ಮೇಕೆದಾಟು ಯೋಜನೆ ಜಾರಿಗಾಗಿ ಸರ್ಕಾರದ ಜತೆ ಕೈ ಜೋಡಿಸಲು ಸಿದ್ಧ; ನಿಖಿಲ್ ಕುಮಾರಸ್ವಾಮಿ
ಜೆಡಿಎಸ್ ಬಿಜೆಪಿಯಲ್ಲಿ ಯಾವುದೇ ರೀತಿಯ ಬಿರುಕು ಇಲ್ಲ. ಎರಡು ಪಕ್ಷದಲ್ಲಿ ಅಪಸ್ವರದ ಪ್ರಶ್ನೆಯೇ ಇಲ್ಲ. ಸಮನ್ವಯತೆಗಾಗಿ ಕಮಿಟಿ ಮಾಡಬೇಕು ಎಂದು ನಾಯಕರು ತೀರ್ಮಾನಿಸಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.;
ಮೇಕೆದಾಟು ಯೋಜನೆ ವಿಚಾರದಲ್ಲಿ ನಿಮಗೆ ಜವಾಬ್ದಾರಿ ಇಲ್ವಾ, 136 ಸೀಟು ಕೊಟ್ಟು ಜನರು ಆಶೀರ್ವಾದ ಮಾಡಿಲ್ವಾ? ಪೆನ್ನು ಪೇಪರ್ ಕೊಟ್ಟಿದ್ದು ನಿಮಗೆ ಯಾಕೆ? ಲೂಟಿ, ಭ್ರಷ್ಟಚಾರ, ಕೊಳ್ಳೆ ಹೊಡೆಯೋಕೆ ಕೊಟ್ಟರಾ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯದ ಮದ್ದೂರಿನಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ನಮ್ಮ ನೀರು ನಮ್ಮ ಹಕ್ಕು ಅಂತಾ ಹೊರಟಿದ್ರು. ಪೆನ್ನು ಪೇಪರ್ ಕೇಳಿದ್ರು ಅಂತ ಜನ ಕೊಟ್ಟಿದ್ದಾರೆ. ಮೇಕೆದಾಟು ವಿಚಾರವಾಗಿ ಡಿಕೆಶಿ ಅವರು, ತಮಿಳುನಾಡು ಸಿಎಂ ಜತೆ ಮಾತನಾಡಲಿ, ನಾವು ನಿಮ್ಮ ಜತೆ ಬರುತ್ತೇವೆ ಎಂದು ಹೇಳಿ, ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಜೆಡಿಎಸ್-ಬಿಜೆಪಿಯಲ್ಲಿ ಯಾವುದೇ ರೀತಿಯ ಬಿರುಕು ಇಲ್ಲ
ಜೆಡಿಎಸ್ ಬಿಜೆಪಿಯಲ್ಲಿ ಯಾವುದೇ ರೀತಿಯ ಬಿರುಕು ಇಲ್ಲ. ಎರಡು ಪಕ್ಷದಲ್ಲಿ ಅಪಸ್ವರದ ಪ್ರಶ್ನೆಯೇ ಇಲ್ಲ. ಸಮನ್ವಯತೆಗಾಗಿ ಕಮಿಟಿ ಮಾಡಬೇಕು ಎಂದು ನಾಯಕರು ತೀರ್ಮಾನಿಸಿದ್ದಾರೆ. ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರವನ್ನು ನಾಯಕರು ತೆಗೆದುಕೊಳ್ಳುತ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಹೋರಾಟ ನನಗೆ ರಗ್ತಗತವಾಗಿಯೇ ಬಂದಿದೆ
ಮೂರು ಸೋಲು ನನಗೆ ಪಾಠವನ್ನು ಕಲಿಸಿದೆ. ಆ ಸೋಲನ್ನು ತಲೆಯಲ್ಲಿ ಇಟ್ಟುಕೊಂಡು ಚಿಂತೆ ಮಾಡಲ್ಲ. ಹೋರಾಟ ಅನ್ನೋದು ನನಗೆ ರಕ್ತಗತವಾಗಿಯೇ ಬಂದಿದೆ. ಮುಂದೆ ಸೇವೆ ಮಾಡಲು ಜನ ನನಗೆ ಶಕ್ತಿ ಕೊಡುತ್ತಾರೆ ಎಂದು ಹೇಳಿದರು.
ರಾಜ್ಯ ರಾಜಕಾರಣದಲ್ಲಿ ಕ್ರಾಂತಿ ಆಗುತ್ತೆ ಅನ್ನುವ ವಿಚಾರದ ಕುರಿತು ಮಾತನಾಡಿದ ಅವರು, ಏನು ಕ್ರಾಂತಿ ಆಗೋತ್ತೋ ಗೊತ್ತಿಲ್ಲ. ರಾಜ್ಯದಿಂದ ಕಾಂಗ್ರೆಸ್ ಅನ್ನು ಬುಡದಿಂದ ಕಿತ್ತು ಹಾಕುತ್ತಾರೆ. ಕ್ರಾಂತಿ ಆಗುತ್ತೆ ಕ್ರಾಂತಿ ಆಗುತ್ತೆ ಅಂತಿದ್ದಾರೆ. ಕ್ರಾಂತಿ ಮಾಡುವವರು ಯಾರು.? ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಚಲುವರಾಯಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎರಡು ವರ್ಷದಿಂದ ಆಡಳಿತದಲ್ಲಿ ಇರೋದು ಕಾಂಗ್ರೆಸ್, ಕುಮಾರಣ್ಣ ಅಲ್ಲ. ಉಸ್ತುವಾರಿ ಸಚಿವರು ಹಿರಿಯರು, ಅವರ ಮೇಲೆ ನನಗೆ ಗೌರವ ಇದೆ. ಆದ್ರೆ ಕಳೆದ 2 ವರ್ಷದಿಂದ ಕೃಷಿ ಸಚಿವರ ಕೊಡುಗೆ ಏನೆಂದು ಜನರು ಕೇಳ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ತಂಬಾಕು, ಮಾವು ಬೆಳೆಗಾರರಿಗೆ ರಾಜ್ಯ ಸರ್ಕಾರ, ಕೃಷಿ ಸಚಿವರು ಸ್ಪಂದಿಸಲಿಲ್ಲ. ಅವರಿಗೆ ಸ್ಪಂದಿಸಿದ್ದು ಕೇಂದ್ರದ ಕೈಗಾರಿಕಾ ಸಚಿವ ಕುಮಾರಸ್ವಾಮಿ ಅವರು. ರಾಜ್ಯದ ರೈತರ ಬಗ್ಗೆ ಕಾಳಜಿ ತೋರಿದ್ದಾರೆ ಎಂದು ಹೇಳಿದರು.