EY Stafferʼs death| ಉತ್ತಮ ಕೆಲಸದ ವಾತಾವರಣಕ್ಕಾಗಿ ಹೋರಾಟ: ರಾಹುಲ್

Update: 2024-09-21 11:31 GMT

ಹೊಸದಿಲ್ಲಿ: ಅರ್ನ್ಸ್ಟ್ ಆ್ಯಂಡ್ ಯೂಂಗ್‌ನಲ್ಲಿ ತೀವ್ರ ಕೆಲಸದ ಒತ್ತಡದಿಂದ ಸಾವನ್ನಪ್ಪಿದ ಅನ್ನಾ ಸೆಬಾಸ್ಟಿಯನ್ ಪೆರಾಯಿಲ್ ಅವರ ಪೋಷಕರೊಂದಿಗೆ ಶನಿವಾರ ಮಾತನಾಡಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ದೇಶದ ಲಕ್ಷಾಂತರ ವೃತ್ತಿಪರರ ಕೆಲಸದ ವಾತಾವರಣವನ್ನು ಸುಧಾರಿಸಲು ಹೋರಾಟ ನಡೆಸುವುದಾಗಿ ಭರವಸೆ ನೀಡಿದ್ದಾರೆ. 

ಕೊಚ್ಚಿಯಲ್ಲಿರುವ ಅವರ ಮನೆಗೆ ಅಖಿಲ ಭಾರತ ವೃತ್ತಿಪರರ ಕಾಂಗ್ರೆಸ್ (ಎಐಪಿಸಿ) ಅಧ್ಯಕ್ಷ ಪ್ರವೀಣ್ ಚಕ್ರವರ್ತಿ ಅವರು ಭೇಟಿ ನೀಡಿದ್ದು, ವಿಡಿಯೋ ಕರೆ ಮೂಲಕ ರಾಹುಲ್‌ ಮತ್ತು ಅನ್ನಾ ಅವರ ಪೋಷಕರು ಮಾತನಾಡಿದರು.

ಅನ್ನಾ ಅವರ ಹಠಾತ್ ಮತ್ತು ದುರಂತ ನಿಧನಕ್ಕೆ ಸಂತಾಪ ಸೂಚಿಸಿದ ರಾಹುಲ್‌, ಇಂಥ ಕಠಿಣ ಸನ್ನಿವೇಶದಲ್ಲಿ ಲಕ್ಷಾಂತರ ವೃತ್ತಿಪರರ ಕೆಲಸದ ವಾತಾವರಣವನ್ನು ಸುಧಾರಿಸುವ ಉದ್ಧೇಶದಿಂದ ಮಾತನಾಡುತ್ತಿರುವ ಕುಟುಂಬದ ಧೈರ್ಯ ಮತ್ತು ನಿಸ್ವಾರ್ಥವನ್ನು ಶ್ಲಾಘಿಸಿದರು ಎಂದು ಎಐಪಿಸಿ ಹೇಳಿಕೆ ತಿಳಿಸಿದೆ.

ಅನ್ನಾ ಅವರ ಸ್ಮರಣೆಯಲ್ಲಿ ಎಲ್ಲ ವೃತ್ತಿಪರರಿಗೆ ಜಾಗೃತಿ ಆಂದೋಲನವನ್ನು ರಚಿಸಲು ರಾಹುಲ್‌, ಎಐಪಿಸಿ ಅಧ್ಯಕ್ಷರಿಗೆ ಸೂಚನೆ ನೀಡಿದರು.

ʻರಾಹುಲ್‌ ಅವರ ಸೂಚನೆಯಂತೆ ಕಾರ್ಪೊರೇಟ್ ವೃತ್ತಿಪರರಿಂದ ಮಾಹಿತಿ ಸಂಗ್ರಹಿಸಲು ಸಹಾಯವಾಣಿ ಆರಂಭಿಸಲಾಗುತ್ತದೆ. ಆನಂತರ, ಕರಡು ಮಾರ್ಗಸೂಚಿಗಳನ್ನು ತರಲು ಪ್ರಯತ್ನಿಸುತ್ತೇವೆ,ʼ ಎಂದು ಎಐಪಿಸಿ ತಿಳಿಸಿದೆ.

ಸಂಸದ ಶಶಿ ತರೂರ್‌, ಸಂಸತ್ತಿನ ಮುಂದಿನ ಅಧಿವೇಶನದಲ್ಲಿಈ ವಿಷಯವನ್ನು ಪ್ರಸ್ತಾಪಿಸುತ್ತೇನೆ ಎಂದು ಎಕ್ಸ್‌ ನಲ್ಲಿ ಬರೆದಿದ್ದರು.

Tags:    

Similar News