ಅಮಿತ್ ಶಾ ಮದುರೈ ಭೇಟಿ; ನಟ ವಿಜಯ್ ಕಟ್ಟಿದ ಟಿವಿಕೆಯನ್ನು ಎನ್ಡಿಎಗೆ ಸೇರಿಸುವ ಯತ್ನ?
ಶಾ ಅವರ ಮದುರೈ ಭೇಟಿಯು ಹಲವು ಉದ್ದೇಶಗಳನ್ನು ಒಳಗೊಂಡಿತ್ತು. ಪ್ರಮುಖವಾಗಿ, ರಾಜ್ಯಾಧ್ಯಕ್ಷರಾಗಿ ನೈನಾರ್ ಅವರ ನೇಮಕದ ನಂತರ ಬಿಜೆಪಿಯ ಆಂತರಿಕ ಸಮೀಕರಣಗಳನ್ನು ಮೌಲ್ಯಮಾಪನ ಮಾಡುವುದಾಗಿದೆ.;
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮದುರೈ ಭೇಟಿಯು 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕಾರ್ಯತಂತ್ರದ ಪ್ರವಾಸ ಎಂದು ಬಣ್ಣಿಸಲಾಗಿದೆ. ಅದರಲ್ಲೂ ಡಿಎಂಕೆಯ ಪ್ರಬಲ ವಿರೋಧಿ ಶಕ್ತಿಯಾಗಿ ರೂಪುಗೊಂಡಿರುವ ನಟ, ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ಟ್ರಿ ಕಳಗಂ (ಟಿವಿಕೆ) ಪಕ್ಷವನ್ನು ಎನ್ಡಿಎ ಮೈತ್ರಿಗೆ ಸೇರಿಸಿಕೊಳ್ಳಲು ನಡೆಸುತ್ತಿರುವ ಪ್ರಯತ್ನ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಅಮಿತ್ ಶಾ ಅವರು ಜೂನ್ 7ರಂದು ರಾತ್ರಿ ಮದುರೈಗೆ ಆಗಮಿಸಿ, ಭಾನುವಾರ ಬೆಳಿಗ್ಗೆ ಮೀನಾಕ್ಷಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ.. ನಂತರ, ಅವರು ಬಿಜೆಪಿಯ ಹಿರಿಯ ನಾಯಕರಾದ ಪೊನ್ ರಾಧಾಕೃಷ್ಣನ್, ತಮಿಳಿಸೈ ಸೌಂದರರಾಜನ್ ಮತ್ತು ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರೊಂದಿಗೆ ರಾಜ್ಯ ಘಟಕದ ಸಭೆ ನಡೆಸಿದ್ದಾರೆ. ಈ ಎಲ್ಲ ಮಾತಕತೆಗಳಲ್ಲಿ ವಿಜಯ್ ಪಕ್ಷದ ಬಗ್ಗೆ ಚರ್ಚೆಗಳು ನಡೆದಿವೆ ಎನ್ನಲಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡು ದಕ್ಷಿಣ ಪ್ರದೇಶದಲ್ಲಿ ಬಿಜೆಪಿ ಗೆಲ್ಲದೇ ಹೋದರೂ ಗಮನಾರ್ಹ ಬೆಳವಣಿಗೆ ತೋರಿಸಿತ್ತು. ಹೀಗಾಗಿ ಮೈತ್ರಿ ಮತ್ತು ಪಕ್ಷ ಸಂಘಟನೆಯ ಗುರಿಯೊಂದಿಗೆ ಅಮಿತ್ ಶಾ ಮಾರುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಶಾ ಅವರ ಮದುರೈ ಭೇಟಿಯು ಹಲವು ಉದ್ದೇಶಗಳನ್ನು ಒಳಗೊಂಡಿತ್ತು. ಪ್ರಮುಖವಾಗಿ, ರಾಜ್ಯಾಧ್ಯಕ್ಷರಾಗಿ ನೈನಾರ್ ಅವರ ನೇಮಕದ ನಂತರ ಬಿಜೆಪಿಯ ಆಂತರಿಕ ಸಮೀಕರಣಗಳನ್ನು ಮೌಲ್ಯಮಾಪನ ಮಾಡುವುದಾಗಿತ್ತು. ವಿಶೇಷವಾಗಿ ಅಣ್ಣಾಮಲೈ ಅವರ ಬೆಂಬಲಿಗರು ಎಐಎಡಿಎಂಕೆ ಪಕ್ಷವನ್ನು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ಈ ಮೌಲ್ಯಮಾಪನ ಮಹತ್ವ ಪಡೆದಿದೆ.ಎರಡನೆಯದಾಗಿ ಬಿಜೆಪಿಯ ಗ್ರಾಮೀಣ ಮಟ್ಟದ ಯೋಜನೆಗಳನ್ನು ಬಲಪಡಿಸುವುದು. ಮೂರನೆಯದಾಗಿ. 2026ರ ಚುನಾವಣೆಗೆ ಕೇವಲ 10 ತಿಂಗಳು ಬಾಕಿಯಿರುವಾಗ, ಆಡಳಿತಾರೂಢ ಡಿಎಂಕೆಯ ಪ್ರಾಬಲ್ಯ ಎದುರಿಸಲು ಸೂಕ್ತ ಕಾರ್ಯತಂತ್ರ ರೂಪಿಸುವುದಾಗಿದೆ.
ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಮದುರೈ ಸೇರಿದಂತೆ ದಕ್ಷಿಣ ತಮಿಳುನಾಡಿನಲ್ಲಿ ಬಿಜೆಪಿಯ ಸುಧಾರಿತ ಕಾರ್ಯಕ್ಷಮತೆಯು ಪಕ್ಷದ ಆಕಾಂಕ್ಷೆಗಳಿಗೆ ಉತ್ತೇಜನ ನೀಡಿದೆ.
ಟಿವಿಕೆ ಸೇರ್ಪಡೆ?
ಅಮಿತ್ ಶಾ ಅವರ ಭೇಟಿಯಲ್ಲಿ, ವಿಜಯ್ ಅವರ ಟಿವಿಕೆ ಪಕ್ಷವನ್ನು ಎನ್ಡಿಎಗೆ ಸೇರಿಸಿಕೊಳ್ಳುವ ಬಿಜೆಪಿಯ ಉದ್ದೇಶವೂ ಅಡಗಿದೆ ಎಂಬುದು ಚರ್ಚೆಯ ವಿಷಯ. ಬಿಜೆಪಿಯ ಹಿರಿಯ ನಾಯಕ ನಾರಾಯಣನ್ 'ದ ಫೆಡರಲ್'ಗೆ ಮಾತನಾಡಿ "ಅಮಿತ್ ಶಾ ಅವರು ಟಿವಿಕೆ ಸೇರಿದಂತೆ ಡಿಎಂಕೆ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸಿ ಆಡಳಿತ ವಿರೋಧಿ ಮತಗಳನ್ನು ಕ್ರೋಢೀಕರಿಸಲು ಒತ್ತು ನೀಡುತ್ತಿದ್ದಾರೆ,'' ಎಂದು ಹೇಳಿದ್ದಾರೆ. ಮತ್ತೊಬ್ಬ ನಾಯಕ ಕೆ.ಪಿ. ರಾಮಲಿಂಗಂ ಮಾತನಾಡಿ, "ಡಿಎಂಡಿಕೆ ಮತ್ತು ಪಿಎಂಕೆ ಶೀಘ್ರದಲ್ಲೇ ಎನ್ಡಿಎಗೆ ಮರಳಲಿವೆ. ಟಿವಿಕೆಯ ಸಂಭಾವ್ಯ ಪ್ರಭಾವದ ಬಗ್ಗೆಯೂ ಚರ್ಚಿಸಲಾಗಿದೆ. ವಿಜಯ್ ಅವರ ನಿಜವಾದ ಗುರಿ ಡಿಎಂಕೆಯನ್ನು ಅಧಿಕಾರದಿಂದ ತೆಗೆದುಹಾಕುವುದಾದರೆ, ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಅವರು ನಮ್ಮೊಂದಿಗೆ ಸೇರಬೇಕು," ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜಕೀಯ ವಿಶ್ಲೇಷಕರ ಪ್ರಕಾರ, ನಟ ವಿಜಯ್ ಅವರ ವ್ಯಾಪಕ ಜನಪ್ರಿಯತೆ ಮತ್ತು ಯುವ ಮತದಾರರಲ್ಲಿ ಟಿವಿಕೆ ಪಕ್ಷದ ಹೆಚ್ಚುತ್ತಿರುವ ಆಕರ್ಷಣೆಯು ಎನ್ಡಿಎಗೆ ಗಮನಾರ್ಹ ಶಕ್ತಿಯನ್ನು ಒದಗಿಸಬಹುದು. ಟಿವಿಕೆಯ ತಮಿಳು ಹೆಮ್ಮೆಯ ನೀತಿಗಳು ಮತ್ತು ಸ್ಥಾಪಿತ ಧೋರಣೆಯ ವಿರುದ್ಧದ ಹೋರಾಟವು ಮತಗಳನ್ನು ವಿಭಜಿಸುವುದನ್ನು ತಡೆಯಬಹುದು ಎಂದು ವಿಶ್ಲೇಷಕರು ಭಾವಿಸಿದ್ದಾರೆ.
ಶಾ ಅವರು ಇತ್ತೀಚೆಗೆ ಚೆನ್ನೈಗೆ ಭೇಟಿ ನೀಡಿದಾಗ ಎಐಎಡಿಎಂಕೆಯ ಬಂಡಾಯ ಗುಂಪುಗಳಾದ ಒ. ಪನ್ನೀರ್ಸೆಲ್ವಂ (ಒಪಿಎಸ್), ಟಿ.ಟಿ.ವಿ. ದಿನಕರನ್, ಅಥವಾ ಪಿಎಂಕೆ ಮತ್ತು ಡಿಎಂಡಿಕೆಯ ನಾಯಕರನ್ನು ಭೇಟಿಯಾಗಿರಲಿಲ್ಲ. ಇದು ಎಐಎಡಿಎಂಕೆಯೊಳಗಿನ ಒಡಕುಗಳನ್ನು ಉಲ್ಬಣಗೊಳಿಸದಿರಲು ಶಾ ಅವರ ಜಾಗರೂಕತೆ ವಹಿಸಿದ್ದಾರೆ ಎನ್ನಲಾಗುತ್ತಿದೆ. ಮುಖ್ಯವಾಗಿ, ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ಅವರು ಈ ಹಿಂದೆ ಬಿಜೆಪಿಯೊಂದಿಗಿನ ಮೈತ್ರಿ ವಿರೋಧಿಸಿದ್ದರೂ ನಂತರ ಸೇರಿಕೊಂಡಿದ್ದರು.
ಮೈತ್ರಿ ಮಾತುಕತೆಯ ತೊಡಕುಗಳು
ಪಿಎಂಕೆಯಲ್ಲಿ ಸಂಸ್ಥಾಪಕ ಎಸ್. ರಾಮದಾಸ್ ಮತ್ತು ಅವರ ಮಗ ಅನ್ಬುಮಣಿ ರಾಮದಾಸ್ ನಡುವಿನ ಆಂತರಿಕ ಭಿನ್ನಾಭಿಪ್ರಾಯಗಳು, ಜೊತೆಗೆ ಡಿಎಂಡಿಕೆಯ ರಾಜ್ಯಸಭಾ ಸ್ಥಾನದ ಬೇಡಿಕೆಯನ್ನು ಎಐಎಡಿಎಂಕೆ 2026ರವರೆಗೆ ತಿರಸ್ಕರಿಸಿರುವುದು ಮೈತ್ರಿ ಮಾತುಕತೆಗಳನ್ನು ಸಂಕೀರ್ಣಗೊಳಿಸಿದೆ. ಬಿಜೆಪಿಯ ಹಿರಿಯ ನಾಯಕರೊಬ್ಬರು 'ದ ಫೆಡರಲ್'ಗೆ ಮಾತನಾಡಿ, "ಶಾ ಅವರು ರಾಜ್ಯದಲ್ಲಿ ಡಿಎಂಕೆ ಶಕ್ತಿಯನ್ನು ಎದುರಿಸಲು ಒಗ್ಗಟ್ಟಿನ ಎಐಎಡಿಎಂಕೆ ಬಯಸುತ್ತಾರೆ. ಆಂತರಿಕ ಸಮಸ್ಯೆಗಳು ಶಾಂತವಾದ ನಂತರ ಒಂದು ಭವ್ಯ ಸಾರ್ವಜನಿಕ ಸಭೆ ಆಯೋಜಿಸಿ ಮೈತ್ರಿಯನ್ನು ಘೋಷಿಸಲಾಗುವುದು," ಎಂದು ತಿಳಿಸಿದ್ದಾರೆ.
ಟಿವಿಕೆ ಮತ್ತು ಎನ್ಟಿಕೆಯ ನಿರ್ಣಾಯಕ ಪಾತ್ರ
ಶಾ ಅವರು ಟಿವಿಕೆ ಮತ್ತು ನಾಮ್ ತಮಿಳರ್ ಕಟ್ಚಿ (ಎನ್ಟಿಕೆ) ಡಿಎಂಕೆ ವಿರುದ್ಧ ಪ್ರಬಲ ಶಕ್ತಿ ಎಂದು ಭಾವಿಸಿದ್ದಾರೆ. ಟಿವಿಕೆಯ ತಮಿಳು ಹೆಗ್ಗುರುತಿನ ಪ್ರಚಾರದ ನೆರವಿನಿಂದ ಮತ ಒಡೆಯದಂತೆ ತಡೆಯಬಹುದು ಎಂದು ಅಂದಾಜಿಸಿದ್ದಾರೆ. ಆದರೆ, ನಟ ವಿಜಯ್ ಅವರು ಡಿಎಂಕೆ ಮತ್ತು ಬಿಜೆಪಿ-ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಟೀಕೆಯನ್ನು ಮುಂದುವರಿಸಿದ್ದಾರೆ ಎಂಬುದೇ ಇಲ್ಲಿ ಯಕ್ಷ ಪ್ರಶ್ನೆಯಾಗಿದೆ.