VIjay Mallya: ಓಡಿ ಹೋದವ ಹೌದು, ನಾನು ಕಳ್ಳನಲ್ಲ" ದೇಶಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ ವಿಜಯ್ ಮಲ್ಯ
ಭಾರತದಿಂದ ದೂರ ಉಳಿದಿದ್ದಕ್ಕಾಗಿ ತಮ್ಮನ್ನು ದೇಶಭ್ರಷ್ಟ ಎಂದು ಕರೆಯಬಹುದು ಎಂದು ಒಪ್ಪಿಕೊಂಡಿದ್ದು, ಆದರೆ ಕಳ್ಳ ಎಂದು ಹಣೆಪಟ್ಟಿ ಕಟ್ಟುವುದನ್ನು ಒಪ್ಪುವುದಿಲ್ಲ ಎಂದು ಉದ್ಯಮಿ ವಿಜಯ ಮಲ್ಯ ಹೇಳಿದ್ದಾರೆ.;
ಉದ್ಯಮಿ ವಿಜಯ ಮಲ್ಯ
2016ರಿಂದ ಲಂಡನ್ನಲ್ಲಿ ನೆಲೆಸಿರುವ ಉದ್ಯಮಿ ವಿಜಯ ಮಲ್ಯಬರೋಬ್ಬರಿ ಒಂಬತ್ತು ವರ್ಷಗಳ ಮೌನದ ಬಳಿಕ ಪಾಡ್ಕಾಸ್ಟ್ವೊಂದಕ್ಕೆ ಸಂದರ್ಶನ ನೀಡಿದ್ದಾರೆ. ಉದ್ಯಮಿ ರಾಜ್ ಶಮಾನಿ ಅವರೊಂದಿಗಿನ ಈ ಸಂದರ್ಶನದಲ್ಲಿ, ಮಲ್ಯ ತಮ್ಮ ವಿರುದ್ಧದ ಆರೋಪಗಳಿಗೆ ಉತ್ತರಿಸಿದ್ದು, "ಚೋರ್" (ಕಳ್ಳ) ಎಂದು ಕರೆಯಬಾರದು ಎಂದು ಹೇಳಿದ್ದಾರೆ. ಜೊತೆಗೆ, ತಮ್ಮ ಕಾನೂನು ಹೋರಾಟಗಳು, ಕಿಂಗ್ಫಿಷರ್ ಏರ್ಲೈನ್ಸ್ನ ಪತನ ಮತ್ತು ದೇಶಕ್ಕೆ ಮರಳುವ ಬಗ್ಗೆಯೂ ಪ್ರಮುಖ ಹೇಳಿಕೆಗಳನ್ನು ನೀಡಿದ್ದಾರೆ.
ಭಾರತದಿಂದ ದೂರ ಉಳಿದಿದ್ದಕ್ಕಾಗಿ ತಮ್ಮನ್ನು ದೇಶಭ್ರಷ್ಟ ಎಂದು ಕರೆಯಬಹುದು ಎಂದು ಮಲ್ಯ ಒಪ್ಪಿಕೊಂಡಿದ್ದಾರೆ. ಆದರೆ, "ಕಳ್ಳ" ಎಂದು ಹಣೆಪಟ್ಟಿ ಕಟ್ಟುವುದನ್ನು ಬಲವಾಗಿ ವಿರೋಧಿಸಿದ್ದಾರೆ. "ನಾನು ಓಡಿಹೋಗಿಲ್ಲ, ನಿಗದಿತ ಪ್ರವಾಸಕ್ಕೆ ಬಂದಿದ್ದು ಕೆಲವು ಕಾರಣಗಳಿಗಾಗಿ ಹಿಂತಿರುಗಲಿಲ್ಲ. ಯಾರನ್ನೂ ವಂಚಿಸುವ ಉದ್ದೇಶ ನನಗಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಕಿಂಗ್ಫಿಷರ್ ಆರ್ಥಿಕ ಬಿಕ್ಕಟ್ಟಿಗೆ ಕಾರಣ
ಕಿಂಗ್ಫಿಷರ್ ಏರ್ಲೈನ್ಸ್ ಕುಸಿಯಲು 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟು ಪ್ರಮುಖ ಕಾರಣ ಎಂದು ಮಲ್ಯ ಹೇಳಿದ್ದಾರೆ. ಬಿಕ್ಕಟ್ಟು ಬಂದು ಇಡೀ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಮೊದಲು ವಿಮಾನಯಾನ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿತ್ತು. ವಿಮಾನಯಾನ ಸಂಸ್ಥೆಯ ಉದ್ಯೋಗಿಗಳನ್ನು ಕಡಿಮೆ ಮಾಡುವ ಯೋಜನೆ ಹೊಂದಿದ್ದೆ, ಆದರೆ ಅಧಿಕಾರಿಗಳು ಮತ್ತು ಬ್ಯಾಂಕರ್ಗಳು ವಿಮಾನಯಾನ ಸಂಸ್ಥೆಯ ಗಾತ್ರವನ್ನು ಕಡಿಮೆ ಮಾಡದಂತೆ ಸಲಹೆ ನೀಡಿದ್ದರು ಎಂದು ಅವರು ತಿಳಿಸಿದ್ದಾರೆ.
ಭಾರತಕ್ಕೆ ಹಿಂದಿರುಗುವ ಬಗ್ಗೆ ಮಾತು
ನ್ಯಾಯಯುತ ವಿಚಾರಣೆ ಮತ್ತು ಸೂಕ್ತ ಚಿಕಿತ್ಸೆ ಖಾತರಿಪಡಿಸಿದರೆ ಭಾರತಕ್ಕೆ ಹಿಂತಿರುಗುವ ಬಗ್ಗೆ ಗಂಭೀರವಾಗಿ ಯೋಚಿಸುವುದಾಗಿ ಮಲ್ಯ ಹೇಳಿದ್ದಾರೆ. ಭಾರತೀಯ ಜೈಲಿನ ಪರಿಸ್ಥಿತಿಗಳು ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತವೆ. ಆ ಸಮಸ್ಯೆಗಳು ಬಗೆಹರಿಯುವವರೆಗೆ ಮರಳಲು ಸಾಧ್ಯವಿಲ್ಲ ಎಂದು ಅವರು ಷರತ್ತು ವಿಧಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆ
ಇತ್ತೀಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಐಪಿಎಲ್ ಟ್ರೋಫಿ ಗೆದ್ದ ಕೆಲವು ದಿನಗಳ ನಂತರ ಮಲ್ಯ ಅವರ ಈ ಸಂದರ್ಶನ ನಡೆದಿದೆ. ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ಅವರನ್ನು ಟೀಕಿಸಿದ್ದು, ವಿದೇಶದಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸುವ ಬದಲು, ಭಾರತಕ್ಕೆ ಹಿಂತಿರುಗಿ ಕಾನೂನು ಪ್ರಕ್ರಿಯೆಯನ್ನು ಎದುರಿಸಬೇಕು ಎಂದು ಹಲವರು ಸಂದೇಶ ರವಾನಿಸಿದ್ದಾರೆ.
ಕಾನೂನು ಹೋರಾಟಗಳು ಮುಂದುವರಿಕೆ
ಮಲ್ಯ ಭಾರತೀಯ ಬ್ಯಾಂಕುಗಳಿಗೆ 11,000 ಕೋಟಿ ರೂ. ಗಿಂತ ಹೆಚ್ಚು ಸಾಲ ಬಾಕಿ ಉಳಿಸಿಕೊಂಡಿದ್ದಾರೆ. ಏಪ್ರಿಲ್ 2025ರಲ್ಲಿ ಲಂಡನ್ ನ್ಯಾಯಾಲಯವು ಹೊರಡಿಸಿದ ದಿವಾಳಿತನದ ಆದೇಶದ ವಿರುದ್ಧದ ಮೇಲ್ಮನವಿಯಲ್ಲಿ ಮಲ್ಯ ಹಿನ್ನಡೆ ಅನುಭವಿಸಿದ್ದು, ಇನ್ನೂ ಅನೇಕ ಗಂಭೀರ ಕಾನೂನು ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಮಲ್ಯ ಅವರ ಈ ಸಂದರ್ಶನವು ಅವರ ವಿರುದ್ಧದ ಕಾನೂನು ಹೋರಾಟಗಳ ನಡುವೆ ಹೊಸ ಚರ್ಚೆಗೆ ನಾಂದಿ ಹಾಡಿದೆ.