Work Hour|ಕೆಲಸದ ಅವಧಿ ವಿಸ್ತರಣೆ; ಪರ-ವಿರೋಧ ಜೋರು, ವಿವರವಾಗಿ ಪರಿಶೀಲಿಸಿ ಅಧಿಸೂಚನೆ ಪ್ರಕಟ

ಕೆಲಸದ ಅವಧಿ ಹೆಚ್ಚಳದಿಂದ ಕಾರ್ಮಿಕರ ಮೇಲೆ ತೀವ್ರ ಒತ್ತಡ ಬೀಳಲಿದೆ ಎಂಬುದು ಕಾರ್ಮಿಕ ಸಂಘಟನೆಗಳ ವಾದವಾಗಿದೆ. ಆದಾಗ್ಯೂ, ಹೋಟೆಲ್ ಕಾರ್ಮಿಕರ ಸಂಘ ರಾಜ್ಯ ಸರ್ಕಾರದ ಕ್ರಮವನ್ನು ಸ್ವಾಗತಿಸಿದೆ.;

Update: 2025-06-18 11:29 GMT

ಸಾಂದರ್ಭಿಕ ಚಿತ್ರ

 ಖಾಸಗಿ ವಲಯದಲ್ಲಿ ದೈನಂದಿನ ಕೆಲಸದ ಅವಧಿಯನ್ನು 10 ಗಂಟೆಗಳಿಗೆ ಹೆಚ್ಚಿಸುವ ಕುರಿತ ರಾಜ್ಯ ಸರ್ಕಾರದ ಪ್ರಸ್ತಾಪವು ಪರ-ವಿರೋಧಗಳಿಗೆ ಕಾರಣವಾಗಿದೆ.

ಕೆಲಸದ ಅವಧಿ ಹೆಚ್ಚಳದಿಂದ ಕಾರ್ಮಿಕರ ಮೇಲೆ ತೀವ್ರ ಒತ್ತಡ ಬೀಳಲಿದೆ ಎಂಬುದು ಕಾರ್ಮಿಕ ಸಂಘಟನೆಗಳ ವಾದವಾಗಿದೆ. ಆದಾಗ್ಯೂ, ಹೋಟೆಲ್ ಕಾರ್ಮಿಕರ ಸಂಘ ರಾಜ್ಯ ಸರ್ಕಾರದ ಕ್ರಮವನ್ನು ಸ್ವಾಗತಿಸಿದೆ.

ಬೆಂಗಳೂರಿನಲ್ಲಿ ಬುಧವಾರ ಕಾರ್ಮಿಕ ಸಂಘಟನೆಗಳೊಂದಿಗೆ ಮಹತ್ವದ ಸಭೆ ನಡೆಸಿದ ಕಾರ್ಮಿಕ ಇಲಾಖೆ, ಸಂಘಟನೆಗಳ ಮುಖಂಡರ ಅಭಿಪ್ರಾಯ ಆಲಿಸಿದೆ. ಸಭೆಯಲ್ಲಿ 10ಗಂಟೆಗಳ ಕೆಲಸದ ಅವಧಿ ಕುರಿತಂತೆ ಸುದೀರ್ಘ ಚರ್ಚೆ ನಡೆಸಲಾಗಿದೆ.

ಪ್ರಸ್ತುತ, ರಾಜ್ಯದಲ್ಲಿ 8 ರಿಂದ 9 ಗಂಟೆಗಳ ಕೆಲಸದ ಅವಧಿ ಇದೆ. ಅದನ್ನು 10 ಗಂಟೆಗೆ ವಿಸ್ತರಣೆ ಮಾಡುವುದರಿಂದ ಆಗುವ ಸಾಧಕ-ಬಾಧಕಗಳೇನು ಎಂಬ ಬಗ್ಗೆ ಹಲವು ಕಾರ್ಮಿಕ ಸಂಘಟನೆಗಳ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.

ಖಾಸಗಿ ಸಂಸ್ಥೆ ಉದ್ಯೋಗಿಗಳ ವಾದವೇನು?

ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೆಲಸದ ಅವಧಿಯನ್ನು10 ಗಂಟೆಗಳಿಗೆ ಹೆಚ್ಚಿಸುವ ಪ್ರಸ್ತಾವದ ಪರವಾಗಿ ಈಗಾಗಲೇ ಖಾಸಗಿ ಉದ್ಯೋಗಿಗಳ ಅಸೋಸಿಯೇಷನ್ ನಿಂತಿವೆ.

ನಿತ್ಯ ಒಂದು ಗಂಟೆ ಹೆಚ್ಚುವರಿ ಕೆಲಸ ಮಾಡಿದರೆ ವಾರಾಂತ್ಯದಲ್ಲಿ ಎರಡು ದಿನ ರಜೆ ಸಿಗಲಿದೆ. ಹಾಗಾಗಿ ದಿನಕ್ಕೆ 10 ಗಂಟೆ ಕೆಲಸ ಮಾಡಲು ತಮ್ಮದೇನೂ ಅಭ್ಯಂತರವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಹೋಟೆಲ್ ಕಾರ್ಮಿಕರಿಂದ ಸ್ವಾಗತ

ಕೆಲಸದ ಅವಧಿಯನ್ನು 10ಗಂಟೆಗಳಿಗೆ ವಿಸ್ತರಿಸುವ ಸರ್ಕಾರದ ಪ್ರಸ್ತಾವವನ್ನು ಹೋಟೆಲ್ ಕಾರ್ಮಿಕರ ಸಂಘ ಸ್ವಾಗತಿಸಿದೆ. ಪ್ರಸ್ತುತ, ದಿನಕ್ಕೆ 8-9 ಗಂಟೆಗಳ ಕೆಲಸದ ಅವಧಿ ಇದೆ. ಇದರ ಜೊತೆಗೆ ಒಂದು ಗಂಟೆ ಹೆಚ್ಚುವರಿ ಕೆಲಸ ಮಾಡಿದರೆ ಕಾರ್ಮಿಕರಿಗೆ ವಾರದ ಕೊನೆಯಲ್ಲಿ ಎರಡು ದಿನ ರಜೆ ಸೌಲಭ್ಯ ಸಿಗಲಿದೆ. ಸರ್ಕಾರದ ಈ ಉದ್ದೇಶವನ್ನು ಕಾರ್ಮಿಕ ಸಂಘಟನೆಗಳು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ.

ವಾರದಲ್ಲಿ 48 ಗಂಟೆ ಕೆಲಸದ ನಿಯಮವಿದೆ. ಈಗ ಕೆಲಸದ ಅವಧಿಯನ್ನು 10 ಗಂಟೆಗೆ ಹೆಚ್ಚಳ ಮಾಡುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ಹೆಚ್ಚುವರಿ ಕೆಲಸ ಮಾಡಿದರೆ ವೇತನವೂ ಸಿಗಲಿದೆ. ವಾರದಲ್ಲಿ ಎರಡು ದಿನ ಸಿಗಲಿದೆ. ಹಾಗಾಗಿ ಸರ್ಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದು ತಿಳಿಸಿದ್ದಾರೆ.

ಸಿಐಟಿಯು ಹೇಳುವುದೇನು?

ಕಾರ್ಮಿಕ ಕಾನೂನುಗಳಿಗೆ ಯಾವುದೇ ಕಾರಣಕ್ಕೂ ತಿದ್ದುಪಡಿ ಮಾಡಬಾರದು. ಕೆಲಸದ ಅವಧಿ ವಿಸ್ತರಿಸುವುದರಿಂದ ಕಾರ್ಮಿಕರಿಗೆ ಹೊರೆಯಾಗಲಿದೆ. ಜೊತೆಗೆ ಕಾರ್ಯಕ್ಷಮತೆ ಕುಸಿಯಲಿದೆ ಎಂದು ಸಿಐಟಿಯು ಅಧ್ಯಕ್ಷೆ ವರಲಕ್ಷ್ಮೀ ಅವರು ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ.

ಕಾರ್ಮಿಕರ ಕೆಲಸದ ಅವಧಿ ಹೆಚ್ಚಳ ಮಾಡಬಾರದು. ಇದು ಸಂವಿಧಾನ ವಿರೋಧಿ ಕ್ರಮ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ತಿದ್ದುಪಡಿ ಮಸೂದೆಯನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು ಎಂದು ಆಗ್ರಹಿಸಿದ್ದಾರೆ.

ಮತ್ತೊಮ್ಮೆ ಚರ್ಚಿಸಿ ತೀರ್ಮಾನ 

ಕೆಲಸದ ಅವಧಿ ವಿಸ್ತರಿಸುವ ಕುರಿತು ಪರ-ವಿರೋಧದ ಅಭಿಪ್ರಾಯಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಭೆ ವಿಫಲವಾಯಿತು.  ಕಾರ್ಮಿಕ ಇಲಾಖೆ ಆಯುಕ್ತರು ಹಾಗೂ ಕಾರ್ಯದರ್ಶಿ ಅವರು ಪ್ರಸ್ತಾವ ಕುರಿತಂತೆ ವಿವರವಾಗಿ ಚರ್ಚಿಸಿ ಅಧಿಸೂಚನೆ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ. 

Tags:    

Similar News