ಜಾತಿಗಣತಿ ಮರು ಸಮೀಕ್ಷೆ ನನ್ನ ತೀರ್ಮಾನವಲ್ಲ; ಹೈಕಮಾಂಡ್ ನಿರ್ಧಾರ- ಸಿಎಂ ಸಿದ್ದರಾಮಯ್ಯ
2015ರಲ್ಲಿ ಜಾತಿ ಗಣತಿ ನಡೆದಿದ್ದು ಈಗ 10 ವರ್ಷಗಳಾಗಿವೆ. ಆದ್ದರಿಂದ ಮರು ಸಮೀಕ್ಷೆ ನಡೆಸುವಂತೆ ಹೈಕಮಾಂಡ್ ನಿರ್ದೇಶನ ನೀಡಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.;
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್. ಕಾಂತರಾಜು ನೇತೃತ್ವದಲ್ಲಿ ನಡೆದಿರುವ ಜಾತಿಗಣತಿ ವರದಿಯನ್ನು ಸರ್ಕಾರ ಪೂರ್ಣವಾಗಿ ಕಡೆಗಣಿಸಿಲ್ಲ. ಹತ್ತು ವರ್ಷಗಳ ಹಿಂದಿನ ವರದಿಯಾದ ಹಿನ್ನೆಲೆ ಅಂಕಿ ಅಂಶ ಪರಿಷ್ಕರಿಸಲು 60 ರಿಂದ 70 ದಿನಗಳಲ್ಲಿ ಮರು ಸಮೀಕ್ಷೆಗೆ ನಿರ್ಧರಿಸಲಾಗಿದೆ. ಆದಾಗ್ಯೂ, ಜಾತಿಗಣತಿ ಮರು ಸಮೀಕ್ಷೆ ನನ್ನ ತೀರ್ಮಾನವಲ್ಲ. ಅದು ಹೈಕಮಾಂಡ್ ನಿರ್ಧಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬುಧವಾರ (ಜೂ.11) ಗೌರಿಬಿದನೂರು ತಾಲೂಕಿನ ಅಲಕಾಪುರ ಹೆಲಿಪ್ಯಾಡ್ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, 2015ರಲ್ಲಿ ಜಾತಿ ಗಣತಿ ನಡೆದಿದ್ದು, ವರದಿಗೆ ಈಗ 10 ವರ್ಷಗಳಾಗಿವೆ. ಅಂಕಿ ಅಂಶಗಳನ್ನು ಸಾಕಷ್ಟು ಬದಲಾವಣೆ ಆಗಿರುವುದರಿಂದ ಮರು ಸಮೀಕ್ಷೆ ನಡೆಸಲು ಹೈಕಮಾಂಡ್ ನಿರ್ದೇಶನ ನೀಡಿದೆ ಎಂದು ಹೇಳಿದ್ದಾರೆ.
ಬಳ್ಳಾರಿಯಲ್ಲಿ ಕಾಂಗ್ರೆಸ್ ಸಂಸದ ಹಾಗೂ ಶಾಸಕರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯದ ದಾಳಿ ಕುರಿತಂತೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ಉದ್ದೇಶಕ್ಕಾಗಿ ಬಿಜೆಪಿ ತನಿಖಾ ಸಂಸ್ಥೆ ಹಾಗೂ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಆದರೆ, ನಾವು ಯಾವುದೇ ತನಿಖೆಗೆ ಅಡ್ಡಿಪಡಿಸುವುದಿಲ್ಲ. ಯಾರೇ ತಪ್ಪು ಮಾಡಿದರೂ ಕಾನೂನು ಪ್ರಕಾರ ಶಿಕ್ಷೆ ಅನುಭವಿಸಲಿದ್ದಾರೆ ಎಂದು ಹೇಳಿದ್ದಾರೆ.
ಕಾಲ್ತುಳಿತ ಪ್ರಕರಣದಲ್ಲಿ ಬಿಜೆಪಿ ರಾಜಕೀಯ
ಗೋದ್ರಾ ಘಟನೆಯಲ್ಲಿ ಎಷ್ಟು ಜನರು ಸತ್ತರು?, ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರೆಷ್ಟು?, ಆಗ ಮುಖ್ಯಮಂತ್ರಿ ಆಗಿದ್ದು ಯಾರು? ಅವರೇಕೆ ರಾಜೀನಾಮೆ ನೀಡಲಿಲ್ಲ ಎಂದು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ ಅವರು, ಆರ್ಸಿಬಿ ವಿಜಯೋತ್ಸವದ ಕಾಲ್ತುಳಿತ ಘಟನೆಯನ್ನು ಬಿಜೆಪಿ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ದೂರಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಡತನ ನಿರ್ಮೂಲನೆಗೆ ʼಗರೀಬಿ ಹಠಾವೊʼ ಕಾರ್ಯಕ್ರಮ ರೂಪಿಸಿದೆ. ಅದರಿಂದ ಕೊಂಚ ಬಡತನ ನಿರ್ಮೂಲನೆ ಆಗಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಬಡತನ ನಿರ್ಮೂಲನೆಗೆ ಯಾವೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.