Pahalgam Terror Attack | ಎಲ್‌ಒಸಿಯಲ್ಲಿ ಭದ್ರತೆ: ಪರಿಶೀಲನೆಗೆ ಉಧಂಪುರಕ್ಕೆ ಆಗಮಿಸಿದ ಸೇನಾ ಮುಖ್ಯಸ್ಥ

ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಲಷ್ಕರ್‌ ಎ ತಯ್ಬಾ ಕಮಾಂಡರ್‌ ಹತ್ಯೆ ಮಾಡಿದ್ದು, ಇಬ್ಬರು ಭದ್ರತಾ ಪಡೆಗಳ ಸಿಬ್ಬಂದಿ ಗಾಯಗೊಂಡಿದ್ದಾರೆ.;

Update: 2025-04-25 04:15 GMT
ಶುಕ್ರವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರಿಗೆ ಭದ್ರತಾ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಲಾಯಿತು

ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಶುಕ್ರವಾರ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಭದ್ರತಾ ಪಡೆಗಳು ಲಷ್ಕರ್‌-ಎ-ತಯ್ಬಾ ಸಂಘಟನೆಯ ಕಮಾಂಡರ್‌ ಅಲ್ತಾಫ್‌ ಲಲ್ಲಿಯನ್ನು ಹೊಡೆದುರುಳಿಸಿವೆ ಎಂದು ಮೂಲಗಳು ತಿಳಿಸಿವೆ.  ಗುಂಡಿನ ಚಕಮಕಿಯಲ್ಲಿ ಇಬ್ಬರು ಭಾರತೀಯ ಭದ್ರತಾ ಪಡೆಯ ಸಿಬ್ಬಂದಿ ಗಾಯಗೊಂಡಿದ್ದಾರೆ.

ಮಂಗಳವಾರ ಕಾಶ್ಮೀರದಲ್ಲಿ ಪಾಕಿಸ್ತಾನಿ ಪ್ರಚೋದಿತ ಭಯೋತ್ಪಾದಕರು 26 ಪ್ರವಾಸಿಗರನ್ನು ಗುಂಡಿನ ದಾಳಿಯಲ್ಲಿ ಕಗ್ಗೊಲೆ ಮಾಡಿದ ಬಳಿಕ ಭಾರತ ಸರ್ಕಾರ ಪಾಕಿಸ್ತಾನ ವಿರುದ್ಧ ಕಠಿಣ ಕ್ರಮಗಳಿಗೆ ಮುಂದಾಗಿದೆ.

ಆದರೆ ಶುಕ್ರವಾರ ನಸುಕಿನ ಜಾವ, ಬಂಡಿಪೋರಾ ಜಿಲ್ಲೆಯ ಕುಲ್ನಾರ್ ಬಾಜಿಪೋರಾದಲ್ಲಿ ಉಗ್ರರ ಉಪಸ್ಥಿತಿಯ ಬಗ್ಗೆ ಮಾಹಿತಿ ಬಂದ ನಂತರ ಭಾರತದ ಭದ್ರತಾ ಪಡೆಗಳು ಸುತ್ತುವರಿದು ಶೋಧ ಕಾರ್ಯಾಚರಣೆ ಪ್ರಾರಂಭಿಸಿದವು. ಅಡಗಿಕೊಂಡಿದ್ದ ಉಗ್ರರು ಭದ್ರತಾ ಪಡೆಗಳ ಶಿಬಿರಗಳ ಮೇಲೆ ಗುಂಡು ಹಾರಿಸಿದ ನಂತರ ಶೋಧ ಕಾರ್ಯಾಚರಣೆಯು ಎನ್‌ಕೌಂಟರ್ ಆಗಿ ಬದಲಾಯಿತು ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.

ಭಯೋತ್ಪಾದಕರ ಗುಂಡಿನ ದಾಳಿಗೆ ಪ್ರತ್ಯುತ್ತರ ನೀಡಿದ ಭದ್ರತಾ ಪಡೆಗಳು ಎಲ್‌ಇಟಿ ಕಮಾಂಡರ್‌ನನ್ನು ಹತ್ಯೆ ಮಾಡಿವೆ.  ಆದರೆ, ಈ ಕುರಿತು ಭಾರತೀಯ ಸೇನೆಯ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ. 

ಭಾರತದ ಕಠಿಣ ಕ್ರಮಗಳೇನು?

ಭಾರತವು ಸಿಂಧೂ ಜಲ ಒಪ್ಪಂದವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸುವ ನಿರ್ಧಾರವನ್ನು ಪಾಕಿಸ್ತಾನಕ್ಕೆ ತಿಳಿಸಿದೆ.  ಒಪ್ಪಂದದ ನಿಯಮಗಳನ್ನು ಪಾಕಿಸ್ತಾನ ಉಲ್ಲಂಘಿಸಿರುವುದೇ ಇದಕ್ಕೆ ಕಾರಣವಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು 26  ಪ್ರವಾಸಿಗರನ್ನು ಕೊಂದ ಮಾರಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಕಠಿಣ ಕ್ರಮಕ್ಕೆ ಮುಂದಾಗಿದೆ.

ಜಮ್ಮು ಮತ್ತು ಕಾಶ್ಮೀರವನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸಿದ ನಿರಂತರ ಗಡಿಯಾಚೆಗಿನ ಭಯೋತ್ಪಾದನೆಯು ಸಿಂಧೂ ಜಲ ಒಪ್ಪಂದದ ಅಡಿಯಲ್ಲಿ ಭಾರತದ ಹಕ್ಕುಗಳಿಗೆ ಅಡ್ಡಿಯಾಗುತ್ತದೆ ಎಂದು ಭಾರತದ ಜಲಸಂಪನ್ಮೂಲ ಕಾರ್ಯದರ್ಶಿ ದೇಬಶ್ರೀ ಮುಖರ್ಜಿ ಅವರು ಪಾಕಿಸ್ತಾನದ ಪ್ರತಿರೂಪ ಸೈಯದ್ ಅಲಿ ಮುರ್ತಾಜಾ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

"ಒಪ್ಪಂದವನ್ನು ಗೌರವಿಸುವ ಬಾಧ್ಯತೆಯು ಒಪ್ಪಂದದ  ಮೂಲಭೂತ ಅಂಶವಾಗಿದೆ. ಆದಾಗ್ಯೂ, ಬದಲಿಗೆ ನಾವು ನೋಡಿರುವುದು ಭಾರತೀಯ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರವನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸುತ್ತಿರುವ ನಿರಂತರ ಗಡಿಯಾಚೆಗಿನ ಭಯೋತ್ಪಾದನೆಯಾಗಿದೆ" ಎಂದು ಪತ್ರದಲ್ಲಿ ಹೇಳಲಾಗಿದೆ.

ಗುರುವಾರ, ಕೇಂದ್ರವು ಸರ್ವಪಕ್ಷ ಸಭೆಯನ್ನು ಸಹ ಕರೆದು, ದಾಳಿಯ ಬಗ್ಗೆ ನಾಯಕರಿಗೆ ವಿವರಿಸಿತು ಮತ್ತು ಅವರ ಅಭಿಪ್ರಾಯಗಳನ್ನು ಕೇಳಿತು.

ಪಾಕಿಸ್ತಾನಿ ಪ್ರಜೆಗಳ ವೀಸಾ ರದ್ದು

ಏಪ್ರಿಲ್ 27 ರಿಂದ ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾದ ಎಲ್ಲಾ ವೀಸಾಗಳನ್ನು ರದ್ದುಗೊಳಿಸುವುದಾಗಿ ಭಾರತ ಗುರುವಾರ ಘೋಷಿಸಿದೆ ಮತ್ತು ಪಾಕಿಸ್ತಾನದಲ್ಲಿ ವಾಸಿಸುವ ಭಾರತೀಯ ಪ್ರಜೆಗಳು ಆದಷ್ಟು ಬೇಗ ಮನೆಗೆ ಮರಳುವಂತೆ ಸೂಚಿಸಿದೆ. ವೀಸಾ ರದ್ದತಿಯು ಈಗಾಗಲೇ ಹಿಂದೂ ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾದ ದೀರ್ಘಾವಧಿಯ ವೀಸಾಗಳಿಗೆ ಅನ್ವಯಿಸುವುದಿಲ್ಲ, ಅದು "ಮಾನ್ಯವಾಗಿ ಉಳಿದಿದೆ" ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಇಸ್ಲಾಮಾಬಾದ್ ವಿರುದ್ಧದ  ಕ್ರಮಗಳ ಭಾಗವಾಗಿ ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ನವದೆಹಲಿ ಘೋಷಿಸಿದೆ. 

ಪ್ರಧಾನಿ ಮೋದಿಯವರ ಕಠಿಣ ಸಂದೇಶ

ಭಯೋತ್ಪಾದನಾ ದಾಳಿಯ ಬಗ್ಗೆ ರಾಷ್ಟ್ರವ್ಯಾಪಿ ಆಕ್ರೋಶದ ನಡುವೆ, ಪ್ರಧಾನಿ ನರೇಂದ್ರ ಮೋದಿ ಗುರುವಾರ ಪಹಲ್ಗಾಮ್‌ನ ಹಂತಕರನ್ನು  ಎಲ್ಲಿದ್ದರೂ ದಮನಿಸುವುದಾಗಿ  ಹೇಳಿದ್ದರು. ಬಿಹಾರದ ಮಧುಬನಿಯಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಮೋದಿ, ದಾಳಿಯ ಹಿಂದಿರುವ ಭಯೋತ್ಪಾದಕರನ್ನು ಶಿಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.  ಮತ್ತು ಭಯೋತ್ಪಾದನೆಯಿಂದ ಭಾರತದ ಚೈತನ್ಯ ಎಂದಿಗೂ ಮುರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Live Updates
2025-04-25 08:51 GMT

ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿ ಸೇನಾ ಕಾರ್ಯಾಚರಣೆಯಲ್ಲಿ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ದಾ(ಎಲ್‌ಇಟಿ) ಪ್ರಮುಖ ಕಮಾಂಡರ್ ಅಲ್ತಾಫ್ ಲಲ್ಲಿ ಎಂಬಾತನನ್ನು ಭಾರತೀಯ ಸೇನೆ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದೆ. ಬಂಡಿಪೋರಾ ಜಿಲ್ಲೆಯ ಕುಲ್ತಾರ್ ಬಾಜಿಪುರ ಪ್ರದೇಶದಲ್ಲಿ ಉಗ್ರರು ಇರುವ ಬಗ್ಗೆ ಮಾಹಿತಿ ಪಡೆದ ನಂತರ ಭದ್ರತಾ ಪಡೆಗಳು ಸುತ್ತುವರಿದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2025-04-25 08:12 GMT

ಪಹಲ್ಗಾಮ್ ಭಯೋತ್ಪಾದಕ ದಾಳಿ: ದೆಹಲಿ ಯುವ ಕಾಂಗ್ರೆಸ್ ವತಿಯಿಂದ ತಿರಂಗ ಯಾತ್ರೆ


2025-04-25 07:56 GMT

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಕಾಶ್ಮೀರಕ್ಕೆ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಗಾಯಗೊಂಡವರನ್ನು ಭೇಟಿ ಮಾಡಲು ಆಗಮಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.

ಏಪ್ರಿಲ್ 22 ರಂದು ನಡೆದ ದಾಳಿಯಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಲು ರಾಹುಲ್ ಗಾಂಧಿ ಇಲ್ಲಿನ ಬಾದಾಮಿಬಾಗ್ ಕಂಟೋನ್ಮೆಂಟ್‌ನಲ್ಲಿರುವ ಸೇನಾ ಮೂಲ ಆಸ್ಪತ್ರೆಗೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಅವರು ಹೇಳಿದರು. ಈ ದಾಳಿಯಲ್ಲಿ ಒಟ್ಟು ೨೮ ಜನರು ಸಾವನ್ನಪ್ಪಿದ್ದರು. ಅವರೆಲ್ಲರೂ ಪ್ರವಾಸಿಗರಾಗಿದ್ದರು. 

ಪಕ್ಷ ಮತ್ತು ವ್ಯಾಪಾರ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳು ಸೇರಿದಂತೆ ವಿವಿಧ ನಿಯೋಗಗಳನ್ನು ರಾಹುಲ್ ಗಾಂಧಿ ಭೇಟಿ ಮಾಡಲಿದ್ದಾರೆ ಎಂದು ನಾಯಕರು ಹೇಳಿದರು. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರೊಂದಿಗೆ ಎಲ್‌ಒಪಿ ವೈಯಕ್ತಿಕ ಸಭೆ ನಡೆಸುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

2025-04-25 04:51 GMT

ಪಹಲ್ಗಾಮ್ ದಾಳಿ; ಭಾರತದೊಂದಿಗೆ ನಿಲ್ಲುತ್ತೇವೆ ಎಂದು ಹೇಳಿದೆ ಅಮೆರಿಕದ ವಿದೇಶಾಂಗ ಇಲಾಖೆ

ಉಗ್ರ ದಾಳಿಗೆ ಸಂಬಂಧಿಸಿದ ವಿಚಾರದಲ್ಲಿ ಅಮೆರಿಕವು ಭಾರತದೊಂದಿಗೆ ನಿಲ್ಲುತ್ತದೆ ಮತ್ತು ಎಲ್ಲಾ ಭಯೋತ್ಪಾದಕ ಕೃತ್ಯಗಳನ್ನು ಬಲವಾಗಿ ಖಂಡಿಸುತ್ತದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೇಳಿದೆ. ಇದೇ ವೇಳೆ ದುಷ್ಕರ್ಮಿಗಳನ್ನು ನ್ಯಾಯದ ಮುಂದೆ ತರಲಾಗುವುದು ಎಂಬುದಾಗಿ ಹೇಳಿದ್ದಾರೆ.

"ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕಾರ್ಯದರ್ಶಿ (ಮಾರ್ಕೊ) ರುಬಿಯೊ ಸ್ಪಷ್ಟಪಡಿಸಿದಂತೆ, ಯುನೈಟೆಡ್ ಸ್ಟೇಟ್ಸ್ ಭಾರತದೊಂದಿಗೆ ನಿಲ್ಲುತ್ತದೆ, ಎಲ್ಲಾ ಭಯೋತ್ಪಾದಕ ಕೃತ್ಯಗಳನ್ನು ಬಲವಾಗಿ ಖಂಡಿಸುತ್ತದೆ" ಎಂದು ವಿದೇಶಾಂಗ ಇಲಾಖೆಯ ವಕ್ತಾರ ಟಮ್ಮಿ ಬ್ರೂಸ್ ಗುರುವಾರ ಹೇಳಿದ್ದಾರೆ.

2025-04-25 04:48 GMT

ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿ ಎನ್ಕೌಂಟರ್

ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಶುಕ್ರವಾರ ಭಯೋತ್ಪಾದಕರೊಂದಿಗಿನ ಎನ್​ಕೌಂಟರ್​ನಲ್ಲಿ ಇಬ್ಬರು ಭದ್ರತಾ ಪಡೆ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಡಿಪೋರಾ ಜಿಲ್ಲೆಯ ಕುಲ್ನಾರ್ ಬಾಜಿಪೊರಾದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಪಡೆದ ನಂತರ ಭದ್ರತಾ ಪಡೆಗಳು ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು ಎಂದು ಅವರು ಹೇಳಿದರು. ಅಡಗಿದ್ದ ಉಗ್ರರು ಭದ್ರತಾ ಪಡೆಗಳ ನೆಲೆಗಳ ಮೇಲೆ ಗುಂಡು ಹಾರಿಸಿದ ನಂತರ ಶೋಧ ಕಾರ್ಯಾಚರಣೆ ಎನ್ಕೌಂಟರ್ ಆಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದರು.

ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2025-04-25 04:46 GMT

ಸೇನಾ ಸಮವಸ್ತ್ರಗಳನ್ನು ಮಾರಾಟ ಮಾಡದಂತೆ ಅಂಗಡಿ ಮಾಲೀಕರಿಗೆ ಸೂಚನೆ

ಸೇನಾ ಸಮವಸ್ತ್ರಗಳು ಹಾಗೂ ಅದಕ್ಕೆ ಪೂರಕ ಪರಿಕರಗಳನ್ನು ಮಾರಾಟ ಮಾಡದಂತೆ ಡೆಹ್ರಾಡೂನ್ ಎಸ್ಎಸ್ಪಿ ಅಜಯ್ ಸಿಂಗ್ ಅವರು ಎಲ್ಲಾ ಠಾಣೆ ಉಸ್ತುವಾರಿಗಳಿಗೆ ಆಯಾ ಪ್ರದೇಶಗಳಲ್ಲಿನ ಸಮವಸ್ತ್ರ ಮತ್ತು ಸೈನ್ಯ / ಅರೆಸೈನಿಕ ಪಡೆಗಳಿಗೆ ಸೂಚನೆ ನೀಡಿದ್ದಾರೆ. ಭದ್ರತಾ ಸಂಸ್ಥೆಗಳಿಗೆ ಸಂಬಂಧಿಸಿದ ಇತರ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ನಿರ್ದೇಶನ ನೀಡಿದ್ದಾರೆ.  

2025-04-25 04:42 GMT

ಸ್ಫೋಟದಲ್ಲಿ ಇಬ್ಬರು ಉಗ್ರರ ಮನೆಗಳು ನಾಶ

ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಇಬ್ಬರು ಭಯೋತ್ಪಾದಕರಾದ ಆದಿಲ್ ಹುಸೇನ್ ಥೋಕರ್ ಮತ್ತು ಆಸಿಫ್ ಶೇಖ್ ಅವರ ಮನೆಗಳು ಗುರುವಾರ ರಾತ್ರಿ ನಡೆಸಲಾದ ಸ್ಫೋಟದಲ್ಲಿ ನಾಶವಾಗಿವೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. ಸ್ಫೋಟಕಗಳನ್ನು ಮನೆಗಳ ಒಳಗೆ ಇಡಲಾಗಿದೆ ಎಂದು ವರದಿಯಾಗಿದೆ.

2025-04-25 04:41 GMT

ದೆಹಲಿಯಲ್ಲಿ ಮಾರುಕಟ್ಟೆಗಳು ಬಂದ್​

ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ವಿರೋಧಿಸಿ ದೆಹಲಿ ಮಾರುಕಟ್ಟೆಗಳು ಬಂದ್​​. 

2025-04-25 04:25 GMT

ಕಾಶ್ಮೀರ ಗಡಿ ಅನಂತನಾಗ್‌ ಬಳಿ ನಡೆದ ಸ್ಫೋಟವೊಂದರಲ್ಲಿ ಇಬ್ಬರು ಭಯೋತ್ಪಾದಕರ ಮನೆಗಳು ನಾಶವಾಗಿವೆ. ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ಭಯೋತ್ಪಾದಕರಾದ ಆದಿಲ್ ಹುಸೇನ್ ಥೋಕರ್ ಮತ್ತು ಆಸಿಫ್ ಶೇಖ್ ಅವರ ಮನೆಗಳು ಗುರುವಾರ ರಾತ್ರಿ ನಡೆದ ಸ್ಫೋಟದಲ್ಲಿ ನಾಶವಾಗಿವೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿಗಳು ತಿಳಿಸಿವೆ.


Tags:    

Similar News