ಕರ್ನಾಟಕ ವಿವಿ ಘಟಿಕೋತ್ಸವ | ಹಳ್ಳಿ ಹುಡುಗಿ ಜಯಶ್ರೀ ತಳವಾರ ಉಡಿಗೆ ಒಂಬತ್ತು ಚಿನ್ನದ ಪದಕ

ಆಶಾ ಕಾರ್ಯಕರ್ತೆ ಮತ್ತು ಗ್ರಾಮ ಪಂಚಾಯತಿ ಸಿಪಾಯಿಯ ಸುಪುತ್ರಿಯಾದ ಜಯಶ್ರೀ ತಳವಾರ ಅವರು 9 ಚಿನ್ನದ ಪದಕಗಳನ್ನು ಮಡಿಲಿಗೆ ಹಾಕಿಕೊಂಡು ಉತ್ತಮ ಸಾಧನೆ ತೋರಿದ್ದಾರೆ

Update: 2024-09-24 13:44 GMT
ಜಯಶ್ರೀ ತಳವಾರ

ಆಶಾ ಕಾರ್ಯಕರ್ತೆ ಮತ್ತು ಗ್ರಾಮ ಪಂಚಾಯತಿ ಸಿಪಾಯಿಯ ಪುತ್ರಿ ಜಯಶ್ರೀ ತಳವಾರ ಅವರು 9 ಚಿನ್ನದ ಪದಕಗಳನ್ನು ತನ್ನ ಉಡಿಗೆ ಹಾಕಿಕೊಂಡು ಉತ್ತಮ ಸಾಧನೆ ತೋರಿದ್ದಾಳೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ‌ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ 2022ರಲ್ಲಿ ಪ್ರವೇಶ ಪಡೆದು, ಉತ್ತಮವಾಗಿ ಅಭ್ಯಾಸ ಮಾಡಿ 2023-24ನೇ ಬ್ಯಾಚಿನ ಅತ್ಯುತ್ತಮ ವಿದ್ಯಾರ್ಥಿಯಾಗಿ ಹೊರಹೊಮ್ಮಿದ ಜಯಶ್ರೀಗೆ ಸೆ.24ರಂದು ಧಾರವಾಡದ ಗಾಂಧೀ ಭವನದಲ್ಲಿ ನಡೆದ ಕರ್ನಾಟಕ ವಿಶ್ವ ವಿದ್ಯಾಲಯದ 74ನೇ ವಾರ್ಷಿಕ ಘಟಿಕೋತ್ಸವದಲ್ಲಿ ಉನ್ನತ‌ ಶಿಕ್ಷಣ ಸಚಿವರಾದ ಡಾ.ಎಂ.ಸಿ. ಸುಧಾಕರ ಅವರು ಪದಕ ಪ್ರದಾನ ಮಾಡಿದರು.

ಮುಖ್ಯ ಅತಿಥಿಗಳಾದ ಪ್ರೊ.ಎಸ್.ಅಯ್ಯಪ್ಪನ್, ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಕೆ.ಬಿ.ಗುಡಸಿ, ಕುಲ ಸಚಿವರಾದ ಡಾ.ಎ.ಚನ್ನಪ್ಪ, ಪ್ರೊ.ನಿಜಲಿಂಗಪ್ಪ ಮಟ್ಟಿಹಾಳ ಹಾಗೂ ಇನ್ನಿತರ ಗಣ್ಯರ ಸಮ್ಮುಖದಲ್ಲಿ ಜಯಶ್ರೀಗೆ ಪದಕ ನೀಡಿ ಗೌರವಿಸಲಾಯಿತು.

ಚಿನ್ನದ ಹುಡುಗಿ

ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಕೊಡಗಲಿ ಗ್ರಾಮದ ಜಯಶ್ರೀ ತಳವಾರ ಅವರು ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದಿದ್ದಾರೆ. ಇವರ ತಾಯಿ ಮಂಜುಳಾ ಮಹಾಂತೇಶ ತಳವಾರ ಆಶಾ ಕಾರ್ಯಕರ್ತೆಯಾಗಿದ್ದಾರೆ. ತಂದೆ ಮಹಾಂತೇಶ ಹುನಗುಂದ ತಾಲೂಕಿನ ಹಿರೇಕೊಡಗಲಿ ಗ್ರಾಮದ ಗ್ರಾಮ ಪಂಚಾಯಿತಿಯ ಗ್ರೂಪ್ ಡಿ ದರ್ಜೆಯ ಸಿಪಾಯಿಯಾಗಿದ್ದಾರೆ. ಬಡತನದ ಕುಟುಂಬದಿಂದ ಬಂದಿದ್ದರೂ ಛಲತೊಟ್ಟು ಓದಿದ ಜಯಶ್ರೀ ಇದೀಗ ಚಿನ್ನದ ಹುಡುಗಿಯಾಗಿ ಮಿಂಚಿದ್ದಾಳೆ. ಆಶಾ ಕಾರ್ಯಕರ್ತೆ ಮತ್ತು ಸಿಪಾಯಿ ಮಗಳಾಗಿ ಜಯಶ್ರೀ ತಳವಾರ ಅವರು ವಿಶ್ವವಿದ್ಯಾಲಯದ ಮಟ್ಟದಲ್ಲಿ ಮಾಡಿದ ಸಾಧನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಹಳ್ಳಿ ಹುಡುಗಿ

ಜಯಶ್ರೀ ತಳವಾರ ಅವರು ಗದಗ ಜಿಲ್ಲೆಯ ರೋಣ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಪ್ರಾಥಮಿಕ ಹಾಗು ಮಾಧ್ಯಮಿಕ ಶಿಕ್ಷಣ ಪೂರೈಸಿದ್ದಾಳೆ. ಧಾರವಾಡದ ಹುರುಕಡ್ಲಿ ಮಹಿಳಾ ಕಾಲೇಜಿನಲ್ಲಿ ಪಿಯುಸಿ ಮತ್ತು ಧಾರವಾಡದ ಸರ್ಕಾರಿ ಪ್ರಥ‌ಮ ದರ್ಜೆ ಕಾಲೇಜಿನಲ್ಲಿ ಪದವಿ ಓದಿದ್ದಾಳೆ. ಹಾಸ್ಟೆಲ್‌ನಲ್ಲಿದ್ದು ಓದಿರುವ ಜಯಶ್ರೀಯು ಹಳ್ಳಿ ಹುಡುಗಿಯಾಗಿ ಚಿನ್ನದ ಪದಕ ಗಿಟ್ಟಿಸಿರುವುದು ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾದ ಸಂಗತಿಯಾಗಿದೆ.

ತಾಯಿಯ ಶ್ರಮವೇ ಸ್ಪೂರ್ತಿ

ನನ್ನ ತಾಯಿಯ ದುಡಿಮೆ, ಅವರು ರೂಢಿಸಿಕೊಂಡ ಪ್ರಾಮಾಣಿಕತೆ, ಒಳ್ಳೆಯವರಾಗಿ ಬಾಳಬೇಕು ಎನ್ನುವ ಅವರ ಉತ್ತಮ ವಿಚಾರಗಳು ನನಗೆ, ನನ್ನ ಓದಿಗೆ ಸದಾಕಾಲ ಸ್ಪೂರ್ತಿಯಾಗಿದೆ. ಧಾರವಾಡ ಕವಿವಿ ಪತ್ರಿಕೋದ್ಯಮ ವಿಭಾಗದ ಹಿಂದಿನ ಮುಖ್ಯಸ್ಥರಾಗಿದ್ದ ಪ್ರೊ.ಜೆ.ಎಂ.ಚಂದುನವರ, ವಿಭಾಗದ ಈಗಿನ ಮುಖ್ಯಸ್ಥರಾದ ಡಾ.ಸಂಜಯ್ ಮಾಲಗತ್ತಿ, ಉಪನ್ಯಾಸಕರಾದ ಮಂಜುನಾಥ‌ ಅಡಿಗಲ್, ಡಾ.ನಾಗರಾಜ, ಡಾ.ವಿಜಯಲಕ್ಷ್ಮಿ ಅವರು ಹಾಗೂ ಇನ್ನಿತರರು ತೋರಿದ ಮಾರ್ಗದರ್ಶನದಿಂದಾಗಿ ಉತ್ತಮ‌ ಸಾಧನೆ ಮಾಡಲು ಸಾಧ್ಯವಾಗಿದೆ. ನನ್ನ ಸಾಧನೆಗೆ ಸದಾಕಾಲ ಒತ್ತಾಸೆಯಾದ ಎಲ್ಲ ಸ್ನೇಹಿತರ ಪ್ರೀತಿಗೆ ಧನ್ಯವಾದಗಳು, ಹಳ್ಳಿಯ ಹುಡುಗಿಯರೂ ಸಾಧನೆ ಮಾಡಬಲ್ಲರು ಎನ್ನುವಂತೆ ನನ್ನಂಥವರಿಗೆ ಓದಿನ ರುಚಿ ಹತ್ತಿಸುವ ಈ ಧಾರವಾಡ ಮಣ್ಣಿಗೆ, ನೆಲಕ್ಕೆ ನಾನು ಸದಾ ಋಣಿ. ನಮ್ಮಂಥ ಬಡ ಹುಡುಗಿಯರಿಗೆ ತಾಯಿ ಪ್ರೀತಿ ತೋರಿ ಕರುಣಿಸಿದ ಧಾರವಾಡ ಜನರ ಪ್ರೀತಿಯನ್ನು ಎಂದಿಗೂ ಮರೆಯಲಾರೆ ಎನ್ನುತ್ತಾರೆ ಜಯಶ್ರೀ ತಳವಾರ.

Tags:    

Similar News