ಅಹಿಂದ ನಾಯಕತ್ವದ ಕುರಿತು ಯತೀಂದ್ರ ಹೇಳಿದ್ದಾರೆಯೇ ಹೊರತು ಸಿಎಂ ಹುದ್ದೆ ಕುರಿತಂತಲ್ಲ : ಜಾರಕಿಹೊಳಿ ಸ್ಪಷ್ಟನೆ
ಸಾಮಾಜಿಕ ನ್ಯಾಯ ಮತ್ತು ಜಾತ್ಯಾತೀತ ಸಿದ್ಧಾಂತದಡಿ ನಡೆಯುವ ವ್ಯಕ್ತಿಯೊಬ್ಬರು ಪಕ್ಷವನ್ನು ಮುನ್ನಡೆಸಬೇಕು ಎಂಬ ಅರ್ಥದಲ್ಲಿ ಯತೀಂದ್ರ ಹೇಳಿದ್ದರು ಎಂದು ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.
ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಹಾಗೂ ಸಚಿವ ಸತೀಶ್ ಜಾರಕಿಹೊಳಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ತಂದೆಯ ರಾಜಕೀಯ ಜೀವನ ಅಥವಾ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತನಾಡಿಲ್ಲ. ಬದಲಾಗಿ ಅಹಿಂದ ನಾಯಕತ್ವದ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿಯಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರನ್ನು ಒಳಗೊಂಡ ಅಹಿಂದ ನಾಯಕತ್ವ ಕಾಂಗ್ರೆಸ್ಗೆ ಬೇಕು ಎಂದು ಹೇಳಿದ್ದರು. ಆದರೆ, ಜನರು ಹಾಗೂ ಮಾಧ್ಯಮಗಳಲ್ಲಿ ಯತೀಂದ್ರ ಹೇಳಿಕೆ ಗೊಂದಲ ಸೃಷ್ಟಿಸಿದೆ ಎಂದು ಹೇಳಿದ್ದಾರೆ.
'ಸರಿಯಾದ ಸಮಯದಲ್ಲಿ ಅಹಿಂದ ವಿಷಯದ ಚರ್ಚೆ'
ಅಹಿಂದ ಚಳವಳಿ 40 ರಿಂದ 50 ವರ್ಷಗಳಿಂದ ಸಕ್ರಿಯವಾಗಿದೆ. ಈ ನಿಟ್ಟಿನಲ್ಲಿ ಚರ್ಚೆಗಳು ಸೂಕ್ತ ಸಮಯದಲ್ಲಿ ನಡೆಯಲಿವೆ. ಆದ್ದರಿಂದ, ಮುಂದೆ ಏನು ಮಾಡಬೇಕೆಂದು ನಾವು ಯೋಚಿಸುತ್ತೇವೆ. ನಾವು ಈಗ ಇದರ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ ಎಂದು ಹೇಳಿದರು.
ಯತೀಂದ್ರ ಅವರು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡಿಲ್ಲ. 2028 ರ ನಂತರ, ಅವರ ತಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದು, ಪಕ್ಷವನ್ನು ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಯ ಸಿದ್ಧಾಂತವನ್ನು ನಿಜವಾಗಿಯೂ ಸ್ವೀಕರಿಸುವ ವ್ಯಕ್ತಿಯೊಬ್ಬರು ಮುನ್ನಡೆಸಬೇಕು ಎಂದು ಒತ್ತಿ ಹೇಳಿದ್ದಾರೆ ಎಂದು ತಿಳಿಸಿದರು.
ಯತೀಂದ್ರ ಹೇಳಿದ್ದೇನು ?
ವಿಧಾನ ಪರಿಷತ್ ಸದಸ್ಯ ಯತೀಂದ್ರ ಬುಧವಾರ (ಅ.22) ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ನಮ್ಮ ತಂದೆ ಈಗ ತಮ್ಮ ರಾಜಕೀಯ ಜೀವನದ "ಅಂತಿಮ ಘಟ್ಟದಲ್ಲಿದ್ದಾರೆ" ಈ ಸಂದರ್ಭದಲ್ಲಿ ಸಚಿವ ಸತೀಶ್ ಜಾರಕಿಹೊಳಿಯವರನ್ನುದ್ದೇಶಿಸಿ, ಬಲವಾದ ಸೈದ್ಧಾಂತಿಕ ಬದ್ಧತೆ ಮತ್ತು ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯ ಜಾರಕಿಹೊಳಿಯವರಿಗಿದೆ ಎಂದು ಹೇಳುವ ಮೂಲಕ ಕರ್ನಾಟಕ ಕಾಂಗ್ರೆಸ್ ಹಾಗೂ ರಾಜಕೀಯ ವಲಯದಲ್ಲಿ ಊಹಾಪೋಹಗಳನ್ನು ಹುಟ್ಟುಹಾಕಿತ್ತು.