ಕರಾವಳಿಯನ್ನು ಬೆಚ್ಚಿಬೀಳಿಸಿದ ಮಿಡ್‌ನೈಟ್‌ ಗ್ಯಾಂಗ್‌ವಾರ್‌

ಉಡುಪಿ ನಗರದಲ್ಲಿ ಎರಡು ಕಾರುಗಳಲ್ಲಿ ಬಂದ ರೌಡಿಗಳ ನಡುವೆ ಗ್ಯಾಂಗ್ ವಾರ್ ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು , ಸದ್ಯ ಅದರ ವಿಡಿಯೋ ವೈರಲ್ ಆಗುತ್ತಿದೆ. ಆ ವಿಡಿಯೋ ಇಲ್ಲಿದೆ.

Update: 2024-05-25 07:43 GMT
ಎರಡು ತಂಡಗಳ ನಡುವೆ ಗ್ಯಾಂಗ್ ವಾರ್ ನಡೆದ ವಿಡಿಯೋ ವೈರಲ್‌ ಆಗಿದೆ.
Click the Play button to listen to article

ಕರಾವಳಿ ಜಿಲ್ಲೆ ಉಡುಪಿಯಲ್ಲಿ ರೌಡಿಗಳ ಎರಡು ಗ್ಯಾಂಗ್‌ ಸಿನಿಮಾ ರೀತಿಯಲ್ಲಿ ಹೊಡೆದಾಟ ಮಾಡಿಕೊಂಡಿರುವುದು ಮತ್ತು ಕಾರಿನಿಂದ ಇನ್ನೊಂದು ಕಾರಿಗೆ ಗುದ್ದಿರುವುದೇ ಅಲ್ಲದೆ ಎದುರಾಳಿಯಲ್ಲಿ ಚೇಸ್‌ ಮಾಡಿ ಹೊಡೆದುರುರಳಿಸಿದ ಭಯಾನಕ ಘಟನೆ  ಈಗ ಬೆಳಕಿಗೆ ಬಂದಿದೆ.

ಈ ಘಟನೆ ಉಡುಪಿ -ಮಣಿಪಾಲ ರಾಜ್ಯ ಹೆದ್ದಾರಿಯಲ್ಲಿ ಸಿಗುವ ಕುಂಜಿಬೆಟ್ಟು ಜಂಕ್ಷನ್‌ನಲ್ಲಿ ರಾತ್ರಿ  ಈ ಘಟನೆ ನಡೆದಿದ್ದು, ಹತ್ತಿರದ ಕಟ್ಟಡದ ನಿವಾಸಿಯೊಬ್ಬರು ವಿಡಿಯೋ ಚಿತ್ರೀಕರಣ ಮಾಡಿದ್ದು, ಈ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮೇ ೧೮ ರಂದು ಈ ಘಟನೆ ನಡೆದಿದ್ದು, ಬಳಿಕ ಎಚ್ಚೆತ್ತ ಉಡುಪಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಮೊದಲು  ಬಿಳಿ ಬಣ್ಣ ಸ್ವಿಫ್ಟ್‌ ಕಾರೊಂದು ಕಪ್ಪು ಬಣ್ಣದ ಸ್ವಿಫ್ಟ್‌ ಕಾರಿಗೆ ಮುಖಾಮುಖಿ ಡಿಕ್ಕಿಯಾಯಿತು. ಡಿಕ್ಕಿ ಹೊಡೆಸಿಕೊಂಡ ಕಾರಿನಿಂದ ಇಳಿದ ಮಾರಕಾಯುಧ ಹಿಡಿದುಕೊಂಡ ತಂಡ ಬಿಳಿ ಕಾರಿನತ್ತ ಧಾವಿಸಿದಾಗ ಆ ಕಾರು ಇನ್ನೊಂದು ರಸ್ತೆಯತ್ತ ನುಗ್ಗಿತು. ಮತ್ತೆ ರಭಸವಾಗಿ ಹಿಂದಕ್ಕೆ ಚಲಿಸಿದ ಕಾರು ಮತ್ತೆ ಮಾರಕಾಯುಧ ಧರಿಸಿದ ರೌಡಿಗಳ್ತ ಸಿನಿಮಾ ರೀತಿಯಲ್ಲಿ ಮುನ್ನುಗ್ಗಿದೆ. ಅದು ಎಷ್ಟು ವೇಗವಾಗಿ ಚಲಿಸಿತೆಂದರೆ ಮಾರಕಾಯುಧ ಹಿಡಿದುಕೊಂಡಿದ್ದ ವ್ಯಕ್ತಿಯನ್ನು ಎತ್ತಿ ಬಿಸಾಡಿದ ರೀತಿಯಲ್ಲಿ ಡಿಕ್ಕಿ ಹೊಡೆದಿರುವುದು ವಿಡಿಯೋದಲ್ಲಿ ಕಾಣುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆ ವ್ಯಕ್ತಿ ರಸ್ತೆಯಲ್ಲೇ ತೀವ್ರ ಗಾಯಗೊಂಡು ಬಿದ್ದಾಗ ಆತನ ತಂಡದ ಕಾರಿನಲ್ಲಿದ್ದ ವ್ಯಕ್ತಿಗಳು ತಪ್ಪಿಸಿಕೊಳ್ಳಲು ಯತ್ನಿಸಿರುವುದು ಕಂಡುಬಂದಿದೆ. 

Full View

ಎರಡು ತಂಡಗಳು ಕಾರುಗಳನ್ನು ಅಡ್ಡಾದಿಡ್ಡಿ  ಚಲಾಯಿಸಿ ಎರಡೂ ಕಾರುಗಳು ಪರಸ್ಪರ ಡಿಕ್ಕಿ ಹೊಡೆದ ಬಳಿಕ ಈ ತಂಡಗಳ ನಡುವೆ ಫೈಟ್ ನಡೆದಿದೆ. ನಡು ರಸ್ತೆಯಲ್ಲೇ  ಈ ತಂಡಗಳು ತಲವಾರು(ಮಚ್ಚು) ಹಿಡಿದು ಪರಸ್ಪರ ಹೊಡೆದಾಟ ನಡೆಸಿರುವ ಭಯಾನಕ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. 

ಪೊಲೀಸ್‌ ದಾಖಲೆಯ ಪ್ರಕಾರ "ಗರುಡ ಗ್ಯಾಂಗ್‌ʼ ಎನ್ನುವ ರೌಡಿಗಳ ತಂಡವೊಂದಿದ್ದು, ಅದರ ಸದಸ್ಯರ ಎಡರು ಬಣಗಳು ಈ ರೀತಿಯ ಹೊಡೆದಾಟ ನಡೆಸಿವೆ.  

ಈ ಘಟನೆಗೆ ಸಂಬಂಧಿಸಿದಂತೆ ಆಶಿಕ್ ಮತ್ತು ರಕೀಬ್ ಎಂಬಿಬ್ಬರು ಆರೋಪಿಗಳನ್ನು ಬಂಧಿಲಾಗಿದ್ದು, ಇವರಿಬ್ಬರು ಗರುಡ ಗ್ಯಾಂಗ್ ನವರು ಎಂದು ಉಡುಪಿ ಎಸ್ಪಿ ಡಾ. ಅರುಣ್‌ ಕೆ ತಿಳಿಸಿದ್ದಾರೆ. ಆರೋಪಿಗಳಿಂದ ಎರಡು ಸ್ವಿಫ್ಟ್ ಕಾರು ,ಎರಡು ಬೈಕ್ ,ಒಂದು ತಲವಾರು ,ಒಂದು ಡ್ರ್ಯಾಗರ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರಾರಿಯಾಗಿರುವ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಬಂಧಿತ ಆರೋಪಿಗಳು 

ಇನ್ನು ಇಸಾಕ್‌ ಮತ್ತು ಇತರ  ಆರೋಪಿಗಳು ಕಾರಿನಲ್ಲಿ ಅಕ್ರಮವಾಗಿ ತಲವಾರ್‌ನ್ನು ಇರಿಸಿ ಉಡುಪಿಯಲ್ಲಿ ಕಳ್ಳತನ ಮಾಡಲು ಪ್ರಯತ್ನಿಸಿರುವುದಾಗಿಯೂ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕಾರಿನ ಮಾರಾಟ ವಿಷಯಕ್ಕೆ ಸಂಬಂಧ ಈ ಎರಡೂ ತಂಡಗಳ ನಡುವೆ ಈ ಘಟನೆ ನಡೆದಿರಬಹುದು ಎಂದು ಮೂಲಗಳು ತಿಳಿಸಿವೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Tags:    

Similar News