ಪಿ.ವಿ. ನರಸಿಂಹರಾವ್ ಹಾಗೂ ಚರಣ್ ಸಿಂಗ್‌ಗೆ ʼಭಾರತ ರತ್ನʼ

ಮಾಜಿ ಪ್ರಧಾನಿಗಳಾದ ಪಿ.ವಿ. ನರಸಿಂಹರಾವ್ ಹಾಗೂ ಚರಣ್ ಸಿಂಗ್ ಮತ್ತು ‘ಹಸಿರು ಕ್ರಾಂತಿ’ ಹರಿಕಾರ ಎಂ ಎಸ್ ಸ್ವಾಮಿನಾಥನ್ ಅವರಿಗೂ ಮರಣೋತ್ತರ ʼಭಾರತ ರತ್ನʼ ಗೌರವವನ್ನು ಘೋಷಿಸಲಾಗಿದೆ.

Update: 2024-02-09 10:11 GMT
ರಾವ್ ಅವರ ದೂರದೃಷ್ಟಿಯ ನಾಯಕತ್ವವು ಭಾರತ ಆರ್ಥಿಕವಾಗಿ ಪ್ರಗತಿ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಮೋದಿ ಹೇಳಿದರು.
Click the Play button to listen to article

ಮಾಜಿ ಪ್ರಧಾನಿಗಳಾದ ಪಿ.ವಿ. ನರಸಿಂಹ ರಾವ್ ಹಾಗೂ ಚರಣ್ ಸಿಂಗ್ ಮತ್ತು ‘ಹಸಿರು ಕ್ರಾಂತಿ’ಯ ಹರಿಕಾರ ಎಂ ಎಸ್ ಸ್ವಾಮಿನಾಥನ್ ಅವರಿಗೆ ಮರಣೋತ್ತರ ʼಭಾರತ ರತ್ನʼ ಘೋಷಿಸಲಾಗಿದೆ.

ಕೆಲವು ದಿನಗಳ ಹಿಂದೆ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಹಾಗೂ ಸಮಾಜವಾದಿ ನಾಯಕ, ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೂ ದೇಶದ ಅತ್ಯುನ್ನತ ನಾಗರಿಕ ಗೌರವವಾದ ʼಭಾರತ ರತ್ನʼ ಪ್ರಶಸ್ತಿ ಘೋಷಿಸಲಾಗಿತ್ತು.

1991ರಲ್ಲಿ ಆರ್ಥಿಕ ಸುಧಾರಣೆಗಳನ್ನು ತಂದದ್ದೇ ಅಲ್ಲದೆ ಆರ್ಥಿಕ ಸುಧಾರಣೆಗಾಗಿ ಹಲವಾರು ಕ್ರಮಗಳನ್ನು ಕೈಗೊಂಡು, ಲೈಸನ್ಸ್ ರಾಜ್ ಅಂತ್ಯಗೊಳಿಸಿದ ಹಿರಿಮೆ ನರಸಿಂಹ ರಾವ್ ಅವರಿಗೆ ಸಲ್ಲುತ್ತದೆ ಎಂದು ಸರ್ಕಾರ ತಿಳಿಸಿದೆ.

“ಮಾಜಿ ಪ್ರಧಾನಿ ನರಸಿಂಹರಾವ್ ಅವರಿಗೆ ಭಾರತ ರತ್ನ ಘೋಷಿಸಿರುವ ಸಂಗತಿಯನ್ನು ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ನರಸಿಂಹರಾವ್ ಅವರು ಸ್ವತಃ ಪಂಡಿತರು ಹಾಗೂ ರಾಜಕೀಯ ಮುತ್ಸದ್ದಿ. ರಾಷ್ಟ್ರಕ್ಕಾಗಿ ಪ್ರಧಾನಿ ಹುದ್ದೆಯೂ ಸೇರಿದಂತೆ ಹಲವಾರು ಸ್ತರಗಳಲ್ಲಿ ಅವರು ಶ್ರಮಿಸಿದ್ದಾರೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ಅವರು ನೀಡಿರುವ ಕೊಡುಗೆಯನ್ನು ನೆನಪಿಸಿಕೊಳ್ಳಬಹುದು. ಅವರೊಬ್ಬ ದಾರ್ಶನಿಕರಾಗಿದ್ದು, ದೇಶವನ್ನು ಪ್ರಗತಿಯ ಪಥದಲ್ಲಿ ಕೊಂಡೊಯ್ಯುವಲ್ಲಿ ಅವರು ನೀಡಿರುವ ಕೊಡುಗೆ ಅಪಾರ. ಭಾರತದ ಪ್ರಗತಿಗೆ ನರಸಿಂಹರಾವ್ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ ಎಂದು ತಮ್ಮ ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಹಂಚಿಕೊಂಡಿದ್ದಾರೆ.

ಭಾರತಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಾನವನ್ನು ದೊರಕಿಸಿಕೊಡುವುದರಲ್ಲಿ, ಶೈಕ್ಷಣಿಕ ಕ್ಷೇತ್ರಕ್ಕೆ ಒತ್ತು ಹಾಗೂ ವಿದೇಶಾಂಗ ನೀತಿಯನ್ನ ಭದ್ರಗೊಳಿಸುವಲ್ಲಿ ನರಸಿಂಹರಾವ್ ಅವರ ಪಾತ್ರ ದೊಡ್ಡದು. ದೇಶವನ್ನು ಕ್ಲಿಷ್ಟ ಪರಿಸ್ಥಿತಿಯಲ್ಲಿ ಮುನ್ನಡೆಸಿ, ದೇಶದ ಪರಂಪರೆಯನ್ನು ಅರ್ಥಪೂರ್ಣಗೊಳಿಸಿ, ರಾಷ್ಟ್ರವನ್ನು ಬೌದ್ಧಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಮುನ್ನಡೆಸಿದ ಹಿರಿಮೆ ನರಸಿಂಹರಾವ್ ಅವರದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Tags:    

Similar News