11 ಮಂದಿ ಸಾವಿಗಾರು ಹೊಣೆ? ಮಾಜಿ ಪೊಲೀಸ್ ಆಯುಕ್ತ ದಯಾನಂದ್ ಸೇರಿ ನಾಲ್ವರು ಅಧಿಕಾರಿಗಳು ವಿಚಾರಣೆಗೆ ಗೈರು!
ಕಾಲ್ತುಳಿತ ಪ್ರಕರಣ ಸಂಬಂಧಿಸಿ ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ್, ಹೆಚ್ಚುವರಿ ಆಯುಕ್ತರಾಗಿದ್ದ ವಿಕಾಸ್ ಕುಮಾರ್, ಕೇಂದ್ರ ವಿಭಾಗ ಡಿಸಿಪಿ ಆಗಿದ್ದ ಶೇಖರ್ ಮತ್ತು ಇನ್ಸ್ಪೆಕ್ಟರ್ ಗಿರೀಶ್ ಸೋಮವಾರ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.;
ಆರ್ಸಿಬಿ ತಂಡದ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣ ವಿಚಾರಣೆಯನ್ನು ಬೆಂಗಳೂರು ಜಿಲ್ಲಾಧಿಕಾರಿ ಜಿ.ಜಗದೀಶ್ ತೀವ್ರಗೊಳಿಸಿದ್ದಾರೆ.
ರಾಜ್ಯ ಸರ್ಕಾರವು 15 ದಿನದೊಳಗೆ ವಿಚಾರಣಾ ವರದಿಯನ್ನು ನೀಡುವಂತೆ ಸೂಚನೆ ನೀಡಿದ್ದರಿಂದ ಘಟನೆಗೆ ಸಂಬಂಧಿಸಿದವರನ್ನು ವಿಚಾರಣೆ ನಡೆಸಿ ಅಗತ್ಯ ಮಾಹಿತಿ ಕ್ರೋಢೀಕರಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಘಟನೆಯಲ್ಲಿ ಸಾವನ್ನಪ್ಪಿದ್ದವರ ಪೋಷಕರು ಸೇರಿದಂತೆ ಇತರರನ್ನು ಹಂತ ಹಂತವಾಗಿ ವಿಚಾರಣೆ ನಡೆಸಿದ್ದಾರೆ.
ಘಟನೆ ಸಂಬಂಧ ನೈತಿಕ ಹೊಣೆ ಹೊತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ಸಿಎ) ಕಾರ್ಯದರ್ಶಿ ಹಾಗೂ ಖಜಾಂಚಿ ರಾಜೀನಾಮೆ ನೀಡಿದ್ದರು. ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿಗೊಳಿಸಿದ್ದರು. ಈ ಸಂಬಂಧ ಶನಿವಾರ (ಜೂ.21) ಕೆಎಸ್ಸಿಎ ಕಾರ್ಯದರ್ಶಿಯಾಗಿದ್ದ ಎ.ಶಂಕರ್ ಹಾಗೂ ಖಜಾಂಚಿ ಇ.ಎಸ್.ಜೈರಾಮ್ ವಿಚಾರಣೆಗೆ ಹಾಜರಾಗಿದ್ದು. ಈ ವೇಳೆ ಅವರನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಮ್ಯಾಜಿಸ್ಟ್ರೀಯಲ್ ತನಿಖಾಧಿಕಾರಿ ಜಿ.ಜಗದೀಶ್ ವಿಚಾರಣೆ ನಡೆಸಿದರು. ದುರಂತದ ಕುರಿತು ಹಾಗೂ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವುದರ ಕುರಿತು ವಿಚಾರಣೆ ನಡೆಸಿ ಮಾಹಿತಿ ಕ್ರೋಢೀಕರಿಸಿದರು.
35 ಸಾವಿರ ಆಸನದ ಸಾಮರ್ಥ್ಯ ಹೊಂದಿರುವ ಕ್ರೀಡಾಂಗಣದಲ್ಲಿ ಲಕ್ಷಾಂತರ ಜನರು ಆಗಮಿಸುತ್ತಿರುವ ಬಗ್ಗೆ ಮುಂಜಾಗ್ರತಾ ಕ್ರಮ ಏಕೆ ಕೈಗೊಂಡಿರಲಿಲ್ಲ? ಆರ್ಸಿಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ ದುಡುಕಿನ ನಿರ್ಧಾರ ಕೈಗೊಂಡಿದ್ದು, ಅದನ್ನು ತಡೆಯಲು ಕೆಎಸ್ಸಿಎ ತಡೆಯಲು ಯಾಕೆ ಮುಂದಾಗಲಿಲ್ಲ. ನಿಮ್ಮ ಮಾತನ್ನು ಅವರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲವೇ ಅಥವಾ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ನಿರ್ಲಕ್ಷ್ಯ ವಹಿಸಲಾಗಿತ್ತಾ? ಎಂಬಂತಹ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ದುರ್ಘಟನೆ ಬಗ್ಗೆ ಜನಾಕ್ರೋಶ ವ್ಯಕ್ತವಾಗುತ್ತಿದೆ. ಇದಕ್ಕೆ ಯಾರು ಹೊಣೆ? ಕಬ್ಬನ್ ಪಾರ್ಕ್ ಪೊಲೀಸರು ಅನುಮತಿಗೆ ಆಕ್ಷೇಪ ವ್ಯಕ್ತಪಡಿಸಿರುವುದನ್ನು ಸರ್ಕಾರದ ಗಮನಕ್ಕೆ ಯಾಕೆ ತರಲಿಲ್ಲ? ಸೇರಿದಂತೆ ಇತರೆ ಮಾಹಿತಿಗಳನ್ನು ಕೇಳಿ ಪಡೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಡಿಎನ್ಎ ಸಿಬ್ಬಂದಿ ಸಹ ಹಾಜರು
ಡಿಎನ್ಎ ಎಂಟರ್ಟೇನ್ಮೆಂಟ್ ನೆಟ್ವರ್ಕ್ ಪ್ರೈ.ಲಿನ ನಾಲ್ವರ ಪೈಕಿ ಶನಿವಾರ ಮೂವರು ವಿಚಾರಣೆಗೆ ಹಾಜರಾಗಿದ್ದರು. ಎರಡನೇ ಬಾರಿ ವಿಚಾರಣಾ ನೋಟಿಸ್ ನೀಡಿದ್ದರಿಂದ ಸುನಿಲ್ ಮ್ಯಾಥ್ಯೂವ್, ಸುಮಂತ್, ಕಿರಣ್ಕುಮಾರ್ ಹಾಜರಾಗಿ ಕಾರ್ಯಕ್ರಮ ಆಯೋಜನೆಗೊಳಿಸಿರುವ ಬಗ್ಗೆ ಕೆಲವು ದಾಖಲೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಕೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಪೊಲೀಸ್ ಅಧಿಕಾರಿಗಳ ಹಾಜರು:
ಕಾಲ್ತುಳಿತ ದುರ್ಘಟನೆ ಸಂಬಂಧ ಅಮಾನತುಗೊಂಡಿರುವ ಎಸಿಪಿ ಬಾಲಕೃಷ್ಣ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಉಳಿದಂತೆ ನಗರ ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ್, ಹೆಚ್ಚು ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್, ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಮತ್ತು ಇನ್ಸ್ಪೆಕ್ಟರ್ ಗಿರೀಶ್ ವಿಚಾರಣೆಗೆ ಹಾಜರಾಗಿಲ್ಲ. ಸೋಮವಾರ ಇವರು ಹಾಜರಾಗುವ ಸಾಧ್ಯತೆ ಇದೆ.
ದಯಾನಂದ ಗೈರು
ಕಾಲ್ತುಳಿತ ಘಟನೆ ಸಂಬಂಧ ಅಮಾನತುಗೊಂಡಿರುವ ಮಾಜಿ ಪೊಲೀಸ್ ಆಯುಕ್ತ ಬಿ.ದಯಾನಂದ ಶನಿವಾರವೂ ಸಹ ವಿಚಾರಣೆಗೆ ಗೈರಾಗಿದ್ದರು. ಪ್ರಕರಣ ಸಂಬಂಧ ಈಗಾಗಲೇ ಒಟ್ಟು 40ಕ್ಕೂ ಅಧಿಕ ಪೊಲೀಸರ ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.
ಉತ್ತರ ವಿಭಾಗದ ಡಿಸಿಪಿ ಸೈದುಲ್ಲಾ ಅಡಾವತ್, ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಭರಮಸಾಗರ್, ಇಬ್ಬರು ಇನ್ಸ್ಪೆಕ್ಟರ್ ಸೇರಿದಂತೆ ಈಗಾಗಲೇ ವಿಚಾರಣೆ ಎದುರಿಸಿದ್ದಾರೆ. ಕ್ರೀಡಾಂಗಣದ ಭದ್ರತೆಗೆ ನಿಯೋಜನೆಗೊಂಡಿದ್ದ ಹಿರಿಯ ಅಧಿಕಾರಿಗಳ ಪಟ್ಟಿ ಆಧರಿಸಿ ಪೊಲೀಸರ ವಿಚಾರಣೆ ನಡೆಸಲಾಗುತ್ತದೆ.