ಔಷಧ ಅಂಗಡಿ ಮಾಲೀಕನಿಗೆ ವಂಚನೆ; ಮೂವರು ಕಾನ್‌ಸ್ಟೆಬಲ್‌ಗಳ ಬಂಧನ

ತಬ್ರೇಜ್ ಅವರು ಪ್ರಕರಣ ದಾಖಲಿಸದ ಕಾರಣ ಮಾರುತಿ ಅವರು 12 ಲಕ್ಷ ರೂ.ಗಳಲ್ಲಿ 8 ಲಕ್ಷಗಳನ್ನು ರಮೇಶ್‌ನಿಂದ ವಶಪಡಿಸಿಕೊಂಡಿದ್ದಾರೆ. ಉಳಿದ 4.5 ಲಕ್ಷ ರೂ. ತಬ್ರೇಜ್‌ಗೆ ನೀಡಿರುವುದು ತನಿಖೆ ವೇಳೆ ತಿಳಿದುಬಂದಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.;

Update: 2025-05-06 04:52 GMT

ಸಾಂದರ್ಭಿಕ ಚಿತ್ರ

ಔಷಧ ಅಂಗಡಿ ಮಾಲೀಕನಿಗೆ ವಂಚಿಸಿದ ಆರೋಪದ ಮೇಲೆ ಬೆಂಗಳೂರು ಪೊಲೀಸರ ಕೇಂದ್ರ ಅಪರಾಧ ವಿಭಾಗ (ಸಿಸಿಬಿ), ಮೂವರು ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಬಂಧಿತರನ್ನು ದಾವಣಗೆರೆಯ ಹೆಡ್ ಕಾನ್‌ಸ್ಟೆಬಲ್ ಮಾರುತಿ ಮತ್ತು ಬೆಂಗಳೂರಿನ ಆರ್‌ಟಿ ನಗರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌ಗಳಾದ ಯುವರಾಜ್ ಮತ್ತು ಮೆಹಬೂಬ್ ಎಂದು ಗುರುತಿಸಲಾಗಿದೆ. ಮಾರುತಿ ಪ್ರಕರಣವೊಂದಕ್ಕೆ ಸಂಬಂಧಿಸಿಂತೆ ಈಗಾಗಲೇ ಅಮಾನತುಗೊಂಡಿದ್ದರು. ಬಳಿಕ ಅವರು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಕರ್ತವ್ಯಕ್ಕೆ ಸೇರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಮೂವರು ಆರೋಪಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ನಿವಾಸಿ ಜೆ. ತಬ್ರೇಜ್ (26) ಎಂಬುವನ್ನು ವಂಚಿಸಿದ್ದಾರೆ ಎಂದರು.

''ನನ್ನ ಅಂಗಡಿಗೆ ಮಾತ್ರೆ ತೆಗೆದುಕೊಳ್ಳಲು ಬಂದಿದ್ದ ದಾವಣಗೆರೆಯ ರಮೇಶ್, ನನ್ನನ್ನು ಪರಿಚಯ ಮಾಡಿಕೊಂಡಿದ್ದ. ನಮ್ಮ ಊರಿನಲ್ಲಿ ತಾತ, ಜಮೀನಿನಲ್ಲಿ ಉಳುಮೆ ಮಾಡುವಾಗ 4 ಕೆ.ಜಿ ಚಿನ್ನದ ನಾಣ್ಯ ಸಿಕ್ಕಿವೆ. ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ಆಸಕ್ತಿ ಇದ್ದರೆ ದಾವಣಗೆರೆ ಬಸ್ ನಿಲ್ದಾಣಕ್ಕೆ ಬರುವಂತೆ ಸೂಚಿಸಿದ್ದ,'' ಎಂದು ತಬ್ರೇಜ್ ದೂರಿನಲ್ಲಿ ತಿಳಿಸಿದ್ದಾರೆ.

'ಮಾರ್ಚ್ 13ರಂದು ದಾವಣಗೆರೆಗೆ ಹೋದಾಗ ತಾತ ಮತ್ತು ಮೊಮ್ಮಗ ಭೇಟಿಯಾಗಿ ನಕಲಿ ಚಿನ್ನದ ನಾಣ್ಯ ತೋರಿಸಿ, ಇದರ ಮೌಲ್ಯ 80 ಲಕ್ಷ ರೂ. ಎಂದಿದ್ದರು. ಅಷ್ಟು ಹಣ ನನ್ನ ಬಳಿ ಇಲ್ಲದ ಕಾರಣ 10 ಲಕ್ಷಕ್ಕೆ ಕೊಡುವಂತೆ ಕೋರಿದೆ. ಆಗ ಅವರು 1,001 ರೂ. ಪಡೆದು ಒಂದು ನಾಣ್ಯ ಕೊಟ್ಟು ಕಳುಹಿಸಿದರು. ಅದನ್ನು ತಂದು ದೇವನಹಳ್ಳಿಯಲ್ಲಿ ಪರೀಕ್ಷಿಸಿದಾಗ, ಅಸಲಿ ಎಂಬುದು ಗೊತ್ತಾಯಿತು. ಬಳಿಕ ನನ್ನ ಬಳಿಯಿದ್ದ 10 ಲಕ್ಷ ರೂ  ಮತ್ತು ಕೈ ಸಾಲ  2 ರೂ. ಲಕ್ಷ ಪಡೆದು ದಾವಣಗೆರೆಗೆ ಹೋಗಿ 2 ಕೆ.ಜಿ. ಚಿನ್ನದ ನಾಣ್ಯ ಖರೀದಿಸಿಕೊಂಡು ಬಂದು, ದೇವನಹಳ್ಳಿಗೆ ಬಂದ ಮೇಲೆ ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಯಿತು,'' ಎಂದು ತಬ್ರೇಜ್​ ದೂರಿನಲ್ಲಿ ತಿಳಿಸಿದ್ದಾರೆ. 

''ಕೆಲವು ದಿನಗಳ ನಂತರ ಆ‌ರ್.ಟಿ. ನಗರ ಠಾಣೆಯ ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್​​ಗಳು ಕರೆ ಮಾಡಿ, ಚಿನ್ನದ ನಾಣ್ಯಕ್ಕಾಗಿ 12 ಲಕ್ಷ ರೂ. ಹಣ ಕಳೆದುಕೊಂಡಿರುವ ವಿಚಾರ ಗೊತ್ತಾಗಿದೆ. ಠಾಣೆ ಬಳಿಗೆ ಬನ್ನಿ ಎಂದು ಹೇಳಿದ್ದರು. ಅದರಂತೆ ಠಾಣೆ ಬಳಿಯ ಹೋಟೆಲ್‌ವೊಂದರಲ್ಲಿ ಅವರನ್ನು ಭೇಟಿ ಮಾಡಿದ್ದೆ. 'ಒಂದು ತಿಂಗಳ ಬಳಿಕ ನನಗೆ ಕರೆ ಮಾಡಿದ ಆ‌ರ್.ಟಿ.ನಗರ ಕಾನ್‌ಸ್ಟೆಬಲ್‌ಗಳು ಮೋಸ ಹೋದ 12 ಲಕ್ಷ ರೂ.ಗಳಲ್ಲಿ  8 ಲಕ್ಷ ರೂಪಾಯಿ ಜಪ್ತಿಯಾಗಿದೆ. ಅದರಲ್ಲಿ 2 ಲಕ್ಷ ರೂ. ಮಾಹಿತಿದಾರರಿಗೆ ನೀಡಿರುವುದಾಗಿ ಹೇಳಿದರು. ಬಳಿಕ ಹಣ ಜಪ್ತಿ ಮಾಡಲು ಸಹಕರಿಸಿರುವುದಾಗಿ ಹೇಳಿ ದಾವಣಗೆರೆಯ ಪೊಲೀಸ್ ಕಾನ್‌ಸ್ಟೆಬಲ್‌ ಮೂರ್ತಿ ಅವರಿಗೆ 75 ಸಾವಿರ ರೂ. ಕೊಡಿಸಿದರು. ಬಳಿಕ  ಆರ್.ಟಿ.ನಗರದ ಇಬ್ಬರು ಕಾನ್‌ಸ್ಟೆಬಲ್‌ಗಳು 75 ಸಾವಿರ ರೂ. ಪಡೆದುಕೊಂಡರು,'' ಎಂದು ತಬ್ರೇಜ್​ ದೂರಿನಲ್ಲಿ ತಿಳಿಸಿದ್ದಾರೆ.  

Tags:    

Similar News