ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್ ಜಾಮೀನು ನೀಡಿದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಆಕ್ಷೇಪ
ನಟ ದರ್ಶನ್ಗೆ ಹೈಕೋರ್ಟ್ ಜಾಮೀನು ನೀಡಿರುವ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ನ ನ್ಯಾ. ಜೆ.ಬಿ ಪರ್ದೀವಾಲಾ ಅವರ ಪೀಠವು ತನ್ನ ಅಭಿಪ್ರಾಯ ವ್ಯಕ್ತಪಡಿಸಿತು.;
ನಟ ದರ್ಶನ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದ ಆದೇಶದ ಕುರಿತು ಸುಪ್ರೀಂ ಕೋರ್ಟ್ ಗುರುವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಹೈಕೋರ್ಟ್ ತನ್ನ ವಿವೇಚನೆಯನ್ನು ಸೂಕ್ತ ರೀತಿಯಲ್ಲಿ ಬಳಸಿಲ್ಲ ಎಂದು ಸುಪ್ರೀಂ ಕೋರ್ಟ್ನ ನ್ಯಾ. ಜೆ.ಬಿ ಪರ್ದೀವಾಲಾ ಅವರ ಪೀಠವು ಮೌಖಿಕವಾಗಿ ಹೇಳಿಕೆ ನೀಡಿದೆ.
ರಾಜ್ಯ ಸರ್ಕಾರವು ದರ್ಶನ್ಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯ ವೇಳೆ ಈ ಅಭಿಪ್ರಾಯ ವ್ಯಕ್ತವಾಗಿದೆ. ನಟ ದರ್ಶನ್ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ನ್ಯಾಯಮೂರ್ತಿಗಳು, "ಈ ವಿಚಾರವಾಗಿ ನೀವು ಏನು ಹೇಳುತ್ತೀರಿ? ಪ್ರಾಮಾಣಿಕವಾಗಿ ಹೇಳಬೇಕೆಂದರೆ ಹೈಕೋರ್ಟ್ ಸೂಕ್ತ ರೀತಿಯಲ್ಲಿ ತನ್ನ ವಿವೇಚನೆಯನ್ನು ಬಳಸಿಲ್ಲ" ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಪಿಲ್ ಸಿಬಲ್, ಹೈಕೋರ್ಟ್ ಏನು ಮಾಡಿದೆ ಎನ್ನುವುದಕ್ಕಿಂತ, ದಯಮಾಡಿ ಸಾಕ್ಷ್ಯಗಳು, ಸೆಕ್ಷನ್ 161 ಮತ್ತು 164ರ ಅಡಿ ದಾಖಲಿಸಿರುವ ಹೇಳಿಕೆಗಳನ್ನು ಗಮನಿಸಿ ಎಂದು ನ್ಯಾಯಾಲಯದ ಗಮನ ಸೆಳೆಯಲು ಪ್ರಯತ್ನಿಸಿದರು.
ಈ ಹಂತದಲ್ಲಿ, ನ್ಯಾ. ಪರ್ದಿವಾಲಾ ಅವರು, "ನಾನು ನಿಮಗೆ ಏನೋ ತೋರಿಸಬೇಕೆಂದಿದ್ದೆ. ಆದರೆ, ಗುರುತು ಮಾಡಿಕೊಂಡಿದ್ದು ಗೋಚರಿಸುತ್ತಿಲ್ಲ. ನಿಮ್ಮ ವಾದವನ್ನು ಮಂಗಳವಾರ ಆಲಿಸಲಿದ್ದೇವೆ. ವಾದವನ್ನು ಸಿದ್ಧಪಡಿಸಿಕೊಂಡಿರಿ. ನಾವು ಏಕೆ ಮಧ್ಯಪ್ರವೇಶಿಸಬಾರದು ಎನ್ನುವ ನಿಮ್ಮ ವಾದವನ್ನು ಜುಲೈ 22ರಂದು ಆಲಿಸಲಿದ್ದೇವೆ," ಎಂದು ಹೇಳಿದರು.
ಸಿಬಲ್ ಇದಕ್ಕೆ ಸಹಮತ ಸೂಚಿಸಿ, ''ನ್ಯಾಯಮೂರ್ತಿಗಳು ಏನೋ ಹೇಳಲು ಗುರುತು ಮಾಡಿಕೊಂಡಿದ್ದಾಗಿ ಹೇಳಿದಿರಿ. ಏನದು?" ಎಂದು ಕೇಳಿದರು. ಆಗ ನಗುತ್ತಲೇ ನ್ಯಾಯಮೂರ್ತಿಗಳು, "ಆರೋಪಿಗಳಿಗೆ ಜಾಮೀನು ನೀಡಲು ನ್ಯಾಯಾಲಯವು ಹೇಗೆಲ್ಲಾ ಶತಾಯಗತಾಯ ಪ್ರಯತ್ನಿಸಿದೆ ಎನ್ನುವ ವಿಚಾರ ಅದು" ಎಂದು ಹೇಳಿದರು.
ಅಂತಿಮವಾಗಿ, ಸುಪ್ರೀಂ ಕೋರ್ಟ್ ಪೀಠವು ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 22 ಕ್ಕೆ ಮುಂದೂಡಿ ಆದೇಶ ಹೊರಡಿಸಿತು.
ಹೈಕೋರ್ಟ್ ಅಭಿಪ್ರಾಯ ಏನಿತ್ತು?
ನಟ ದರ್ಶನ್ ತೂಗುದೀಪ ಸೇರಿದಂತೆ ಆರು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠವು ಜಾಮೀನು ಅರ್ಜಿಗಳ ವಿಚಾರಣೆ ನಡೆಸಿ ಈ ಆದೇಶ ನೀಡಿತ್ತು.
ನ್ಯಾಯಾಲಯವು ಆರೋಪಿಗಳ ಬಂಧನದ ಸಮಯದಲ್ಲಿನ ವಿಳಂಬ ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸುವಲ್ಲಿ ಆದ ವಿಳಂಬವನ್ನು ಗಂಭೀರವಾಗಿ ಪರಿಗಣಿಸಿತ್ತು. ಆರೋಪಿಗಳನ್ನು ಬಂಧಿಸಿದ ತಕ್ಷಣವೇ ಅವರಿಗೆ ಬಂಧನದ ಕಾರಣಗಳನ್ನು ತಿಳಿಸದೇ ವಿಳಂಬ ಮಾಡಲಾಗಿದೆ ಎಂದು ನ್ಯಾಯಾಲಯ ಹೇಳಿತ್ತು. ಪ್ರಭೀರ್ ಪುರಕಾಯಸ್ಥ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ ತೀರ್ಪನ್ನು ಉಲ್ಲೇಖಿಸಿ, ಬಂಧನದ ವಿಷಯಗಳಲ್ಲಿ ಪ್ರತಿಯೊಬ್ಬ ಆರೋಪಿಗೆ ಅವರ ವಿಶೇಷ ಹಿನ್ನೆಲೆಗಳ ಆಧಾರದ ಮೇಲೆ ಬಂಧನಕ್ಕೆ ಕಾರಣ ನೀಡಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಪೊಲೀಸರು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸುವಲ್ಲಿ ವಿಳಂಬ ಮಾಡಿದ್ದು, ಇದು ಆರೋಪಿಗಳಿಗೆ ಹಾನಿಕಾರಕ ಎಂದು ನ್ಯಾಯಾಲಯ ಹೇಳಿತ್ತು.
ದರ್ಶನ್ ಮತ್ತು ಇತರ ಆರೋಪಿಗಳಿಗೆ ಯಾವುದೇ ಗಂಭೀರ ಅಪರಾಧ ಇತಿಹಾಸವಿಲ್ಲ ಎಂಬ ಅಂಶವನ್ನೂ ನ್ಯಾಯಮೂರ್ತಿಗಳು ಜಾಮೀನು ನೀಡಲು ಪರಿಗಣಿಸಿದ್ದರು. ಜಾಮೀನು ಪಡೆದಿರುವ ಆರೋಪಿಗಳು ತಲಾ 1 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು ಇಬ್ಬರು ಶ್ಯೂರಿಟಿಗಳನ್ನು ನೀಡಿ ಜಾಮೀನು ಕೊಟ್ಟಿತ್ತು.