ಹನಿಮೂನ್ ಹತ್ಯೆಯ ಮತ್ತೊಂದು ಕರಾಳ ಯೋಜನೆ ಬಯಲು: ಸೋನಮ್ ಪಾರು ಮಾಡಲು ಬೇರೊಬ್ಬ ಮಹಿಳೆಯ ದೇಹ ಸುಡಲು ಸಂಚು!
ನವವಿವಾಹಿತ ರಾಜಾ ರಘುವಂಶಿ (29) ಮತ್ತು ಸೋನಮ್ (24) ಹನಿಮೂನ್ಗಾಗಿ ಮೇಘಾಲಯದ ಸೋಹ್ರಾಕ್ಕೆ ಬಂದಿದ್ದರು. ಮೇ 23ರಂದು ಇಬ್ಬರೂ ನಾಪತ್ತೆಯಾಗಿದ್ದರು. ಅಲ್ಲಿಂದ ಶುರುವಾರ ಕುತೂಹಲ ಆರೋಪಿಗಳ ಬಂಧನದ ಬಳಿಕವೂ ಮುಂದುವರಿದಿದೆ.;
ಮೇಘಾಲಯದ ಸೋಹ್ರಾದಲ್ಲಿ ನಡೆದ ಇಂದೋರ್ ಮೂಲದ ಉದ್ಯಮಿ ರಾಜಾ ರಘುವಂಶಿ ಹತ್ಯಾಕಾಂಡದ ತನಿಖೆ ಬೆನ್ನಲ್ಲೇ ಒಂದು ಭೀಕರ ಮತ್ತು ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ. ಕೊಲೆಯಾದ ರಾಜಾನ ಪತ್ನಿ ಸೋನಮ್ಳನ್ನು ಅಪರಾಧದಿಂದ ರಕ್ಷಿಸಲು, ಆಕೆಯ ಗೆಳೆಯ ರಾಜ್ ಕುಶ್ವಾಹ ಮತ್ತೊಬ್ಬ ಮಹಿಳೆಯನ್ನು ಕೊಂದು, ಆಕೆಯ ದೇಹವನ್ನು ಸುಟ್ಟು, ಅದು ಸೋನಮ್ಳ ದೇಹ ಎಂದು ಬಿಂಬಿಸಲು ಭೀಕರ ಸಂಚು ರೂಪಿಸಿದ್ದ ಎಂಬುದು ಬಯಲಾಗಿದೆ.
ಆದರೆ, ಭೀಕರ ಯೋಜನೆ ಕೊನೆಗೂ ವಿಫಲವಾಗಿದೆ ಎಂದು ಮೇಘಾಲಯ ಪೊಲೀಸರು ತಿಳಿಸಿದ್ದಾರೆ. ಈ ಇಡೀ ಕೊಲೆ ಸಂಚಿನ ಮಾಸ್ಟರ್ಮೈಂಡ್ ರಾಜ್ ಕುಶ್ವಾಹನೇ ಆಗಿದ್ದು, ಸೋನಮ್ ಕೂಡ ಇದರಲ್ಲಿ ಸಹ-ಸಂಚುಕೋರಳು ಎಂದು ಪೊಲೀಸರು ದೃಢಪಡಿಸಿದ್ದಾರೆ.
ಪೊಲೀಸ್ ಸೂಪರಿಂಟೆಂಡೆಂಟ್ ವಿವೇಕ್ ಸೈಯಂ ನೀಡಿರುವ ಮಾಹಿತಿ ಪ್ರಕಾರ, ಇಂದೋರ್ನಲ್ಲಿ ರಾಜಾ ರಘುವಂಶಿ ಮತ್ತು ಸೋನಮ್ರ ಮದುವೆಗೆ ಮುನ್ನವೇ ಅಂದರೆ ಮೇ 11ಕ್ಕೂ ಮುನ್ನವೇ ರಾಜಾನ ಕೊಲೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ರಾಜ್ ಕುಶ್ವಾಹ ಈ ಸಂಚಿನ ಮುಖ್ಯ ಸೂತ್ರಧಾರನಾಗಿದ್ದ. ಸೋನಮ್ ತನ್ನ ಪತಿಯ ಹತ್ಯೆಗೆ ಸಹಮತ ಕೊಟ್ಟಿದ್ದಳು.
ಕಂದಕದಲ್ಲಿ ಸಿಕ್ಕ ದೇಹ: ಕರಾಳ ಯೋಜನೆಗಳ ಅನಾವರಣ
ನವವಿವಾಹಿತ ರಾಜಾ ರಘುವಂಶಿ (29) ಮತ್ತು ಸೋನಮ್ (24) ಹನಿಮೂನ್ಗಾಗಿ ಮೇಘಾಲಯದ ಸೋಹ್ರಾಕ್ಕೆ ಬಂದಿದ್ದರು. ಮೇ 23ರಂದು ಇಬ್ಬರೂ ನಾಪತ್ತೆಯಾಗಿದ್ದರು. . ಆದರೆ, ಆತಂಕಕಾರಿ ಸತ್ಯವೆಂದರೆ, ಜೂನ್ 2ರಂದು ರಾಜಾನ ದೇಹವು ವೈಸಾವ್ಡಾಂಗ್ ಜಲಪಾತದ ಬಳಿಯ ಕಂದಕದಲ್ಲಿ ಪತ್ತೆಯಾಯಿತು. ಸೋನಮ್ಗಾಗಿ ಹುಡುಕಾಟ ಮುಂದುವರಿದಿತ್ತು.
ಸೋನಮ್ಳನ್ನು ಈ ಕೊಲೆಯಿಂದ ಪಾರು ಮಾಡಲು ಆರೋಪಿಗಳು ಎರಡು ಭೀಕರ ಪರ್ಯಾಯ ಯೋಜನೆಗಳನ್ನು ರೂಪಿಸಿದ್ದರು. ಸೋನಮ್ ಜಲಪಾತದಲ್ಲಿ ಕೊಚ್ಚಿಹೋದಳೆಂದು ಕಥೆ ಕಟ್ಟುವುದು. ಕ್ರೂರವಾಗಿ, ಬೇರೊಬ್ಬ ಮಹಿಳೆಯನ್ನು ಹತ್ಯೆ ಮಾಡಿ, ಆಕೆಯ ದೇಹವನ್ನು ಸುಟ್ಟುಹಾಕಿ, ಅದು ಸೋನಮ್ಳ ದೇಹ ಎಂದು ಬಿಂಬಿಸುವುದು. ಈ ಎರಡೂ ಯೋಜನೆಗಳು ಪೊಲೀಸರ ತೀವ್ರ ತನಿಖೆ ಮತ್ತು ಭಗವಂತನ ಇಚ್ಛೆಯಿಂದ ಕಾರ್ಯರೂಪಕ್ಕೆ ಬರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವಿಫಲವಾದ ಪಿತೂರಿ
ಆರಂಭದಲ್ಲಿ ನವವಿವಾಹಿತರು ಅಸ್ಸಾಂಗೆ ಆಗಮಿಸುವ ಮೊದಲೇ ಗುವಾಹಟಿಯಲ್ಲಿ ರಾಜಾನನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು. ಆದರೆ, ಆ ಪ್ರಯತ್ನ ವಿಫಲವಾಯಿತು. ನಂತರ, ಸೋನಮ್ ಶಿಲ್ಲಾಂಗ್ ಮತ್ತು ಸೋಹ್ರಾಕ್ಕೆ ಭೇಟಿ ನೀಡುವ ಯೋಜನೆ ರೂಪಿಸಿದಳು. ನಾಂಗ್ರಿಯಾಟ್ನಲ್ಲಿ ಎಲ್ಲರೂ ಭೇಟಿಯಾದ ನಂತರ, ಮೇ 23ರಂದು ಮಧ್ಯಾಹ್ನ 2.00 ರಿಂದ 2.18 ರ ನಡುವೆ, ರಾಜಾ, ಸೋನಮ್ ಮತ್ತು ಇತರ ಮೂವರು ವೈಸಾವ್ಡಾಂಗ್ ಜಲಪಾತಕ್ಕೆ ತೆರಳಿದರು. ಅಲ್ಲಿಯೇ, ಮೂವರು ಸೇರಿಕೊಂಡು ರಾಜಾನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದರು. ನಂತರ, ಅವನ ದೇಹವನ್ನು ಕಂದರಕ್ಕೆ ಎಸೆಯಲಾಯಿತು. ರಾಜಾನ ದೇಹ ಒಂದೆರಡು ತಿಂಗಳ ಕಾಲ ಪತ್ತೆಯಾಗುವುದಿಲ್ಲ, ಅಲ್ಲಿಯವರೆಗೆ ತಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬಹುದು ಎಂದೇ ಸೋನಮ್ ಭಾವಿಸಿದ್ದಳು.
ಆದರೆ, ಆರೋಪಿಗಳ ಎಲ್ಲಾ ಕರಾಳ ಯೋಜನೆಗಳೂ ವಿಫಲವಾಗಿವೆ. ಈಗ, ರಾಜಾ ರಘುವಂಶಿ ಹತ್ಯೆಗೆ ಕಾರಣರಾದ ಎಲ್ಲ ಆರೋಪಿಗಳು ಪೊಲೀಸರ ಬಲೆಗೆ ಬಿದ್ದು, ಕಂಬಿ ಎಣಿಸುವಂತಾಗಿದೆ. ಈ ಪ್ರಕರಣವು ಹನಿಮೂನ್ನ ಹೆಸರಿನಲ್ಲಿ ನಡೆದ ಭೀಕರ ಪಿತೂರಿ ಮತ್ತು ದಾಂಪತ್ಯ ದ್ರೋಹದ ಕರಾಳ ಮುಖವನ್ನು ಅನಾವರಣಗೊಳಿಸಿದೆ.