ಇತಿಹಾಸಕಾರರು ಹೇಳಿದ್ದನ್ನೇ ಹೇಳಿದ್ದೇನೆ; ಕ್ಷಮೆ ಕೇಳಲು ಕಮಲ್ ನಿರಾಕರಣೆ

ತಮಿಳುನಾಡು ರಾಜ್ಯ ಎಲ್ಲಾ ಭಾಷಿಕರಿಗೂ ಗೌರವ ನೀಡಿದೆ. ಆಂಧ್ರದ ರೆಡ್ಡಿ ಹಾಗೂ ಕರ್ನಾಟಕದ ಅಯ್ಯಂಗಾರ್‌ ಮಹಿಳೆಯೊಬ್ಬರು ಮುಖ್ಯಮಂತ್ರಿಯಾಗಿದ್ದರು. ಕನ್ನಡಿಗರು ನನಗೆ ಅತೀವ ಪ್ರೀತಿಯನ್ನು ನೀಡಿದ್ದಾರೆ. ತಮಿಳುನಾಡಿನಲ್ಲಿ ಸಮಸ್ಯೆಯಾದಾಗ ಕನ್ನಡದಲ್ಲಿ ಸಾಕಷ್ಟು ಅವಕಾಶ ನೀಡಿದ್ದಾರೆ. ಪ್ರೀತಿಯಲ್ಲಿ ಕ್ಷಮೆಯ ಮಾತು ಬರುವುದಿಲ್ಲ ಎಂದರು.;

Update: 2025-05-28 14:39 GMT

ನಟ ಕಮಲ್‌ ಹಾಸನ್‌

"ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ" ಎಂಬ ತಮ್ಮ ಹೇಳಿಕೆ ವಿವಾದ ಸೃಷ್ಟಿಸಿರುವ ಹೊರತಾಗಿಯೂ ಕ್ಷಮೆ ಕೇಳಲು ಕಮಲ್ ಹಾಸನ್​ ನಿರಾಕರಿಸಿದ್ದಾರೆ. "ಇತಿಹಾಸಕಾರರು ಹೇಳಿದ್ದನ್ನೇ ನಾನು ಹೇಳಿದ್ದೇನೆ, ಯಾವುದೇ ತಪ್ಪು ಮಾಹಿತಿ ನೀಡಿಲ್ಲ" ಎಂದು ಬುಧವಾರ (ಮೇ 28) ಕೇರಳದ ತಿರುವನಂತಪುರದಲ್ಲಿ ಮಾತನಾಡುತ್ತಾ ಅವರು ಹೇಳಿದ್ದಾರೆ.   

ಕಮಲ್ ಹಾಸನ್‌ರ ಈ ಹೇಳಿಕೆ ಕರ್ನಾಟಕದಲ್ಲಿ ಈಗಾಗಲೇ ಹೆಚ್ಚಿರುವ ಆಕ್ರೋಶಕ್ಕೆ ಮತ್ತಷ್ಟು ಇಂಬು ನೀಡಿದ್ದು, ಅವರ ಬಹು ನಿರೀಕ್ಷಿತ 'ಥಗ್ ಲೈಫ್' ಚಿತ್ರದ ರಾಜ್ಯಾದ್ಯಂತದ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತವಾಗುವ ಸಾಧ್ಯತೆಗಳಿವೆ.  

ಬುಧವಾರ ತಿರುವನಂತಪುರದಲ್ಲಿ ನಡೆದ 'ಥಗ್ ಲೈಫ್' ಚಿತ್ರದ ಮಾಧ್ಯಮಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಮಲ್ ಹಾಸನ್, "ನಾನು ಯಾವುದೇ ತಪ್ಪು ಮಾಹಿತಿ ನೀಡಿಲ್ಲ. ಕ್ಷಮೆ ಕೇಳುವಂತದ್ದು ನಾನೇನು ಹೇಳಿಲ್ಲ" ಎಂದು ಸ್ಪಷ್ಟಪಡಿಸಿದರು. ತಮಿಳುನಾಡು ರಾಜ್ಯವು ಎಲ್ಲಾ ಭಾಷಿಕರಿಗೂ ಗೌರವ ನೀಡಿದೆ ಎಂದು ಹೇಳಿದ ಅವರು, ಆಂಧ್ರದ ರೆಡ್ಡಿ ಹಾಗೂ ಕರ್ನಾಟಕದ ಅಯ್ಯಂಗಾರ್ ಸಮುದಾಯದ ಮಹಿಳೆಯೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು ಎಂಬುದನ್ನು ಉದಾಹರಿಸಿದರು. "ಕನ್ನಡಿಗರು ನನಗೆ ಅತೀವ ಪ್ರೀತಿಯನ್ನು ನೀಡಿದ್ದಾರೆ. ತಮಿಳುನಾಡಿನಲ್ಲಿ ಸಮಸ್ಯೆಯಾದಾಗ ಕನ್ನಡದಲ್ಲಿ ಸಾಕಷ್ಟು ಅವಕಾಶ ನೀಡಿದ್ದಾರೆ. ಪ್ರೀತಿಯಲ್ಲಿ ಕ್ಷಮೆಯ ಮಾತು ಬರುವುದಿಲ್ಲ" ಎಂದೂ ಕಮಲ್ ಹಾಸನ್ ತಿಳಿಸಿದರು.

ಕಮಲ್ ಹೇಳಿಕೆಯೇನು? 

ಮಂಗಳವಾರ ಚೆನ್ನೈನಲ್ಲಿ ನಡೆದ 'ಥಗ್ ಲೈಫ್' ಕಾರ್ಯಕ್ರಮದಲ್ಲಿ ಕಮಲ್ ಹಾಸನ್ "ಕನ್ನಡ ಹುಟ್ಟಿದ್ದು ತಮಿಳಿನಿಂದ" ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ಸಾಹಿತಿಗಳು, ರಾಜಕೀಯ ನಾಯಕರು ಮತ್ತು ಕನ್ನಡಪರ ಸಂಘಟನೆಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

ಕನ್ನಡಪರ ಹೋರಾಟಗಾರ ಸಾ.ರಾ.ಗೋವಿಂದು ಅವರು ಕಮಲ್‌ರ ಹೇಳಿಕೆಯನ್ನು "ಕನ್ನಡಿಗರಿಗೆ ಅವಮಾನ" ಎಂದು ಬಣ್ಣಿಸಿ, ಕೂಡಲೇ ಬಹಿರಂಗ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದರು. ಕ್ಷಮೆ ಕೇಳದಿದ್ದರೆ 'ಥಗ್ ಲೈಫ್' ಸೇರಿದಂತೆ ಅವರ ಯಾವುದೇ ಚಿತ್ರಗಳ ಕರ್ನಾಟಕದಲ್ಲಿ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಕನ್ನಡಪರ ಸಂಘಟನೆಗಳು ಕಮಲ್ ಹಾಸನ್‌ರ ಚಿತ್ರ ಕರ್ನಾಟಕದಲ್ಲಿ ಬಿಡುಗಡೆ ಮಾಡದಂತೆ ಪ್ರತಿಭಟನೆ ನಡೆಸಿವೆ. 

Tags:    

Similar News