
ಕೊಲೆಯಾದ ರೇಣುಕಸ್ವಾಮಿ ಹಾಗೂ ಆರೋಪಿ ನಟ ದರ್ಶನ್
murder case: ರೇಣುಕಾಸ್ವಾಮಿ ಕೊಲೆ ಪ್ರಕರಣ, ಸಂದೇಶ ಕಳಿಸಿದ್ದು ದರ್ಶನ್ ಪತ್ನಿಗಾ: ಸುಪ್ರೀಂ
ಯಾವಾಗ ಪಂಚನಾಮೆ ಮಾಡಲಾಯಿತು ಹಾಗೂ ಸಾಕ್ಷಿಗಳು ಯಾರು ಎಂಬುದರ ಕುರಿತು ಮಾಹಿತಿ ನೀಡಬೇಕು ಎಂದು ರಾಜ್ಯ ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ಸಿದ್ಧಾರ್ಥ ಲೂತ್ರಾ ಅವರಿಗೆ ಸೂಚನೆ
ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಇತರೆ ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು ಪ್ರಶ್ನಿಸಿ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್ ರೇಣುಕಾಸ್ವಾಮಿ ಸಂದೇಶ ಕಳುಹಿಸಿದ್ದು ದರ್ಶನ್ ಪತ್ನಿಗಾ ಎಂದು ಪ್ರಶ್ನಿಸಿದೆ.
ಮಂಗಳವಾರ (ಏಪ್ರಿಲ್ 22) ರಂದು ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲ ಹಾಗೂ ಆರ್. ಮಹದೇವನ್ ಅವರಿದ್ದ ಪೀಠವು ರೇಣುಕಾಸ್ವಾಮಿ ಕೊಲೆಯಾಗಿ ಎರಡು ದಿನಗಳ ನಂತರ ದರ್ಶನ್ ಅವರನ್ನು ಯಾವ ಸಾಕ್ಷ್ಯಿಗಳ ಆಧಾರದಲ್ಲಿ ಬಂಧಿಸಲಾಗಿದೆ, ಯಾವಾಗ ಪಂಚನಾಮೆ ಮಾಡಲಾಯಿತು ಹಾಗೂ ಸಾಕ್ಷಿಗಳು ಯಾರು ಎಂಬುದರ ಕುರಿತು ಮಾಹಿತಿ ನೀಡಬೇಕು ಎಂದು ರಾಜ್ಯ ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ಸಿದ್ಧಾರ್ಥ ಲೂತ್ರಾ ಅವರಿಗೆ ಸೂಚಿಸಿತು.
ಶಸ್ತ್ರಚಿಕಿತ್ಸೆಗೆಂದು ಜಾಮೀನು ಪಡೆದು ಆರೋಪಿ ದರ್ಶನ್ ಸಾಕ್ಷಿಗಳ ಜೊತೆ ಸಾರ್ವಜನಿಕವಾಗಿ ಒಡಾಡುತ್ತಿದ್ದಾರೆ. ಇದು ಸಾಕ್ಷಿಗಳು ಹಾಗೂ ತನಿಖೆಯ ಮೇಲೆ ಪ್ರಭಾವ ಬೀರಲಿದ್ದು ದರ್ಶನ್ ಸೇರಿದಂತೆ ಏಳು ಆರೋಪಿಗಳ ಜಾಮೀನು ರದ್ದುಗೊಳಿಸಬೇಕು ಎಂದು ನ್ಯಾಯಾಲಯದ ಗಮನಕ್ಕೆ ತರುತ್ತಿದ್ದಂತೆ. ನ್ಯಾಯಪೀಠ ದರ್ಶನ್ ರಾಜಕಾರಣಿಯೇ ಎಂದು ಪ್ರಶ್ನಿಸಿತು. ಆಗ ಸರ್ಕಾರದ ಪರ ವಕೀಲ ಸಿದ್ಧಾರ್ಥ ಲೂತ್ರಾ ಅವರೊಬ್ಬ ಕರ್ನಾಟಕದ ಖ್ಯಾತ ನಟ ಎಂದು ಉತ್ತರಿಸದರು.
ದರ್ಶನ್ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಯಾವುದೇ ಸಾಕ್ಷಾಧಾರಗಳಿಲ್ಲದೆ ದರ್ಶನ್ ಅವರನ್ನು ಬಂಧಿಸಲಾಗಿದೆ, ಮೃತ ದೇಹ ಪತ್ತೆಯಾದ ಒಂಬತ್ತು ದಿನಗಳ ಬಳಿಕ ಪ್ರಕರಣದ ಸಾಕ್ಷಿಗಳ ಹೇಳಿಕೆ ಪಡೆಯಲಾಗಿದೆ. ಇದು ಅನುಮಾನಕ್ಕೆ ಕಾರಣವಾಗಿದೆ ಜತೆಗೆ ಪ್ರಕರಣ ನಡೆದ ಸ್ಥಳದ ಮಾಲಿಕ ದರ್ಶನ್ ಅಲ್ಲ. ಅವರಿಗೂ ಸ್ಥಳಕ್ಕೂ ಸಂಬಂಧವಿಲ್ಲ. ಕಾನೂನು ಬಾಹಿರವಾಗಿ ಆರೋಪಿಗಳನ್ನು ಬಂದಿಸಲಾಗಿದೆ ಎಂದರು.
ದರ್ಶನ್ಗೆ ಮದುವೆಯಾಗಿದೆಯೇ. ಅಶ್ಲೀಲ ಸಂದೇಶ ಕಳಿಸಿದ್ದು ಆತನ ಪತ್ನಿಗಾ ಎಂಬ ಪ್ರಶ್ನೆಗೆ ದರ್ಶನ್ ಮದುವೆಯಾಗಿದ್ದು ಸಂದೇಶ ಕಳುಹಿಸಿರುವುದು ಅವರ ಪ್ರೇಯಸಿಗೆ ಎಂದು ಸಿಂಘ್ವಿ ಉತ್ತರಿಸಿದರು. ವಿಚಾರಣೆಯನ್ನು ಮೇ 14ಕ್ಕೆ ಮುಂದೂಡಿ ನ್ಯಾಯಪೀಠ ಆದೇಶಿಸಿತು.