳ ತಂಡ ದಾಳಿ ನಡೆಸಿದ್ದು ಉದ್ಯಮಿ ಬಶೀರ್ ಅವರಿಗೆ ಸೇರಿದ ಆಸ್ತಿ, ಬ್ಯಾಂಕ್ ಖಾತೆ ಹಾಗೂ ದಾಖಲೆ ವಿವರಗಳನ್ನು ಪರಿಶೀಲಿಸಿದ್ದಾರೆ.

"ಈ ಹಿಂದೆ ಆದಾಯ ತೆರಿಗೆ ಅಧಿಕಾರಿಗಳು(ಐಟಿ) ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಶನಿವಾರ ಇಡಿ ಅಧಿಕಾರಿಗಳು ಬಂದಿದ್ದರು. ಅವರು ಕೇಳಿದ ಎಲ್ಲಾ ಮಾಹಿತಿ, ದಾಖಲೆಗಳನ್ನು ಒದಗಿಸಲಾಗಿದೆ. ಬುಧವಾರ(ಜೂ.25) ಮಂಗಳೂರಿನಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಬರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ." ಎಂದು ನಗರಸಭೆ ಸದಸ್ಯ ಬಶೀರ್ ತಿಳಿಸಿದ್ದಾರೆ.

ಕಾಂಗ್ರೆಸ್‌ ನಾಯಕರ ಮೇಲೆ ದಾಳಿ

ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಕಾಂಗ್ರೆಸ್‌ ನಾಯಕರ ಮೇಲೆ ಇ.ಡಿ ದಾಳಿ ನಡೆಸಿತ್ತು. ಮಾಜಿ ಸಚಿವ ಬಿ. ನಾಗೇಂದ್ರ, ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದ ತುಕಾರಂ, ಬಳ್ಳಾರಿ ನಗರ ಶಾಸಕ ನಾರ ಭರತ್ ರೆಡ್ಡಿ, ಕೂಡ್ಲಿಗಿ ಶಾಸಕ ಡಾ. ಶ್ರೀನಿವಾಸ್ ಮ್ತತು ಕಂಪ್ಲಿ ಶಾಸಕ ಗಣೇಶ್ ಮನೆ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ಹಲವು ಮಹತ್ವದ ದಾಖಲೆಗಳನ್ನು  ವಶಪಡಿಸಿಕೊಂಡಿದ್ದರು. 

ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಿ 

ಮಾಜಿ ಸಚಿವ ಬಿ. ನಾಗೇಂದ್ರ ಹಾಗೂ ಇತರರ ಮೇಲೆ ನಡೆದಿದ್ದ ಇ.ಡಿ ದಾಳಿಗಳ ಕುರಿತು ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಧಿಕಾರಿಗಳು ದಾಳಿ ನಡೆಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದರು.

Tags:    

Similar News