ದೆಹಲಿಯಲ್ಲಿ ಸಿಎಂ ಭೇಟಿಯಾದ ಮಿಸ್ ಯೂನಿವರ್ಸ್ ಕರ್ನಾಟಕ ವಿಜೇತೆ ವಂಶಿ
ಕರ್ನಾಟಕದಿಂದ ಆಯ್ಕೆಯಾಗಿರುವ ವಂಶಿ, ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ರಾಜ್ಯಕ್ಕೆ ಕೀರ್ತಿ ತರಲಿ ಎಂದು ಸಿಎಂ ಸಿದ್ದರಾಮಯ್ಯ ಹಾರೈಸಿದ್ದಾರೆ.;
ಮಿಸ್ ಯುನಿವರ್ಸ್ ಕರ್ನಾಟಕ ವಿಜೇತೆ ವಂಶಿ ಹಾಗೂ ಸಿಎಂ ಸಿದ್ದರಾಮಯ್ಯ
ಮಿಸ್ ಯೂನಿವರ್ಸ್ ಕರ್ನಾಟಕ ಕಿರೀಟವನ್ನು ಗೆದ್ದಿರುವ ಚಿಕ್ಕಮಗಳೂರು ಮೂಲದ ಯುವತಿ ವಂಶಿ, ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಆಗಸ್ಟ್ 17ರಂದು ಜೈಪುರದಲ್ಲಿ ನಡೆಯಲಿರುವ ಪ್ರತಿಷ್ಠಿತ ಮಿಸ್ ಯೂನಿವರ್ಸ್ ಇಂಡಿಯಾ 2025 ಸ್ಪರ್ಧೆಯಲ್ಲಿ ವಂಶಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು, ಈ ಸಂದರ್ಭದಲ್ಲಿ ವಂಶಿ ಅವರನ್ನು ಭೇಟಿಯಾಗಿ, ಮುಂಬರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಶುಭ ಕೋರಿದ್ದಾರೆ. ಕರ್ನಾಟಕದಿಂದ ಆಯ್ಕೆಯಾಗಿರುವ ವಂಶಿ, ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ರಾಜ್ಯಕ್ಕೆ ಕೀರ್ತಿ ತರಲಿ ಎಂದು ಹಾರೈಸಿದರು.
ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆ ಕುರಿತು ಮಾಹಿತಿ
ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯು ದೇಶದ ಪ್ರಮುಖ ಸೌಂದರ್ಯ ಸ್ಪರ್ಧೆಗಳಲ್ಲಿ ಒಂದಾಗಿದೆ. 2024ರಿಂದ ಗ್ಲಾಮನಂದ್ ಗ್ರೂಪ್ ಈ ಸ್ಪರ್ಧೆಯ ಆಯೋಜನೆಯ ಹಕ್ಕನ್ನು ಪಡೆದುಕೊಂಡಿದೆ. ಸಾಮಾನ್ಯವಾಗಿ, ಈ ಸ್ಪರ್ಧೆಯ ಅಂತಿಮ ಸುತ್ತುಗಳು ಪ್ರತಿ ವರ್ಷ ಜುಲೈ ಅಥವಾ ಸೆಪ್ಟೆಂಬರ್ನಲ್ಲಿ ನಡೆಯುತ್ತವೆ. ವಿಜೇತರು ನಂತರ ವಿಶ್ವಮಟ್ಟದ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಾರೆ.
ವಂಶಿ ಅವರು ತಮ್ಮ ಸಾಧನೆಯ ಮೂಲಕ ಚಿಕ್ಕಮಗಳೂರಿಗೆ ಮಾತ್ರವಲ್ಲದೆ, ಇಡೀ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ. ಈಗ ಅವರು ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದು, ರಾಜ್ಯದ ಜನತೆ ಅವರ ಯಶಸ್ಸಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.