ಕರ್ನೂಲ್ ಬಸ್ ದುರಂತ: ನಿರ್ಲಕ್ಷ್ಯದ ಚಾಲನೆ ಆರೋಪ, ಇಬ್ಬರು ಚಾಲಕರ ವಿರುದ್ಧ ಪ್ರಕರಣ
ಇಂಧನ ಟ್ಯಾಂಕ್ನ ಮುಚ್ಚಳ ತೆರೆದಿದ್ದ ಬೈಕ್ ಅನ್ನು ಬಸ್ ಸುಮಾರು 200 ಮೀಟರ್ಗಳಷ್ಟು ದೂರ ಎಳೆದೊಯ್ದ ಪರಿಣಾಮ, ಘರ್ಷಣೆಯಿಂದ ಕಿಡಿಗಳು ಹೊತ್ತಿಕೊಂಡು ಬೆಂಕಿ ಕಾಣಿಸಿಕೊಂಡಿದೆ.
ಅಪಘಾತದಲ್ಲಿ ಬೆಂಕಿಗೆ ಆಹುತಿಯಾಗಿರುವ ಬಸ್
ಆಂಧ್ರಪ್ರದೇಶದ ಕರ್ನೂಲ್ ಬಳಿ 20 ಮಂದಿಯನ್ನು ಬಲಿ ಪಡೆದ ಭೀಕರ ಬಸ್ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ, ಬಸ್ನ ಇಬ್ಬರು ಚಾಲಕರ ವಿರುದ್ಧ ನಿರ್ಲಕ್ಷ್ಯ ಮತ್ತು ಅತಿವೇಗದ ಚಾಲನೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ದುರಂತದಲ್ಲಿ ಬದುಕುಳಿದ ಪ್ರಯಾಣಿಕರಲ್ಲಿ ಒಬ್ಬರಾದ ಎನ್. ರಮೇಶ್ ನೀಡಿದ ದೂರಿನ ಆಧಾರದ ಮೇಲೆ ಕರ್ನೂಲ್ ಜಿಲ್ಲೆಯ ಉಲಿಂದಕೊಂಡ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಶುಕ್ರವಾರ ಮುಂಜಾನೆ, ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಬಸ್ನ ಅಡಿಯಲ್ಲಿ ಸಿಲುಕಿಕೊಂಡಿದೆ. ಇಂಧನ ಟ್ಯಾಂಕ್ನ ಮುಚ್ಚಳ ತೆರೆದಿದ್ದ ಬೈಕ್ ಅನ್ನು ಬಸ್ ಸುಮಾರು 200 ಮೀಟರ್ಗಳಷ್ಟು ದೂರ ಎಳೆದೊಯ್ದ ಪರಿಣಾಮ, ಘರ್ಷಣೆಯಿಂದ ಕಿಡಿಗಳು ಹೊತ್ತಿಕೊಂಡು ಬೆಂಕಿ ಕಾಣಿಸಿಕೊಂಡಿದೆ. ಈ ದುರಂತದಲ್ಲಿ ಬೈಕ್ ಸವಾರ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 20 ಮಂದಿ ಸಜೀವ ದಹನವಾಗಿದ್ದು, 9 ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಹೆಚ್ಚಿನವರ ದೇಹಗಳು ಗುರುತು ಸಿಗದಷ್ಟು ಸುಟ್ಟು ಕರಕಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬದುಕುಳಿದ ಪ್ರಯಾಣಿಕನ ದೂರು
ದುರಂತದಿಂದ ಪಾರಾದ ಎನ್. ರಮೇಶ್ ತಮ್ಮ ದೂರಿನಲ್ಲಿ, 'ವಿ. ಕಾವೇರಿ ಟ್ರಾವೆಲ್ಸ್'ಗೆ ಸೇರಿದ (ನೋಂದಣಿ ಸಂಖ್ಯೆ DD 01 N 9490) ವೋಲ್ವೋ ಬಸ್ನಲ್ಲಿ ಸುಮಾರು 40 ಪ್ರಯಾಣಿಕರಿದ್ದರು ಎಂದು ತಿಳಿಸಿದ್ದಾರೆ. ಅಕ್ಟೋಬರ್ 23ರ ರಾತ್ರಿ ಹೈದರಾಬಾದ್ನ ಎಲ್ಬಿ ಕ್ರೀಡಾಂಗಣದ ಬಳಿ ಅವರು ಬಸ್ ಹತ್ತಿದ್ದರು.
"ಮುಂಜಾನೆ ಕರ್ನೂಲ್ ದಾಟಿದ ನಂತರ, ದೊಡ್ಡ ಶಬ್ದ ಕೇಳಿಸಿತು ಮತ್ತು ಬಸ್ನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತು," ಎಂದು ರಮೇಶ್ ದೂರಿನಲ್ಲಿ ವಿವರಿಸಿದ್ದಾರೆ. ಅವರು ತಕ್ಷಣವೇ ಬಸ್ನ ಹಿಂದಿನ ಗಾಜನ್ನು ಒಡೆದು, ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಪಾರಾಗಿದ್ದಾರೆ. ಆದರೆ, ಅವರ 'ಕುಟುಂಬ ಸ್ನೇಹಿತ' ಜಿ. ರಮೇಶ್ ಸೇರಿದಂತೆ ಹಲವರು ದಟ್ಟ ಹೊಗೆ ಮತ್ತು ಬೆಂಕಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.
ಪೊಲೀಸರ ಕ್ರಮ
ಪ್ರಯಾಣಿಕ ರಮೇಶ್ ನೀಡಿದ ದೂರಿನ ಆಧಾರದ ಮೇಲೆ, ಉಲಿಂದಕೊಂಡ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS Act) ಸೆಕ್ಷನ್ 125(a) (ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುವುದು) ಮತ್ತು 106(1) (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕರ್ನೂಲ್ ಎಸ್ಪಿ ವಿಕ್ರಾಂತ್ ಪಟೇಲ್ ತಿಳಿಸಿದ್ದಾರೆ. ದುರಂತ ಸಂಭವಿಸಿದಾಗ ಬಸ್ನಲ್ಲಿ 44 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.