Bangalore Stampede |ಕಾಂಗ್ರೆಸ್ನಲ್ಲಿ ತುಮುಲ: ಹೈಕಮಾಂಡ್ಗೆ ಉತ್ತರಿಸಲು ಆಪ್ತರ ಸಭೆ ಕರೆದ ಸಿದ್ದರಾಮಯ್ಯ?
ಆರ್ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಘಟನೆಯಿಂದ ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ತೀವ್ರ ಮುಜುಗರ ಅನುಭವಿಸುವಂತಾಗಿದೆ. ಸಿಎಂ ಸಿದ್ದರಾಮಯ್ಯ ಬಳಿ ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ.;
ಚೊಚ್ಚಲ ಐಪಿಎಲ್ ಕಪ್ ಮುಡಿಗೇರಿಸಿಕೊಂಡ ಆರ್ಸಿಬಿ ಸಂಭ್ರಮೋತ್ಸವ ವೇಳೆ ನಡೆದ ಕಾಲ್ತುಳಿದ ದುರಂತ ಇದೀಗ ಕಾಂಗ್ರೆಸ್ ಪಕ್ಷದೊಳಗಿನ ನಾಯಕರ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದೆ. ಹಾಗಾಗಿ, ಸರ್ಕಾರ, ಪ್ರತಿಪಕ್ಷ ಮಾತ್ರವಲ್ಲದೇ, ಸ್ವಪಕ್ಷದಿಂದಲೂ ಟೀಕೆ ಎದುರಿಸಬೇಕಾಗಿದೆ.
ಪ್ರಮುಖವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗ ಸಚಿವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆರ್ಸಿಬಿ ಸಂಭ್ರಮಾಚರಣೆಯಲ್ಲಿ ಒಟ್ಟಾರೆಯಾಗಿ ನಡೆದುಕೊಂಡ ರೀತಿಗೆ ಅಪಸ್ವರ ಎತ್ತಿದ್ದಾರೆ ಎಂದು ಹೇಳಲಾಗಿದೆ. ಘಟನೆ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟನೆ ಕೇಳಿರುವುದು ಹಾಗೂ ದೇಶಾದ್ಯಂತ ಈ ಬಗ್ಗೆ ಚರ್ಚೆಯಾಗುತ್ತಿರುವುದು ಮತ್ತು ವಿರೋಧ ಪಕ್ಷ ಬಿಜೆಪಿಗೆ ಅನಾಯಾಸವಾಗಿ ಟೀಕಾಸ್ತ್ರ ದೊರೆತಿರುವುದು ಸಿದ್ದರಾಮಯ್ಯ ಅವರ ಮುನಿಸಿಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಹೈಕಮಾಂಡ್ನಿಂದ ತರಾಟೆ
ರಾಜ್ಯದ ಪ್ರಮುಖ ನಾಯಕರ ಜೊತೆ ದೂರವಾಣಿ ಮೂಲಕ ಚರ್ಚೆ ನಡೆಸಿರುವ ಕಾಂಗ್ರೆಸ್ ಹೈಕಮಾಂಡ್ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿರುವುದಕ್ಕೆ ತರಾಟೆಗೆ ತೆಗೆದುಕೊಂಡಿದೆ. ಶಾಂತಿ ಸುವ್ಯಸ್ಥೆ ಕಾಪಾಡುವಲ್ಲಿ ವಿಫಲವಾಗಿರುವುದು ಬಿಜೆಪಿಗೆ ಪ್ರಮುಖ ಅಸ್ತ್ರವಾಗಿದೆ. ಇದನ್ನೇ ಬಳಸಿಕೊಂಡು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುತ್ತಿರುವುದಕ್ಕೆ ಪ್ರತ್ಯುತ್ತರ ನೀಡಲು ಸಾಧ್ಯವಾಗದಿರುವುದು ರಾಷ್ಟ್ರಮಟ್ಟದಲ್ಲಿ ಇರಿಸು-ಮುರಿಸು ಅನುಭವಿಸುವಂತಾಗಿದೆ. ಸಂಭ್ರಮಾಚರಣೆ ಆಯೋಜನೆಯಲ್ಲಿ ಆಗಿರುವ ವಿಫಲತೆಗೆ ಕಾರಣಗಳೇನು? ಮತ್ತು ಇದಕ್ಕೆ ಯಾರು ಹೊಣೆಗಾರರು ಎಂಬುದರ ಕುರಿತು ಮಾಹಿತಿ ನೀಡುವಂತೆ ಕೇಳಿದೆ.
ಆಪ್ತರೊಂದಿಗೆ ಸಿಎಂ ಚರ್ಚೆ
ಕಾಲ್ತುಳಿತ ಘಟನೆ ಕುರಿತು ಹೈಕಮಾಂಡ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ ವರದಿ ಕೇಳಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲಿ ತಮ್ಮ ಆಪ್ತ ಸಚಿವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಸಚಿವರಾದ ಜಮೀರ್ ಅಹ್ಮದ್, ಶಿವಾನಂದ ಪಾಟೀಲ್, ಬೈರತಿ ಸುರೇಶ್ ಸೇರಿದಂತೆ ಇತರೆ ಸಚಿವರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆ.
ಸಚಿವ ಸಂಪುಟ ಸಭೆಗೆ ಹಾಜರಾಗುವ ಮುನ್ನ ತಮ್ಮ ಆಪ್ತ ಸಚಿವರೊಂದಿಗೆ ಸಿಎಂ ಸಿದ್ದರಾಮಯ್ಯ ಸಮಾಲೋಚನೆ ನಡೆಸಿರುವುದು ಕಾಂಗ್ರೆಸ್ ಪಾಳೆಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಸಭೆಯಲ್ಲಿ ಸಚಿವರು ಸಹ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಯಾರು ಕಾರಣ?
ಸಂಭ್ರಮಾಚರಣೆಯನ್ನು ತರಾತುರಿಯಲ್ಲಿ ಆಯೋಜನೆ ಮಾಡಲಾಗಿದ್ದು, ಇದಕ್ಕೆಲ್ಲಾ ಯಾರು ಕಾರಣ? ಸಚಿವರ ಜತೆ ಚರ್ಚೆ ನಡೆಸದೆ ಏಕಾಏಕಿ ತೀರ್ಮಾನ ಕೈಗೊಂಡಿರುವುದು ಘಟನೆ ಕಾರಣವಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳ ಅಭಿಪ್ರಾಯಗಳನ್ನು ಸಹ ಪಡೆದುಕೊಂಡಿಲ್ಲ ಎಂಬುದಾಗಿ ಸಚಿವರು ಮುಖ್ಯಮಂತ್ರಿಗಳ ಬಳಿ ಬೇಸರ ಹೊರಹಾಕಿದ್ದಾರೆ. ಅಲ್ಲದೇ, ಘಟನೆಯಿಂದ ಸರ್ಕಾರ ವರ್ಚಸ್ಸಿಗೆ ಸಾರ್ವಜನಿಕ ವಲಯದಲ್ಲಿ ಧಕ್ಕೆಯಾಗಿದೆ. ರಾಷ್ಟ್ರಮಟ್ಟದಲ್ಲಿ ಸರ್ಕಾರ ಮುಜುಗರಕ್ಕೊಳಗಾಗುವಂತಾಗಿದೆ. ಕಾಂಗ್ರೆಸ್ನ ಹಲವು ಮುಖಂಡರು ಸಹ ಸರ್ಕಾರದ ತಪ್ಪು ನಡೆಯಿಂದಾಗಿ ಘಟನೆ ಸಂಭವಿಸಿದೆ ಎಂಬ ಅಭಿಪ್ರಾಯನ್ನು ವ್ಯಕ್ತಪಡಿಸಿದ್ದಾರೆ ಎಂಬುದರ ಕುರಿತು ಸಹ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಘಟನೆ ಕುರಿತು ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ.
ಆರ್ಸಿಬಿ ತಂಡವನ್ನು ಅಭಿನಂದಿಸಲು ಯಾವುದೇ ಪೂರ್ವಸಿದ್ಧತೆ ಇಲ್ಲದೆ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡುವ ಅಗತ್ಯತೆ ಬಗ್ಗೆ ಕಾಂಗ್ರೆಸ್ನಲ್ಲಿಯೇ ಚರ್ಚೆಗಳು ಆರಂಭಗೊಂಡಿವೆ. ಕಾಲ್ತುಳಿತ ದುರ್ಘಟನೆಯನ್ನು ಮುಂದಿಟ್ಟುಕೊಂಡು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಮುಜುಗರಕ್ಕೊಳಗಾಗಿದೆ. ಕೇಂದ್ರದಲ್ಲಿ ಆಡಳಿತರೂಢ ಬಿಜೆಪಿ ಸಹ ಪ್ರತಿಪಕ್ಷ ಕಾಂಗ್ರೆಸ್ ಅನ್ನು ಕಾಲ್ತುಳಿತ ದುರಂತವನ್ನಿಟ್ಟುಕೊಂಡು ತರಾಟೆಗೆ ತೆಗೆದುಕೊಳ್ಳುತ್ತಿದೆ. ಘಟನೆಯಿಂದ ಮುಜಕ್ಕೊಳಗಾದ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಸರ್ಕಾರ ನಡೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಜೊತೆಗೆ ಘಟನೆ ಕುರಿತು ಕೂಲಂಕಷ ವರದಿ ಸಲ್ಲಿಕೆ ಮಾಡುವಂತೆ ನಿರ್ದೇಶನ ನೀಡಿದೆ.