Bangalore Stampede Tragedy| ದುರಂತದ ಕಥೆ ಹೇಳುತ್ತಿವೆ ಸ್ಟೇಡಿಯಂ ಬಳಿ ಬಿದ್ದಿರುವ ರಾಶಿ ರಾಶಿ ಅವಶೇಷಗಳು
ಸ್ನೇಹಿತರೊಂದಿಗೆ ಬಂದು ಸ್ನೇಹಿತರು ಅಸ್ವಸ್ಥಗೊಂಡು ಬಿದ್ದಿರುವುದನ್ನು ನೋಡಿ ಸ್ನೇಹಿತರು ಅಲ್ಲಿ ಕಣ್ಣೀರಿಡುತ್ತಾ ಗೋಳಾಡುತ್ತಿದ್ದರು. ಕೆಲವರು ಮೌನಕ್ಕೆ ಶರಣಾಗಿದ್ದರು. ಇನ್ನೂ ಕೆಲವರು ತಮ್ಮವರನ್ನು ಉಳಿಸಿಕೊಳ್ಳಲು ಮನದ ನೋವು ಹದುಮಿಟ್ಟುಕೊಂಡು ಅವರನ್ನು ಎತ್ತಿಕೊಂಡು ಆಸ್ಪತ್ರೆಯತ್ತ ಒಂದೇ ಸಮನೆ ಧಾವಿಸುತ್ತಿದ್ದರು.;
ಬಿದ್ದಿರುವ ಸಾವಿರಾರು ಚಪ್ಪಲಿಗಳು
ಒಂದು ದಿನ ಮೊದಲು ಕಿಕ್ಕಿರಿದಿದ್ದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಈಗ ನೀರವ... ರಾಶಿ ಬಿದ್ದಿರುವ ನೂರಾರು ಪಾದರಕ್ಷಗಳು, ಚೂರಾಗಿ ಬಿದ್ದಿರುವ ಕನ್ನಡಕಗಳು, ಮುರಿದು ಬಿದ್ದಿರುವ ಗೇಟ್ಗಳು ಕಾಣಿಸುತ್ತಿವೆ. ಇವೆಲ್ಲವೂ ಬೆಂಗಳೂರು ಇದುವರೆಗೆ ಕಂಡು ಕೇಳರಿಯದ ಕಾಲ್ತುಳಿತ ಘಟನೆಗೆ ಸಾಕ್ಷಿಗಳು.
ಆರ್ಸಿಬಿ ಕಪ್ ಗೆದ್ದಿರುವ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ʻಆರ್ಸಿಬಿ ವಿಜಯೋತ್ಸವʼ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂಭ್ರಮಕ್ಕೆ ಜನಸಾಗರವೇ ಹರಿದುಬಂದಿತ್ತು. ಆದರೆ ಕ್ಷಣಮಾತ್ರದಲ್ಲಿ ಅಲ್ಲಿ ದುರಂತವೇ ನಡೆದು ಹೋಯಿತು. ಸ್ನೇಹಿತರು ಕುಸಿದು ಬಿದ್ದಿರುವುದನ್ನು ನೋಡಿ ಕಣ್ಣೀರಿಡುತ್ತಾ ಗೋಳಾಡಿದ್ದರು. ಕೆಲವರು ಘಟನೆಯಿಂದ ಆಘಾತಕ್ಕೆ ಒಳಗಾಗಿ ಮೌನಕ್ಕೆ ಶರಣಾಗಿದ್ದರು. ಇನ್ನೂ ಕೆಲವರು ತಮ್ಮವರನ್ನು ಉಳಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದ್ದರು.
ಚಿನ್ನಸ್ವಾಮಿ ಸ್ಟೇಡಿಯಂನ ಮುಖ್ಯ ಗೇಟ್ ಮತ್ತು ಇತರೆ ಗೇಟ್ಗಳಲ್ಲಿ, ಅದರಲ್ಲೂ ಮುಖ್ಯವಾಗಿ ಗೇಟ್ ನಂಬರ್ 17ರ ಬಳಿ ಕಾಲ್ತುಳಿತದ ತೀವ್ರತೆ ಹೆಚ್ಚಾಗಿತ್ತು. ಈ ದುರಂತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡರೆ, 40ಕ್ಕೂ ಹೆಚ್ಚು ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾದರು. ತಮ್ಮವರನ್ನು ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿತ್ತು.
ಬದುಕುಳಿದವರ ನೋವು: ಪೊಲೀಸರ ಲಾಠಿ ಏಟಿನಿಂದ ಗಾಯಗೊಂಡ ಹನೀಫ್
ಕಾಲ್ತುಳಿತದಲ್ಲಿ ಗಾಯಗೊಂಡು ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಲವರಲ್ಲಿ ಹನೀಫ್ (22) ಎಂಬ ಯುವಕನ ಅನುಭವ ಮನಕಲಕುವಂತಿತ್ತು. "ಹದಿನೆಂಟು ವರ್ಷಗಳ ಬಳಿಕ ಆರ್ಸಿಬಿ ಕಪ್ ಗೆದ್ದ ಸಂಭ್ರಮದಲ್ಲಿ ಭಾಗಿಯಾಗಲು ನಾನು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ತೆರಳುತ್ತಿದ್ದೆ. ಆಗಲೇ ಆರ್ಸಿಬಿ ಸಂಭ್ರಮಾಚರಣೆಯನ್ನು ಮತ್ತು ನೆಚ್ಚಿನ ಕ್ರಿಕೆಟಿಗರನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ತುಂಬಿ ಹರಿದಿತ್ತು. ಏನು ನಡೆಯುತ್ತಿದೆ ಎಂಬ ಅರಿವೂ ಇರಲಿಲ್ಲ. ಈ ವೇಳೆ ಜನರನ್ನು ನಿಯಂತ್ರಿಸಲು ಲಾಠಿ ಏಟು ನಡೆಸುತ್ತಿದ್ದ ಪೊಲೀಸರು ನನ್ನ ತಲೆಗೆ ಎರಡು ಬಾರಿ ಹೊಡೆದಿದ್ದಾರೆ. ಹೀಗಾಗಿ ತಲೆಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಬೇಕಾಯಿತು" ಎಂದು ಹನೀಫ್ ತಮ್ಮ ನೋವು ಮತ್ತು ಪೊಲೀಸರ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಚಿಕಿತ್ಸೆ ಪಡೆಯುತ್ತಿರುವ ಹಲವರು, ತಾವು ಆಸ್ಪತ್ರೆಯಲ್ಲಿರುವ ವಿಷಯ ಇನ್ನೂ ಮನೆಯವರಿಗೆ ತಿಳಿದಿಲ್ಲ ಎಂದು ಹೇಳಿಕೊಂಡಿದ್ದಾರೆ. ವಿಚಾರ ತಿಳಿದರೆ ಮನೆಯವರು ಆಘಾತಕ್ಕೊಳಗಾಗುವ ಭಯದಿಂದ ಮುಚ್ಚಿಡಲಾಗಿದೆ ಎಂದರೆ, ಇನ್ನು ಕೆಲವರ ಪೋಷಕರು ಈಗಾಗಲೇ ವಿಷಯ ತಿಳಿದು ಆಸ್ಪತ್ರೆಗೆ ಧಾವಿಸಿ, ತಮ್ಮ ಮಕ್ಕಳ ಸ್ಥಿತಿ ಕಂಡು ಆಘಾತಕ್ಕೊಳಗಾಗಿದ್ದಾರೆ. ಕಾಲ್ತುಳಿತದಲ್ಲಿ ಕಾಲನ್ನು ಕಳೆದುಕೊಂಡವರು ಮತ್ತು ಕಣ್ಣು ಕಳೆದುಕೊಂಡ ಒಬ್ಬ ಅಭಿಮಾನಿ ಸೇರಿದಂತೆ ಕೆಲವರು ಇನ್ನೂ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆಯ ಸಿಬ್ಬಂದಿ ಹೇಳುವ ಕಠೋರ ವಾಸ್ತವ
ಬೌರಿಂಗ್ ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೊಠಡಿಯ ಬಳಿಯಿದ್ದ ಸಿಬ್ಬಂದಿಯೊಬ್ಬರು, "ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತಕ್ಕೊಳಗಾಗಿ ಏಳು ಜನರನ್ನು ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ, ಅವರು ಆಸ್ಪತ್ರೆ ತಲುಪುವ ಮೊದಲೇ ದಾರಿ ಮಧ್ಯೆಯೇ ಮೃತಪಟ್ಟಿದ್ದರು. ಅವರನ್ನು ಪೋಸ್ಟ್ಮಾರ್ಟಮ್ಗೆ ಕರೆದುಕೊಂಡು ಬರಲಾಗಿತ್ತು. ಅವರ ಮರಣೋತ್ತರ ಪರೀಕ್ಷೆ ನಡೆಸಿ ಗುರುವಾರ ಮುಂಜಾನೆ 4 ಗಂಟೆ ಸುಮಾರಿಗೆ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಗಿದೆ. ಈ ಘಟನೆ ನಿಜವಾಗಲೂ ದುರಂತ" ಎಂದು ವಿವರಿಸಿದರು.
ಹುಚ್ಚು ಅಭಿಮಾನ ವರ್ಸಸ್ ಯೋಜನಾ ವೈಫಲ್ಯ
'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿದ ವೆಟ್ರೀ ಎಂಬವರು, ಈ ದುರಂತ ಸಾಕಷ್ಟು ನೋವನ್ನು ತಂದಿದೆ ಎಂದರು. "ಅಭಿಮಾನಿಗಳು ಮನೆಯಲ್ಲೇ ಕುಳಿತು ವಿಜಯೋತ್ಸವ ಆಚರಿಸಬಹುದಿತ್ತು. ಹುಚ್ಚು ಅಭಿಮಾನಕ್ಕೆ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಇಲ್ಲಿ ಯಾರನ್ನು ಹೊಣೆಯನ್ನಾಗಿ ಮಾಡುವುದು? ಹದಿನೆಂಟು ವರ್ಷಗಳ ನಂತರ ಕಪ್ ಗೆದ್ದಿರುವ ಅಭಿಮಾನಿಗಳ ಸಂಭ್ರಮ ಹೇಗಿರಬಹುದು ಎಂದು ಸರ್ಕಾರ ಯೋಚನೆ ಮಾಡಬೇಕಿತ್ತು. ಇತ್ತ ಅಭಿಮಾನಿಗಳು ಕೂಡ ಈ ಬಗ್ಗೆ ಅತಿಯಾದ ನಿರೀಕ್ಷೆ ಮಾಡಬಾರದಿತ್ತು. ಹದಿನೆಂಟು ಗೇಟ್ಗಳಲ್ಲಿ ಕನಿಷ್ಠ ಆರು, ಏಳು ಗೇಟ್ಗಳನ್ನು ತೆರೆದಿದ್ದರೂ ದುರಂತವನ್ನು ತಪ್ಪಿಸಬಹುದಿತ್ತು. ಸರ್ಕಾರಕ್ಕೂ ಇಂತಹ ಆತುರದ ನಿರ್ಧಾರ ಬೇಡವಾಗಿತ್ತು. ಶನಿವಾರ, ಭಾನುವಾರ ಕಾರ್ಯಕ್ರಮವನ್ನು ಯೋಜಿತ ರೀತಿಯಲ್ಲಿ ಆಯೋಜಿಸಬೇಕಿತ್ತು. ಅಭಿಮಾನಿಗಳೂ ತಮ್ಮ ಜೀವವನ್ನು ಪಣಕ್ಕಿಟ್ಟು ಮರ, ಗೇಟ್ಗಳ ಮೇಲೆ ಹತ್ತಿ ತಮ್ಮ ಹುಚ್ಚು ಅಭಿಮಾನವನ್ನು ಮೆರೆದಿದ್ದಾರೆ. ಇಲ್ಲಿ ಯಾವರನ್ನು ದೂಷಿಸಲು ಸಾಧ್ಯವಿಲ್ಲ. ಹನ್ನೊಂದು ಜನರ ಸಾವು ಬಹಳಷ್ಟು ದುಃಖ ತಂದಿದೆ" ಎಂದು ಬೇಸರ ವ್ಯಕ್ತಪಡಿಸಿದರು.
ಕೆಎಸ್ಸಿಎನ ಸಿಬ್ಬಂದಿಯೊಬ್ಬರು 'ದ ಫೆಡರಲ್ ಕರ್ನಾಟಕ'ದೊಂದಿಗೆ ಘಟನೆ ಬಗ್ಗೆ ವಿವರಿಸುತ್ತಾ, "ಮೂವತ್ತರಿಂದ ಮೂವತ್ತೈದು ಸಾವಿರ ಜನ ಸೇರುವ ಸಾಮರ್ಥ್ಯವುಳ್ಳ ಸ್ಟೇಡಿಯಂಗೆ ಲಕ್ಷಗಟ್ಟಲೆ ಜನ ಸೇರಿದರೆ ಹೇಗಾಬಹುದು? ಅವರನ್ನು ನಿಯಂತ್ರಿಸುವುದು ಹೇಗೆ? ಈ ಬಗ್ಗೆ ಜನರಿಗೆ ಸಾಕಷ್ಟು ಎಚ್ಚರಿಕೆಯನ್ನು ನೀಡುತ್ತಲೇ ಇದ್ದೆವು. ಯಾವುದೇ ಅವಘಡ ಸಂಭವಿಸದಂತೆ ಆಂಬುಲೆನ್ಸ್ಗಳನ್ನು ನಿಯೋಜನೆ ಮಾಡಲಾಗಿತ್ತು. ಆದರೆ ಜನರು ಆಂಬುಲೆನ್ಸ್ಗಳಿಗೂ ಹೋಗಲು ಅವಕಾಶ ನೀಡದೆ ಕಿಕ್ಕಿರಿದು ಹೋಗಿದ್ದರು. ನಾವು ಅಸ್ವಸ್ಥಗೊಂಡ ಹಲವರನ್ನು ಕಚೇರಿಗೆ ಕರೆದುಕೊಂಡು ಬಂದು ಸಿಪಿಆರ್ ನೀಡಿದೆವು. ಪೊಲೀಸರು ತಮ್ಮ ಜೀಪ್ಗಳಲ್ಲಿ, ಇತರ ವಾಹನಗಳಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಬಹುಬೇಗನೆ ಕರೆದುಕೊಂಡು ಚಿಕಿತ್ಸೆ ನೀಡಿದ್ದಾರೆ. ಮಿತಿ ಮೀರಿದ ಜನಸಂದಣಿಯಿಂದ ಈ ಘಟನೆ ನಡೆದು ಹೋಯಿತು. ಎಚ್ಚರಿಕೆ ನೀಡುತ್ತಿದ್ದರೂ ಅಭಿಮಾನಿಗಳು ಮಾತೇ ಕೇಳದೆ ನೂಕುನುಗ್ಗಲಿನಲ್ಲಿ ಸ್ಟೇಡಿಯಂ ನುಗ್ಗಲು ಪ್ರಯತ್ನಿಸುತ್ತಿದ್ದರು" ಎಂದು ತಿಳಿಸಿದರು.
ಆರ್ಸಿಬಿ ಕಪ್ ಗೆದ್ದ ಖುಷಿಯಲ್ಲಿ ತಮ್ಮ ನೆಚ್ಚಿನ ಆರ್ಸಿಬಿ ಜೆರ್ಸಿಗಳನ್ನು ತೊಟ್ಟು ಖುಷಿಖುಷಿಯಾಗಿ ಕ್ರೀಡಾಂಗಣದತ್ತ ಬಂದಿದ್ದ ಅಭಿಮಾನಿಗಳು ಮನೆಗೆ ತೆರಳಿದ್ದು ಮಾತ್ರ ಹೆಣವಾಗಿ... ಈ ಸಂಭ್ರಮಾಚರಣೆ ಶೋಕವಾಗಿ ಪರಿವರ್ತನೆಯಾಗಿದ್ದ ದಿನ ಕನ್ನಡಿಗರು ಮರೆಯಲು ಸಾಧ್ಯವೇ ಇಲ್ಲ.ವೇ ಇಲ್ಲ..