ನಾರಾಯಣ ಹೆಲ್ತ್‌ ನಿಂದ ಅದಿತಿ ಆರೋಗ್ಯ ಯೋಜನೆ: 10 ಸಾವಿರ ರೂ.ಗೆ 1 ಲಕ್ಷ ರೂ. ಆರೋಗ್ಯ ವಿಮೆ

ʻಅದಿತಿʼ ಪ್ರವೇಶ ಮಟ್ಟದ ಯೋಜನೆ. ಪ್ರೀಮಿಯಂ ವಾರ್ಷಿಕ 10,000 ರೂ.45 ವರ್ಷದ ಹಿರಿಯ ಇರುವ ನಾಲ್ಕು ಜನರ ಕುಟುಂಬಕ್ಕೆ ಅನ್ವಯಿಸಲಿದೆ. ಇನ್ನೂ ಎರಡು ಯೋಜನೆಗಳನ್ನು ಕಾಲಕ್ರಮೇಣ ಬಿಡುಗಡೆಗೊಳಿಸ ಲಾಗುತ್ತದೆ.

Update: 2024-07-02 10:43 GMT

ಡಾ. ದೇವಿ ಶೆಟ್ಟಿ ಅವರ ನಾರಾಯಣ ಹೆಲ್ತ್ ತನ್ನ ಮೊದಲ ಆರೋಗ್ಯ ವಿಮೆ ಉತ್ಪನ್ನವಾದ ಅದಿತಿಯನ್ನು ಪರಿಚಯಿಸಿದೆ. ಇದು ಗುಂಪಿಗೆ ಅನ್ವಯಿಸುವ ಮೂರು ಯೋಜನೆಗಳಲ್ಲಿ ಮೊದಲನೆಯದು.

ಅದಿತಿ ಪ್ರವೇಶ ಮಟ್ಟದ ಆರೋಗ್ಯ ವಿಮೆ ಯೋಜನೆಯಾಗಿದ್ದು, ಪ್ರೀಮಿಯಂ ವರ್ಷಕ್ಕೆ 10,000 ರೂ. 45 ವರ್ಷದ ಹಿರಿಯ ಇರುವ ನಾಲ್ಕು ಜನರ ಕುಟುಂಬಕ್ಕೆ ಅನ್ವಯಿಸಲಿದೆ.

ಅಂತರ ಕಡಿಮೆ ಮಾಡುವ ಪ್ರಯತ್ನ: ಸೋಮವಾರ (ಜುಲೈ 1) ಉತ್ಪನ್ನವನ್ನು ಬಿಡುಗಡೆ ಮಾಡಿದ ಡಾ ಶೆಟ್ಟಿ, ಮುಂದಿನ ದಿನಗಳಲ್ಲಿ ದೇಶದಲ್ಲಿ ಕಾರ್ಯತಂತ್ರದ ಬದಲಾವಣೆ ಆಗಲಿದೆ. ಗುಣಮಟ್ಟದ ಆರೋಗ್ಯ ರಕ್ಷಣೆಗೆ ಮೂಲಸೌಕರ್ಯ ಬಲವರ್ಧನೆಯಲ್ಲದೆ, ಮಲೇರಿಯ, ಟಿಬಿ ಮತ್ತು ಎಚ್‌ಐವಿ ಹಾಗೂ ಶಸ್ತ್ರಚಿಕಿತ್ಸೆಗೆ ಅವಕಾಶ ಹೆಚ್ಚಿಸಲಾಗುವುದು ಎಂದರು.

ದೇಶಕ್ಕೆ 70 ದಶಲಕ್ಷ ಶಸ್ತ್ರಚಿಕಿತ್ಸೆಗಳ ಅಗತ್ಯವಿದೆ; ಆದರೆ, 20 ದಶಲಕ್ಷ ಶಸ್ತ್ರಚಿಕಿತ್ಸೆ ಮಾತ್ರ ಮಾಡಲಾಗುತ್ತದೆ. ಜನರು ಸಿಸೇರಿಯನ್ ಹೆರಿಗೆ, ಲ್ಯಾಪರೊಟಮಿ ಮತ್ತು ಮುರಿತಕ್ಕೆ ಕೂಡ ಚಿಕಿತ್ಸೆ ಪಡೆಯಲು ಆಗುತ್ತಿಲ್ಲ ಎಂದು ಹೇಳಿದರು.

ಪೈಲಟ್ ಯೋಜನೆ: ಈ ಕೊರತೆಯನ್ನು ತುಂಬಲು ನಾರಾಯಣ ಹೆಲ್ತ್‌ ʻಅದಿತಿʼ ಉಪಕ್ರಮ ಆರಂಭಿಸಿದೆ. ಇದನ್ನು ಪ್ರಾಯೋಗಿಕವಾಗಿ ಮೈಸೂರು, ಮಂಡ್ಯ ಮತ್ತು ಚಾಮರಾಜನಗರದಲ್ಲಿ ಪರಿಚಯಿಸಲಾಗುತ್ತಿದ್ದು, ಒಂದೆರಡು ವಾರಗಳಲ್ಲಿ ಬೆಂಗಳೂರಿನಲ್ಲಿ ಪ್ರಾರಂಭಿಸುವ ನಿರೀಕ್ಷೆಯಿದೆ. 

ʻದೇಶಾದ್ಯಂತ ಆರಂಭಿಸುವ ಮೊದಲು ಇಲ್ಲಿ ಹೇಗೆ ಹೊರಹೊಮ್ಮುತ್ತದೆ ಎಂಬುದನ್ನು ನೋಡಬೇಕಿದೆ. ಅದಿತಿ ಮೂಲಭೂತ, ಪ್ರವೇಶ ಮಟ್ಟದ ಯೋಜನೆ. ನಾವು ಶೀಘ್ರದಲ್ಲೇ ಪರಿಚಯಿಸಲಿರುವ ಮೂರು ಯೋಜನೆಗಳಲ್ಲಿ ಮೊದಲನೆಯದು. ಅದಿತಿಯ ಪ್ರೀಮಿಯಂ ವರ್ಷಕ್ಕೆ 10,000 ರೂ. ಮತ್ತು 45 ವರ್ಷ ವಯಸ್ಸಿನ ಹಿರಿಯ ಇರುವ ನಾಲ್ವರ ಕುಟುಂಬವನ್ನು ಒಳಗೊಂಡಿರುತ್ತದೆ,ʼ ಎಂದು ನಾರಾಯಣ ಹೃದಯಾಲಯ ಲಿಮಿಟೆಡ್‌ನ ಉಪಾಧ್ಯಕ್ಷ ವೀರೇನ್ ಪ್ರಸಾದ್ ಶೆಟ್ಟಿ ಹೇಳಿದರು.

ಅಧಿಕ ಪ್ರೀಮಿಯಂ: ನಾರಾಯಣ ಹೆಲ್ತ್ ಇನ್ಶುರೆನ್ಸ್ ಲಿಮಿಟೆಡ್‌ನ ನಿರ್ದೇಶಕ ರವಿ ವಿಶ್ವನಾಥ್ ಪ್ರಕಾರ, ಅಸ್ತಿತ್ವದಲ್ಲಿರುವ ಯೋಜನೆ ಗಳಲ್ಲಿ ಸಹಅಸ್ವಸ್ಥತೆಯಿದ್ದರೆ ಮತ್ತು ರೋಗಿಗಳಿಗೆ ವಯಸ್ಸಾಗಿದ್ದರೆ ಪ್ರೀಮಿಯಂ ಬದಲಾಗುತ್ತದೆ. ʻವಿಮೆದಾರರ ಚಿಕಿತ್ಸೆಗೆ 5 ಲಕ್ಷ ರೂ. ಮತ್ತು ಶಸ್ತ್ರಚಿಕಿತ್ಸೆಗೆ 1 ಕೋಟಿ ರೂ. ವಿಮೆ ನೀಡಲಾಗುತ್ತದೆ. ಸಾಂಪ್ರದಾಯಿಕ ವಿಮಾ ಕಂಪನಿಗಳು ಇದಕ್ಕೆ 20,000 ರಿಂದ 48,000 ರೂ.ವಿಧಿಸುತ್ತವೆ,ʼ ಎಂದರು.

ʻಪ್ರತಿಯೊಬ್ಬರಿಗೂ ಆರೋಗ್ಯ ವಿಮೆ ನೀಡುವ ಆಲೋಚನೆ ಇದೆ. ವಿಮೆಯನ್ನು ಬಯಸುವ ಎಲ್ಲರಿಗೂ ಅವರ ವೈದ್ಯಕೀಯ ಪರಿಸ್ಥಿತಿ ಲೆಕ್ಕಿಸದೆ ಸೌಲಭ್ಯ ನೀಡಲಾಗುತ್ತದೆ,ʼ ಎಂದು ಡಾ.ಶೆಟ್ಟಿ ಹೇಳಿದರು.

ಅದಿತಿ ಕಾರ್ಯನಿರ್ವಹಣೆ ಹೇಗೆ?: ʻಅದಿತಿಯನ್ನು ಆರಂಭದಲ್ಲಿ ನಾರಾಯಣ ಹೆಲ್ತ್‌ ಗೆ ಸೀಮಿತಗೊಳಿಸಲಾಗುತ್ತದೆ. ಆದರೆ, ವಿಮೆದಾರರು ತುರ್ತು ಚಿಕಿತ್ಸೆಯನ್ನು ಎಲ್ಲಿ ಬೇಕಾದರೂ ಪಡೆಯಬಹುದು,ʼ ಎಂದು ವೀರೇನ್ ಪ್ರಸಾದ್ ಹೇಳಿದರು.

ʻಸಾಂಪ್ರದಾಯಿಕ ಯೋಜನೆಗೆ ಹೋಲಿಸಿದರೆ, ಅದಿತಿ ಸುಗಮ ಮತ್ತು ಪರಿಣಾಮಕಾರಿತ್ವಕ್ಕೆ ಆದ್ಯತೆ ನೀಡುತ್ತದೆ. ಆದ್ದರಿಂದ ಚಿಕಿತ್ಸೆಯನ್ನು ನಾರಾಯಣ ಹೆಲ್ತ್ ನೆಟ್‌ವರ್ಕ್‌ ನೀಡಲಾಗುತ್ತದೆ. ಅಲ್ಲಿ ಅನುಭವಿ ವೈದ್ಯರು ಮತ್ತು ಸುಧಾರಿತ ಸೌಲಭ್ಯಗಳು ಇವೆ. ಇದು ಆಡಳಿತಾತ್ಮಕ ಅಡೆತಡೆಗಳನ್ನು ಕಡಿಮೆ ಮಾಡುತ್ತದೆ. ಬೇರೆ ದೇಶಗಳಲ್ಲಿ ಇದನ್ನು ವಿಮೆ ಎನ್ನುವುದರ ಬದಲು ನಿರ್ವಹಿಸಿದ ಆರೈಕೆ ಎಂದು ಕರೆಯಲಾಗುತ್ತದೆ, ʼಎಂದು ಹೇಳಿದರು.

Tags:    

Similar News