ಲೋಕಸಭೆ ಸ್ಪೀಕರ್: ಇಂಡಿಯ ಒಕ್ಕೂಟದ ಅಭ್ಯರ್ಥಿ ಕೋಡಿಕುನ್ನಿಲ್‌ ಸುರೇಶ್

ಉಪಸಭಾಧ್ಯಕ್ಷ ಸ್ಥಾನವನ್ನು ವಿರೋಧ ಪಕ್ಷಕ್ಕೆ ನೀಡಲಾಗುತ್ತದೆ ಎಂದು ಖಚಿತಪಡಿಸಲು ಬಿಜೆಪಿ ನಿರಾಕರಿಸಿ ದ್ದರಿಂದ, ಇಂಡಿಯ ಮೈತ್ರಿಕೂಟ ಸ್ಪೀಕರ್‌ ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದೆ.

Update: 2024-06-25 07:35 GMT

ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಎನ್‌ಡಿಎ ಅಭ್ಯರ್ಥಿ ಓಂ ಬಿರ್ಲಾ ವಿರುದ್ಧ ಇಂಡಿಯ ಒಕ್ಕೂಟ ಕಾಂಗ್ರೆಸ್ ಸಂಸದ ಕೆ. ಸುರೇಶ್ ಅವರನ್ನು ಕಣಕ್ಕಿಳಿಸಿದೆ. ಹೀಗಾಗಿ, 1946 ರಿಂದ ಮೊದಲ ಬಾರಿಗೆ ಈ ಸಂಸದೀಯ ಉನ್ನತ ಹುದ್ದೆಗೆ ಚುನಾವಣೆ ನಡೆಯಲಿದೆ.

ಸುರೇಶ್ ಅವರ ಸ್ಪರ್ಧೆಯನ್ನು ವಿರೋಧ ಪಕ್ಷದ ಸಂಸದ ಎನ್.ಕೆ.ಪ್ರೇಮಚಂದ್ರನ್ ಪ್ರಕಟಿಸಿದರು.

ಕೇರಳದ ಮಾವೇಲಿಕರ ಕ್ಷೇತ್ರದ ಕಾಂಗ್ರೆಸ್ ಸಂಸದ ಕೋಡಿಕುನ್ನಿಲ್ ಸುರೇಶ್ ಪ್ರಸ್ತುತ ಲೋಕಸಭೆಯ ಅತ್ಯಂತ ಹಿರಿಯ ಸಂಸದರು. ದಲಿತ ಸಮುದಾಯದ ಅವರು ಎಂಟು ಬಾರಿ ಸಂಸದರಾಗಿದ್ದು,ಅವರನ್ನು ಬಿಜೆಪಿಯ ಕೇರಳ ರಾಜ್ಯ ಮುಖ್ಯಸ್ಥ ಕೆ. ಸುರೇಂದ್ರನ್ ಅವರು ʻಪ್ರತಿಭಾವಂತʼ ಎಂದು ಬಣ್ಣಿಸಿದ್ದರು. 

ಕೋಟಾದಿಂದ ಗೆದ್ದಿರುವ ಬಿರ್ಲಾ ಅವರು ಲೋಕಸಭೆಯ ಸ್ಪೀಕರ್ ಹುದ್ದೆಗೆ ಮತ್ತೊಮ್ಮೆ ಎನ್‌ಡಿಎ ಅಭ್ಯರ್ಥಿಯಾಗಲಿದ್ದಾರೆ ಎಂಬ ಇಂಗಿತದ ನಡುವೆ ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. 

ಎನ್‌ಡಿಎ ಮುಂದೆ ಇಂಡಿಯ ಒಕ್ಕೂಟ; ಉಪಸಭಾಪತಿ ಸ್ಥಾನಕ್ಕೆ ವಿರೋಧ ಪಕ್ಷದ ಅಭ್ಯರ್ಥಿಯನ್ನು ನೇಮಿಸಲು ಬಿಜೆಪಿ ಒಪ್ಪಿದರೆ, ಸ್ಪೀಕರ್ ಸ್ಥಾನಕ್ಕೆ ಬಿರ್ಲಾ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವುದನ್ನು ಕಾಂಗ್ರೆಸ್ ಬೆಂಬಲಿಸುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಹೇಳಿದ್ದರು. 

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕರೆ ಮಾಡಿ, ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ ಎಂದು ರಾಹುಲ್ ಹೇಳಿದರು. ಈ ಸಂಬಂಧ ಮತ್ತೆ ಫೋನ್‌ ಮಾಡುವುದಾಗಿ ಹೇಳಿದ್ದ ರಾಜನಾಥ್‌ ಸಿಂಗ್‌, ಮತ್ತೆ ಕರೆ ಮಾಡಿಲ್ಲ.ಇದು ಕಾಂಗ್ರೆಸ್ ಅಧ್ಯಕ್ಷರಿಗೆ ಮಾಡಿದ ಅವಮಾನ ಎಂದು ರಾಹುಲ್ ಹೇಳಿದರು. 

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, 'ಪ್ರತಿಪಕ್ಷಗಳು ಸಹಕಾರ ನೀಡಬೇಕು ಎಂದು ಪ್ರಧಾನಿ ಹೇಳುತ್ತಾರೆ. ವಿರೋಧ ಪಕ್ಷದವರು ಉಪಸಭಾಪತಿ ಆಗಿರಬೇಕು ಎಂಬುದು ಸಂಪ್ರದಾಯ. ಯುಪಿಎ ಅವಧಿಯಲ್ಲೂ ಇದನ್ನು ಮಾಡಿದ್ದೆವು. ಪ್ರಧಾನಿ ಹೇಳುವುದು ಒಂದು; ಆದರೆ ಮಾಡುವುದು ಇನ್ನೊಂದು. ದೇಶವು ಪ್ರಧಾನಿಯವರ ಮಾತುಗಳನ್ನು ನಂಬುವುದಿಲ್ಲ,ʼ ಎಂದು ಹೇಳಿದರು. 

ರಾಜಸ್ಥಾನದ ಕೋಟಾ ಸ್ಥಾನವನ್ನು ಉಳಿಸಿಕೊಂಡಿರುವ ಬಿರ್ಲಾ ಅವರು ಕಳೆದ 20 ವರ್ಷಗಳಲ್ಲಿ ಸಂಸತ್ತಿಗೆ ಮರು ಆಯ್ಕೆಯಾದ ಮೊದಲ ಸ್ಪೀಕರ್‌ ಆಗಿದ್ದಾರೆ.

Tags:    

Similar News