Bangalore Stampede | ವಿಜಯೋತ್ಸವ ದುರಂತ: ಸಂಪುಟದಲ್ಲಿ ಬಿಸಿಯೇರಿದ ʼವೈಫಲ್ಯದʼ ಚರ್ಚೆ; ಆರ್‌ಸಿಬಿ ವಿರುದ್ಧ ಎಫ್‌ಐಆರ್‌

Update: 2025-06-04 10:09 GMT
Live Updates - Page 4
2025-06-04 11:37 GMT

ಆರ್‌ಸಿಬಿ ವಿಜಯೋತ್ಸವ; ನೂಕುನುಗ್ಗಲಿನಲ್ಲಿ ಇಬ್ಬರು ಸಾವು

ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ‌ ಸಂಭವಿಸಿದ ನೂಕುನುಗ್ಗಲಿನಲ್ಲಿ ಇಬ್ಬರು ಅಭಿಮಾನಿಗಳು ಮೃತಪಟ್ಟಿರುವ ಘಟನೆ ನಡೆದಿದೆ.  ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ಸಾವಿರಾರು ಜನರು ಸೇರಿದ್ದರು. ಈ ವೇಳೆ ಏಳು ಮಂದಿ ತೀವ್ರ ಅಸ್ವಸ್ಥರಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಐವರು ಅಭಿಮಾನಿಗಳನ್ನು ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸಾ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರ್‌ಸಿಬಿ ವಿಜಯೋತ್ಸವದ ವೇಳೆ ಈ ದುರ್ಘಟನೆ ನಡೆದಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ನೋವು ಹಾಗೂ ಅಸಮಾಧಾನ ಹೊರಹಾಕಿದ್ದಾರೆ.

ಆರ್‌ಸಿಬಿ ತಂಡದ ಆಟಗಾರರನ್ನು ವೀಕ್ಷಿಸಲು ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುವ ಹಿನ್ನೆಲೆಯಲ್ಲಿ ಯಾವುದೇ ಮುನ್ನೆಚ್ಚರಿಕೆ ಕೈಗೊಳ್ಳದಿರುವುದು ಸಿಎಂ ಅಸಮಾಧಾನಕ್ಕೆ ಕಾರಣವಾಗಿದೆ. ವಿಜಯೋತ್ಸವ ಮೆರವಣಿಗೆಗೂ ಈ ಮೊದಲು ನಿರ್ಧರಿಸಲಾಗಿತ್ತು. ಆದರೆ, ಜನರ ದಟ್ಟಣೆ ಹಾಗೂ ಭದ್ರತಾ ಕಾರಣಗಳಿಂದ ಪೊಲೀಸರು ಪರೇಡ್‌ಗೆ ಅವಕಾಶ ನೀಡಿರಲಿಲ್ಲ. 


Full View

 


2025-06-04 11:17 GMT

ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ, ವಾಹನ ಸವಾರರ ಪರದಾಟ

ವಿಧಾನಸೌಧದ ಮುಂಭಾಗ ಆರ್‌ಸಿಬಿ ಆಟಗಾರರಿಗೆ ಸರ್ಕಾರ ಸನ್ಮಾನ ಕಾರ್ಯಕ್ರಮ ಆಯೋಜಿಸಿದೆ. ತಮ್ಮ ನೆಚ್ಚಿನ ಆಟಗಾರರನ್ನು ಕಣ್ತುಂಬಿಕೊಳ್ಳಲು ಸಾವಿರಾರು ಅಭಿಮಾನಿಗಳು ವಿಧಾನಸೌಧದ ಸುತ್ತಮುತ್ತಲಿನ ರಸ್ತೆಗಳಲ್ಲಿ ಜಮಾಯಿಸಿದ್ದಾರೆ. ಇದರ ನಡುವೆಯೇ ಸಾಕಷ್ಟು ಸಂಚಾರ ದಟ್ಟಣೆ ಉಂಟಾಗಿದ್ದು ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ.



2025-06-04 11:07 GMT

ಆರ್‌ಸಿಬಿ ಆಟಗಾರರನ್ನು ಕಣ್ತುಂಬಿಕೊಳ್ಳಲು ಕೆಂಪೇಗೌಡ ಪ್ರತಿಮೆ ಏರಿದ ಅಭಿಮಾನಿಗಳು

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆರ್‌ಸಿಬಿ ಆಟಗಾರರಿಗೆ ಸನ್ಮಾನ ಕಾರ್ಯಾಕ್ರಮ ಆಯೋಜಿಸಲಾಗಿದ್ದು, ತಮ್ಮ ನೆಚ್ಚಿನ ಆಟಗಾರರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ವಿಧಾನಸೌಧದ ಮುಂದಿರುವ ಕೆಂಪೇಗೌಡ ಪ್ರತಿಮೆ ಏರಿದ್ದಾರೆ. ಈಗಾಗಲೇ ವಿಧಾನಸೌಧದ ಮುಂಭಾಗದ ರಸ್ತೆಯಲ್ಲಿ ಸಾವಿರಾರು ಅಭಿಮಾನಿಗಳು ಸೇರಿದ್ದು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವಿಧಾನಸೌಧದ ಗೇಟ್‌ಗಳನ್ನು ಮುಚ್ಚಿದ್ದಾರೆ.



2025-06-04 10:44 GMT

ಆರ್‌ಸಿಬಿ ಅಭಿಮಾನಿಗಳ ಮೇಲೆ ಲಾಠಿ ಪ್ರಹಾರ, ಹಲವರು ಅಸ್ವಸ್ಥ

 ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡದ ವಿಜಯೋತ್ಸವದ ಹಿನ್ನೆಲೆಯಲ್ಲಿ ಅಭಿಮಾನಿಗಳ ದಂಡು ಜಮಾಯಿಸಿದೆ. ಜನರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಪ್ರಸಂಗವೂ ಬುಧವಾರ ನಡೆದಿದೆ. 

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ ವೇದಿಕೆ ಕಾರ್ಯಕ್ರಮವಿದ್ದು, ಅಭಿಮಾನಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದು, ನೂಕುನುಗ್ಗಲು ನಿಯಂತ್ರಿಸಲು ಪೊಲೀಸರು ಆರ್‌ಸಿಬಿ ಅಭಿಮಾನಿಗಳ ಮೇಲೆ ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.  ಈ ವೇಳೆ ಹಲವರು ಅಸ್ವಸ್ಥಗೊಂಡಿದ್ದಾರೆ. ಸ್ಥಳಕ್ಕೆ ಅಂಬುಲೆನ್ಸ್‌ಗಳು ಧಾವಿಸಿದ್ದು, ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

2025-06-04 10:41 GMT

ಆರ್‌ಸಿಬಿ ಆಟಗಾರರೊಂದಿಗೆ ಅಭಿಮಾನಿಗಳ ಸೆಲ್ಫಿ

ಹೆಚ್‌ಎಎಲ್‌ ವಿಮಾನ ನಿಲ್ದಾಣದಿಂದ ವಿಧಾನಸೌಧದ ಮಾರ್ಗದುದ್ದಕ್ಕೂ ಆರ್‌ಸಿಬಿ ಬಸ್‌ ತೆರಳುವ ರಸ್ತೆಯ ಎರಡೂ ಕಡೆ ಸಾವಿರಾರು ಆರ್‌ಸಿಬಿ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ಕಣ್ತುಂಬಿಕೊಂಡರು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಇದರ ನಡುವೆಯೂ ಅಭಿಮಾನಿಗಳು ತಮ್ಮ ಮೊಬೈಲ್‌ಗಳಲ್ಲಿ ಆಟಗಾರರ ಪೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.



2025-06-04 10:29 GMT

ಆರ್‌ಸಿಬಿ ಆಟಗಾರರನ್ನು ನೋಡಲು ಮರವೇರಿದ ಅಭಿಮಾನಿ

ಆರ್‌ಸಿಬಿ ಆಟಗಾರರಿಗೆ ವಿಧಾನಸೌಧದ ಬಳಿ ನಡೆಯಲಿರುವ ಸನ್ಮಾನ ಕಾರ್ಯಕ್ರಮ ಹಾಗೂ ಸಂಭ್ರಮಾಚರಣೆಯನ್ನು ವೀಕ್ಷಿಸಲು ಅಭಿಮಾನಿಗಳು ಮರ ಹಾಗೂ ಕೆಂಪೇಗೌಡ ಪ್ರತಿಮೆ ಏರಿದ್ದಾರೆ. ವಿಧಾನಸೌಧದ ಸುತ್ತಮುತ್ತಲಿನ ಎಲ್ಲಾ ರಸ್ತೆಗಳಲ್ಲಿ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ವಿಧಾನಸೌಧದ ಬಳಿ ಆಗಮಿಸಿರುವ ಆರ್‌ಸಿಬಿ ತಂಡದ ಆಟಗಾರರು ಅಭಿಮಾನಿಗಳತ್ತ ಕೈ ಬೀಸಿದರು. 


2025-06-04 10:20 GMT

ವಿಧಾನಸೌಧದ ಗೇಟ್‌ ಬಂದ್ ಮಾಡಿದ ಪೊಲೀಸರು

ಆರ್‌ಸಿಬಿ ತಂಡದ ಸನ್ಮಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತಲೂ ಭಾರೀ ಜನಸಂದಣಿ ಮತ್ತು ಭದ್ರತಾ ವ್ಯವಸ್ಥೆ ಜಾರಿಯಲ್ಲಿತ್ತು. ಸಾರ್ವಜನಿಕರ ನಿರ್ವಹಣೆ ಮತ್ತು ಭದ್ರತೆಗೆ ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಸೂಚನೆಯಂತೆ ಒಂದು ಗೇಟನ್ನು ಹೊರತುಪಡಿಸಿ ಉಳಿದ ಎಲ್ಲಾ ಗೇಟುಗಳನ್ನು ಬಂದ್ ಮಾಡಲಾಗಿತ್ತು.

ಪೊಲೀಸರು ಮತ್ತು ಅಧಿಕಾರಿಗಳು ವಿಧಾನಸೌಧದ ಸುತ್ತಮುತ್ತಲ ರಸ್ತೆಗಳಲ್ಲಿಯೂ ಟ್ರಾಫಿಕ್ ನಿಯಂತ್ರಣಕ್ಕೆ ವಿಶೇಷ ಕ್ರಮಗಳನ್ನು ಕೈಗೊಂಡಿದ್ದಾರೆ. . ಸಾರ್ವಜನಿಕರಿಗೆ ಸಂಜೆ 3 ಗಂಟೆಯಿಂದ 8 ಗಂಟೆಯವರೆಗೆ ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲ ರಸ್ತೆಗಳು ತಪ್ಪಿಸಲು ಸೂಚನೆ ನೀಡಲಾಗಿದೆ.

ಆರ್‌ಸಿಬಿ ವಿಜಯೋತ್ಸವದ ಹಿನ್ನೆಲೆಯಲ್ಲಿ ಭದ್ರತೆ, ಜನಸಂದಣಿ ಮತ್ತು ವಾಹನ ಸಂಚಾರವನ್ನು ನಿಯಂತ್ರಿಸುವ ಉದ್ದೇಶದಿಂದ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಭಿಮಾನಿಗಳು ಮತ್ತು ಸಾರ್ವಜನಿಕರು ಈ ನಿರ್ಬಂಧಗಳನ್ನು ಪಾಲಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

2025-06-04 10:12 GMT

ವಿಧಾನ ಸೌಧದ ಮುಂದೆ ಕಿಕ್ಕಿರಿದು ಸೇರಿದ ಜನ

 

ವಿಧಾನಸೌಧದ ಎದುರು ಆರ್‌ಸಿಬಿ ತಂಡದ ಸನ್ಮಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಕ್ರಿಕೆಟ್ ಪ್ರೇಮಿಗಳು ಹಾಗೂ ಆರ್‌ಸಿಬಿ ಅಭಿಮಾನಿಗಳು ಎರಡು ಮುಖ್ಯ ರಸ್ತೆಗಳಲ್ಲಿಯೂ ಗುಂಪು ಸೇರಿ, ವಿಜಯೋತ್ಸವವನ್ನು ಸಂಭ್ರಮಿಸಿದರು. ಈ ಭಾರೀ ಜನಸಂದಣಿಯಿಂದ ವಿಧಾನಸೌಧದ ಎದುರು ಮತ್ತು ಸುತ್ತಮುತ್ತಲ ರಸ್ತೆಗಳು ಕಿಕ್ಕಿರಿದು ತುಂಬಿದವು. ಪರಿಣಾಮವಾಗಿ ಟ್ರಾಫಿಕ್ ಜಾಂ ಉಂಟಾಗಿ, ವಾಹನ ಸವಾರರು ತೀವ್ರ ಸಮಸ್ಯೆಗೆ ಒಳಗಾದರು. ಪೊಲೀಸ್ ಇಲಾಖೆ ಭದ್ರತಾ ಮತ್ತು ಟ್ರಾಫಿಕ್ ನಿಯಂತ್ರಣಕ್ಕೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಬೇಕಾಯಿತು. ಅಭಿಮಾನಿಗಳ ಉತ್ಸಾಹ ಮತ್ತು ಸಂಭ್ರಮದಿಂದ ನಗರದಲ್ಲಿ ಕ್ರಿಕೆಟ್ ಹಬ್ಬದ ವಾತಾವರಣ ನಿರ್ಮಾಣವಾಯಿತು.

Tags:    

Similar News