ಅಹಮದಾಬಾದ್ ವಿಮಾನ ಪತನದ ವೇಳೆ ಉಂಟಾದ ಬಿಸಿಗೆ ಸುಟ್ಟು ಕರಕಲಾದ ನಾಯಿ-ಬೆಕ್ಕುಗಳು!
ಲಂಡನ್ಗೆ ಹೊರಟಿದ್ದ ವಿಮಾನದಲ್ಲಿ ತುಂಬಲಾಗಿದ್ದ 1.25 ಲಕ್ಷ ಲೀಟರ್ ವೈಮಾನಿಕ ಇಂಧನವು ಕ್ಷಣಾರ್ಧದಲ್ಲಿ ಸ್ಫೋಟಗೊಂಡಾಗ ಅಗಾಧ ಶಾಖ ಉಂಟಾಗಿತ್ತು.;
ಗುರುವಾರ ಅಹಮದಾಬಾದ್ನಲ್ಲಿ ಪತನಗೊಂಡ ಏರ್ ಇಂಡಿಯಾ ಡ್ರೀಮ್ಲೈನರ್ ವಿಮಾನದ ದುರಂತದ ಭೀಕರತೆಗಳು ನಿಧಾನವಾಗಿ ಒಂದೊಂದಾಗಿ ಹೊರಕ್ಕೆ ಬರುತ್ತಿವೆ. ಎಲ್ಲ ಸಂಗತಿಗಳು ಬೆಚ್ಚಿ ಬೀಳುವಂತಿವೆ. ವೈದ್ಯಕೀಯ ಕಾಲೇಜು ಹಾಸ್ಟೆಲ್ ಕಟ್ಟಡಕ್ಕೆ ವಿಮಾನ ಅಪ್ಪಳಿಸುತ್ತಿದ್ದಂತೆಯೇ ಸಂಭವಿಸಿದ ಸ್ಫೋಟದ ಭೀಕರತೆಗೆ, ಸುತ್ತಮುತ್ತಲಿನ ಪ್ರದೇಶದ ತಾಪಮಾನ ಬರೋಬ್ಬರಿ 1,000 ಡಿಗ್ರಿ ಸೆಲ್ಸಿಯಸ್ಗೆ ಏರಿತ್ತು. ಈ ಅಗಾಧ ಉಷ್ಣತೆಯು ರಕ್ಷಣಾ ಕಾರ್ಯಾಚರಣೆಗಳನ್ನೇ ಅಸಾಧ್ಯವಾಗಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಊಹೆಗೂ ನಿಲುಕದ ಮರಣಾಂತಿಕ ಶಾಖ
ಬೇಸಿಗೆಯಲ್ಲಿ 45-50 ಡಿಗ್ರಿ ಸೆಲ್ಸಿಯಸ್ ತಾಪಮಾನ ಬಂದಾಗ ಒಡಾಡುವುದು ಕಷ್ಟವಾಗುತ್ತದೆ. ಅಂಥದ್ದರಲ್ಲಿ ಏಕಾಏಕಿ 1,000 ಡಿಗ್ರಿ ಸೆಲ್ಸಿಯಸ್ ತಾಪಮಾನ ಸೃಷ್ಟಿಯಾದರೆ ಹೇಗಿರಬಹುದು ಎಂಬುದನ್ನು ಊಹಿಸುವುದೂ ಕಷ್ಟ. ಅಹಮದಾಬಾದ್ನಲ್ಲಿ ನಿನ್ನೆ ನಡೆದ ದುರಂತದಲ್ಲಿ ಇದೇ ರೀತಿಯ ಭಯಾನಕ ಪರಿಸ್ಥಿತಿ ಸೃಷ್ಟಿಯಾಗಿತ್ತು. ಲಂಡನ್ಗೆ ಹೊರಟಿದ್ದ ವಿಮಾನದಲ್ಲಿ ತುಂಬಲಾಗಿದ್ದ 1.25 ಲಕ್ಷ ಲೀಟರ್ ವೈಮಾನಿಕ ಇಂಧನವು ಕ್ಷಣಾರ್ಧದಲ್ಲಿ ಸ್ಫೋಟಗೊಂಡಾಗ ಅಗಾಧ ಶಾಖ ಉಂಟಾಗಿತ್ತು.
ಈ ಮಾರಣಾಂತಿಕ ಶಾಖದ ಪರಿಣಾಮವಾಗಿ, ಅಪಘಾತ ಸ್ಥಳದಲ್ಲಿದ್ದ ಮನುಷ್ಯರು ಮಾತ್ರವಲ್ಲದೆ, ಆ ಪ್ರದೇಶದಲ್ಲಿದ್ದ ನಾಯಿ-ಬೆಕ್ಕುಗಳು, ಪಕ್ಷಿಗಳೂ ಸಹ ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಈ ಬೆಂಕಿಯ ಜ್ವಾಲೆಯಿಂದ ಯಾರೂ ಬದುಕುಳಿಯಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಆಘಾತಕಾರಿ ಸತ್ಯವನ್ನು ಹೊರಹಾಕಿದ್ದಾರೆ.
ಯಾರನ್ನೂ ರಕ್ಷಿಸಲು ಸಾಧ್ಯವಿರಲಿಲ್ಲ: ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಘಟನೆಯ ತೀವ್ರತೆಯನ್ನು ಖಚಿತಪಡಿಸಿದ್ದು, "1.25 ಲಕ್ಷ ಲೀಟರ್ ವೈಮಾನಿಕ ಇಂಧನವು ವಿಮಾನದಲ್ಲಿತ್ತು. ಅದಕ್ಕೆ ಬೆಂಕಿ ಹತ್ತಿಕೊಂಡ ಕಾರಣ ಯಾರನ್ನೂ ರಕ್ಷಿಸುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ" ಎಂದು ಹೇಳಿದ್ದಾರೆ.
ಘಟನಾ ಸ್ಥಳದಲ್ಲಿದ್ದ ರಾಜ್ಯ ವಿಪತ್ತು ನಿರ್ವಹಣಾ ತಂಡದ (SDRF) ಸಿಬ್ಬಂದಿಯೊಬ್ಬರ ಹೇಳಿಕೆ ದುರಂತದ ಭೀಕರತೆಯನ್ನು ಮತ್ತಷ್ಟು ಮನದಟ್ಟು ಮಾಡಿಸುತ್ತದೆ. "ನಾನು 2017ರಿಂದಲೂ ಎಸ್ಡಿಆರ್ಎಫ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಹಲವಾರು ದುರಂತಗಳಿಗೆ ಸಾಕ್ಷಿಯಾಗಿದ್ದೇನೆ. ಆದರೆ, ಇಂಥದ್ದೊಂದು ಭೀಕರ ದುರಂತವನ್ನು ಎಂದೂ ನೋಡಿಲ್ಲ" ಎಂದು ಅವರು ಹೇಳುವ ಮೂಲಕ, ಅಹಮದಾಬಾದ್ ವಿಮಾನ ದುರಂತದ ಕರಾಳ ಅಧ್ಯಾಯವನ್ನು ತೆರೆದಿಟ್ಟಿದ್ದಾರೆ.