ವಿಶ್ವದಲ್ಲಿ ಅತಿ ವೇಗದ ಆರ್ಥಿಕತೆ | 2026ನೇ ಹಣಕಾಸು ವರ್ಷದಲ್ಲೂ ಭಾರತ ಮುಂಚೂಣಿ- ಆರ್‌ಬಿಐ ಆಶಯ

ತಗ್ಗಿದ ಸರಬರಾಜು ಸರಪಣಿಯ ಒತ್ತಡ, ಸರಕುಗಳ ಬೆಲೆಗಳಲ್ಲಿ ತಕ್ಕಮಟ್ಟಿನ ಇಳಿಕೆ, ಸಾಮಾನ್ಯಕ್ಕಿಂತ ಅಧಿಕ ಮುಂಗಾರು ಮಳೆಯಿಂದಾಗಿ ಕೃಷಿ ಉತ್ಪಾದನೆಯಲ್ಲಿ ಹೆಚ್ಚಳವು ಹಣದುಬ್ಬರದ ದೃಷ್ಟಿಕೋನದಲ್ಲಿ ಉತ್ತಮ ಶಕುನಗಳಾಗಿವೆ ಎಂದು ಆರ್.ಬಿ.ಐ ಆಶಾವಾದ ವ್ಯಕ್ತಪಡಿಸಿದೆ.;

Update: 2025-05-30 00:30 GMT

2025-26 ನೇ ಹಣಕಾಸು ವರ್ಷದಲ್ಲಿಯೂ ಭಾರತ ವಿಶ್ವದಲ್ಲಿ ಅತಿ ವೇಗದಲ್ಲಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ಶಕ್ತಿಯಾಗಿ ಉಳಿಯಲಿದೆ ಎಂದು ಆರ್‌ಬಿಐ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ಉತ್ತಮ ಹಣದುಬ್ಬರದ ದೃಷ್ಟಿಕೋನ ಹಾಗೂ ಜಿಡಿಪಿ ವಿಸ್ತರಣೆಯಲ್ಲಿನ ‘ಸೌಮ್ಯತೆ’ ಮುಂದಿನ ದಿನಗಳಲ್ಲಿ ಆರ್ಥಿಕ ಬೆಳವಣಿಗೆಗೆ ಹಣಕಾಸು ನೀತಿಯು ಪೂರಕವಾಗಿರಲಿದೆ ಎಂಬುದರ ಸೂಚನೆಯಾಗಿದೆ ಎಂದು ಆರ್‌ಬಿಐ ಗುರುವಾರ ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ ಹೇಳಿದೆ.

“...ಭಾರತದ ಅರ್ಥ ವ್ಯವಸ್ಥೆಯು ತನ್ನ ಸುಸ್ಥಿರ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು, ಸದೃಢವಾದ ಹಣಕಾಸು ವಲಯ ಹಾಗೂ ಸುಸ್ಥಿರ ಬೆಳವಣಿಗೆಯ ಬದ್ಧತೆಯನ್ನು ಉಳಿಸಿಕೊಂಡು 2025-26ರಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಉಳಿಯಲು ಎಲ್ಲ ರೀತಿಯಲ್ಲಿಯೂ ಸನ್ನದ್ಧವಾಗಿದೆ” ಎಂದು ಆಶಾವಾದ ವ್ಯಕ್ತಪಡಿಸಿದೆ. 

2025ರ ಮಾರ್ಚ್ 31ರ ಹೊತ್ತಿಗೆ ರಿಸರ್ವ್ ಬ್ಯಾಂಕಿನ ಬ್ಯಾಲೆನ್ಸ್ ಶೀಟ್ ಗಾತ್ರದಲ್ಲಿ ವರ್ಷದಿಂದ ವರ್ಷಕ್ಕೆ ಶೇ.8.20ರಷ್ಟು ಹೆಚ್ಚಳವಾಗಿರುವುದರಿಂದ ಕೇಂದ್ರ ಸರ್ಕಾರವು 2.69 ಲಕ್ಷ ಕೋಟಿ ರೂ. ಬಂಪರ್ ಡಿವಿಡೆಂಡ್ ಗಳಿಸಲು ಸಾಧ್ಯವಾಗಿರುವುದನ್ನು ವರದಿಯಲ್ಲಿ ಪುನರುಚ್ಛರಿಸಲಾಗಿದೆ.

ಇಷ್ಟೆಲ್ಲ ಇದ್ದಾಗ್ಯೂ ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿನ ಏರಿಳಿತ, ಭೌಗೋಳಿಕ ರಾಜಕೀಯದ ಉದ್ವಿಗ್ನ ಸ್ಥಿತಿ, ವ್ಯಾಪಾರ ವಿಘಟನೆಗಳು, ಪೂರೈಕೆ ಸರಪಳಿಯ ಅಡೆತಡೆಗಳು ಮತ್ತು ಹವಾಮಾನ ಸಂಬಂಧಿ ಅನಿಶ್ಚಿತತೆಗಳು ಬೆಳವಣಿಗೆಯ ದೃಷ್ಟಿಕೋನಕ್ಕೆ ಅಪಾಯವನ್ನುಂಟು ಮಾಡುವ ಸಂಗತಿಗಳಾಗಿವೆ ಎಂಬ ಎಚ್ಚರಿಕೆಯ ಮಾತುಗಳನ್ನೂ ವರದಿ ತಿಳಿಸಿದೆ. 

ಸರಬರಾಜು ಸರಪಳಿಯಲ್ಲಿನ ಒತ್ತಡ ತಗ್ಗಿರುವುದು, ಜಾಗತಿಕ ಸರಕು ಬೆಲೆಗಳ ಮೃದುತ್ವ ಹಾಗೂ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ನೈಋತ್ಯ ಮುಂಗಾರು ಮಳೆಯಾಗಿರುವುದರಿಂದ ಕೃಷಿ ಉತ್ಪಾದನೆಯು ಹೆಚ್ಚಾಗಿರುವುದು ಹಣದುಬ್ಬರದ ದೃಷ್ಟಿಯಿಂದ ಉತ್ತಮ ಸೂಚನೆಗಳಾಗಿವೆ ಎಂದು ವರದಿ ಬೊಟ್ಟುಮಾಡಿದೆ.

ಸುಂಕ ನೀತಿಗಳಲ್ಲಿನ ಬದಲಾವಣೆಗಳು ಹಣಕಾಸು ಮಾರುಕಟ್ಟೆಗಳಲ್ಲಿ ಸಾಂದರ್ಭಿಕವಾಗಿ ಏರಿಳಿತಗಳು ಉಂಟಾಗಬಹುದು ಎಂದೂ ಅದು ಹೇಳಿದೆ. “ಆಂತರಿಕ-ನೋಟದ ನೀತಿಗಳು ಮತ್ತು ಸುಂಕ ಯುದ್ಧಗಳ’ ಕಾರಣದಿಂದ ರಫ್ತು ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸುವ ಸಾಧ್ಯತೆಯೂ ಇದೆ ಎಂದು ತಿಳಿಸಲಾಗಿದೆ.

ಭಾರತವು ಸಹಿ ಮಾಡುತ್ತಿರುವ ಮತ್ತು ಮಾತುಕತೆ ನಡೆಸುತ್ತಿರುವ ವ್ಯಾಪಾರ ಒಪ್ಪಂದಗಳು ಪರಿಣಾಮವನ್ನು ಸೀಮಿತಗೊಳಿಸಲು ನೆರವಾಗುತ್ತವೆ ಎಂದು ಹೇಳುವ ಆರ್.ಬಿ.ಐ, ಸೇವಾ ರಫ್ತು ಮತ್ತು ಒಳಮುಖ ರವಾನೆ ಹೊಸ ಆರ್ಥಿಕ ವರ್ಷದಲ್ಲಿ ಚಾಲ್ತಿ ಖಾತೆ ಕೊರತೆಯನ್ನು ಸುಲಭವಾಗಿ ನಿಭಾಯಿಸಲು ಸಹಕಾರಿಯಾಗಲಿವೆ ಎಂದು ವಿವರಿಸಿದೆ.

ಆರ್‌ಬಿಐ ಸತತವಾಗಿ ಎರಡು ಬಾರಿ ತನ್ನ ಪ್ರಮುಖ ಬಡ್ಡಿ ದರಗಳನ್ನು ಕಡಿಮೆ ಮಾಡಿದೆ. ಈಗ, ತನ್ನ ಇತ್ತೀಚಿನ ವಾರ್ಷಿಕ ವರದಿಯಲ್ಲಿ, ಮುಂದಿನ ಒಂದು ವರ್ಷದ ಅವಧಿಗೆ ಒಟ್ಟಾರೆ ಹಣದುಬ್ಬರ ದರವು ಶೇ4 ರ ಗುರಿಯ ಸುತ್ತಲೂ ಇರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.

ಬಡ್ಡಿದರದ ಅಪಾಯದ ಚಲನಶೀಲ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕ್ ಗಳು ಟ್ರೇಡಿಂಗ್ ಮತ್ತು ಬ್ಯಾಂಕಿಂಗ್ ಬುಕ್ ಅಪಾಯಗಳೆರಡನ್ನೂ ಸೂಕ್ತ ರೀತಿಯಲ್ಲಿ ಸಂಭಾಳಿಸಬೇಕಾಗುತ್ತದೆ. ಅದರಲ್ಲೂ ವಿಶೇಷವಾಗಿ ನಿವ್ವಳ ಬಡ್ಡಿ ಮಾರ್ಜಿನ್ ಗಳ ಇಳಿಕೆಯ ದೃಷ್ಟಿಯಿಂದ ಇದು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂದು ತಿಳಿಸಿದೆ.

ತನ್ನ ಬ್ಯಾಲೆನ್ಸ್ ಶೀಟ್ ಕುರಿತು ತಿಳಿಸಿರುವ ವರದಿಯು ಆಸ್ತಿಗಳ ಬಾಬ್ತು ಆಗಿರುವ ಹೆಚ್ಚಳವು ಚಿನ್ನ, ಹೂಡಿಕೆಗಳು ಮತ್ತು ವಿದೇಶಿ ಹೂಡಿಕೆಗಳಲ್ಲಿ ಕ್ರಮವಾಗಿ ಶೇ.52.09, ಶೇ.14.32 ಮತ್ತು ಶೇ.1.70 ರಷ್ಟು ಹೆಚ್ಚಳದ ಕಾರಣದಿಂದ ಆಗಿದೆ ಎಂದು ವಿವರಿಸಿದೆ.

ವಾರ್ಷಿಕ ಆದಾಯವು ಶೇ.22.77ರ ಪ್ರಮಾಣದಲ್ಲಿ ಹೆಚ್ಚಿದ್ದರೆ ವೆಚ್ಚವು ಶೇ.7.76ರ ಪ್ರಮಾಣದಲ್ಲಿ ಹೆಚ್ಚಿದೆ.ಒಟ್ಟಾರೆ ಪ್ರಸಕ್ತ ಆರ್ಥಿಕ ವರ್ಷವು 2,68,590.07 ಕೋಟಿ ರೂಪಾಯಿಗಳ ಹೆಚ್ಚುವರಿಯೊಂದಿಗೆ ಕೊನೆಗೊಂಡಿದೆ. ಹಿಂದಿನ ವರ್ಷದ 2,10,873.99 ಕೋಟಿ ರೂಪಾಯಿಗೆ ಹೋಲಿಸಿದರೆ ಇದು ಶೇ.27.37ರಷ್ಟು ಹೆಚ್ಚಳವಾಗಿದೆ” ಎಂದು ಅದು ತಿಳಿಸಿದೆ.

Tags:    

Similar News