The Federal Explainer | ಭಕ್ತವತ್ಸಲ ವರದಿ ತಿರಸ್ಕರಿಸಿದ ಸಂಪುಟ; ವರದಿಯಲ್ಲಿ ಏನಿದೆ?

ಈ ಹಿಂದೆ ಇದೇ ಸರ್ಕಾರ ವರದಿಯಲ್ಲಿ ಕೆಲ ಅಂಶಗಳನ್ನು ಕೈಬಿಟ್ಟು ಭಾಗಶಃ ಒಪ್ಪಿಕೊಂಡಿತ್ತು. ಇದರಿಂದ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಬಲ ಬರಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಇದೀಗ ಏಕಾಏಕಿ ಈ ವರದಿಯನ್ನು ತಿರಸ್ಕರಿಸಲು ಸಚಿವ ಸಂಪುಟ ನಿರ್ಣಯಿಸಿದೆ.

Update: 2024-07-05 01:50 GMT

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಗೆ ಸಂಬಂಧಿಸಿದ ಭಕ್ತವತ್ಸಲ ವರದಿಯನ್ನು ತಿರಸ್ಕರಿಸಲು ನಿರ್ಧರಿಸಿದೆ.

ಈ ಹಿಂದೆ ಇದೇ ಸರ್ಕಾರ ವರದಿಯಲ್ಲಿ ಕೆಲ ಅಂಶಗಳನ್ನು ಕೈಬಿಟ್ಟು ಭಾಗಶಃ ಒಪ್ಪಿಕೊಂಡಿತ್ತು. ಇದರಿಂದ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಬಲ ಬರಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಇದೀಗ ಏಕಾಏಕಿ ಈ ವರದಿಯನ್ನು ತಿರಸ್ಕರಿಸಲು ಸಚಿವ ಸಂಪುಟ ನಿರ್ಣಯಿಸಿದೆ.

ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಹಾಗೂ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ರಾಜಕೀಯ ಮೀಸಲಾತಿ ನಿಗದಿಗೆ ಸುಪ್ರೀಂಕೋರ್ಟ್‌ ಆದೇಶದಂತೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಚಿಸಲಾಗಿದ್ದ ಭಕ್ತವತ್ಸಲ ಆಯೋಗ ನೀಡಿದ್ದ ವರದಿಯನ್ನು ಸಿದ್ದರಾಮಯ್ಯ ಸರ್ಕಾರ ಈ ಮೊದಲು ಕೆಲವೊಂದು ಅಂಶಗಳನ್ನು ಕೈಬಿಟ್ಟು ಉಳಿದವುಗಳನ್ನು ಒಪ್ಪಿಕೊಂಡಿತ್ತು. ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದಿರುವ ಬಗ್ಗೆಯೂ ಕಾನೂನು ಸಚಿವ ಎಚ್‌ ಕೆ ಪಾಟೀಲ್ ಹೇಳಿದ್ದರು. ಆದರೆ, ಇದೀಗ ಸರ್ಕಾರ ಏಕಾಏಕಿ ಇಡೀ ಭಕ್ತವತ್ಸಲ ವರದಿಯನ್ನೇ ಸಾರಾಸಗಟಾಗಿ ತಿರಸ್ಕರಿಸಲು ನಿರ್ಣಯ ಕೈಗೊಂಡಿದೆ. ಆದರೆ, ಯಾಕೆ ಈ ನಿರ್ಣಯ ಕೈಗೊಂಡಿದೆ ಎನ್ನುವ ಬಗ್ಗೆ ಸರ್ಕಾರವಾಗಲಿ, ಸಂಬಂಧಪಟ್ಟ ಸಚಿವರಾಗಲಿ ಸ್ಪಷ್ಟನೆ ನೀಡಿಲ್ಲ.

ಏನಿದು ಭಕ್ತವತ್ಸಲ ಆಯೋಗ ವರದಿ?

ಹಿಂದುಳಿದಿರುವಿಕೆ ಆಧಾರದ ಮೇಲೆ ರಾಜಕೀಯ ಮೀಸಲಾತಿ ಕಲ್ಪಿಸುವುದನ್ನು ಪ್ರಶ್ನಿಸಿದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಡ್ಡಿಯಾಗಿತ್ತು. ಹಿಂದುಳಿದ ಜಾತಿಗಳ ಜನ ಜನಸಂಖ್ಯೆಗೆ ಅನುಗುಣವಾಗಿ ಪಡೆದಿರುವ ರಾಜಕೀಯ ಪ್ರಾತಿನಿಧ್ಯವನ್ನು ನಿಖರವಾಗಿ ಗುರುತಿಸಿ, ಹಿಂದುಳಿದಿರುವಿಕೆಯನ್ನು ಖಚಿತಪಡಿಸಿಕೊಂಡ ಬಳಿಕವಷ್ಟೇ ರಾಜಕೀಯ ಮೀಸಲಾತಿ ನಿಗದಿಪಡಿಸಬೇಕು ಎಂದು ಕೋರ್ಟ್ ಪ್ರತಿಪಾದಿಸಿತ್ತು. ಹೀಗಾಗಿ, ಹಿಂದುಳಿದ ವರ್ಗಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಗುರುತಿಸಲು ಮತ್ತು ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡುವ ಬಗ್ಗೆ ಅಧ್ಯಯನ ನಡೆಸಿ ಶಿಫಾರಸು ಮಾಡಲು 2022ರ ಮೇ 16ರಂದು ನ್ಯಾ. ಭಕ್ತವತ್ಸಲ ನೇತೃತ್ವದ ಆಯೋಗವನ್ನು ಸರ್ಕಾರ ರಚಿಸಿತ್ತು.

ಆಯಾ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಖಾತರಿಪಡಿಸಿದ ಬಳಿಕವೇ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ವರ್ಗೀಕರಿಸಿ ಚುನಾವಣೆ ನಡೆಸಬೇಕೆಂಕೆಂದು ಸುಪ್ರೀಂ ಕೋರ್ಟ್ ಹೇಳಿತ್ತು. ಅದರಂತೆ ಸರ್ಕಾರ ಭಕ್ತವತ್ಸಲ ಆಯೋಗವನ್ನು ರಚಿಸಿದ್ದು, ಅಂದಿನ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಆಯೋಗ ವರದಿಯನ್ನು ಸಹ ಸಲ್ಲಿಸಿತ್ತು.

ವರದಿಯಲ್ಲಿ ಏನೆಲ್ಲ ಅಂಶಗಳು ಇದ್ದವು?

ಬಿಬಿಎಂಪಿ ಸೇರಿದಂತೆ ನಗರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ಎ ಮತ್ತು ಬಿ ಪ್ರವರ್ಗದ ಸಮುದಾಯಗಳಿಗೆ ಈಗಿರುವ ರಾಜಕೀಯ ಮೀಸಲಾತಿಯನ್ನು ಶೇ.33ಕ್ಕೆ ಹೆಚ್ಚಿಸುವಂತೆ ಹೈಕೋರ್ಟ್​ ನಿವೃತ್ತ ನ್ಯಾಯಮೂರ್ತಿ ಭಕ್ತವತ್ಸಲ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

ಒಟ್ಟು ಸ್ಥಾನಗಳ ಪೈಕಿ ಮೂರನೇ ಒಂದರಷ್ಟು ಅಂದರೆ 33ರಷ್ಟು ಮೀಸಲಾತಿಯನ್ನು ಹಿಂದುಳಿವರ್ಗಗಳ ಎ ಮತ್ತು ಬಿ ಪ್ರವರ್ಗದ ಸಮುದಾಯಗಳಿಗೆ (ಅಲ್ಪಸಂಖ್ಯಾತರು ಸೇರಿ) ನೀಡುವುದು ನ್ಯಾಯೋಚಿತ. ಆದರೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಒಟ್ಟು ಮೀಸಲಾತಿಯ ಪ್ರಮಾಣ ಶೇ.50 ಮೀರಬಾರದು ಎಂದೂ ಶಿಫಾರಸಿನಲ್ಲಿ ಆಯೋಗ ತಿಳಿಸಿತ್ತು.

ತಿದ್ದುಪಡಿಯೊಂದಿಗೆ ವರದಿಗೆ ಒಪ್ಪಿಗೆ

ಬಿಜೆಪಿ ಸರ್ಕಾರ ಹೋದ ಬಳಿಕ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಈ ಭಕ್ತವತ್ಸಲ ವರದಿಯನ್ನು ಗಮನಿಸಿದ್ದು, ಭಕ್ತವತ್ಸಲ ಸಮಿತಿಯ 5 ಶಿಫಾರಸುಗಳ ಪೈಕಿ ಮೂರು ಶಿಫಾರಸ್ಸಿಗೆ 2023 ರ ಅಕ್ಟೋಬರ್‌ನಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿತ್ತು.

ಸ್ವೀಕೃತ ಶಿಫಾರಸುಗಳು

1 ಹಿಂದುಳಿದ ವರ್ಗಗಳಿಗೆ ಶೇ 33ರಷ್ಟು ಮೀಸಲಾತಿ ನೀಡಿದರೂ ಒಟ್ಟಾರೆ ಮೀಸಲಾತಿಯು ಶೇ 50 ಮೀರದಿರುವಂತೆ ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿ ಮುಂದುವರಿಸಿಕೊಂಡು ಹೋಗಬೇಕು.

1 ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಮೇಯರ್ ಮತ್ತು ಉಪ ಮೇಯರ್ ಸ್ಥಾನಗಳನ್ನು ಹಿಂದುಳಿದ ವರ್ಗಗಳಿಗೆ ಮೀಸಲಿಡಬೇಕು.

1 ಎಲ್ಲಾ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣಾ ಶಾಖೆಗಳನ್ನು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ (ಡಿಪಿಎಆರ್) ಅಧೀನಕ್ಕೆ ಒಳಪಡಿಸಬೇಕು.

ತಿರಸ್ಕೃತ ಶಿಫಾರಸುಗಳು

1 ಹಿಂದುಳಿದ ವರ್ಗಗಳ ಪ್ರವರ್ಗ ಎ ಮತ್ತು 2ಬಿಯನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಿ, ರಾಜಕೀಯ ಮೀಸಲಾತಿಯನ್ನು ಪರಿಣಾಮಕಾರಿಯಾಗಿ ನೀಡಲು ಕ್ರಮ ಕೈಗೊಳ್ಳಬೇಕು.

1 ಬಿಬಿಎಂಪಿಯಲ್ಲಿ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ 30 ತಿಂಗಳು ಅಧಿಕಾರ ಅವಧಿ ನಿಗದಿಪಡಿಸಿರುವ ವ್ಯವಸ್ಥೆಯನ್ನು ರಾಜ್ಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೂ ವಿಸ್ತರಿಸಲು ಕರ್ನಾಟಕ ಮುನ್ಸಿಪಲ್ ಕಾಯ್ದೆಯ ಕಲಂ 10ಕ್ಕೆ ತಿದ್ದುಪಡಿ ತರಬೇಕು.

ಒಳಮೀಸಲಾತಿಗೆ ಸಂಪುಟ ಅಸಮ್ಮತಿ

ಇಲ್ಲಿಯವರೆಗೆ ರಾಜಕೀಯ ಮೀಸಲಾತಿ ನೀಡಿದ್ದರೂ, ಅದು ಸಿಗದೇ ಇರುವ ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸಬೇಕು ಎಂಬ ಆಯೋಗದ ಶಿಫಾರಸನ್ನು ಸರ್ಕಾರ ಒಪ್ಪಿಕೊಂಡಿಲ್ಲ. ಹಿಂದುಳಿದ ಜಾತಿ ಮತ್ತು ಉಪಜಾತಿ ಸೇರಿ 802 ಜಾತಿಗಳಿದ್ದು, ಅವುಗಳಲ್ಲಿ 156 ಜಾತಿಗಳು ಮಾತ್ರ ರಾಜಕೀಯ ಪ್ರಾತಿನಿಧ್ಯ ಪಡೆದಿವೆ. ಹೀಗಾಗಿ, ಈಗಿರುವ 'ಪ್ರವರ್ಗ-1' ಹಾಗೂ 'ಪ್ರವರ್ಗ-2 ಎ'ಯನ್ನು 1, 2, 3, 4 ಎಂದು ಮರು ವರ್ಗೀಕರಿಸಬೇಕು. ಶೇ 33ರಷ್ಟು ಮೀಸಲಾತಿ ಪೈಕಿ ಮೊದಲ ಎರಡು ಪ್ರವರ್ಗಗಳಿಗೆ ತಲಾ ಶೇ 9.9ರಂತೆ ಮತ್ತು ಪ್ರವರ್ಗ 3 ಮತ್ತು 4ಕ್ಕೆ ತಲಾ ಶೇ 6.6ರಂತೆ ಹಂಚಿಕೆ ಮಾಡಬಹುದು. 2027-28ರ ಬಳಿಕ ಚುನಾವಣೆಗಳಲ್ಲಿ ನಾಲ್ಕು ಪ್ರವರ್ಗಗಳನ್ನು ಸೃಷ್ಟಿಸಬೇಕು ಎಂದು ಆಯೋಗವು ಶಿಫಾರಸು ಮಾಡಿತ್ತು.

ವರದಿಯಿಂದ ರಾಜಕೀಯವಾಗಿ ಏನು ಲಾಭ?

ಸ್ಥಳೀಯ ಸಂಸ್ಥೆಗಳ ನಗರ ಹಾಗೂ ಗ್ರಾಮೀಣ ಚುನಾವಣೆಗಳಲ್ಲಿ ಎಸ್‌ಸಿ-ಎಸ್‌ಟಿ ಮೀಸಲು ಜತೆಗೆ ಒಬಿಸಿ ವರ್ಗಕ್ಕೂ ಮೀಸಲಾತಿಯನ್ನು ಕಲ್ಪಿಸಬೇಕಿತ್ತು. ಒಟ್ಟಾರೆ ಗರಿಷ್ಠ ಶೇ.33ರಷ್ಟು ಸ್ಥಾನಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸಲು ಅವಕಾಶ ಇತ್ತು. ಶೇ.50ರ ಮೀಸಲು ಮಿತಿಯಲ್ಲಿ ಎಸ್‌ಸಿ-ಎಸ್‌ಟಿ ಮೀಸಲಾತಿಯನ್ನು ಹೆಚ್ಚು ಪಡೆಯುವ ಕಡೆ ಕನಿಷ್ಠ ಶೇ.23ರವರೆಗಾದರೂ ಒಬಿಸಿಗೆ ಅವಕಾಶ ಸಿಗುವ ಸಾಧ್ಯತೆ ಇತ್ತು.

Tags:    

Similar News