ಸಿಜೆಐ ಗವಾಯಿ ಮೇಲೆ ಶೂ ಎಸೆದ ವಕೀಲನ ವಿರುದ್ಧ ಪ್ರಕರಣವಿಲ್ಲ, ಬಾರ್ ಕೌನ್ಸಿಲ್ನಿಂದ ಅಮಾನತು
ಶೂ ಎಸೆದ ವೇಲೆ ವಕೀಲ ಸನಾತನ ಧರ್ಮಕ್ಕೆ ಅವಮಾನವನ್ನು ಹಿಂದೂಸ್ಥಾನ ಸಹಿಸುವುದಿಲ್ಲ ಎಂದು ಬರೆದಿದ್ದ ಕಾಗದವನ್ನು ಹೊಂದಿದ್ದರು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ
ಸುಪ್ರೀಂ ಕೋರ್ಟ್ನಲ್ಲಿ ಸೋಮವಾರ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಹಿರಿಯ ವಕೀಲ ರಾಕೇಶ್ ಕಿಶೋರ್ ವಿರುದ್ಧ ಯಾವುದೇ ಪೊಲೀಸ್ ಪ್ರಕರಣ ದಾಖಲಾಗಿಲ್ಲ. ಆದರೆ, ಭಾರತೀಯ ಬಾರ್ ಕೌನ್ಸಿಲ್ ಅವರನ್ನು ವಕೀಲ ವೃತ್ತಿಯಿಂದ ತಕ್ಷಣವೇ ಅಮಾನತುಗೊಳಿಸಿದೆ.
ಖಜುರಾಹೊ ದೇವಾಲಯಕ್ಕೆ ಸಂಬಂಧಿಸಿದಂತೆ ಸಿಜೆಐ ಗವಾಯಿ ನೀಡಿದ್ದ ಹೇಳಿಕೆಯಿಂದ ತಮಗೆ ಅಸಮಾಧಾನವಾಗಿದೆ ಎಂದು 71 ವರ್ಷದ ವಕೀಲ ರಾಕೇಶ್ ಕಿಶೋರ್ ಪೊಲೀಸರ ಬಳಿ ತಿಳಿಸಿದ್ದಾರೆ. ಘಟನೆಯ ನಂತರ ಅವರನ್ನು ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಆದರೆ, ಸುಪ್ರೀಂ ಕೋರ್ಟ್ ಕಚೇರಿಯು ಯಾವುದೇ ದೂರು ನೀಡಲು ಇಚ್ಛಿಸದ ಕಾರಣ, ಅವರ ವಿರುದ್ಧ ಯಾವುದೇ ಆರೋಪ ಹೊರಿಸದೆ ಬಿಡುಗಡೆ ಮಾಡಲಾಯಿತು. ಪೊಲೀಸರು ಅವರ ಶೂ ಮತ್ತು ಇತರ ದಾಖಲೆಗಳನ್ನು ಹಿಂತಿರುಗಿಸಿದ್ದಾರೆ.
ಶೂ ಎಸೆದ ವೇಲೆ ವಕೀಲ ಸನಾತನ ಧರ್ಮಕ್ಕೆ ಅವಮಾನವನ್ನು ಹಿಂದೂಸ್ಥಾನ ಸಹಿಸುವುದಿಲ್ಲ ಎಂದು ಬರೆದಿದ್ದ ಕಾಗದವನ್ನು ಹೊಂದಿದ್ದರು. ಭದ್ರತಾ ಸಿಬ್ಬಂದಿ ಅವರನ್ನು ಹೊರಗೆ ಕರೆದೊಯ್ಯುವಾಗಲೂ ಅವರು ಇದೇ ಘೋಷಣೆಯನ್ನು ಕೂಗಿದ್ದಾರೆ.
ಖಜುರಾಹೊದಲ್ಲಿನ ವಿಷ್ಣುವಿನ ವಿಗ್ರಹವನ್ನು ಪುನಃಸ್ಥಾಪಿಸಲು ಕೋರಿದ್ದ ಅರ್ಜಿಯ ವಿಚಾರಣೆ ವೇಳೆ, "ಭಕ್ತರು ದೇವರಿಗೇ ಪ್ರಾರ್ಥಿಸಲಿ" ಎಂದು ಸಿಜೆಐ ಗವಾಯಿ ಮಾಡಿದ್ದ ಹೇಳಿಕೆಯು ವಿವಾದಕ್ಕೆ ಕಾರಣವಾಗಿತ್ತು. ಈ ಹೇಳಿಕೆಯೇ ವಕೀಲರ ಆಕ್ರೋಶಕ್ಕೆ ಕಾರಣವೆಂದು ಹೇಳಲಾಗಿದೆ. ಘಟನೆಯ ನಂತರ ತಮಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ರಾಕೇಶ್ ಕಿಶೋರ್ ಹೇಳಿದ್ದಾರೆ. ಕಲಾಪದ ವೇಳೆ ನಡೆದ ಈ ಘಟನೆಯಿಂದ ವಿಚಲಿತರಾಗದ ಸಿಜೆಐ ಗವಾಯಿ, "ಇಂತಹ ಘಟನೆಗಳಿಂದ ವಿಚಲಿತರಾಗಬೇಡಿ" ಎಂದು ಇತರ ವಕೀಲರಿಗೆ ಹೇಳಿ ಕಲಾಪವನ್ನು ಮುಂದುವರಿಸಿದ್ದರು.