ದೆಹಲಿ ಸ್ಫೋಟ: "ಎಲ್ಲಾ ಕಾಶ್ಮೀರಿಗಳನ್ನು ಶಂಕಿತರಂತೆ ನೋಡಲಾಗುತ್ತಿದೆ" - ಒಮರ್ ಅಬ್ದುಲ್ಲಾ ಆತಂಕ
ದೆಹಲಿಯಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದ ನಂತರ, ಜಮ್ಮು ಮತ್ತು ಕಾಶ್ಮೀರದ ಜನರನ್ನು ಶಂಕಿತರ ದೃಷ್ಟಿಯಿಂದ ನೋಡಲಾಗುತ್ತಿದೆ. ಇದರಿಂದಾಗಿ ಕಾಶ್ಮೀರಿಗಳು ರಾಜ್ಯದಿಂದ ಹೊರಗೆ ಪ್ರಯಾಣಿಸಲು ಹಿಂಜರಿಯುತ್ತಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಕುಲ್ಗಾಮ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಕೆಲವೇ ಕೆಲವು ವ್ಯಕ್ತಿಗಳು ಮಾಡಿದ ತಪ್ಪಿಗೆ, ಇಡೀ ಸಮುದಾಯವನ್ನು ಹೊಣೆಗಾರರನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ. ನಮ್ಮನ್ನು ಎಲ್ಲೆಡೆ ಅನುಮಾನದ ಕಣ್ಣುಗಳಿಂದ ನೋಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಹೊರಗೆ ಕಳುಹಿಸಲು ಹೇಗೆ ತಾನೇ ಒಪ್ಪುತ್ತಾರೆ?" ಎಂದು ಪ್ರಶ್ನಿಸಿದರು.
"ದೆಹಲಿಯಲ್ಲಿ ನಡೆದ ಘಟನೆಗೆ ಕೆಲವರು ಕಾರಣರಿರಬಹುದು, ಆದರೆ ಅದಕ್ಕೆ ನಾವೆಲ್ಲರೂ ಹೊಣೆಗಾರರು ಮತ್ತು ನಾವೆಲ್ಲರೂ ಅದರ ಭಾಗವಾಗಿದ್ದೇವೆ ಎಂಬಂತಹ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ಇದು ನಮಗೆ ನೋವು ತರಿಸುತ್ತದೆ, ಆದರೆ ಇದೇ ವಾಸ್ತವ" ಎಂದು ಬೇಸರ ವ್ಯಕ್ತಪಡಿಸಿದರು.
ನನಗೂ ಭಯವಾಗುತ್ತದೆ ಎಂದ ಸಿಎಂ
ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡ ಅಬ್ದುಲ್ಲಾ, "ರಾಷ್ಟ್ರ ರಾಜಧಾನಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ನೋಂದಣಿ ಸಂಖ್ಯೆಯುಳ್ಳ ವಾಹನ ಚಲಾಯಿಸುವುದೇ ಇಂದು ಅಪರಾಧ ಎಂಬಂತಾಗಿದೆ. ನನ್ನ ಬಳಿ ಹೆಚ್ಚು ಭದ್ರತಾ ಸಿಬ್ಬಂದಿ ಇಲ್ಲದಿದ್ದಾಗ, ನನ್ನ ಸ್ವಂತ ಕಾರನ್ನು ಹೊರತೆಗೆಯಬೇಕೇ ಅಥವಾ ಬೇಡವೇ ಎಂದು ನಾನೇ ಎರಡು ಬಾರಿ ಯೋಚಿಸುತ್ತೇನೆ. ಯಾರು, ಎಲ್ಲಿ, ನನ್ನನ್ನು ತಡೆದು, 'ನೀವು ಎಲ್ಲಿಂದ ಬಂದಿದ್ದೀರಿ, ಇಲ್ಲಿಗೆ ಯಾಕೆ ಬಂದಿದ್ದೀರಿ' ಎಂದು ಕೇಳುತ್ತಾರೋ ಎಂಬ ಭಯ ಕಾಡುತ್ತದೆ," ಎಂದು ಹೇಳಿದರು.
ನವೆಂಬರ್ 10 ರಂದು ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರ್ ಸ್ಫೋಟದಲ್ಲಿ 15 ಜನರು ಮೃತಪಟ್ಟಿದ್ದರು. ಈ ಘಟನೆಯ ತನಿಖೆಯನ್ನು ದೆಹಲಿ ಪೊಲೀಸ್ ವಿಶೇಷ ಘಟಕ, ಎನ್ಐಎ ಮತ್ತು ಅಪರಾಧ ವಿಭಾಗ ಸೇರಿದಂತೆ ಬಹು-ಸಂಸ್ಥೆಗಳು ಕೈಗೆತ್ತಿಕೊಂಡಿವೆ. ತನಿಖೆಯ ಭಾಗವಾಗಿ, ಫರಿದಾಬಾದ್ ಒಂದರಲ್ಲೇ ಜಮ್ಮು ಮತ್ತು ಕಾಶ್ಮೀರದ 500ಕ್ಕೂ ಹೆಚ್ಚು ಜನರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ ಎಂದು ವರದಿಯಾಗಿದೆ.