IPL 2025: ಆರ್​ಸಿಬಿ ಫೈನಲ್ ಪ್ರವೇಶಕ್ಕೆ ಅಭಿಮಾನಿಗಳ ಸಂಭ್ರಮ; ಗೆದ್ದರೆ ಉಚಿತ ಚಾಟ್ಸ್, ಹೋಳಿಗೆ ಊಟ, ಆಟೋ ಸೇವೆ!

ಆರ್​​ಸಿಬಿ ಕಪ್​ ಗೆಲ್ಲಬೇಕು ಎಂಬುದು ಅದೆಷ್ಟೋ ಅಭಿಮಾನಿಗಳ ಕನಸು. ಈ ಕನಸಿಗೆ ಸ್ಪೂರ್ತಿ ತುಂಬಲು ಅಭಿಮಾನಿಗಳು ಹಲವಾರು ಯೋಜನೆಗಳನ್ನು ಆಯೋಜಿಸಿದ್ದಾರೆ.;

Update: 2025-06-02 10:55 GMT

ಆರ್‌ಸಿಬಿ ತಂಡ 

ಕಳೆದ 18 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಐಪಿಎಲ್ ಕಪ್ ಗೆದ್ದಿಲ್ಲ. ಇದೀಗ ಬರೋಬ್ಬರಿ 9 ವರ್ಷಗಳ ಬಳಿಕ ಆರ್‌ಸಿಬಿ ಫೈನಲ್ ಪ್ರವೇಶಿಸಿದೆ. ಮಂಗಳವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಪಂಜಾಬ್ ಕಿಂಗ್ಸ್ (PBKS) ತಂಡಗಳು ಮುಖಾಮುಖಿಯಾಗಲಿವೆ. ಈ ಬಾರಿ 'ಕಪ್ ನಮ್ಮದೇ' ಎಂಬ ವಿಶ್ವಾಸದಲ್ಲಿ ತಂಡದ ಅಭಿಮಾನಿಗಳಿದ್ದಾರೆ. ಆರ್‌ಸಿಬಿ ಕಪ್ ಗೆಲ್ಲಬೇಕು ಎಂಬುದು ಅದೆಷ್ಟೋ ಅಭಿಮಾನಿಗಳ ಕನಸಾಗಿದ್ದು, ಈ ಕನಸಿಗೆ ಸ್ಫೂರ್ತಿ ತುಂಬಲು ಅಭಿಮಾನಿಗಳು ಹಲವಾರು ಯೋಜನೆಗಳನ್ನು ಆಯೋಜಿಸಿದ್ದಾರೆ.

ಬೆಂಗಳೂರಿನಲ್ಲಿ ಚಾಟ್ಸ್ ಫ್ರೀ ಫ್ರೀ

ಮಂಗಳವಾರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ, ಆರ್‌ಸಿಬಿ ಗೆದ್ದರೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಅನಿಲ್ ಚಾಟ್ಸ್ ಸೆಂಟರ್ ವತಿಯಿಂದ ಉಚಿತ ಚಾಟ್ಸ್ ದೊರೆಯಲಿದೆ. "ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಗೆದ್ದರೆ ಉಚಿತವಾಗಿ ಚಾಟ್ಸ್ ವಿತರಣೆ ಮಾಡುತ್ತೇವೆ" ಎಂದು ಅನಿಲ್ ಚಾಟ್ಸ್ ಸೆಂಟರ್ ಭರವಸೆ ನೀಡಿದೆ. "ಈ ಬಾರಿ ಆರ್‌ಸಿಬಿ ಕಪ್ ನಮ್ಮದು. ಆ ದಿನ ಪಾನಿಪುರಿ ನಿಮ್ಮದು. ಎಲ್ಲವೂ ಫ್ರೀ, ಫ್ರೀ, ಫ್ರೀ" ಎಂದು ಪ್ರಕಟಿಸಿದ್ದಾರೆ.

 

ಅಂಗಡಿ ಮುಂದೆ ಬೋರ್ಡ್ ಹಾಕಿ "ಈ ಸಲ ಆರ್‌ಸಿಬಿ ಕಪ್ ಗೆದ್ದಿದ್ದೇ ಆದರೆ ಎಲ್ಲರಿಗೂ ಪಾನಿಪೂರಿ, ಮಸಾಲಪುರಿ, ಬೇಲ್ ಪುರಿ.. ಫ್ರೀ.. ಫ್ರೀ.. ಫ್ರೀ.." ಎಂದು ಬರೆಯಲಾಗಿದೆ. ಅಂಗಡಿ ಮಾಲೀಕರು ಆರ್‌ಸಿಬಿ ದೊಡ್ಡ ಅಭಿಮಾನಿಯಾಗಿದ್ದು, ಆರ್‌ಸಿಬಿ ಗೆಲುವನ್ನು ಸಂಭ್ರಮಿಸಲು ಈ ಉಚಿತ ಚಾಟ್ಸ್ ವಿತರಣೆ ಎಂದಿದ್ದಾರೆ. ಮಂಗಳವಾರ ಆರ್‌ಸಿಬಿ ಕಪ್ ಗೆದ್ದರೆ, ಅನಿಲ್ ಚಾಟ್ಸ್ ಸೆಂಟರ್ ಜೂನ್ 4ರಂದು ಬುಧವಾರ ಸಂಜೆ 5ಕ್ಕೆ ಫ್ರೀ ಚಾಟ್ಸ್ ವಿತರಣೆ ಮಾಡಲಿದೆ ಎಂದು ಅವರು ಘೋಷಿಸಿದ್ದಾರೆ.

 ಮೈಸೂರಿನ ಇಂದಿರಾ ಕ್ಯಾಂಟೀನ್‌ಗಳಲ್ಲಿ ಫ್ರೀ ಹೋಳಿಗೆ ಊಟ

ಮಂಗಳವಾರ ನಡೆಯಲಿರುವ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಆರ್‌ಸಿಬಿ ಕಪ್ ಗೆದ್ದರೆ, ಮೈಸೂರಿನ ಎಲ್ಲಾ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಹೋಳಿಗೆ ಊಟ ಹಾಕಲಾಗುವುದು ಎಂದು ಮೈಸೂರಿನ ಆರ್‌ಸಿಬಿ ಅಭಿಮಾನಿ ಬಸವರಾಜ ಬಸಪ್ಪ ಘೋಷಿಸಿದ್ದಾರೆ. ಇದರ ಸಾಂಕೇತಿಕವಾಗಿ ಸೋಮವಾರವೇ ಉಚಿತ‌ ಹೋಳಿಗೆ ಊಟ ವಿತರಣೆ ಮಾಡಲಾಗಿದೆ. ಮಂಗಳವಾರ ಮೈಸೂರಿನ 16 ಕ್ಯಾಂಟೀನ್‌ಗಳಲ್ಲೂ ಉಚಿತ ಹೋಳಿಗೆ ಊಟ ನೀಡಲಾಗುತ್ತದೆ. ಇತ್ತ, ಸಿಎಂ ಸಿದ್ದರಾಮಯ್ಯ ಬಳಿ ಮೈಸೂರಿನ ಆರ್‌ಸಿಬಿ ಅಭಿಮಾನಿ ಬಸವರಾಜ ಬಸಪ್ಪ ಮನವಿ ಮಾಡಿದ್ದು, ಆರ್‌ಸಿಬಿ ಗೆದ್ದರೆ ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟೀನ್‌ಗಳಲ್ಲೂ‌‌ ಉಚಿತ ಹೋಳಿಗೆ ಊಟ ಹಾಕಿಸಿ ಎಂದು ಕೋರಿದ್ದಾರೆ.

ಆಟೋ ಚಾಲಕನಿಂದ ಉಚಿತ ಸೇವೆ

ಬೆಂಗಳೂರಿನಲ್ಲಿ ಆಟೋ ಚಾಲಕರಾಗಿರುವ ಪರಶುರಾಮ್ ಶೆಟ್ಟಿ ಅವರು ಫೈನಲ್ ಪಂದ್ಯದಂದು ಆರ್‌ಸಿಬಿ ಜರ್ಸಿ ಧರಿಸಿದ ಪ್ರಯಾಣಿಕರಿಗೆ ಉಚಿತ ಸೇವೆ ನೀಡಲಿದ್ದಾರೆ. ಸ್ನೇಹಿತ ಅಜ್ಮಲ್ ಹುಸೇನ್ ಜೊತೆಗೂಡಿ ಈ ರೀತಿ ವಿನೂತನವಾಗಿ ತಮ್ಮ ಅಭಿಮಾನವನ್ನು ಪರಶುರಾಮ್ ಶೆಟ್ಟಿ ಅವರು ವ್ಯಕ್ತಪಡಿಸುತ್ತಿದ್ದಾರೆ. "ನಾನು ಹಲವು ವರ್ಷಗಳಿಂದ ಆರ್‌ಸಿಬಿ ಅಭಿಮಾನಿ. ಈ ವರ್ಷವು ನಮಗೆ ಶುಭದಾಯಕವಾಗಿದೆ. ಆರ್‌ಸಿಬಿ ಉನ್ನತ ಫಾರ್ಮ್‌ನಲ್ಲಿದೆ. ಈ ಸಲ ಕಪ್ ನಮ್ಮೆ. ನನಗೆ ಮೂವರು ಮಕ್ಕಳಿದ್ದಾರೆ. ಅವರೂ ಕೂಡ ತಂಡದ ಗೆಲುವಿನ ಭರವಸೆಯಲ್ಲಿದ್ದಾರೆ" ಎಂದು ಪರಶುರಾಮ್ ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ತಿಳಿಸಿದ್ದಾರೆ.

ದೆಹಲಿಯಲ್ಲಿ ಉಚಿತ ಊಟದ ವ್ಯವಸ್ಥೆ

ದೆಹಲಿಯಲ್ಲಿರುವ ಸೂಪರ್ ಫ್ಯಾನ್ ಅಭಿಮನ್ಯು ರಾವ್ ಅವರು ಆರ್‌ಸಿಬಿ ತಂಡವು ಲೀಗ್ ಹಂತದಲ್ಲಿ ಚೆನ್ನೈ ವಿರುದ್ಧ ಗೆದ್ದಾಗ ಸುಮಾರು ಒಂದು ಸಾವಿರ ಜನರಿಗೆ ಊಟ ಹಾಕಿಸಿದ್ದರು. "ನಾವು 500 ಜನರಿಗೆ ಊಟ ಕೊಡಿಸುವ ಯೋಜನೆ ಮಾಡಿದ್ದೆವು. ಆದರೆ ಅದು ಹಬ್ಬವಾಗಿ ಪರಿವರ್ತನೆಯಾಯಿತು. ಜನರು ಹೆಚ್ಚು ಸೇರಿದ್ದರು. ಆರ್‌ಸಿಬಿ ಫೈನಲ್ ಗೆದ್ದರೆ, ಇದರ ದುಪ್ಪಟ್ಟು ಸಂಖ್ಯೆಯ ಜನರಿಗೆ ಊಟದ ವ್ಯವಸ್ಥೆ ಮಾಡುತ್ತೇವೆ" ಎಂದು ರಾವ್ ಹೇಳಿದ್ದಾರೆ.

ಆರ್‌ಸಿಬಿ ಗೆದ್ದರೆ ರಜೆ ಘೋಷಣೆಗೆ ಮನವಿ

ಈ ಬಾರಿ ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದರೆ, ದಯವಿಟ್ಟು ಜೂನ್ 3 ಅನ್ನು ಕರ್ನಾಟಕದಾದ್ಯಂತ ಸಾರ್ವಜನಿಕ ರಜಾದಿನವೆಂದು ಘೋಷಿಸಿ ಮತ್ತು ನಾವು ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುವಂತೆಯೇ ಅದನ್ನು 'ಆರ್‌ಸಿಬಿ ಅಭಿಮಾನಿಗಳ ಹಬ್ಬ' ಎಂದು ಆಚರಿಸಿ ಎಂದು ಆರ್‌ಸಿಬಿ ಅಭಿಮಾನಿ ಶಿವಾನಂದ್ ಮಲ್ಲಣ್ಣವರ್ ಎಂಬುವರ ಪತ್ರ ಸಾಮಾಜಿಕ ಜಾಲತಾಣದಲ್ಲಿ ಕಳೆದ ಎರಡು ದಿನದಿಂದ ವೈರಲ್ ಆಗಿತ್ತು.

 ಈ ಬಾರಿಯ ಟಾಟಾ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಭರ್ಜರಿ ಪೈಪೋಟಿ ನೀಡಿ ಫೈನಲ್‌ಗೆ ತಲುಪಿದೆ. ಮಂಗಳವಾರ ಅಹ್ಮದಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಫೈನಲ್‌ ಪಂದ್ಯ ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಐಪಿಎಲ್ 18ನೇ ಆವೃತ್ತಿಯಲ್ಲಿ ಆರ್‌ಸಿಬಿ ತಂಡ ಕಪ್‌ ಗೆಲ್ಲಲು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

Tags:    

Similar News