ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಅಧ್ಯಕ್ಷ ಹುದ್ದೆಯಿಂದ ವಿನಯ್ ಕುಲಕರ್ಣಿ ವಜಾಕ್ಕೆ ಬಿಜೆಪಿ ಆಗ್ರಹ
ಕೆಯುಡ್ಬ್ಲೂಎಸ್ ಮತ್ತು ಡಿಬಿ ಅಧ್ಯಕ್ಷ ಸ್ಥಾನಕ್ಕೆ ಶಾಸಕ ವಿನಯ್ ಕುಲಕರ್ಣಿ ಕಾನೂನಿನ ಪ್ರಕಾರ ಅರ್ಹರಾಗಿರುವುದಿಲ್ಲ. ಅವರಿಗೆ ನೀಡಲಾಗಿದ್ದ ಹುದ್ದೆಯು ಸಂಪುಟ ದರ್ಜೆಯ ಸ್ಥಾನಮಾನವನ್ನು ಹೊಂದಿದ್ದು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕೆಂದು ಬಿಜೆಪಿ ಮುಖಂಡ ರಮೇಶ್ ಎನ್. ಆರ್ ಆಗ್ರಹಿಸಿದ್ದಾರೆ.;
ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ಸೇರಿದ ಶಾಸಕ ವಿನಯ್ ಕುಲಕರ್ಣಿ ಅವರನ್ನು ʼಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿʼ (KUWS & DB) ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಬಿಜೆಪಿ ಮುಖಂಡ ರಮೇಶ್ ಎನ್. ಆರ್. ಆಗ್ರಹಿಸಿದ್ದಾರೆ.
ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಗಡೆ ಇದ್ದ ವಿನಯ್ ಕುಲಕರ್ಣಿ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಕೋರ್ಟ್ ಆದೇಶದಂತೆ ಗುರುವಾರ (ಜೂ.12) ʼಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯʼಕ್ಕೆ ಹಾಜರಾದ ನಂತರ ಅವರನ್ನು ಸಿಬಿಐ ವಶಕ್ಕೆ ನೀಡಲಾಗಿತ್ತು.
ಜೈಲಿನಲ್ಲಿರುವ ಶಾಸಕ ವಿನಯ್ ಕುಲಕರ್ಣಿ ʼಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿʼ ಯ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುಂತಿಲ್ಲ. ಅವರಿಗೆ ನೀಡಲಾಗಿದ್ದ ಹುದ್ದೆಯು ಸಂಪುಟ ದರ್ಜೆಯ ಸ್ಥಾನಮಾನ ಹೊಂದಿದ್ದು ತಕ್ಷಣವೇ ವಜಾಗೊಳಿಸಲು ಸಿಎಂ ನಿರ್ಣಯ ತೆಗೆದುಕೊಳ್ಳಬೇಕು ಎಂದು ರಮೇಶ್ ಒತ್ತಾಯಿಸಿದ್ದಾರೆ.
17,000 ಕೋಟಿ ರೂ. ಅನುದಾನ ದುರ್ಬಳಕೆ
ʼಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿʼಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಈಗಾಗಲೇ ಕೇಂದ್ರ ಸರ್ಕಾರದ ʼಅಮೃತ್ ಯೋಜನೆʼ ಅಡಿಯಲ್ಲಿ 2023 ರಿಂದ 24 ಮತ್ತು 2024 ರಿಂದ 25ರ ಅವಧಿಯಲ್ಲಿ ಬಿಡುಗಡೆಯಾದ 17,000 ಕೋಟಿ ರೂ. ಗಳಷ್ಟು ಅನುದಾನವನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಸುಮಾರು 7,280 ಪುಟಗಳ ದಾಖಲೆಗಳ ಸಹಿತ ನೀಡಿದ್ದ ದೂರಿನಂತೆ ಜಾರಿ ನಿದೇಶನಾಲಯವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ ಎಂದು ರಮೇಶ್ ಆರೋಪಿಸಿದರು.
ಭ್ರಷ್ಟಾಚಾರದಲ್ಲಿ ಸಚಿವರುಗಳು ಭಾಗಿ, ಆರೋಪ
ಬೆಂಗಳೂರು ಮಹಾನಗರವನ್ನು ಹೊರತುಪಡಿಸಿ ರಾಜ್ಯದ ಇನ್ನುಳಿದ ನಗರಗಳ ವ್ಯಾಪ್ತಿಯನ್ನು ಹೊಂದಿರುವ ನಗರಾಭಿವೃದ್ಧಿ ಇಲಾಖೆಯ ಅಧೀನದಲ್ಲಿನ ʼಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿʼ ಮತ್ತು ʼಪೌರಾಡಳಿತ ಇಲಾಖೆʼ ಗಳಲ್ಲಿ ಹಿಂದೆಂದೂ ಕಾಣದಂತಹ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಪೌರಾಡಳಿತ ಇಲಾಖೆಯ ಸಚಿವ ರಹೀಂ ಖಾನ್ ಮತ್ತು ಶಾಸಕ ವಿನಯ್ ಕುಲಕರ್ಣಿ ಟೆಂಡರ್ ಪ್ರಕ್ರಿಯೆಗಳಲ್ಲಿ ಬೃಹತ್ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಟೆಂಡರ್ಗಳಲ್ಲಿ ಶೇ.47 ಕಮಿಷನ್
ಸಚಿವ ಭೈರತಿ ಸುರೇಶ್ ಶೇ.12 , ರಹೀಂ ಖಾನ್ ಶೇ. 5 ಮತ್ತು ಶಾಸಕ ವಿನಯ್ ಕುಲಕರ್ಣಿ ಶೇ. 5 ಕಮಿಷನ್ ಹಣವನ್ನು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಶೇ. 25 ಕಮಿಷನ್ ಹಣ ಪಡೆಯುತ್ತಿದ್ದು, ಇಲಾಖೆಗಳಿಗೆ ಸಂಬಂಧಿಸಿದ ಕಾಮಗಾರಿಗಳಲ್ಲಿ ಗುತ್ತಿಗೆದಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಬಹಳಷ್ಟು ಗುತ್ತಿಗೆದಾರರು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ರಮೇಶ್ ದೂರಿದ್ದಾರೆ.